karavali
ಪುತ್ತೂರು ಸರ್ಕಾರಿ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಸಸ್ಪೆಂಡ್.. ವಿದ್ಯಾರ್ಥಿಗಳ ಛೂ ಬಿಟ್ಟು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟನೆ..
ಫೆಬ್ರವರಿ 16ರಂದು ಕಾಲೇಜು ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ, ಜವಾಬ್ದಾರಿಯಲ್ಲಿ ನುಣುಚಿಕೊಂಡ ಆರೋಪದಲ್ಲಿ ಪ್ರಭಾರ ಪ್ರಾಂಶುಪಾಲೆ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ವೇದಶ್ರೀ ನಿಡ್ಯಾ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ / ರಸ್ತೆ ತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳದೆ ಸಾರ್ವಜನಿಕ ಪ್ರತಿಭಟನೆ ತಡೆಯಲು ಅಗತ್ಯ ಕ್ರಮ ವಹಿಸದೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಆರೋಪದಲ್ಲಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ಪ್ರಭಾರ ಪ್ರಾಂಶುಪಾಲರು ಹಾಗೂ ಸಹಪ್ರಾಧ್ಯಾಪಕರಾದ ಶ್ರೀಮತಿ ವೇದಶ್ರೀ ನಿಡ್ಯ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 10(1)(ಡಿ)ರನ್ವಯ ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಮತ್ತು ಸಮನ್ವಯ ಇದರ ಸರಕಾರದ ಅಧೀನ ಕಾರ್ಯದರ್ಶಿಯಾದ ಜಬಿನ್ ತಾಜ್ ಜಿ..ಎಂ. ಅವರು ಆದೇಶಿಸಿದ್ದಾರೆ.

ಸರಕಾರಿ ಪ್ರಥಮ ದರ್ಜೆ ಕಾಲೇಜು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿ ದಿನಾಂಕ 16.02.2026ರಂದು ವಿದ್ಯಾರ್ಥಿನಿಯರು ಪ್ರತಿಭಟನೆ /ಧರಣಿ ನಡೆಸಿರುವ ಕುರಿತು ದಿನಾಂಕ 17.02.2026ರಂದು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿ, ಮಾಹಿತಿಯನ್ನು ಸಂಗ್ರಹಿಸಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ಸಲ್ಲಿಸಿರುವ ವರದಿಯ ಸಂಕ್ಷಿಪ್ತ ವರದಿಯಂತೆ ಪ್ರಸ್ತುತ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ವೇದಶ್ರೀ ನಿಡ್ಯ ಸಹಪ್ರಾಧ್ಯಾಪಕರು ಅರ್ಥಶಾಸ್ತ್ರ ವಿಭಾಗ ಇವರು ತಮ್ಮ ಹೇಳಿಕೆಯಲ್ಲಿ ನೂತನ ಕಟ್ಟಡಕ್ಕಾಗಿ ಮಾನ್ಯ ಶಾಸಕರಿಗೆ ಮನವಿ ನೀಡಿದ್ದು ದಿನಾಂಕ 16.02.2026ರಂದು ತರಗತಿಗೆ ಬಂದ ಸಂದರ್ಭದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದ ಕಾರಣ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವವುದಾಗಿ ತಿಳಿಸಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯವರು ಪೋಲಿಸ್ ನಿರೀಕ್ಷಕರು ಪುತ್ತೂರು ನಗರ ಪೊಲೀಸ್ ಠಾಣೆ ಅವರು ತಮ್ಮ ಪತ್ರದಲ್ಲಿ ದಿನಾಂಕ 16.02.2026ರಂದು ಬೆಳಿಗ್ಗೆ ಸುಮಾರು 9:30ಕ್ಕೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲಿ ರಸ್ತೆ ತಡೆಯನ್ನು ಯಾವುದೇ ಪೂರ್ವಾನುಮತಿ ಪಡೆಯದೆ ನಡೆಸಿರುವುದಲ್ಲದೆ ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದಾಗಿ ತಿಳಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಿಡ್ಯ ಮತ್ತು ಪ್ರಾಧ್ಯಾಪಕರಾದ ಐವನ್ ಫ್ರಾನ್ಸಿಸ್ ಲೋಬೋರವರು ಉಪಸ್ಥಿತರಿದ್ದು