Connect with us

DEATH

ಮಾಜಿ ಶಾಸಕ, ಹಿರಿಯ ರಾಜಕಾರಣಿ, ಧಾರ್ಮಿಕ ಕ್ಷೇತ್ರದ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನಿಲ್ಲ..

Published

on

ಮಾಜಿ ಶಾಸಕ, ಹಿರಿಯ ರಾಜಕಾರಣಿ ಬಸ್ರೂರು ಅಪ್ಪಣ್ಣ ಹೆಗ್ಡೆ(91) ಇಂದು ನಿಧನರಾಗಿದ್ದಾರೆ. ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ರಾಜಕೀಯ ಮುತ್ಸದ್ದಿ ಬಸ್ರೂರು ಅಪ್ಪಣ್ಣ ಹೆಗ್ಡೆ (Basruru Appanna Hegde) ಅವರು ತಮ್ಮ 91ವಯಸ್ಸಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಇಂದು ಕೊನೆಯುಸಿರೆಳೆದರು.


ಬೈಂದೂರು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ
1983-1985 ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಮುಂದಾಳುವಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ಪ್ರಾಮಾಣಿಕ ಸೇವೆಗೆ ಹೆಸರುವಾಸಿಯಾಗಿದ್ದರು.

ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಹಾಗೂ ಉತ್ತಮ ರೀತಿಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಮಹತ್ವದ ಕೊಡುಗೆ ನೀಡಿದ್ದರು. ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರು ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿಯೂ ಅಪ್ಪಣ್ಣ ಹೆಗ್ಡೆಯವರು ಕಾರ್ಯ ನಿರ್ವಹಿಸಿದ್ದರು.
91ನೇ ವಯಸ್ಸಿಗೆ ಕೊನೆಯುಸಿರೆಳೆದ ಅಪ್ಪಣ್ಣ ಹೆಗ್ಡೆಯವರು 1960 ರಿಂದ 83ವರೆಗೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಗಣನೀಯವಾಗಿದೆ. ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Continue Reading
Advertisement

DEATH

ಪತ್ನಿಯ ಕಿರುಕುಳಕ್ಕೆ ಮಗ ಬಲಿ: ಸುದೀಪ್ ರೈ ತಂದೆ ದಾಮೋದರ ರೈ ಗಂಭೀರ ಆರೋಪ

Published

on

ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ರೈ ಅವರ ಸಾವಿಗೆ ಅವರ ಪತ್ನಿಯೇ ಕಾರಣ ಎಂದು ಸುದೀಪ್ ಅವರ ತಂದೆ ದಾಮೋದರ ರೈ ನೆಲ್ಯಾಡಿ ಗಂಭೀರವಾಗಿ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ ಬಂಗ್ಲೆಗುಡ್ಡೆಯ ಸೌಮ್ಯಾ ಶೆಟ್ಟಿ ಎಂಬಾಕೆ ನೀಡಿದ ಮಾನಸಿಕ ಕಿರುಕುಳವೇ ತನ್ನ ಮಗನ ಸಾವಿಗೆ ನೇರ ಕಾರಣವಾಗಿದ್ದು, ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಫೇಸ್‌ಬುಕ್ ಪರಿಚಯ, ರಿಜಿಸ್ಟರ್ ಮದುವೆ:
ದಾಮೋದರ ರೈ ಅವರು ಘಟನೆಯ ಹಿನ್ನೆಲೆಯನ್ನು ವಿವರಿಸುತ್ತಾ, “ನನ್ನ ಮಗ ಸುದೀಪ್ ರಿಯಲ್ ಎಸ್ಟೇಟ್ ಮತ್ತು ಸೋಲಾರ್ ಪ್ಯಾನಲ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಆತನಿಗೆ ಸೌಮ್ಯಾ ಶೆಟ್ಟಿ ಎಂಬಾಕೆಯ ಪರಿಚಯ ಫೇಸ್‌ಬುಕ್ ಮೂಲಕವಾಗಿತ್ತು. ಮದುವೆ ಪ್ರಸ್ತಾಪ ಬಂದಾಗ ನಾವು ಅವರ ಮನೆಗೆ ಹೋಗಿದ್ದೆವು ಮತ್ತು ಅವರು ನಮ್ಮ ಮನೆಗೆ ಬಂದಿದ್ದರು. ಫೆಬ್ರವರಿ 16ರಂದು ನಾವು ಅವರ ಮನೆಗೆ ಭೇಟಿ ನೀಡಿ ಬಂದ ಬಳಿಕ, ‘ಸದ್ಯಕ್ಕೆ ಮದುವೆ ಅರ್ಜೆಂಟ್ ಬೇಡ, ಯೋಚಿಸಿ ನಿರ್ಧಾರ ಮಾಡೋಣ’ ಎಂದು ಹೇಳಿದ್ದೆವು. ಆದರೆ ನಮಗೆ ತಿಳಿಯದಂತೆ ಮರುದಿನವೇ ಅಂದರೆ ಫೆಬ್ರವರಿ 17ರಂದು ಅವರಿಬ್ಬರು ಪುತ್ತೂರಿನ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ವಿಷಯ ಈಗ ತಿಳಿದುಬಂದಿದೆ,” ಎಂದು ತಿಳಿಸಿದರು.

