DEATH
ಕಳೆಂಜಿಮಲೆ ರಕ್ಷಿತಾರಣ್ಯದ ತಪ್ಪಲಲ್ಲಿ ಕಾಟಿಯ ದುರಂತ ಅಂತ್ಯ
ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಲವು ವರ್ಷಗಳಿಂದ ಸ್ವಚ್ಚಂದವಾಗಿ ಸುತ್ತಾಡುತ್ತಿದ್ದ(ಕಾಟಿ)ಕಾಡೆತ್ತು ಹಗ್ಗದ ಉರುಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ.
ರಕ್ಷಿತಾರಣ್ಯದ ತಪ್ಪಲು ಪ್ರದೇಶದ ವಿಟ್ಲ ಪಡ್ನೂರು ಗ್ರಾಮದ ಅನಿಲಕಟ್ಟೆ ಪೂರ್ಲಿಪ್ಪಾಡಿ ಎಂಬಲ್ಲಿನ ದಿ.ಮೋನಪ್ಪ ಗೌಡರ ಸ್ವಾಧೀನದ ಜಮೀನಿನಲ್ಲಿರುವ ನಾಲ್ಕೈದು ಕುಟುಂಬಗಳ ಕೃಷಿಗೆ ಅನುಕೂಲವಾಗುವ ಕೆದುವಾರು ಪಾಲಿನ ಕೆರೆಗೆ ನೀರು ಕುಡಿಯಲು ಕಾಡೆತ್ತು ಬರುತ್ತಿತ್ತು.

ನಿನ್ನೆ(ಶುಕ್ರವಾರ)ಸಂಜೆ ಕುತ್ತಿಗೆಯಲ್ಲಿ ಪಾಲಿಥೀನ್ ಹಗ್ಗ ಬಿಗಿದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಡೆತ್ತು ನೋವು ತಾಳಲಾರದೇ ಕೆರೆಗೆ ನೀರು ಕುಡಿಯಲು ಬಂದಿರುವುದು ಸ್ಥಳೀಯರ ಕಣ್ಣಿಗೆ ಕಂಡು ಬಂದಿತ್ತು. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯಾಧಿಕಾರಿಗಳ ತಂಡ ಶುಕ್ರವಾರ ಮುಸ್ಸಂಜೆಯೇ ಸ್ಥಳಕ್ಕಾಗಮಿಸಿ ಕುತ್ತಿಗೆಯಲ್ಲಿ ಬಿಗಿದಿದ್ದ ಹಗ್ಗದ ಉರುಳು ತುಂಡರಿಸಿದ್ದಾರೆ.
ಶನಿವಾರ ಬೆಳಗ್ಗೆ ಅದೇ ಅರಣ್ಯದೊಳಗಿನ ಕೆರೆಯ ಬದಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡೆತ್ತು ಇಹಲೋಕ ತ್ಯಜಿಸಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ, ಉಕ್ಕುಡ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಹತ್ತು ಹದಿನೈದು ದಿನಗಳ ಹಿಂದೆ ಎಲ್ಲೋ ಕಾಟಿ ಮಾಂಸದ ರುಚಿ ಸವಿಯಲು ಜೊಲ್ಲು ಸುರಿಸಿದ್ದ ನರರಾಕ್ಷಸರು ಹತ್ಯೆಗೈಯಲು ಕಾಡೆತ್ತಿನ ಕುತ್ತಿಗೆಗೆ ಪಾಲಿಥೀನ್ ಹಗ್ಗದ ಉರುಳು ಬಿಗಿದಿರುವುದು ಸ್ಪಷ್ಟವಾಗಿದೆ.