ಮತ್ತು ಈ ಪ್ರತಿಭಟನೆಗೆ ಪ್ರೇರೇಪಿಸಿರುವ ಬಗ್ಗೆ ಇಲಾಖೆಗೆ ಗುಪ್ತ ಮಾಹಿತಿ ಬಂದಿರುವುದಾಗಿ ತಿಳಿಸಿರುತ್ತಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಆಶೋಕ್ ಕುಮಾರ್ ರೈಯವರು ತಮ್ಮ ಪತ್ರದಲ್ಲಿ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಶ್ರೀ ನಿಡ್ಯ ಇವರು ವಿದ್ಯಾರ್ಥಿಗಳು ಡಯಾಲಿಸಿಸ್ ಕೇಂದ್ರದ ನಿರ್ಮಾಣ ಕಾಮಗಾರಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಆರೋಗ್ಯದ ಸಮಸ್ಯೆಗಳಾಗಲಿ, ತೊಂದರೆಗಳಾಗಲಿ, ಯಾವುದೇ ಮಾಹಿತಿಯನ್ನು ನನಗೆ ಅಥವಾ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿರುವುದಿಲ್ಲ, ಮತ್ತು ಈ ವಿಚಾರವಾಗಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಸರ್ಕಾರದ ವಿರುದ್ಧ/ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿರುತ್ತಾರೆ. ಸದರಿ ಕಾಲೇಜಿನ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಿರುವ ಬಗ್ಗೆ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಈ ರೀತಿ ವಿದ್ಯಾರ್ಥಿನಿಯರು ಪ್ರತಿಭಟಿಸುವ ಸಂದರ್ಭದಲ್ಲಿ ಯಾವುದೇ ಅನಾಹುತಗಳು ನಡೆದರೆ ಅಥವಾ ಕಾನೂನಾತ್ಮಕ ಕ್ರಮಗಳು ಜಾರಿಯಾದಲ್ಲಿ ವಿದ್ಯಾರ್ಥಿನಿಯರ ಜವಾಬ್ದಾರಿ ಸಂಪೂರ್ಣವಾಗಿ ಪ್ರಾಂಶುಪಾಲರು ಮತ್ತು ಕಾಲೇಜಿನ ಸಿಬ್ಬಂದಿಗಳದಾಗಿರುತ್ತದೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಬಗ್ಗೆ ಕಾಲೇಜಿನಲ್ಲಿ ಪ್ರಾಂಶುಪಾಲರಿಗೆ ಅಥವಾ ಉಪನ್ಯಾಸಕರಿಗೆ ಮನವಿಯನ್ನು ಸಲ್ಲಿಸಲು ಅವಕಾಶವಿದ್ದು, ಆದರೆ ಸದರಿ ಸಮಸ್ಯೆಗಳ ಬಗ್ಗೆ ತರಗತಿ ಪ್ರಾರಂಭಗೊಂಡ ನಂತರ ಇಂಥ ಯಾವುದೇ ಮಾಹಿತಿ ನೀಡಿರುವ ಬಗ್ಗೆ ದಾಖಲೆ ಇರುವುದಿಲ್ಲ ಮುಂದುವರಿದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಂಸ್ಥೆಗಳ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಆಶೋಕ್ ಕುಮಾರ್ ರೈ ಇವರೊಂದಿಗೆ ಸಭೆ ನಡೆಸಿರುವ ಬಗ್ಗೆ ಸಭಾ ನಡವಳಿಯ ಯಾವುದೇ ದಾಖಲೆ ಅಥವಾ ಲಿಖಿತವಾಗಿ ಈ ಬಗ್ಗೆ ಅಧ್ಯಕ್ಷರಿಗೆ ಸಲ್ಲಿಸಿರುವ ಯಾವುದೇ ಪತ್ರ ವ್ಯವಹಾರ ದಾಖಲೆಗಳನ್ನು ಪ್ರಾಂಶುಪಾಲರು ನೀಡಿರುವುದಿಲ್ಲ, ಮತ್ತು ಈ ಸಭೆ ನಡೆಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ, ಕಾಲೇಜಿನ ಅಭಿವೃದ್ಧಿಗೆ ಸಂಬಂಧಪಟ್ಟಂತ ವಿಷಯಗಳಲ್ಲಿ ಪ್ರಾಂಶುಪಾಲರು ಮಾನ್ಯ ಶಾಸಕರ / ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲರಾಗಿರುತ್ತಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾಲೇಜಿನ ಮತ್ತು ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತ ದೃಷ್ಟಿಯಿಂದ ಪ್ರಸ್ತುತ ಪ್ರಧಾನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇದಶ್ರೀ ನಡ್ಯಾರವರ ಪ್ರಭಾರವನ್ನು ರದ್ದುಗೊಳಿಸಿ ಕಾಲೇಜಿನ ಹಿರಿಯ ಉಪನ್ಯಾಸಗಳಿಗೆ ಪ್ರಾಂಶುಪಾಲರ ಪ್ರಭಾರವನ್ನು ನೀಡಬಹುದೆಂದು ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರು ವರದಿ ನೀಡಿದ್ದರು.

