Connect with us

health

ಜಿಲ್ಲಾ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ತಾಂಡವ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣ!

Published

on

ರಾಜ್ಯದ ಪ್ರತಿಷ್ಠಿತ ಸರಕಾರಿ ಆಸ್ಪತ್ರೆಯೊಂದು ಅವ್ಯವಸ್ಥೆಯ ಆಗರವಾಗಿದೆ. ಬಡ ರೋಗಿಗಳ ಪಾಲಿಗೆ ಆಸರೆಯಾಗಬೇಕಿದ್ದ ಈ ಆಸ್ಪತ್ರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನರಕಸದೃಶವಾಗಿ ಮಾರ್ಪಟ್ಟಿದೆ. ಆಸ್ಪತ್ರೆಯ ಮೂಲೆ ಮೂಲೆಯಲ್ಲೂ ಗಲೀಜು, ಮುರಿದ ಪೀಠೋಪಕರಣಗಳು ರೋಗಿಗಳನ್ನು ಅಣಕಿಸುತ್ತಿವೆ. ಇದು ರಾಜ್ಯದ ಪ್ರತಿಷ್ಠಿತ ಶಿವಮೊಗ್ಗ ಜಿಲ್ಲೆಯ ಸರಕಾರಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆ

ಆಸ್ಪತ್ರೆಯ ಒಳಗೆ ಕಾಲಿಟ್ಟರೆ ಸಾಕು, ವಿಲೇವಾರಿಯಾಗದ ತ್ಯಾಜ್ಯದ ರಾಶಿ ಸ್ವಾಗತಿಸುತ್ತದೆ. ಪ್ಲ್ಯಾಸ್ಟಿಕ್ ಚೀಲಗಳಲ್ಲಿ ತುಂಬಿರುವ ಕಸ ದಿನಗಟ್ಟಲೆ ಕೊಳೆಯುತ್ತಿದ್ದು, ಆಸ್ಪತ್ರೆಯಾದ್ಯಂತ ವಿಪರೀತ ದುರ್ವಾಸನೆ ಹರಡಿದೆ. ಇದರಿಂದಾಗಿ ರೋಗಿಗಳಿಗೆ ಇರುವ ಕಾಯಿಲೆಗಿಂತ ಹೊಸ ಸೋಂಕು ಹರಡುವ ಭೀತಿ ಎದುರಾಗಿದೆ. ಇನ್ನು ವಾರ್ಡ್‌ಗಳ ಸ್ಥಿತಿಯಂತೂ ಹೇಳತೀರದಾಗಿದೆ. ಕಿಟಕಿ-ಬಾಗಿಲುಗಳು ಮುರಿದು ಬಿದ್ದಿದ್ದು, ಸೊಳ್ಳೆಗಳ ಕಾಟದಿಂದ ರೋಗಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.

