theft
ವಿಟ್ಲದಲ್ಲಿ ಬ್ಯಾಟರಿ ಕಳ್ಳರ ಅಟ್ಟಹಾಸ ಮುಂದುವರಿಕೆ: ಪೊಲೀಸರಿಗೆ ಕಗ್ಗಂಟಾದ ಸರಣಿ ಕಳ್ಳತನ, ವಾಹನ ಸವಾರರಲ್ಲಿ ಆತಂಕ!
ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ರಸ್ತೆ ಬದಿ ಹಾಗೂ ಆವರಣಗಳಲ್ಲಿ ನಿಲ್ಲಿಸುವ ಲಾರಿ ಮತ್ತು ಇತರ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡುವ ಜಾಲ ಸಕ್ರಿಯವಾಗಿದ್ದು, ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳ್ಳರ ಕರಾಮತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸರಣಿ ಕಳ್ಳತನದ ಪ್ರಕರಣಗಳು ಪೊಲೀಸರ ನಿದ್ದೆಗೆಡಿಸಿವೆ.

ಮಂಗಳವಾರ ರಾತ್ರಿ ಮತ್ತೆರಡು ಲಾರಿಗಳ ಬ್ಯಾಟರಿ ಕಳವು: ತಾಜಾ ಪ್ರಕರಣದಲ್ಲಿ, ಮಂಗಳವಾರ ರಾತ್ರಿ ಮಾಣಿ–ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಜಂಕ್ಷನ್ನಲ್ಲಿರುವ ‘ಗೌರಿ ಅರ್ಥ್ ಮೂವರ್ಸ್’ ಸಂಸ್ಥೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಬ್ಯಾಟರಿಗಳನ್ನು ಕಳ್ಳರು ಯಶಸ್ವಿಯಾಗಿ ಕದ್ದೊಯ್ದಿದ್ದಾರೆ. ಈ ಬಗ್ಗೆ ವಾಹನ ಮಾಲೀಕರು ವಿಟ್ಲ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಭಾನುವಾರ ರಾತ್ರಿ ಒಂದೇ ದಿನ 4 ಲಾರಿಗಳಿಗೆ ಕನ್ನ: ಇದಕ್ಕೂ ಮುನ್ನ, ಕಳೆದ ಭಾನುವಾರ (ಜೂನ್ 7) ಒಂದೇ ರಾತ್ರಿಯಲ್ಲಿ ಕಳ್ಳರು ಬರೋಬ್ಬರಿ ನಾಲ್ಕು ಲಾರಿಗಳ ಬ್ಯಾಟರಿಗಳನ್ನು ಎಗರಿಸಿದ್ದರು. ಉಕ್ಕುಡದಲ್ಲಿ ಒಂದು, ಅಳಕೆಮಜಲು ಮಸೀದಿ ಬಳಿ ಎರಡು ಹಾಗೂ ನಿನ್ನಿಕಲ್ಲು ಅಡ್ಡರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಒಂದು ಲಾರಿಯ ಬ್ಯಾಟರಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಅದಕ್ಕೂ ಕೆಲವು ದಿನಗಳ ಹಿಂದೆ ಕುಡ್ತಮುಗೇರು ಮತ್ತು ಸಾಲೆತ್ತೂರು ಪರಿಸರದಲ್ಲೂ ಇದೇ ಮಾದರಿಯ ಕಳ್ಳತನ ನಡೆದಿತ್ತು.