ದಿನಾಂಕ 16.02.2026ರಂದು ಸರಕಾರಿ ಪ್ರಥಮ ದರ್ಜೆಕ ಮಹಿಳಾ ಕಾಲೇಜು ಪುತ್ತೂರಿನಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ/ ರಸ್ತೆ ತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಜಂಟಿ ನಿರ್ದೇಶಕ ವರದಿ, ಪೊಲೀಸ್ ವರದಿ ಹಾಗೂ ಮಾನ್ಯ ಶಾಸಕರ ಪತ್ರಗಳನ್ನು ಪರಿಶೀಲಿಸಿದ್ದು, ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳದೆ ಸಾರ್ವಜನಿಕ ಪ್ರತಿಭಟನೆ ತಡೆಯಲು ಅಗತ್ಯ ಕ್ರಮ ವಹಿಸದೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತೋರಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ಘಟನೆಯಿಂದಾಗಿ ಕಾಲೇಜಿನ ಪ್ರಾಂಶುಪಾಲರು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಜವಾಬ್ದಾರಿಯನ್ನು ಸಮರ್ಥಕವಾಗಿ ನೆರವೇರಿಸಲು ವಿಫಲರಾಗಿರುವುದು ಸ್ಪಷ್ಟವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಿಡ್ಯ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮಾವಳಿಗಳಲ್ಲಿ ಶಿಸ್ತು ಕ್ರಮ ಜರಗಿಸಲು ಉದ್ದೇಶಿಸಿ ಪ್ರಕರಣದ ಗಂಭೀರತೆಯನ್ನು ಹಾಗೂ ಇಲಾಖೆ ತನಿಖೆಯ ನಿಷ್ಪಕ್ಷಪಾತ ನಿರ್ವಹಣೆಯನ್ನು ಮನಗಂಡು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ವೇದಶ್ರೀ ನಡ್ಯ ಇವರನ್ನು ವಿಚಾರಣೆ ಕಾಯ್ದಿರಿಸಿ ಮೇಲ್ಕಂಡ ನಿಯಮಗಳ ನಿಯಮ 10ರಡಿಯಲ್ಲಿ ಅಮಾನತುಗೊಳಿಸಲು ಸರಕಾರದ ಅನುಮೋದನೆಗಾಗಿ ಆಯುಕ್ತರು (ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ) ಇವರು ಪ್ರಸ್ತಾವನೆ ಸಲ್ಲಿಸಿದ್ದರು.
ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇಲ್ಲಿನ ಪ್ರಭಾರ ಪ್ರಾಂಶುಪಾಲರು ಹಾಗೂ ಸಹಪ್ರಾಧ್ಯಾಪಕರಾದ ಶ್ರೀಮತಿ ವೇದಶ್ರೀ ನಿಡ್ಯ ಇವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರಿನಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆ / ರಸ್ತೆತಡೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿದ ಪ್ರಕರಣದಲ್ಲಿ ಸದರಿಯವರ ವಿರುದ್ಧ ಇಲಾಖೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿ ಆದೇಶಿಸಿದೆ.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ವರದಿಯ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಫೆ.17ರಂದು ಕಾಲೇಜಿಗೆ ಭೇಟಿ ನೀಡಿದ ಪ್ರಾದೇಶಿಕ ಜಂಟಿ ನಿರ್ದೇಶಕರು ವಿದ್ಯಾರ್ಥಿನಿಯರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದ ಜೊತೆ ಚರ್ಚಿಸಿ ವರದಿ ನೀಡಿದ್ದರು.
