Connect with us

health

ಡಯಾಲಿಸಿಸ್ ರೋಗಿಯ ವಾಹನ ತಡೆದು ಕಿರುಕುಳ – ಸಾರ್ವಜನಿಕ ಆಕ್ರೋಶ ಕಮೀಷನರ್‌ ಹೇಳಿದ್ದೇನು ? ಮಾನವೀಯತೆ ಮತ್ತು ಕಾನೂನಿನ ನಡುವೆ ಪೊಲೀಸರ ಕರ್ತವ್ಯ ನಿಷ್ಠೆ…

Published

on

ಮಂಗಳೂರು: ಗಡಿಭಾಗದ ಜಿಲ್ಲೆಗಳಲ್ಲಿ ಸೌಹಾರ್ದತೆ ಮತ್ತು ಪರಸ್ಪರ ಸಹಕಾರ ಮುಖ್ಯವಾಗಿರಬೇಕಾದ ಹೊತ್ತಿನಲ್ಲಿ, ಮಂಗಳೂರಿನ ದೇರಳಕಟ್ಟೆ ಸಮೀಪ ಟ್ರಾಫಿಕ್ ಪೊಲೀಸರು ನಡೆದುಕೊಂಡ ರೀತಿ ಅಮಾನವೀಯತೆಯ ಪರಮಾವಧಿಯಾಗಿದೆ ಮತ್ತು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದ ರೋಗಿಯಿದ್ದ ವಾಹನವನ್ನು ತಡೆದು, ದಂಡದ ಹೆಸರಿನಲ್ಲಿ ಕಿರುಕುಳ ನೀಡಿದ್ದಾರೆ ಎಂದು ಸಾರ್ವಜನಿಕವಾಗಿ ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿರುವಾಗಲೇ ಮಂಗಳೂರು ಪೊಲೀಸ್‌ ಕಮೀಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಗರದ ಸಂಚಾರಿ ನಿಯಮಗಳ ಉಲ್ಲಂಘನೆ ಮತ್ತು ಅಕ್ರಮ ವಾಹನಗಳ ಕಾರ್ಯಾಚರಣೆಯ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಕೇರಳ ನೋಂದಣಿಯ ಖಾಸಗಿ ವಾಹನವೊಂದನ್ನು ಬಾಡಿಗೆಗೆ ಬಳಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ತಡೆದ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಕಾನೂನು ಮತ್ತು ಮಾನವೀಯತೆಯ ದೃಷ್ಟಿಕೋನದ ವಿಶ್ಲೇಷಣೆಯನ್ನು ಪೊಲೀಸರು ನೀಡಿದ್ದಾರೆ.

ಕೇರಳ ನೋಂದಣಿಯ ಖಾಸಗಿ ರಿಕ್ಷಾವೊಂದು ಮಂಗಳೂರು ನಗರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾಗ ಕರ್ತವ್ಯದಲ್ಲಿದ್ದ ಎಎಸ್ಐ (ASI) ವಾಹನವನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ರೋಗಿಗಳಿರುವುದು ಕಂಡುಬಂದಿದೆ. ಆದರೆ, ಈ ಸಂದರ್ಭವನ್ನು ಬಳಸಿಕೊಂಡು ಕಾನೂನು ಉಲ್ಲಂಘನೆಯನ್ನು ಸಮರ್ಥಿಸಿಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ.

ಖಾಸಗಿ ವಾಹನ – ವಾಣಿಜ್ಯ ಬಳಕೆ: ವಾಹನವು ಖಾಸಗಿ ನೋಂದಣಿ (White Board) ಹೊಂದಿದ್ದರೂ ಅದನ್ನು ಬಾಡಿಗೆಗೆ ಪ್ರಯಾಣಿಕರನ್ನು ಸಾಗಿಸಲು ಬಳಸಲಾಗುತ್ತಿದೆ ಎಂದು ಚಾಲಕನೇ ಒಪ್ಪಿಕೊಂಡಿದ್ದಾನೆ. ಇದು ಮೋಟಾರು ವಾಹನ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.