ಫೆಬ್ರವರಿಯಲ್ಲೂ ನಡೆದಿತ್ತು ಭರ್ಜರಿ ಬೇಟೆ! ವಿಟ್ಲ ಪರಿಸರದಲ್ಲಿ ಬ್ಯಾಟರಿ ಕಳ್ಳರ ಹಾವಳಿ ಇದೇ ಮೊದಲಲ್ಲ. ಕಳೆದ ಫೆಬ್ರವರಿ ತಿಂಗಳಲ್ಲೂ ಕಳ್ಳರು ಕೇವಲ ಮೂರೇ ದಿನಗಳಲ್ಲಿ 9 ವಾಹನಗಳ ಬ್ಯಾಟರಿಗಳನ್ನು ಕದ್ದು ಪೊಲೀಸರಿಗೆ ಸವಾಲು ಹಾಕಿದ್ದರು. ಆಗಲೂ ವಿಟ್ಲ ಪೇಟೆ, ಪೆರುವಾಯಿ, ಕನ್ಯಾನ ಮುಂತಾದ ಕಡೆಗಳಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನೇ ಟಾರ್ಗೆಟ್ ಮಾಡಲಾಗಿತ್ತು. ತಿಂಗಳುಗಳು ಕಳೆದರೂ ಈ ಕಳ್ಳರ ಜಾಲವನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರಿಗೆ ತಲೆನೋವಾದ ಕಳ್ಳರ ಕಾರ್ಯಾಚರಣೆ: ಯಾವುದೇ ಸುಳಿವು ಸಿಗದಂತೆ ಅತ್ಯಂತ ಚಾಣಾಕ್ಷತನದಿಂದ ಬ್ಯಾಟರಿಗಳನ್ನು ಬಿಚ್ಚಿ ಸಾಗಿಸುತ್ತಿರುವ ಕಳ್ಳರ ಗ್ಯಾಂಗ್ ಪೊಲೀಸರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸತತವಾಗಿ ನಡೆಯುತ್ತಿರುವ ಈ ಕಳ್ಳತನದ ಪ್ರಕರಣಗಳಿಂದಾಗಿ ಲಾರಿ ಹಾಗೂ ಇತರೆ ವಾಹನ ಮಾಲೀಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ರಾತ್ರಿ ವೇಳೆ ಪೊಲೀಸರು ಗಸ್ತನ್ನು ತೀವ್ರಗೊಳಿಸಬೇಕು ಮತ್ತು ಹೆದ್ದಾರಿ ಹಾಗೂ ಜಂಕ್ಷನ್ಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರನ್ನು ತಕ್ಷಣವೇ ಬಂಧಿಸಬೇಕು ಎಂದು ವಾಹನ ಮಾಲೀಕರು ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ. ಸದ್ಯ ವಿಟ್ಲ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.



crime
ಮನೆಗೆ ನುಗ್ಗಿ ವೃದ್ಧ ವೈದ್ಯರ ಮೇಲೆ ಹಲ್ಲೆ, ದರೋಡೆ; ಆಕ್ಟಿವಾ ಕಳ್ಳತನ: ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನದಿಂದ ಬೆಚ್ಚಿಬಿದ್ದ ಜನತೆ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದಲ್ಲಿ ಶನಿವಾರ ರಾತ್ರಿ ಭೀಕರ ದರೋಡೆ ಹಾಗೂ ಸರಣಿ ಕಳ್ಳತನ ಪ್ರಕರಣಗಳು ಜರುಗಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ವೃದ್ಧ ವೈದ್ಯರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಕಳ್ಳರು
ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ನಿವಾಸಿಯಾದ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ (75) ಅವರ ಮನೆಗೆ ಶನಿವಾರ ರಾತ್ರಿ ಹಿಂಭಾಗದಿಂದ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಕೃತ್ಯ ಎಸಗಿದೆ. ಘಟನೆ ನಡೆದ ಸಮಯದಲ್ಲಿ ಸೂರ್ಯನಾರಾಯಣ ಭಟ್ ಅವರು ಕೆಳ ಅಂತಸ್ತಿನಲ್ಲಿ ಟಿವಿ ವೀಕ್ಷಿಸುತ್ತಿದ್ದರು. ಮನೆ ಮೇಲಿನ ಅಂತಸ್ತಿನಲ್ಲಿ ಅವರ ಪುತ್ರ (ಪುತ್ತೂರಿನ ಬಿಂದು ಕಂಪನಿ ಉದ್ಯೋಗಿ ಕಿಶನ್), ಸೊಸೆ ಹಾಗೂ ಕುಟುಂಬಸ್ಥರು ಇದ್ದರು.