ಸಾರ್ವಜನಿಕವಾಗಿ ಅವಮಾನ ಮತ್ತು ಕಿರುಕುಳ:
ಮದುವೆಯ ನಂತರ ಸುದೀಪ್ ಉಜಿರೆಯಲ್ಲಿರುವ ಮಾವನ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಮಾರ್ಚ್ 16ರಂದು ನೆಲ್ಯಾಡಿಗೆ ಬಂದಿದ್ದ ಸೌಮ್ಯಾ, ಸುದೀಪ್ ಮತ್ತು ಅವರ ಪೋಷಕರ ಎದುರೇ ರಂಪಾಟ ಮಾಡಿದ್ದಾಳೆ. “ಫೋನ್ ತೆಗೆದಿಲ್ಲ ಎಂಬ ಕಾರಣಕ್ಕೆ ನೆಲ್ಯಾಡಿ ಪೇಟೆಯಲ್ಲಿ ಎಲ್ಲರ ಎದುರೇ ಅಸಭ್ಯವಾಗಿ ಬೈದು ನಮಗೆ ತೀವ್ರ ಅವಮಾನ ಮಾಡಿದ್ದಾಳೆ. ಆನಂತರ ಸುದೀಪ್ ಆಕೆಯ ಜೊತೆಗೇ ಹೋಗಿದ್ದ,” ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ.

ಸಾವಿನ ಬಗ್ಗೆ ಅನುಮಾನ:
ಸೌಮ್ಯಾ ಜೊತೆಗೆ ಹೋದ ಎರಡು ದಿನಗಳಲ್ಲೇ ಸುದೀಪ್ ಅವರಿಗೆ ಆರೋಗ್ಯ ಸರಿ ಇಲ್ಲ ಎಂದು ಕಾರ್ಕಳದ ನಿಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಇದು ಡೆಂಗ್ಯೂ ಜ್ವರ ಎಂದು ಹೇಳಲಾಗುತ್ತಿತ್ತು. ಆದರೆ ಈ ಸಾವಿನ ಹಿಂದೆ ಪತ್ನಿಯ ಕಿರುಕುಳ ಮತ್ತು ಸಂಚಿದೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ನೆಲ್ಯಾಡಿಯ ಸುದೀಪ್ ರೈ ಸಾವಿನ ಪ್ರಕರಣವು ಈಗ ಹನಿಟ್ರಾಪ್ ಮತ್ತು ಸರಣಿ ಮದುವೆ ವಂಚನೆಯ ಆಯಾಮವನ್ನು ಪಡೆದುಕೊಂಡಿದೆ. ಆರೋಪಿ ಸೌಮ್ಯಾ ಶೆಟ್ಟಿ ಕೇವಲ ಸುದೀಪ್‌ಗೆ ಮಾತ್ರವಲ್ಲದೆ, ಈ ಹಿಂದೆ ಹಲವು ಪುರುಷರಿಗೆ ಮದುವೆಯ ಆಮಿಷವೊಡ್ಡಿ ವಂಚಿಸಿರುವ ಗಂಭೀರ ವಿಚಾರಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿವೆ.