ರೋಗಿಗಳ ನೆಪದಲ್ಲಿ ನಿಯಮ ಉಲ್ಲಂಘನೆ: ವಾಹನದಲ್ಲಿ ರೋಗಿಗಳಿದ್ದಾರೆ ಎಂಬ ಕಾರಣಕ್ಕೆ ಖಾಸಗಿ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ತುರ್ತು ಸಂದರ್ಭಗಳಲ್ಲಿ ಮಾನವೀಯತೆ ಮುಖ್ಯವಾದರೂ, ಅದನ್ನು ಕಾನೂನುಬಾಹಿರ ಚಟುವಟಿಕೆಗಳಿಗೆ ಪರವಾನಗಿಯಂತೆ ಬಳಸಬಾರದು.

ಸ್ಥಳೀಯ ಆಟೋ ಚಾಲಕರ ಸಂಕಷ್ಟ: ಮಂಗಳೂರಿನ ಸ್ಥಳೀಯ ಆಟೋ ಚಾಲಕರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಪರವಾನಗಿ (Permit) ಪಡೆದು, ಸರ್ಕಾರದ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊರ ರಾಜ್ಯದ ಅಕ್ರಮ ರಿಕ್ಷಾಗಳಿಗೆ ಅವಕಾಶ ನೀಡುವುದು ಸ್ಥಳೀಯ ಚಾಲಕರ ಜೀವನೋಪಾಯಕ್ಕೆ ಹೊಡೆತ ನೀಡಿದಂತಾಗುತ್ತದೆ.

ಪೊಲೀಸರ ವಿವೇಚನಾ ಅಧಿಕಾರ: ವಾಹನ ತಡೆಯುವ ಮೊದಲು ಅದರಲ್ಲಿ ರೋಗಿಗಳಿದ್ದಾರೆ ಎಂದು ಪೊಲೀಸರಿಗೆ ತಿಳಿದಿರುವುದಿಲ್ಲ. ನಿಯಮ ಉಲ್ಲಂಘನೆಯ ಶಂಕೆಯ ಮೇಲೆ ತಪಾಸಣೆ ನಡೆಸಿದ ಎಎಸ್ಐ, ನಂತರ ಮಾನವೀಯ ಆಧಾರದ ಮೇಲೆ ದಂಡ ವಿಧಿಸದೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದು ಅವರ ಕರ್ತವ್ಯ ನಿಷ್ಠೆ ಮತ್ತು ವಿವೇಚನೆಯನ್ನು ತೋರಿಸುತ್ತದೆ.

ಸಾರ್ವಜನಿಕರ ಗಮನಕ್ಕೆ:

ನಗರದ ಸಂಚಾರ ವ್ಯವಸ್ಥೆ ಸುಗಮವಾಗಿರಲು ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ರಿಯಾಯಿತಿಗಳನ್ನು ಗೌರವದಿಂದ ಕೋರಬೇಕೇ ಹೊರತು, ಅದನ್ನು ಹಕ್ಕಿನಂತೆ ಪ್ರತಿಪಾದಿಸುವುದು ಸರಿಯಲ್ಲ. ಅಕ್ರಮ ಆಟೋಗಳ ಪರವಾಗಿ ಧ್ವನಿ ಎತ್ತುವ ಮೊದಲು, ನಿಯಮ ಪಾಲಿಸುವ ಸ್ಥಳೀಯ ಚಾಲಕರ ಹಿತದೃಷ್ಟಿಯನ್ನು ಗಮನಿಸಬೇಕಿದೆ. ಎಂದು ಕಮೀಷನರ್‌ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಕೇರಳ ನೋಂದಣಿಯ (KL-14) ಖಾಸಗಿ ಎಲೆಕ್ಟ್ರಿಕ್ ಆಟೋವೊಂದರಲ್ಲಿ ರೋಗಿಯೊಬ್ಬರನ್ನು ಡಯಾಲಿಸಿಸ್‌ ಚಿಕಿತ್ಸೆಗಾಗಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರು ವಾಹನವನ್ನು ತಡೆದು ನಿಲ್ಲಿಸಿ, “ಕೇರಳದ ವಾಹನ ಕರ್ನಾಟಕಕ್ಕೆ ಬರಲು ಅನುಮತಿಯಿಲ್ಲ” ಎಂದು ಐದು ಸಾವಿರ ರೂಪಾಯಿ ದಂಡ ಪಾವತಿಸುವಂತೆ ಆದೇಶ ಮಾಡಿದ ಬಗ್ಗೆ ಸಾರ್ವಜನಿಕವಾಗಿ ಪೊಲೀಸರಿಗೆ ಮಾನವೀಯತೆಯೇ ಇಲ್ಲ ಎಂಬಂತೆ ಪ್ರಕರಣದ ವಿಡಿಯೋ ವೈರಲ್‌ ಆಗಿತ್ತು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್‌ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ

Published

on

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.

ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:

  • ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
  • ಶಾಖೆ: ದರ್ಬೆ, ಪುತ್ತೂರು
  • ಖಾತೆ ಸಂಖ್ಯೆ (A/c No): 1023202500000601
  • ಐಎಫ್‌ಎಸ್‌ಸಿ ಕೋಡ್ (IFSC): KARB0001023
  • ಗೂಗಲ್ ಪೇ ಸಂಖ್ಯೆ (G-Pay): 961163784



Continue Reading

accident

ವೈದ್ಯ ಲೋಕದ ವಿಸ್ಮಯ: ಸಾವು ಗೆದ್ದು ಬಂದ ಯುವಕ – ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರಿಂದ ದಾಖಲೆಯ ಶಸ್ತ್ರಚಿಕಿತ್ಸೆ!

Published

on

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ಪುನರ್ಜನ್ಮ ನೀಡುವ ಮೂಲಕ ಹಾಸನದ ಹೆಸರಾಂತ ‘ಜನಪ್ರಿಯ ಆಸ್ಪತ್ರೆ’ಯು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ತಲೆಬುರುಡೆ ಪುಡಿಯಾಗಿ, ಮೆದುಳು ಹೊರಬಂದಿದ್ದ ಸ್ಥಿತಿಯಲ್ಲಿದ್ದ ಯುವಕನನ್ನು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಮೂಲಕ ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಕೊಣನೂರು ಸಮೀಪ ಮದುವೆ ಸಮಾರಂಭ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ಭೀಕರ ಅಪಘಾತ ಸಂಭವಿಸಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವಕ ಸಾಯುವ ಹಂತ ತಲುಪಿದ್ದ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬದುಕುವ ಸಾಧ್ಯತೆ ಇಲ್ಲ ಎಂದು ಅಲ್ಲಿನ ವೈದ್ಯರು ಕೈಚೆಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದು ಎಂಬ ಆತಂಕದ ನಡುವೆಯೂ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದರು.

ಜೀವ ಉಳಿಸಿದ ‘ಜನಪ್ರಿಯ’ ವೈದ್ಯರ ಚಾಕಚಕ್ಯತೆ:

ಆಸ್ಪತ್ರೆಗೆ ದಾಖಲಾದಾಗ ಗಾಯಾಳುವಿನ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಲೆಬುರುಡೆ ಪುಡಿಪುಡಿಯಾಗಿ ಮೆದುಳು ಹೊರಬಂದಿತ್ತು ಅಷ್ಟೇ ಅಲ್ಲದೆ, ಮೆದುಳಿನ ಪದರಗಳ ಒಳಗೆ ಕಲ್ಲು ಮತ್ತು ಮಣ್ಣು ಸೇರಿಕೊಂಡಿತ್ತು. ಕೈ ಮತ್ತು ಕಾಲುಗಳ ಮೂಳೆಗಳು ಕೂಡ ಮುರಿದಿದ್ದವು.

ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮೂಳೆ ಮತ್ತು ಕೀಲು ತಜ್ಞರಾದ ಡಾ. ವಿ.ಕೆ. ಅಬ್ದುಲ್ ಬಶೀರ್ ಈ ಕುರಿತು ಮಾಹಿತಿ ನೀಡುತ್ತಾ, “ಗಾಯಾಳು ಆಸ್ಪತ್ರೆಗೆ ಬಂದಾಗ ಹೃದಯ ಬಡಿತ ಮತ್ತು ನಾಡಿ ಮಿಡಿತ ಸಂಪೂರ್ಣ ನಿಂತಿತ್ತು. ತಕ್ಷಣವೇ ಡಿ-ಫಿಬ್ರಿಲೇಟರ್ ಯಂತ್ರದ ಮೂಲಕ ಹೃದಯಕ್ಕೆ ವಿದ್ಯುತ್ ಚಾಲನೆ ನೀಡಿ ಬಡಿತ ಬರುವಂತೆ ಮಾಡಲಾಯಿತು. ಸುಮಾರು 8 ರಿಂದ 10 ಬಾಟಲ್ ರಕ್ತವನ್ನು ನೇರವಾಗಿ ಪೈಪ್ ಮೂಲಕ ಹೃದಯಕ್ಕೆ ನೀಡಿ ರಕ್ತದ ಒತ್ತಡವನ್ನು ಸರಿಪಡಿಸಲಾಯಿತು. ಕೇವಲ ಶೇ. 1 ರಷ್ಟು ಮಾತ್ರ ಬದುಕುವ ಭರವಸೆ ಇದ್ದರೂ, ಪೋಷಕರ ಒಪ್ಪಿಗೆ ಪಡೆದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಆರಂಭಿಸಿದೆವು” ಎಂದರು.

ಸತತ ಪರಿಶ್ರಮ ಮತ್ತು ಯಶಸ್ಸು:

ಸುಮಾರು ಐದರಿಂದ ಆರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯುವಕನಿಗೆ ಮಾಡಲಾಯಿತು. ಮೂರು ವಾರಗಳ ಕಾಲ ಕೃತಕ ಉಸಿರಾಟದ ಯಂತ್ರದಲ್ಲಿ (Ventilator) ಇಟ್ಟು ಚಿಕಿತ್ಸೆ ನೀಡಲಾಯಿತು. ವೈದ್ಯರ ತಂಡ ಮತ್ತು ನರ್ಸಿಂಗ್ ಸಿಬ್ಬಂದಿಯ ಹಗಲಿರುಳಿನ ಶ್ರಮದ ಫಲವಾಗಿ, ಒಂದೂವರೆ ತಿಂಗಳ ನಂತರ ಯುವಕ ಈಗ ಯಾರ ಸಹಾಯವಿಲ್ಲದೆ ನಡೆಯುವಂತಾಗಿದ್ದಾನೆ ಮತ್ತು ಮಾತನಾಡುತ್ತಿದ್ದಾನೆ.

ಪೋಷಕರ ಕೃತಜ್ಞತೆ:

ಯುವಕನ ತಂದೆ ಮಂಜುನಾಥ್ ಮಾತನಾಡಿ, “ನಾವು ನನ್ನ ಮಗನಿಗೆ ಮೊದಲ ಜನ್ಮ ನೀಡಿದ್ದರೆ, ಜನಪ್ರಿಯ ಆಸ್ಪತ್ರೆಯ ವೈದ್ಯರು ಆತನಿಗೆ ಎರಡನೇ ಜನ್ಮ ನೀಡಿದ್ದಾರೆ. ಮಗ ಉಳಿಯುವುದಿಲ್ಲ ಎಂದಿದ್ದ ಪರಿಸ್ಥಿತಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಇಂದು ನಮ್ಮ ಮಗ ನಮ್ಮ ಜೊತೆ ಮಾತನಾಡುವಂತೆ ಮಾಡಿದ್ದಾರೆ. ಇಡೀ ವೈದ್ಯಕೀಯ ತಂಡಕ್ಕೆ ನಾವು ಸದಾ ಋಣಿಯಾಗಿದ್ದೇವೆ,” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದರು.

