Connect with us

Puttur

ಡಾ. ಪ್ರಸಾದ್ ಭಂಡಾರಿಯವರ ರಾಜಕೀಯ ಮೀರಿದ ದೈವಭಕ್ತಿ: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯ ಯಶಸ್ಸಿಗೆ ಶಾಸಕರು ಮತ್ತು ಕಾಂಗ್ರೆಸ್ ಆಡಳಿತ ಮಂಡಳಿಯನ್ನು ಶ್ಲಾಘಿಸಿದ ಬಿಜೆಪಿ ಮುಖಂಡ

Published

on

ಪುತ್ತೂರು: ರಾಜಕೀಯ ವೈಮನಸ್ಸುಗಳನ್ನು ಬದಿಗಿಟ್ಟು ಕೇವಲ ಭಕ್ತಿಯ ನೆಲೆಯಲ್ಲಿ ಶ್ಲಾಘನೆ ವ್ಯಕ್ತಪಡಿಸುವ ಅಪರೂಪದ ಘಟನೆಗೆ ಪುತ್ತೂರು ಸಾಕ್ಷಿಯಾಗಿದೆ. ಪುತ್ತೂರಿನ ಐತಿಹಾಸಿಕ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವರ ಈ ಬಾರಿಯ ಜಾತ್ರೋತ್ಸವವು ಅತ್ಯಂತ ವೈಭವದಿಂದ ಮತ್ತು ಶಿಸ್ತುಬದ್ಧವಾಗಿ ನಡೆದ ಹಿನ್ನೆಲೆಯಲ್ಲಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಖ್ಯಾತ ವೈದ್ಯ ಡಾ. ಎಂ. ಕೆ. ಪ್ರಸಾದ್ ಭಂಡಾರಿ ಅವರು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ಆಡಳಿತ ಸಮಿತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಏನಿದೆ ವೈರಲ್ ಪತ್ರದಲ್ಲಿ?

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಪತ್ರ ಬರೆದಿರುವ ಡಾ. ಪ್ರಸಾದ್ ಭಂಡಾರಿ ಅವರು, ಈ ಬಾರಿಯ ಜಾತ್ರೆಯ ಯಶಸ್ಸಿನ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ವೈಭವದ ಆಚರಣೆ: “ಈ ಬಾರಿಯ ಮಹಾಲಿಂಗೇಶ್ವರನ ಜಾತ್ರೆ ಅತ್ಯಂತ ‘Super’ ಆಗಿ, ಬಹಳ ವಿಜೃಂಭಣೆಯಿಂದ ಜರುಗಿದೆ. ಇಷ್ಟು ‘Grand’ ಆಗಿ ಈ ಹಿಂದೆ ಎಂದೂ ನಡೆದಿರಲಿಲ್ಲ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉತ್ತಮ ವ್ಯವಸ್ಥೆ: ಭಕ್ತಾದಿಗಳಿಗೆ ಊಟ, ಉಪಹಾರ ಮತ್ತು ಕಾಫಿ-ತಿಂಡಿಯ ವ್ಯವಸ್ಥೆಯು ಅಚ್ಚುಕಟ್ಟಾಗಿ ಸಾಗಿತ್ತು ಎಂಬುದನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ.

ಆಡಳಿತಕ್ಕೆ ಮೆಚ್ಚುಗೆ: “ಯಾವಾಗಲೂ ನೀವೇ ಆಡಳಿತ ಮಾಡಿದರೆ ಒಳ್ಳೆಯದು. ದೇವರು ನಿಮಗೆ ಸಂಪೂರ್ಣ ಆಶೀರ್ವಾದ ನೀಡಲಿ,” ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುತ್ತವೆ. ಆದರೆ, ಪುತ್ತೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ಸಮಿತಿಯ ಕೆಲಸವನ್ನು ಶ್ಲಾಘಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ಅಶೋಕ್ ರೈಯವರಿಗೂ ಪತ್ರ ಬರೆದು ಡಾ. ಎಂ. ಕೆ. ಪ್ರಸಾದ್ ಶ್ಲಾಘನೆ