ಹನಿಟ್ರಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆಯೇ?
ಸುದೀಪ್ ಅವರ ಪೋಷಕರು ಸೌಮ್ಯಾ ಶೆಟ್ಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, “ಆಕೆ ನಾಟಕ ತಂಡದಲ್ಲಿ ಕಲಾವಿದೆಯಾಗಿದ್ದು, ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಾಳೆ. ಹಣಕ್ಕಾಗಿ ಮದುವೆಯಾಗುವ ಭರವಸೆ ನೀಡಿ ಹಲವರನ್ನು ನಂಬಿಸಿ ಮೋಸ ಮಾಡಿದ್ದಾಳೆ. ಈಕೆಯ ಹಿಂದೆ ಹನಿಟ್ರಾಪ್ ಗ್ಯಾಂಗ್ ಇರುವ ಶಂಕೆ ಇದೆ,” ಎಂದು ಕಣ್ಣೀರು ಹಾಕಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಮತ್ತೊಬ್ಬ ಸಂತ್ರಸ್ತ ಕಲಾವಿದನ ಅಳಲು:
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಟಕ ಕಲಾವಿದ ಮೂಲ್ಕಿಯ ವೇಣುಗೋಪಾಲ ಶೆಟ್ಟಿ ಅವರು ಸೌಮ್ಯಾ ಶೆಟ್ಟಿಯಿಂದ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. “ಆಕೆ ನನ್ನನ್ನೂ ಮದುವೆಯಾಗುತ್ತೇನೆಂದು ಹೇಳಿ ವಿಚಿತ್ರವಾಗಿ ಹಿಂಸೆ ಕೊಟ್ಟಿದ್ದಾಳೆ. ಮದುವೆ ಫಿಕ್ಸ್ ಆಗಿದ್ದನ್ನು ನಾನು ಸ್ಟೇಟಸ್ ಹಾಕಿದಾಗ ಹಲವರು ಫೋನ್ ಮಾಡಿ ಆಕೆ ಸರಿಯಿಲ್ಲ ಎಂದು ಎಚ್ಚರಿಸಿದ್ದರು. ಸ್ವತಃ ಆಕೆಯ ಮನೆಯವರೇ ಆಕೆಯನ್ನು ಹೊರಗೆ ಹಾಕಿದ್ದರು,” ಎಂದು ತಿಳಿಸಿದರು.