Watch the video
Bantawala
ಮಾಣಿಲ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಳ ಪರಿಶೀಲನೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಜೀವಕಳೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಶಕಗಳ ಬೇಡಿಕೆಗೆ ಸ್ಪಂದನೆ
ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ.

ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜನರು ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ ಸ್ಥಳೀಯರು, ಕೂಡಲೇ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.
ತಾಂತ್ರಿಕ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು:”ಈ ಭಾಗದ ಜನರ ದಶಕಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಹಾಗೂ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಮನವರಿಕೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗಡಿ ಭಾಗದ ಅಭಿವೃದ್ಧಿ ಹಾಗೂ ಜನರ ಸಂಕಷ್ಟ ನಿವಾರಣೆಗೆ ಈ ಸೇತುವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶ್ರೀಧರ್ ಬಾಳೆಕಲ್ಲು , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

Belthangady
ಯಕ್ಷರಂಗದಲ್ಲಿ ‘ಕೃಷ್ಣ’ನ ಕ್ರೋಧ: ಪ್ರೇಕ್ಷಕರ ಶಿಳ್ಳೆಗೆ ಕೆರಳಿದ ಉಜಿರೆ ಅಶೋಕ ಭಟ್; ವೇದಿಕೆಯಲ್ಲೇ ದರ್ಪದ ಮಾತುಗಳ ಸುರಿಮಳೆ!
ಯಕ್ಷಗಾನ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ಶಿಸ್ತಿನ ಕಲೆ. ಆದರೆ ಇತ್ತೀಚೆಗೆ ವೇದಿಕೆಯ ಮೇಲೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ನಡೆಯುತ್ತಿರುವ ಸಂಘರ್ಷಗಳು ಕಲಾಭಿಮಾನಿಗಳಲ್ಲಿ ಬೇಸರ ಮೂಡಿಸಿವೆ. ಭಾಗವತರ ಆಲಾಪನೆಗೆ ಶಿಳ್ಳೆ ಹೊಡೆದರೆಂದು ಕಲಾವಿದ ಉಜಿರೆ ಅಶೋಕ ಭಟ್ ಅವರು ಕೃಷ್ಣನ ವೇಷದಲ್ಲಿಯೇ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನಡೆದದ್ದೇನು?