ಬಿಸಿಲಿನ ತಾಪ ಹೆಚ್ಚಾಗಿದ್ದರೂ ರೋಗಿಗಳ ಕೊಠಡಿಗಳಲ್ಲಿ ಫ್ಯಾನ್‌ಗಳು ಕೆಟ್ಟು ನಿಂತಿವೆ. ಬೆವರಿನಲ್ಲೇ ಮಿಂದೇಳುತ್ತಿರುವ ರೋಗಿಗಳು ಗಾಳಿಗಾಗಿ ಹಾತೊರೆಯುತ್ತಿದ್ದರೂ, ಅದನ್ನು ದುರಸ್ತಿ ಮಾಡುವ ಮನಸ್ಸು ಆಸ್ಪತ್ರೆ ಆಡಳಿತ ಮಂಡಳಿ ಮಾಡುತ್ತಿಲ್ಲ. ಮಹಿಳಾ ರೋಗಿಗಳ ಪಾಡಂತೂ ಕೇಳುವವರೇ ಇಲ್ಲ. ಶೌಚಾಲಯಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಕಗ್ಗತ್ತಲು ಆವರಿಸಿದ್ದು, ಬಾಗಿಲುಗಳು ಮುರಿದು ಬಿದ್ದಿರುವುದರಿಂದ ಮಹಿಳೆಯರು ತೀವ್ರ ಮುಜುಗರ ಹಾಗೂ ಅಸಹಾಯಕತೆ ಅನುಭವಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಅನುದಾನ ಬರುತ್ತಿದ್ದರೂ ಮೆಗ್ಗಾನ್ ಆಸ್ಪತ್ರೆಯ ಮೂಲಭೂತ ಸೌಕರ್ಯಗಳು ಮಾತ್ರ ಸುಧಾರಿಸುತ್ತಿಲ್ಲ. ಅಧಿಕಾರಿಗಳು ಈ ನರಕಯಾತನೆಯನ್ನು ಕಣ್ಣಾರೆ ಕಂಡೂ ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ನಾವು ಗುಣಮುಖರಾಗಲು ಬರುತ್ತೇವೆಯೋ ಅಥವಾ ಮತ್ತಷ್ಟು ಕಾಯಿಲೆ ತಂದುಕೊಳ್ಳಲು ಬರುತ್ತೇವೆಯೋ ತಿಳಿಯುತ್ತಿಲ್ಲ” ಎಂದು ರೋಗಿಗಳ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ.

ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಈ ‘ನರಕ’ಕ್ಕೆ ಮುಕ್ತಿ ನೀಡಬೇಕಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್‌ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ

Published

on

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.

ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:

  • ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
  • ಶಾಖೆ: ದರ್ಬೆ, ಪುತ್ತೂರು
  • ಖಾತೆ ಸಂಖ್ಯೆ (A/c No): 1023202500000601
  • ಐಎಫ್‌ಎಸ್‌ಸಿ ಕೋಡ್ (IFSC): KARB0001023
  • ಗೂಗಲ್ ಪೇ ಸಂಖ್ಯೆ (G-Pay): 961163784



Continue Reading

accident

ವೈದ್ಯ ಲೋಕದ ವಿಸ್ಮಯ: ಸಾವು ಗೆದ್ದು ಬಂದ ಯುವಕ – ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರಿಂದ ದಾಖಲೆಯ ಶಸ್ತ್ರಚಿಕಿತ್ಸೆ!

Published

on

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ಪುನರ್ಜನ್ಮ ನೀಡುವ ಮೂಲಕ ಹಾಸನದ ಹೆಸರಾಂತ ‘ಜನಪ್ರಿಯ ಆಸ್ಪತ್ರೆ’ಯು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ತಲೆಬುರುಡೆ ಪುಡಿಯಾಗಿ, ಮೆದುಳು ಹೊರಬಂದಿದ್ದ ಸ್ಥಿತಿಯಲ್ಲಿದ್ದ ಯುವಕನನ್ನು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಮೂಲಕ ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಕೊಣನೂರು ಸಮೀಪ ಮದುವೆ ಸಮಾರಂಭ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ಭೀಕರ ಅಪಘಾತ ಸಂಭವಿಸಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವಕ ಸಾಯುವ ಹಂತ ತಲುಪಿದ್ದ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬದುಕುವ ಸಾಧ್ಯತೆ ಇಲ್ಲ ಎಂದು ಅಲ್ಲಿನ ವೈದ್ಯರು ಕೈಚೆಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದು ಎಂಬ ಆತಂಕದ ನಡುವೆಯೂ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದರು.

ಜೀವ ಉಳಿಸಿದ ‘ಜನಪ್ರಿಯ’ ವೈದ್ಯರ ಚಾಕಚಕ್ಯತೆ:

ಆಸ್ಪತ್ರೆಗೆ ದಾಖಲಾದಾಗ ಗಾಯಾಳುವಿನ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಲೆಬುರುಡೆ ಪುಡಿಪುಡಿಯಾಗಿ ಮೆದುಳು ಹೊರಬಂದಿತ್ತು ಅಷ್ಟೇ ಅಲ್ಲದೆ, ಮೆದುಳಿನ ಪದರಗಳ ಒಳಗೆ ಕಲ್ಲು ಮತ್ತು ಮಣ್ಣು ಸೇರಿಕೊಂಡಿತ್ತು. ಕೈ ಮತ್ತು ಕಾಲುಗಳ ಮೂಳೆಗಳು ಕೂಡ ಮುರಿದಿದ್ದವು.

ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮೂಳೆ ಮತ್ತು ಕೀಲು ತಜ್ಞರಾದ ಡಾ. ವಿ.ಕೆ. ಅಬ್ದುಲ್ ಬಶೀರ್ ಈ ಕುರಿತು ಮಾಹಿತಿ ನೀಡುತ್ತಾ, “ಗಾಯಾಳು ಆಸ್ಪತ್ರೆಗೆ ಬಂದಾಗ ಹೃದಯ ಬಡಿತ ಮತ್ತು ನಾಡಿ ಮಿಡಿತ ಸಂಪೂರ್ಣ ನಿಂತಿತ್ತು. ತಕ್ಷಣವೇ ಡಿ-ಫಿಬ್ರಿಲೇಟರ್ ಯಂತ್ರದ ಮೂಲಕ ಹೃದಯಕ್ಕೆ ವಿದ್ಯುತ್ ಚಾಲನೆ ನೀಡಿ ಬಡಿತ ಬರುವಂತೆ ಮಾಡಲಾಯಿತು. ಸುಮಾರು 8 ರಿಂದ 10 ಬಾಟಲ್ ರಕ್ತವನ್ನು ನೇರವಾಗಿ ಪೈಪ್ ಮೂಲಕ ಹೃದಯಕ್ಕೆ ನೀಡಿ ರಕ್ತದ ಒತ್ತಡವನ್ನು ಸರಿಪಡಿಸಲಾಯಿತು. ಕೇವಲ ಶೇ. 1 ರಷ್ಟು ಮಾತ್ರ ಬದುಕುವ ಭರವಸೆ ಇದ್ದರೂ, ಪೋಷಕರ ಒಪ್ಪಿಗೆ ಪಡೆದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಆರಂಭಿಸಿದೆವು” ಎಂದರು.

ಸತತ ಪರಿಶ್ರಮ ಮತ್ತು ಯಶಸ್ಸು:

ಸುಮಾರು ಐದರಿಂದ ಆರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯುವಕನಿಗೆ ಮಾಡಲಾಯಿತು. ಮೂರು ವಾರಗಳ ಕಾಲ ಕೃತಕ ಉಸಿರಾಟದ ಯಂತ್ರದಲ್ಲಿ (Ventilator) ಇಟ್ಟು ಚಿಕಿತ್ಸೆ ನೀಡಲಾಯಿತು. ವೈದ್ಯರ ತಂಡ ಮತ್ತು ನರ್ಸಿಂಗ್ ಸಿಬ್ಬಂದಿಯ ಹಗಲಿರುಳಿನ ಶ್ರಮದ ಫಲವಾಗಿ, ಒಂದೂವರೆ ತಿಂಗಳ ನಂತರ ಯುವಕ ಈಗ ಯಾರ ಸಹಾಯವಿಲ್ಲದೆ ನಡೆಯುವಂತಾಗಿದ್ದಾನೆ ಮತ್ತು ಮಾತನಾಡುತ್ತಿದ್ದಾನೆ.