ದೈತ್ಯ ದೇಹದ ಬಲಶಾಲಿಯಾಗಿದ್ದ ಕಾಡೆತ್ತು ನರರಾಕ್ಷಸರ ಪಾಲಿಥೀನ್ ಹಗ್ಗವನ್ನು ತುಂಡರಿಸಿದ್ದರೂ ಕುತ್ತಿಗೆಗೆ ಬಿಗಿದ ಉರುಳು ತೆಗೆಯಲಾಗಿಲ್ಲ. ದಿನದಿನಕ್ಕೆ ಕುತ್ತಿಗೆಯ ಉರುಳು ಬಿಗಿದ ಕಾರಣ ಕಾಡೆತ್ತಿನ ಕುತ್ತಿಗೆಯ ಅಡಿಭಾಗದಲ್ಲಿ ಭಾರಿ ಪ್ರಮಾಣದ ಗಾಯಗಳಾಗಿ ಹುಳ ಹುಟ್ಟಿಕೊಂಡಿದೆ. ನೋವು ತಡೆಯಲಾಗದೇ ಎಂದಿನಂತೆ ಬರುತ್ತಿದ್ದ ದಾರಿಯಲ್ಲೇ ಬಂದು ಕೆರೆಯಲ್ಲಿ ನೀರು ಕುಡಿದ ಬಳಿಕ ಇಂದು ಬೆಳಗ್ಗೆ ಕಾಡೆತ್ತು ಇಹಲೋಕ ತ್ಯಜಿಸಿದೆ.
ಇಲಾಖಾ ನಿಯಮದಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಳಿಕ ಅರಣ್ಯದಲ್ಲೇ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Bantawala
ವಿಟ್ಲದ ಅನಿಕೇತ್ ನೀರಿನಲ್ಲಿ ಮುಳುಗಿ ಸಾವು; ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿ
ಜಯಪುರ: ಶಿಕ್ಷಕರ ಜೊತೆ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊಪ್ಪ ಜಯಪುರದಲ್ಲಿ ವ್ಯಾಸಂಗ ಮಾಡುತ್ತಿದ್ದ ಮೃತ ವಿದ್ಯಾರ್ಥಿಯು ವಿಟ್ಲದ ಬಾಲಕನಾಗಿದ್ದಾನೆ.
ಘಟನೆಯ ವಿವರ: ಜಯಪುರದ ಗುರುಕುಲ ಮಾದರಿಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅನಿಕೇತ್ (14) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ ಶಿಕ್ಷಕರೊಂದಿಗೆ ಈಜುಕೊಳಕ್ಕೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಈಜಾಡುತ್ತಿದ್ದ ವೇಳೆ ಅನಿಕೇತ್ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದನು. ತಕ್ಷಣವೇ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.
ಕುಟುಂಬದ ಹಿನ್ನೆಲೆ:ಮೃತ ಅನಿಕೇತ್ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕಾಶಿಮಠ ನಿವಾಸಿ ಗೋವರ್ಧನ್ ನಾಯಕ್ ಅವರ ಪುತ್ರ. ಗೋವರ್ಧನ್ ನಾಯಕ್ ಅವರು ಜೀವವಿಮಾ ಪ್ರತಿನಿಧಿಯಾಗಿದ್ದು,ವಿಟ್ಲ ಖಾಸಗೀ ಬಸ್ಸು ನಿಲ್ದಾಣದ ಬಳಿ ಜೀವವಿಮಾ ನಿಗಮದ ಕಚೇರಿಯನ್ನು ಹೊಂದಿದ್ದಾರೆ. ಹಿಂದೂ ಸಂಘಟನೆಗಳು ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಮಾಜಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಗನ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ಈಗಾಗಲೇ ನಡೆಸಲಾಗಿದ್ದು ಇಂದು ರಾತ್ರಿಯೇ ಜಯಪುರದಿಂದ ವಿಟ್ಲಕ್ಕೆ ಮೃತದೇಹ ತರಲಾಗುವುದು. ನಾಳೆ(ಸೋಮವಾರ) ಬೆಳಗ್ಗೆ ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಖಚಿತ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Condolences
ಯಕ್ಷಗಾನದ ದಿಗ್ಗಜ ‘ರಸಿಕರತ್ನ’ ಗೋಪಾಲಕೃಷ್ಣ ಜೋಷಿಯವರ ಧರ್ಮಪತ್ನಿ ಸಾವಿತ್ರಿ ಅಮ್ಮ ನಿಧನ; ನೇತ್ರದಾನದ ಮೂಲಕ ಸಾರ್ಥಕತೆ
ವಿಟ್ಲ: ಶ್ರೀ ಧರ್ಮಸ್ಥಳ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಕಲಾಭಿಮಾನಿಗಳ ಆರಾಧ್ಯ ದೈವ ದಿವಂಗತ ‘ರಸಿಕರತ್ನ’ ಗೋಪಾಲಕೃಷ್ಣ ಜೋಷಿಯವರ ಧರ್ಮಪತ್ನಿ ಸಾವಿತ್ರಿ ಅಮ್ಮ (92) ಅವರು ಮಂಗಳವಾರ ಮುಂಜಾನೆ ದೈವಾಧೀನರಾಗಿದ್ದಾರೆ.