ವೈದ್ಯಕೀಯ ಲೋಕದ ವಿಸ್ಮಯ ಎಂಬಂತಿರುವ ಈ ಸಾಧನೆಯು ಹಾಸನದ ವೈದ್ಯಕೀಯ ಕ್ಷೇತ್ರದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.





Continue Reading

Bantawala

ಬಂಟ್ವಾಳ: ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷದ ನೂತನ ಕಟ್ಟಡ ಮಂಜೂರು

Published

on

ಬಂಟ್ವಾಳ: ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರ ಶಿಫಾರಸ್ಸಿನ ಮೇರೆಗೆ ಕೊಳ್ನಾಡು ಗ್ರಾಮದ ಕುಳಾಲು ಆರೋಗ್ಯ ಉಪಕೇಂದ್ರಕ್ಕೆ ₹65 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ಮಂಜೂರಾಗಿದೆ.

ಕೊಳ್ನಾಡು ಗ್ರಾಮ ಪಂಚಾಯತ್‌ನ ಸುದೀರ್ಘ ಅವಧಿಯ ಮಾಜಿ ಅಧ್ಯಕ್ಷ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಬೇಡಿಕೆಗೆ ಸ್ಪಂದಿಸಿ ಈ ಮಹತ್ವದ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಗ್ರಾಮೀಣ ಭಾಗದ ಜನರಿಗೆ ಸಮೀಪದಲ್ಲೇ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅನುಮೋದನೆಯೊಂದಿಗೆ ಕಟ್ಟಡವನ್ನು ಅಧಿಕೃತ ಪಟ್ಟಿಗೆ ಸೇರಿಸಲಾಗಿದೆ. ನೂತನ ಕಟ್ಟಡದಿಂದ ತಾಯಿ-ಮಗು ಆರೈಕೆ, ಲಸಿಕಾ ಕಾರ್ಯಕ್ರಮಗಳು, ಮೂಲಭೂತ ತಪಾಸಣೆ ಮತ್ತು ತುರ್ತು ಸೇವೆಗಳ ವಿಸ್ತರಣೆಗೆ ಅನುಕೂಲವಾಗಲಿದೆ. ಸ್ಥಳೀಯರಿಗೆ ಸುಲಭ ಪ್ರವೇಶ, ಸಮಯೋಚಿತ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಸುಧಾರಿಸುವ ಇರಾದೆ ಹೊಂದಲಾಗಿದೆ.

ಉಪಕೇಂದ್ರಕ್ಕಾಗಿ ಸ್ಥಳ ಗುರುತಿಸುವ ಹಂತದಲ್ಲೇ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ವಹಿಸಿದ ಮುಂದಾಳತ್ವ, ಸಮನ್ವಯ ಮತ್ತು ಜನಪರ ದೃಷ್ಟಿಕೋನವನ್ನು ಗ್ರಾಮಸ್ಥರು ಸ್ಮರಿಸಿದ್ದಾರೆ. ಅವರ ದೂರದೃಷ್ಟಿ ಹಾಗೂ ನಿರಂತರ ಮೂಲಭೂತ ಸೌಕರ್ಯಗಳ ಹೋರಾಟದ ಫಲವಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಇದರೊಂದಿಗೆ ಕೊಳ್ನಾಡು ಗ್ರಾಮ ಪಂಚಾಯತ್ ಬಳಿ ಹಾಗೂ ಸುರಿಬೈಲ್ ಉಪಕೇಂದ್ರ ಕಟ್ಟಡಕ್ಕೂ ತಲಾ ₹65 ಲಕ್ಷ ರೂ.ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದಿಸಿದ್ದು, ಗ್ರಾಮೀಣ ಭಾಗದ ಆರೋಗ್ಯ ಸೇವೆ ಬಲವರ್ಧನೆಗೆ ಸಹಕಾರಿಯಾಗಲಿದೆ.

Continue Reading

Trending

Copyright © 2025 Deevatige

error: Content is protected !!