ಭಾಗವತರ ಪದ್ಯಕ್ಕೆ ಕೃಷ್ಣನ ವೇಷಧಾರಿ ಉಜಿರೆ ಅಶೋಕ ಭಟ್ ಅವರು ಅರ್ಥ ಹೇಳಲು ಸಿದ್ಧರಾಗುತ್ತಿದ್ದಂತೆ, ಭಾಗವತರ ಆಲಾಪನೆಗೆ ಪ್ರೇಕ್ಷಕರ ಸಾಲಿನಿಂದ ಕೇಳಿಬಂದ ಜೋರಾದ ಶಿಳ್ಳೆ ಮತ್ತು ಶಬ್ದಗಳಿಂದ ವಿಚಲಿತರಾಗಿದ್ದಾರೆ.. ಇದರಿಂದ ತೀವ್ರ ಅಸಮಾಧಾನಗೊಂಡ ಕಲಾವಿದರು, ಕಥೆಯ ಪ್ರಸಂಗವನ್ನು ಬದಿಗಿಟ್ಟು ನೇರವಾಗಿ ಪ್ರೇಕ್ಷಕರತ್ತ ತಿರುಗಿದರು. “ಇದು ಶಿಳ್ಳೆ ಹೊಡೆಯುವ ಜಾಗವಲ್ಲ, ಯಕ್ಷಗಾನದ ಗಂಭೀರತೆ ಅರ್ಥ ಮಾಡಿಕೊಳ್ಳಿ” ಎಂಬ ಖಡಕ್ ಮಾತುಗಳೊಂದಿಗೆ ಶಿಸ್ತಿನ ಪಾಠ ಆರಂಭಿಸಿದ್ದಾರೆ- “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ದೋಂಬರಾಟವೇ? ಇದು ಯಕ್ಷಗಾನವೇ? ಕೋಳಿ ಕಟ್ಟವೇ? ಕಂಬಳವೇ? ಎಂದು ವೇದಿಕೆಯಲ್ಲೇ ಪ್ರಶ್ನೆ ಮಾಡಿದ್ದಾರೆ. ಶಿಳ್ಳೆ ಹಾಕಿದವರು ಯಾರು? ಹುಚ್ಚರನ್ನು ಬೆಳೆಸಬೇಡಿ, ಕಲಾವಿದರನ್ನು ಬೆಳೆಸಿ, ಆಗದೆ ಇದ್ದರೆ ಬನ್ಸ್ ತಿಂದು ಹೋಗಿ, ಭಾಗವತರ ಕಂಠ ಹಾಳು ಮಾಡುತ್ತೀರಾ ? ನಾವು ಯಕ್ಷಗಾನ ಮಾಡಬೇಕೋ? ಎಂದು ಆಕ್ರೋಶಿತರಾಗಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ವತಿಯಿಂದ ಯಕ್ಷಗಾನ ಮಂಡಳಿಯವರು ಕುಂದಾಪುರದ ಹನ್ನಾಬೈಲಿನಲ್ಲಿ ಮಾ.26 ರಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ, ಭಾಗವತರು ಪದ ಹಾಡುತ್ತಿರುವ ಸಂದರ್ಭದಲ್ಲಿ ಆಲಾಪನೆ ಮಾಡುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪದ್ಯ ಮುಗಿದ ನಂತರ ಕೃಷ್ಣ ವೇಷಧಾರಿ ಅಶೋಕ್ ಭಟ್ ಗರಂ ಆಗಿ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತುಗಳು ವೈರಲ್ ಆಗಿದೆ.
ಕಲಾವಿದನ ಆಕ್ರೋಶಕ್ಕೆ ಕಾರಣವೇನು?
ಉಜಿರೆ ಅಶೋಕ ಭಟ್ ಅವರ ವಾದದ ಪ್ರಕಾರ, ಯಕ್ಷಗಾನದ ಅರ್ಥಗಾರಿಕೆ ಎನ್ನುವುದು ಏಕಾಗ್ರತೆಯಿಂದ ನಡೆಯಬೇಕಾದ ಪ್ರಕ್ರಿಯೆ. ಪ್ರೇಕ್ಷಕರು ಅನಗತ್ಯವಾಗಿ ಶಿಳ್ಳೆ ಹಾಕುವುದು ಅಥವಾ ಗದ್ದಲ ಮಾಡುವುದು ಕಲೆಯ ಗೌರವಕ್ಕೆ ಧಕ್ಕೆ ತರುತ್ತದೆ. “ನಾವು ಕಷ್ಟಪಟ್ಟು ಕಲೆ ಪ್ರದರ್ಶಿಸುವಾಗ ಶಿಸ್ತು ಇರಬೇಕು” ಎನ್ನುವುದು ಅವರ ಆಕ್ರೋಶದ ಹಿಂದಿನ ಆಶಯವಾಗಿತ್ತು.
ಪ್ರೇಕ್ಷಕ ಪ್ರಭುಗಳನ್ನು ಮರೆತರೇ ಕಲಾವಿದರು?