ವೇಣುಗೋಪಾಲ ಶೆಟ್ಟಿ ಅವರು ಹೇಳುವಂತೆ, ಸೌಮ್ಯಾ ಈ ಹಿಂದೆ ಕನಿಷ್ಠ ಇಬ್ಬರನ್ನು ಮದುವೆಯಾಗಿ ವಂಚಿಸಿದ್ದಾಳೆ. “2024ರ ಡಿಸೆಂಬರ್ ಬಳಿಕ ಆಕೆಯ ಚರಿತ್ರೆ ತಿಳಿದು ನಾನು ಮದುವೆ ಪ್ರಸ್ತಾಪ ಕೈಬಿಟ್ಟಿದ್ದೆ. ಕೊನೆಗೆ ಆಕೆ ನನ್ನ ವಿರುದ್ಧವೇ ಪೊಲೀಸ್ ದೂರು ನೀಡಿದ್ದಳು. ಈಗ ಸುದೀಪ್ ರೈ ಅವರಂತಹ ಅಮಾಯಕ ಆಕೆಯ ಕಿರುಕುಳಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ,” ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಪುರುಷರಿಗೂ ಇರಲಿ ಸಾಂತ್ವನ ಕೇಂದ್ರ:
ಸೌಮ್ಯಾ ಶೆಟ್ಟಿಯ ವಂಚನಾ ಜಾಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ವೇಣು ಶೆಟ್ಟಿ, ಕಾನೂನಿನ ದುರುಪಯೋಗದ ಬಗ್ಗೆ ಮಾತನಾಡಿದರು. “ಕಾನೂನು ಮಹಿಳೆಯರ ಪರವಾಗಿದೆ, ಅವರು ಸುಳ್ಳು ದೂರು ಕೊಟ್ಟರೂ ಪೊಲೀಸರು ನಮ್ಮನ್ನು ಎಳೆದೊಯ್ಯುತ್ತಾರೆ. ಆದರೆ ಅನ್ಯಾಯಕ್ಕೊಳಗಾದ ಪುರುಷರಿಗಾಗಿ ಯಾವುದೇ ಕಾನೂನಿಲ್ಲ. ಮಹಿಳಾ ಆಯೋಗದ ಮಾದರಿಯಲ್ಲೇ ಪುರುಷರಿಗೂ ಸಾಂತ್ವನ ಕೇಂದ್ರಗಳು ಇರಬೇಕು. ಈ ರೀತಿ ಅನ್ಯಾಯಕ್ಕೊಳಗಾದ ನಮಗೆ ನ್ಯಾಯ ಕೊಡುವವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ.

ಪೊಲೀಸ್ ತನಿಖೆಗೆ ಆಗ್ರಹ:
ಸೌಮ್ಯಾ ಶೆಟ್ಟಿ ಮದುವೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವ ಉದ್ದೇಶ ಹೊಂದಿದ್ದಳೇ? ಈಕೆಯ ಹಿಂದೆ ಯಾರಿದ್ದಾರೆ? ಮತ್ತು ಸುದೀಪ್ ರೈ ಸಾವಿನಲ್ಲಿ ಈಕೆಯ ಪಾತ್ರವೇನು? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಮತ್ತು ಸಂತ್ರಸ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.

Continue Reading

DEATH

ಬೇಸಿಗೆ ರಜೆ ಎಳೆಬಿಸಿಲಿಗೆ ತಣ್ಣಗಾದ ಪುಟ್ಟ ಜೀವಗಳು: ಈಜಲು ಹೋದ ನಾಲ್ವರು ಮಕ್ಕಳು ಜಲಸಮಾಧಿ

Published

on

ಶಾಲಾ ರಜೆಯ ಮೋಜಿನಲ್ಲಿದ್ದ ಪುಟ್ಟ ಕಂದಮ್ಮಗಳಿಗೆ ಆ ಕೃಷಿ ಹೊಂಡವೇ ಮೃತ್ಯುಕೂಪವಾದ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಈಜಲು ಹೋದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಕಿರಣ್ (6), ಬಸಮ್ಮ (11), ಶರತ್ (6) ಹಾಗೂ ಹನುಮೇಶ್ (7) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆ ಇರುವುದರಿಂದ ಗ್ರಾಮದ ಈ ನಾಲ್ವರು ಮಕ್ಕಳು ಆಟವಾಡುತ್ತಾ ಸಮೀಪದ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದಾರೆ. ಆದರೆ ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಮಕ್ಕಳು ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ನಾಲ್ವರೂ ಜಲಸಮಾಧಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ಮಕ್ಕಳು ಮನೆಗೆ ಬಾರದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ್ದು, ಹೊಂಡದ ಬಳಿ ಮಕ್ಕಳ ಶವಗಳು ಪತ್ತೆಯಾಗಿವೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಘಟನಾ ಸ್ಥಳಕ್ಕೆ ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ಬೇಸಿಗೆ ರಜೆ ಇರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಅಪಾಯಕಾರಿ ಜಲಮೂಲಗಳ ಬಳಿ ಮಕ್ಕಳು ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಈ ಘಟನೆ ಎಚ್ಚರಿಸಿದೆ.