ಕಳೆದ ಎರಡು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದೈಗೋಳಿಯ ಶ್ರೀಸಾಯಿ ನಿಕೇತನ ಸೇವಾಶ್ರಮದಲ್ಲಿ ತಜ್ಞ ವೈದ್ಯರ ಆರೈಕೆಯಲ್ಲಿದ್ದರು. ಸೋಮವಾರ ರಾತ್ರಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ನೇತ್ರದಾನದ ಮೂಲಕ ಸಾರ್ಥಕತೆ:
ಸಾವಿತ್ರಿ ಅಮ್ಮ ಅವರು ಜೀವಿತಾವಧಿಯಲ್ಲಿ ವ್ಯಕ್ತಪಡಿಸಿದ್ದ ಇಚ್ಛೆಯಂತೆ, ಅವರ ಮರಣದ ನಂತರ ಕಣ್ಣುಗಳನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು. ಈ ಮೂಲಕ ಸಾವಿನಲ್ಲೂ ಪರರಿಗೆ ಬೆಳಕಾಗುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೃತರು ಒಬ್ಬ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಯಕ್ಷಗಾನ ಲೋಕದ ಹಿರಿಯ ಚೇತನದ ಪತ್ನಿಯ ಅಗಲಿಕೆಗೆ ಕಲಾಭಿಮಾನಿಗಳು ಹಾಗೂ ಸ್ಥಳೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
DEATH
ತಂದೆ–ಮಗನ ಲಾಕಪ್ ಡೆತ್: 9 ಪೊಲೀಸರಿಗೆ ಗಲ್ಲು ಶಿಕ್ಷೆ — ಐತಿಹಾಸಿಕ ತೀರ್ಪು
ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ತಮಿಳುನಾಡಿನ ಸಾತಂಕುಲಂ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಮಧುರೈ ಜಿಲ್ಲಾ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಕೇವಲ ಅಂಗಡಿ ತೆರೆದಿದ್ದ ಕಾರಣಕ್ಕೆ ಬಂಧಿಸಲ್ಪಟ್ಟ ಅಮಾಯಕ ತಂದೆ ಜಯರಾಜ್ ಮತ್ತು ಮಗ ಫೀನಿಕ್ಸ್ ಅವರ ಸಾವಿಗೆ ಕಾರಣರಾದ 9 ಪೊಲೀಸ್ ಸಿಬ್ಬಂದಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಈ ತೀರ್ಪು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, “ಕಾನೂನು ರಕ್ಷಕನೇ ಭಕ್ಷಕನಾದಾಗ ಶಿಕ್ಷೆ ತಪ್ಪಿದ್ದಲ್ಲ” ಎಂಬ ಕಠಿಣ ಸಂದೇಶವನ್ನು ರವಾನಿಸಿದೆ.

ಪ್ರಕರಣದ ಹಿನ್ನೆಲೆ ಮತ್ತು ಕ್ರೌರ್ಯದ ಮುಖ 2020ರ ಜೂನ್ನಲ್ಲಿ ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಮೊಬೈಲ್ ಅಂಗಡಿ ತೆರೆದಿದ್ದರು ಎಂಬ ಸಣ್ಣ ಕಾರಣಕ್ಕೆ ಪೊಲೀಸರು ಜಯರಾಜ್ ಮತ್ತು ಫೀನಿಕ್ಸ್ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ, ಪೊಲೀಸ್ ಕಸ್ಟಡಿಯಲ್ಲಿ ಅವರ ಮೇಲೆ ನಡೆದ ಅಮಾನವೀಯ ಹಿಂಸಾಚಾರ ಮಾನವೀಯತೆಯನ್ನೇ ನಾಚಿಸುವಂತಿತ್ತು. ವಿಚಾರಣೆಯ ಹೆಸರಿನಲ್ಲಿ ಪೊಲೀಸರು ನಡೆಸಿದ ದೈಹಿಕ ಹಿಂಸೆ, ಅವರ ಸಾವಿಗೆ ನೇರ ಕಾರಣವಾಯಿತು ಎಂಬುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿತ್ತು.