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಜೋರಾಗಿವೆ:
ಯಕ್ಷಗಾನದ ಪಾವಿತ್ರ್ಯತೆ ಉಳಿಯಬೇಕು, ಕಲಾವಿದನಿಗೆ ಗೌರವ ಸಿಗಬೇಕು. ಶಿಳ್ಳೆ ಹಾಕುವುದು ಕಲೆಗೆ ಮಾಡುವ ಅವಮಾನ ಎಂದು ಒಂದು ವರ್ಗ ವಾದಿಸಿದರೆ , ವೇದಿಕೆಯ ಮೇಲೆ ಕೃಷ್ಣನಂತಹ ದೈವಸ್ವರೂಪಿ ಪಾತ್ರಧಾರಿ ಕಲಾವಿದನಿಗೆ ಸಂಯಮ ಇರಬೇಕು. ಪ್ರೇಕ್ಷಕರನ್ನು ಹೀನಾಯವಾಗಿ ಕಾಣುವುದು ಒಬ್ಬ ವೃತ್ತಿಪರ ಕಲಾವಿದನ ಲಕ್ಷಣವಲ್ಲ. ಕಲಾವಿದನ ಮಾತುಗಳಲ್ಲಿ ಸ್ಪಷ್ಟವಾಗಿ ದರ್ಪ, ಅಹಂಕಾರ ಮತ್ತು ತನ್ನ ಸಾಧನೆಯ ಮೇಲಿನ ಅತಿಯಾದ ಹೆಮ್ಮೆಯ ಭಾವನೆಗಳು ಕಾಣುತ್ತಿರುವುದರಿಂದ ಆತನು ತನ್ನನ್ನು ಇತರರಿಗಿಂತ ಮೇಲಿರುವವನಾಗಿ ಚಿತ್ರಿಸಿಕೊಂಡು, ತನ್ನ ಸಾಧನೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ವೇಳೆ ಇತರರ ಕೊಡುಗೆಗಳನ್ನು ಕಡಿಮೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಅಭಿಮಾನದಿಂದ ಪ್ರೇಕ್ಷಕರು ಹಾಕುವ ಶಿಳ್ಳೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಪ್ರೇಕ್ಷಕರಿಲ್ಲದೆ ಕಲೆ ಇಲ್ಲ, ಕಲಾವಿದರಿಲ್ಲದೆ ಸಂಸ್ಕೃತಿ ಇಲ್ಲ. ಇಬ್ಬರ ನಡುವೆ ಸಮನ್ವಯ ಇರಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಅಭಿಮಾನವೇ ಕಾರಣ. ಶಿಳ್ಳೆ ಎನ್ನುವುದು ಅಭಿಮಾನದ ಸಂಕೇತವೂ ಆಗಿರಬಹುದು. ಸಣ್ಣ ತಪ್ಪುಗಳಿಗಾಗಿ ಪ್ರೇಕ್ಷಕ ಪ್ರಭುಗಳನ್ನು ವೇದಿಕೆಯ ಮೇಲಿಂದಲೇ ಹಿಯಾಳಿಸುವುದು ಕಲಾವಿದನಿಗೆ ಶೋಭೆ ತರುವುದಿಲ್ಲ. “ಕಲಾವಿದ ಬೆಳೆಯಲು ಬೇಕಾದ ಪ್ರೇಕ್ಷಕ ಸ್ನೇಹಿ ಮನೋಭಾವವನ್ನು ಅಶೋಕ ಭಟ್ ಅವರು ಮರೆತರೇ?” ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ವೇದಿಕೆಯ ಮೇಲಿಂದ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ಕಲಾವಿದನ ಅಹಂಕಾರವನ್ನು ತೋರಿಸುತ್ತದೆ. ಎಂಬುವುದು ಕಲಾಭಿಮಾನಿಗಳ ಕಡೆಯಿಂದ ಕೇಳಿಬರುತ್ತಿರುವ ವಾದಗಳು ಕಲಾವಿದನ ಈ ದರ್ಪದ ನಡೆ ಯಕ್ಷಗಾನದ ಆಂತರಿಕ ಶಿಸ್ತನ್ನು ಎತ್ತಿ ಹಿಡಿಯುವುದೋ ಅಥವಾ ಪ್ರೇಕ್ಷಕರನ್ನು ಕಲೆಯ ಸಂಭ್ರಮದಿಂದ ದೂರ ತಳ್ಳುವುದೋ ಎಂಬ ಬಗ್ಗೆ ಈಗ ಗಂಭೀರ ಚರ್ಚೆ ನಡೆಯುತ್ತಿದೆ.