Continue Reading

DEATH

ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ, ಸೋಷಿಯಲ್ ಮೀಡಿಯಾ ಸ್ಟಾರ್ ಲಕ್ಷ್ಮೀ ನಾಯ್ಕ (93) ವಿಧಿವಶ

Published

on

ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಜನಪ್ರಿಯ ವ್ಯಕ್ತಿತ್ವ, ಸಾಮಾಜಿಕ ಜಾಲತಾಣದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮೀ ನಾಯ್ಕ (93) ಅವರು ಭಾನುವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಗ್ರಾಮೀಣ ಸೊಗಡಿನ ಅನಭಿಷಿಕ್ತ ನಟಿ:

ಕಳೆದ ಕೆಲವು ವರ್ಷಗಳಿಂದ ತಮ್ಮ ಮೊಮ್ಮಗ, ‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಸೂರಜ್ ಅವರೊಂದಿಗೆ ಸೋಷಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀ ನಾಯ್ಕ ಅವರು ಮನೆಮಾತಾಗಿದ್ದರು. ಇವರ ನೈಜ ನಟನೆ, ಮುಗ್ಧತೆ ಹಾಗೂ ಅಪ್ಪಟ ಹಳ್ಳಿ ಸೊಗಡಿನ ಮಾತುಗಳಿಗೆ ಮಾರುಹೋಗದವರೇ ಇಲ್ಲ. ಮೊಮ್ಮಗ ಸೂರಜ್ ಮಾಡುವ ತಮಾಷೆಯ ಪ್ರಶ್ನೆಗಳಿಗೆ ಅಜ್ಜಿ ನೀಡುತ್ತಿದ್ದ ಉತ್ತರಗಳು ಹಾಗೂ ಅವರ ವಿಶಿಷ್ಟ ಶೈಲಿಯ ನಗು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸದಾ ವೈರಲ್ ಆಗುತ್ತಿದ್ದವು.

ಲಕ್ಷಾಂತರ ಅಭಿಮಾನಿಗಳ ಕಂಬನಿ:

ವೃದ್ಧಾಪ್ಯದ ನಡುವೆಯೂ ಸದಾ ಲವಲವಿಕೆಯಿಂದ ಇರುತ್ತಿದ್ದ ಇವರ ನಿಧನದ ಸುದ್ದಿಯನ್ನು ಸೂರಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಅಜ್ಜಿ ಇನ್ನು ನೆನಪು ಮಾತ್ರ” ಎಂದು ಅವರು ಭಾವುಕವಾಗಿ ಬರೆದುಕೊಂಡಿದ್ದು, ಸಾವಿರಾರು ಅಭಿಮಾನಿಗಳು ಅಜ್ಜಿಯ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸುತ್ತಿದ್ದಾರೆ.

ವಾರ್ಧಕ್ಯದಿಂದ ಕೊನೆಯುಸಿರು:

ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲಕ್ಷ್ಮೀ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮಂಚಿಕೇರಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಕರ್ನಾಟಕದ ನೆಟ್ಟಿಗರಿಗೆ ತಮ್ಮ ವಿಡಿಯೋಗಳ ಮೂಲಕ ನಗು ಹಂಚಿದ್ದ ಒಬ್ಬ ಅದ್ಭುತ ಕಲಾವಿದೆಯನ್ನು ಕರುನಾಡು ಕಳೆದುಕೊಂಡಂತಾಗಿದೆ.

Continue Reading

Trending

Copyright © 2025 Deevatige