ಪೋಷಕರ ಕೃತಜ್ಞತೆ:

ಯುವಕನ ತಂದೆ ಮಂಜುನಾಥ್ ಮಾತನಾಡಿ, “ನಾವು ನನ್ನ ಮಗನಿಗೆ ಮೊದಲ ಜನ್ಮ ನೀಡಿದ್ದರೆ, ಜನಪ್ರಿಯ ಆಸ್ಪತ್ರೆಯ ವೈದ್ಯರು ಆತನಿಗೆ ಎರಡನೇ ಜನ್ಮ ನೀಡಿದ್ದಾರೆ. ಮಗ ಉಳಿಯುವುದಿಲ್ಲ ಎಂದಿದ್ದ ಪರಿಸ್ಥಿತಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಇಂದು ನಮ್ಮ ಮಗ ನಮ್ಮ ಜೊತೆ ಮಾತನಾಡುವಂತೆ ಮಾಡಿದ್ದಾರೆ. ಇಡೀ ವೈದ್ಯಕೀಯ ತಂಡಕ್ಕೆ ನಾವು ಸದಾ ಋಣಿಯಾಗಿದ್ದೇವೆ,” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದರು.

ವೈದ್ಯಕೀಯ ಲೋಕದ ವಿಸ್ಮಯ ಎಂಬಂತಿರುವ ಈ ಸಾಧನೆಯು ಹಾಸನದ ವೈದ್ಯಕೀಯ ಕ್ಷೇತ್ರದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.





Continue Reading

Bantawala

ಬಂಟ್ವಾಳ: ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷದ ನೂತನ ಕಟ್ಟಡ ಮಂಜೂರು

Published

on

ಬಂಟ್ವಾಳ: ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕೊಳ್ನಾಡು ಗ್ರಾಮದ ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಮಂಜೂರಾಗಿದೆ.

ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಮಾಜಿ ಅಧ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಬೇಡಿಕೆಗೆ ಸ್ಪಂದಿಸಿ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಗ್ರಾಮೀಣ ಭಾಗದ ಜನರಿಗೆ ಸಮೀಪದಲ್ಲೇ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅನುಮೋದನೆಯೊಂದಿಗೆ ಕಟ್ಟಡವನ್ನು ಅಧಿಕೃತ ಪಟ್ಟಿಗೆ ಸೇರಿಸಲಾಗಿದೆ. ನೂತನ ಕಟ್ಟಡದಿಂದ ತಾಯಿ-ಮಗು ಆರೈಕೆ, ಲಸಿಕಾ ಕಾರ್ಯಕ್ರಮಗಳು, ಮೂಲಭೂತ ತಪಾಸಣೆ ಮತ್ತು ತುರ್ತು ಸೇವೆಗಳ ವಿಸ್ತರಣೆಗೆ ಅನುಕೂಲವಾಗಲಿದೆ. ಸ್ಥಳೀಯರಿಗೆ ಸುಲಭ ಪ್ರವೇಶ, ಸಮಯೋಚಿತ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಸುಧಾರಿಸುವ ಇರಾದೆ ಹೊಂದಲಾಗಿದೆ.

ಉಪಕೇಂದ್ರಕ್ಕಾಗಿ ಸ್ಥಳ ಗುರುತಿಸುವ ಹಂತದಲ್ಲೇ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ವಹಿಸಿದ ಮುಂದಾಳತ್ವ, ಸಮನ್ವಯ ಮತ್ತು ಜನಪರ ದೃಷ್ಟಿಕೋನವನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. ಅವರ ದೂರದೃಷ್ಟಿ ಹಾಗೂ ನಿರಂತರ ಮೂಲಭೂತ ಸೌಕರ್ಯಗಳ ಹೋರಾಟದ ಫಲವಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದರೊಂದಿಗೆ ಕೊಳ್ನಾಡು ಗ್ರಾಮ ಪಂಚಾಯತ್ ಬಳಿ ಹಾಗೂ ಸುರಿಬೈಲ್ ಉಪಕೇಂದ್ರ ಕಟ್ಟಡಕ್ಕೂ ತಲಾ ₹65 ಲಕ್ಷ ರೂ.ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದಿಸಿದ್ದು, ಗ್ರಾಮೀಣ ಭಾಗದ ಆರೋಗ್ಯ ಸೇವೆ ಬಲವರ್ಧನೆಗೆ ಸಹಕಾರಿಯಾಗಲಿದೆ.

Continue Reading

Trending

Copyright © 2025 Deevatige

error: Content is protected !!