ಅದೇ ಸಮಯಕ್ಕೆ ಹಿಂಭಾಗದಿಂದ ಮನೆ ಪ್ರವೇಶಿಸಿದ ಕಳ್ಳರು, ವೃದ್ಧ ವೈದ್ಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಅಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಭಟ್ ಅವರು ಗಾಯಗೊಂಡು ಜೋರಾಗಿ ಬೊಬ್ಬೆ ಹೊಡೆದ ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಫಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ 2,60,000/- ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಸುಲಿಗೆ ಮಾಡಿ, ಮನೆಯ ಹಿಂಬಾಗಿಲಿನ ಮುಲಕ ಪರಾರಿಯಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 163/2026, ಕಲಂ: 329(4), 115(2), 309(4) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆಕ್ಟಿವಾ ಸ್ಕೂಟರ್ ಕಳ್ಳತನ, ಬೈಕ್ ಕಳವಿಗೆ ಯತ್ನ
ಈ ಘಟನೆ ನಡೆದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೋಲ್ಪೆ ಕೊಡಂಚರಪಾಲು ನಿವಾಸಿ ಆನಂದ ಸಫಲ್ಯ ಎಂಬುವರ ಮನೆಯ ಅಂಗಳದಲ್ಲಿದ್ದ ಆಕ್ಟಿವಾ ಸ್ಕೂಟರ್ ಅನ್ನು ದುಷ್ಕರ್ಮಿಗಳು ಕದ್ದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೆ, ಸಮೀಪದ ಮತ್ತೊಂದು ಮನೆಯ ಅಂಗಳದಲ್ಲಿದ್ದ ಬೈಕ್ ಒಂದರ ಲಾಕ್ ಮುರಿದು ಕಳವು ಮಾಡಲು ಯತ್ನಿಸಿದ್ದು, ಅದು ಸಾಧ್ಯವಾಗದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಂಗಳದಲ್ಲಿ ನಿಲ್ಲಿಸಿದ್ದ KA-19-EY-6282ನೇ ನೋಂದಣಿಯ ದ್ವಿಚಕ್ರ ವಾಹನವು (ಅಂದಾಜು ಮೌಲ್ಯ 30,000/- ರೂ), ಮರುದಿನ ದಿನಾಂಕ: 26.07.2026 ರಂದು ಬೆಳಿಗ್ಗೆ ನೋಡಿದಾಗ ಕಾಣೆಯಾಗಿದ್ದು, ಈ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದರೂ ಪತ್ತೆಯಾಗದಿದ್ದು, ಈ ಹಿನ್ನೆಲೆಯಲ್ಲಿ ಸದ್ರಿಯವರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 162/2026, ಕಲಂ:303(2) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನ ಬಿ.ಸಿ ರೋಡ್ ಬಳಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿರುತ್ತದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ: ಪೊಲೀಸ್ ತನಿಖೆ ಚುರುಕು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ, ಬಂಟ್ವಾಳ ಡಿವೈಎಸ್ಪಿ ಹಾಗೂ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಸರಣಿ ಕಳ್ಳತನಕ್ಕೆ ಗ್ರಾಮಸ್ಥರ ಆಕ್ರೋಶ: ರಾತ್ರಿ ಗಸ್ತಿಗೆ ಆಗ್ರಹ
ಇಡ್ಕಿದು ಗ್ರಾಮದಲ್ಲಿ ಕಳೆದ ಕೆಲವು ಸಮಯದಿಂದ ಸರಣಿ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದರೂ, ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರ ಮೇಲೆಯೇ ಹಲ್ಲೆ ನಡೆಸಿ ದರೋಡೆ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ತಕ್ಷಣವೇ ಈ ಭಾಗದಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಕಳ್ಳರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
arrest
ಪೊಲೀಸರ ಸಾಹಸ: ಕಳ್ಳತನ ಪ್ರಕರಣಗಳ ಆರೋಪಿಗಳ ಬಂಧನ
ದಕ್ಷಿಣ ಕನ್ನಡ: ಸುಳ್ಯ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಮತ್ತು ಕಳವು ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
1. ಸುಳ್ಯದಲ್ಲಿ ಬ್ಯಾಟರಿ ಕಳವು: ಆರೋಪಿಯಿಂದ 5 ಬ್ಯಾಟರಿಗಳು ವಶ
ಮೇ 14, 2026 ರಂದು ರಾತ್ರಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವಾಹನಗಳಲ್ಲಿದ್ದ 5 ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ (ಅ.ಕ್ರ 68/2026 ಕಲಂ: 303(2) BNS) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.