ವೇದಿಕೆಯಲ್ಲಿ ಅರ್ಥ ಹೇಳಲು ಬಂದ ಪಾತ್ರಧಾರಿ ಭಾಗವತರಲ್ಲಿ ಅನುಮತಿ ಕೇಳಿದ ಬಳಿಕ ತನ್ನ ಬುದ್ಧಿವಾದದ ಮಾತು ಆರಂಭಿಸಬೇಕಾಗಿತ್ತು. ಅಥವಾ ವ್ಯವಸ್ಥಾಪಕರಲ್ಲಿ ತಿಳಿಸಬೇಕಿತ್ತು ಅದ್ಯಾವುದೂ ಇಲ್ಲದೇ ಏಕಾಏಕಿ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬುದ್ಧಿ ಮಾತಿನ ಮೂಲಕ ವೇದಿಕೆಯಲ್ಲೇ ತನ್ನ ಅಹಂಕಾರ ಪ್ರವೃತ್ತಿಯನ್ನು ಅಶೋಕ್ ಭಟ್ ಸಾಬೀತು ಪಡಿಸಿರುವುದು ಯಕ್ಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Belthangady
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ: ಎಸಿ ಗೆ ಸತತ ಮೂರನೇ ಬಾರಿ ಮುಖಭಂಗ!
ಬೆಳ್ತಂಗಡಿ: ಸೌಜನ್ಯಾ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ದೊಡ್ಡ ಮಟ್ಟದ ಸಮಾಧಾನ ನೀಡಿದೆ. ಪುತ್ತೂರು ಸಹಾಯಕ ಕಮಿಷನರ್ (AC) ನೀಡಿದ್ದ ಮೂರನೇ ಗಡಿಪಾರು ಆದೇಶಕ್ಕೆ ಹೈಕೋರ್ಟ್ ಮಾರ್ಚ್ 24 ರಂದು ತಡೆಯಾಜ್ಞೆ ನೀಡಿದೆ.
ಘಟನೆಯ ವಿವರ:
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ (AC) ಸ್ಟೆಲ್ಲಾ ವರ್ಗೀಸ್ ಅವರು ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಗಡಿಪಾರು ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ , ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜಾರಿಗೊಳಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಸತತ ಮೂರನೇ ಬಾರಿ ಮುಖಭಂಗ:
ಗಮನಾರ್ಹ ಸಂಗತಿಯೆಂದರೆ, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಗಡಿಪಾರು ಆದೇಶ ಹೊರಡಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡು ಬಾರಿಯೂ ನ್ಯಾಯಾಲಯವು ಆ ಆದೇಶಗಳನ್ನು ವಜಾಗೊಳಿಸಿತ್ತು ಅಥವಾ ತಡೆ ನೀಡಿತ್ತು. ಈಗ ಮೂರನೇ ಬಾರಿಯೂ ಹೈಕೋರ್ಟ್ ತಡೆ ನೀಡಿರುವುದರಿಂದ ಸರ್ಕಾರಿ ಅಧಿಕಾರಿಗೆ ಕಾನೂನುಬದ್ಧವಾಗಿ ಸತತ ಮೂರನೇ ಬಾರಿ ಹಿನ್ನಡೆಯಾದಂತಾಗಿದೆ.
ಹೋರಾಟ ಮತ್ತು ಗಡಿಪಾರು ರಾಜಕೀಯ
ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಮತ್ತು ನೈಜ ಆರೋಪಿಗಳ ಬಂಧನಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರು ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸುತ್ತಿದ್ದಾರೆ. ಈ ಹೋರಾಟವು ಜನಮನ್ನಣೆ ಗಳಿಸುತ್ತಿದ್ದಂತೆಯೇ, ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂಬ ಕಾರಣ ನೀಡಿ ಆಡಳಿತ ಯಂತ್ರವು ಅವರ ಮೇಲೆ ಗಡಿಪಾರು ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿತ್ತು. ಪ್ರತಿ ಬಾರಿಯೂ ಗಡಿಪಾರು ಆದೇಶ ಬಂದಾಗ ತಿಮರೋಡಿ ಅವರು ಇದು “ರಾಜಕೀಯ ಪ್ರೇರಿತ” ಮತ್ತು “ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ” ಎಂದು ಆರೋಪಿಸುತ್ತಾ ಬಂದಿದ್ದಾರೆ. ಹೈಕೋರ್ಟ್ನ ಈ ತಡೆಯಾಜ್ಞೆಯು ತಿಮರೋಡಿ ಬೆಂಬಲಿಗರಲ್ಲಿ ಹರ್ಷ ತಂದಿದ್ದು, ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾದಂತಾಗಿದೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