ನ್ಯಾಯಾಲಯದ ಕಠಿಣ ನಿಲುವು ಮತ್ತು ತೀರ್ಪು ಸುದೀರ್ಘ ವಿಚಾರಣೆ ನಡೆಸಿದ ಮಧುರೈ ನ್ಯಾಯಾಲಯವು, ಸಾಕ್ಷ್ಯಾಧಾರಗಳು ಮತ್ತು ವೈದ್ಯಕೀಯ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಸಂವಿಧಾನದ ಮೂಲಭೂತ ಹಕ್ಕುಗಳನ್ನು ಗಾಳಿಗೆ ತೂರಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಕಸ್ಟಡಿಯಲ್ಲಿರುವ ವ್ಯಕ್ತಿಯ ರಕ್ಷಣೆ ಮಾಡುವುದು ಸರ್ಕಾರದ ಮತ್ತು ಇಲಾಖೆಯ ಜವಾಬ್ದಾರಿ. ಆ ಜವಾಬ್ದಾರಿಯನ್ನು ಮರೆತು ಕ್ರೌರ್ಯ ಮೆರೆದ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ, ಸಮಾಜದಲ್ಲಿ ಕಾನೂನಿನ ಭಯ ಮತ್ತು ಗೌರವವನ್ನು ಮರುಸ್ಥಾಪಿಸುವ ಕೆಲಸವನ್ನು ನ್ಯಾಯಾಲಯ ಮಾಡಿದೆ.

ಪೊಲೀಸ್ ಸುಧಾರಣೆಯ ಅಗತ್ಯ ಮತ್ತು ಸಾಮಾಜಿಕ ಚರ್ಚೆ ಈ ತೀರ್ಪು ಕೇವಲ ಒಂದು ಕುಟುಂಬಕ್ಕೆ ಸಿಕ್ಕ ನ್ಯಾಯವಲ್ಲ, ಬದಲಾಗಿ ದೇಶಾದ್ಯಂತ ಇರುವ ಪೊಲೀಸ್ ವ್ಯವಸ್ಥೆಗೆ ಎಚ್ಚರಿಕೆಯ ಗಂಟೆಯಾಗಿದೆ. ಕಸ್ಟಡಿ ಸಾವುಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕೊಡಲಿ ಪೆಟ್ಟು ನೀಡುತ್ತವೆ. ಈ ಘಟನೆಯ ನಂತರ ದೇಶಾದ್ಯಂತ ಪೊಲೀಸ್ ಇಲಾಖೆಯಲ್ಲಿ ಆಗಬೇಕಾದ ಸುಧಾರಣೆಗಳು, ಮಾನವ ಹಕ್ಕುಗಳ ರಕ್ಷಣೆ ಮತ್ತು ಪೊಲೀಸರಿಗೆ ನೀಡಬೇಕಾದ ಸಂವೇದನಾಶೀಲ ತರಬೇತಿಯ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಅಧಿಕಾರ ಇದೆ ಎಂಬ ಕಾರಣಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಅಪಾಯಕಾರಿ ಎಂಬುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ.

ಮಾನವೀಯತೆಯ ಗೆಲುವು ವರ್ಷಗಳ ಕಾಲ ನಡೆದ ಈ ಸುದೀರ್ಘ ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ. ಮೃತರ ಕುಟುಂಬದ ಹೋರಾಟ ಮತ್ತು ಅವರಿಗೆ ಸಾಥ್ ನೀಡಿದ ಮಾನವ ಹಕ್ಕುಗಳ ಹೋರಾಟಗಾರರ ಪ್ರಯತ್ನ ಇಂದು ಫಲ ನೀಡಿದೆ. ಈ ತೀರ್ಪು ಸಂತ್ರಸ್ತ ಕುಟುಂಬಕ್ಕೆ ನೆಮ್ಮದಿ ನೀಡುವುದರ ಜೊತೆಗೆ, ಇನ್ನು ಮುಂದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ತಡೆಯಲು ಭದ್ರ ಬುನಾದಿಯಾಗಲಿದೆ. ನ್ಯಾಯದ ಮೇಲೆ ಜನಸಾಮಾನ್ಯರಿಗಿರುವ ನಂಬಿಕೆಯನ್ನು ಈ ತೀರ್ಪು ಮತ್ತಷ್ಟು ಬಲಪಡಿಸಿದೆ.
-
crime3 weeks agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