ಈಗಾಗಲೇ ವಿಟ್ಲ ಪೊಲೀಸ್ ಠಾಣೆಯ ವಿವಿಧ 5 ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೇರಳ ಕಾಸರಗೋಡು ನಿವಾಸಿ ಅಬ್ದುಲ್ ಮಜಿದ್ (33) ಎಂಬಾತನನ್ನು ಜುಲೈ 20, 2026 ರಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸುಳ್ಯ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿದ್ದ 5 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
2. ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವನ ಬಂಧನ
ಇನ್ನೊಂದೆಡೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು, ಒಳಪ್ರವೇಶಿಸಿ ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ಜೂನ್ 13, 2026 ರಂದು ನಡೆದಿತ್ತು.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ (ಅ.ಕ್ರ: 106/2026 ಕಲಂ: 331(3), 331(4), 305(a), 62 BNS) ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಬಂಟ್ವಾಳ ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂಬಾತನನ್ನು ಜುಲೈ 22, 2026 ರಂದು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.
arrest
ಮಂಗಳೂರು: ಮನೆ ಕಾಮಗಾರಿ ವೇಳೆ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು – 24 ಗಂಟೆಯೊಳಗೆ ಆರೋಪಿ ಅರೆಸ್ಟ್!
ಮಂಗಳೂರು: ಮನೆ ಕಾಮಗಾರಿಗೆ ಬಂದಿದ್ದ ಕೆಲಸಗಾರನೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ್ದ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶ ಮೂಲದ, ಪ್ರಸ್ತುತ ಮಂಗಳೂರಿನ ಬಂದರ್ ಅಜಿಜುದ್ದೀನ್ ರಸ್ತೆಯಲ್ಲಿ ವಾಸವಿದ್ದ ಜಹೀರುದ್ದೀನ್ (24) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ:
ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಜುಲೈ 6ರಂದು ಮನೆಯೊಂದರ ಹಿಂಭಾಗದ ಕೊಠಡಿಯ ಛಾವಣಿ ಹಾಗೂ ಹಾಲ್ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾವರ್ನಲ್ಲಿದ್ದ ಸಣ್ಣ ಪರ್ಸ್ನಿಂದ:
- 20 ಗ್ರಾಂ ತೂಕದ ಚಿನ್ನದ ಕಡಗ
- 17 ಗ್ರಾಂ ತೂಕದ ಚಿನ್ನದ ಚೈನ್
- 12 ಗ್ರಾಂ ತೂಕದ 2 ಚಿನ್ನದ ಉಂಗುರಗಳು (8 ಗ್ರಾಂ + 4 ಗ್ರಾಂ)
- ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್
ಸೇರಿದಂತೆ ಒಟ್ಟು 49 ಗ್ರಾಂ ತೂಕದ, ಅಂದಾಜು ₹6,37,000 ಮೌಲ್ಯದ ಸ್ವತ್ತುಗಳು ಕಳುವಾಗಿದ್ದವು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ 68/2026, ಕಲಂ 305 ಬಿ.ಎನ್.ಎಸ್) ದಾಖಲಾಗಿತ್ತು.
ಕ್ಷಿಪ್ರ ಕಾರ್ಯಾಚರಣೆ – ಜೈಲು ಪಾಲು:
ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ರಂಗಕ್ಕಿಳಿದ ಪೊಲೀಸರು, ಕಾಮಗಾರಿ ಕೆಲಸದಲ್ಲಿದ್ದ ಕೆಲಸಗಾರರನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಿದರು. ವಿಚಾರಣೆ ವೇಳೆ ಆರೋಪಿ ಜಹೀರುದ್ದೀನ್ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಕಳವು ಮಾಡಲಾಗಿದ್ದ ಎಲ್ಲಾ ಚಿನ್ನಾಭರಣಗಳು ಹಾಗೂ ವಾಚ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.
ಪೊಲೀಸ್ ತಂಡಕ್ಕೆ ಶ್ಲಾಘನೆ:
ಸದರಿ ಕಳವು ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಂಗಳೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಡಿ.ಆರ್. ಮಂಜಪ್ಪ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿ ತಂಡದ ಕ್ಷಿಪ್ರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