ಇತ್ತೀಚೆಗೆ ಅದ್ಧೂರಿಯಾಗಿ ಸಂಪನ್ನಗೊಂಡ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಯಶಸ್ಸಿನ ಕುರಿತು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಪತ್ರ ಬರೆದಿರುವ ಡಾ. ಪ್ರಸಾದ್ ಭಂಡಾರಿ ಅವರು ಅಭಿವೃದ್ಧಿಯ ಹರಿಕಾರ ಸ್ಥಳೀಯ ಕಾಂಗ್ರೇಸ್‌ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಪತ್ರ ಬರೆದು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ದಾಖಲೆ ಬರೆದ ಈ ವರ್ಷದ ಜಾತ್ರೆ: ತಮ್ಮ ಪತ್ರದಲ್ಲಿ ಈ ವರ್ಷದ ಜಾತ್ರಾ ಸಂಭ್ರಮವನ್ನು ಮುಕ್ತಕಂಠದಿಂದ ಕೊಂಡಾಡಿರುವ ಡಾ. ಪ್ರಸಾದ್ ಅವರು, “ಈ ಬಾರಿಯ ಜಾತ್ರೆಯು ಅತ್ಯದ್ಭುತವಾಗಿ ಮತ್ತು ಭವ್ಯವಾಗಿ ಮೂಡಿಬಂದಿದೆ. ಇದು ಹಿಂದಿನ ಎಲ್ಲಾ ವರ್ಷಗಳ ವೈಭವವನ್ನು ಮೀರಿಸುವಂತೆ ಆಯೋಜಿಸಲ್ಪಟ್ಟಿದೆ” ಎಂದು ಬಣ್ಣಿಸಿದ್ದಾರೆ.

ಪುಣ್ಯಕ್ಷೇತ್ರವಾಗಿ ಬೆಳಗಲಿ ಪುತ್ತೂರು: ಶಾಸಕರ ಅಭಿವೃದ್ಧಿ ದೃಷ್ಟಿಕೋನವನ್ನು ಶ್ಲಾಘಿಸಿರುವ ಅವರು, “ಅಶೋಕ್ ರೈ ಅವರ ನಾಯಕತ್ವದಲ್ಲಿ ದೇವಸ್ಥಾನವು ಹೊಸ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಪುತ್ತೂರು ಒಂದು ಪ್ರಮುಖ ಪುಣ್ಯಕ್ಷೇತ್ರವಾಗಿ (Pilgrimage Centre) ಹೊರಹೊಮ್ಮಲಿದೆ ಎಂಬ ದೃಢ ವಿಶ್ವಾಸ ನನಗಿದೆ” ಎಂದು ತಿಳಿಸಿದ್ದಾರೆ.

ಶಾಸಕರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ಕೇಳಿ ಬರುತ್ತಿದ್ದು, ಡಾಕ್ಟರ್ರ ಈ ಪತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ದೈವ ಕಾರ್ಯದಲ್ಲಿ ರಾಜಕೀಯ ಇರಬಾರದು ಎಂಬುದಕ್ಕೆ ಈ ಪತ್ರವೇ ಸಾಕ್ಷಿ. ಡಾ. ಪ್ರಸಾದ್ ಭಂಡಾರಿಯವರ ದೊಡ್ಡಗುಣ ಮತ್ತು ಈಶ್ವರ ಭಟ್ ಅವರ ಸಮರ್ಥ ನಾಯಕತ್ವಕ್ಕೆ ಇದು ಹಿಡಿದ ಕೈಗನ್ನಡಿ,” ಎಂದು ಭಕ್ತರು ಅಭಿಪ್ರಾಯಪಡುತ್ತಿದ್ದಾರೆ.

ಪ್ರಸ್ತುತ ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, “ಪುತ್ತೂರಿನ ಸೌಹಾರ್ದತೆ ಮತ್ತು ದೈವಭಕ್ತಿಗೆ ಇದೊಂದು ಮಾದರಿ” ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕುಳ ಕಂದಾಯ ಕಛೇರಿಯಲ್ಲಿ ಧರಣ್ ದರ್ಭಾರ್..ನಾಗರಿಕರು ಹೈರಾಣ..ಜಿಲ್ಲಾಧಿಕಾರಿಗೆ ದೂರು..

Published

on

ಬಂಟ್ವಾಳ: ತಾಲೂಕಿನ ಕುಳ ಗ್ರಾಮದ ಆಡಳಿತ ಅಧಿಕಾರಿಯ (VA) ಕಚೇರಿಯು ಸಾರ್ವಜನಿಕರ ಸೇವೆಗೆ ಇರಬೇಕಾದ ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ವ್ಯಕ್ತಿಗಳ ಹಣ ವಸೂಲಿ ಕೇಂದ್ರವೋ ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ. ಕಚೇರಿಯೊಳಗೆ ಧರಣ್ ಮಾಣಿ ಎಂಬ ಖಾಸಗಿ ಬ್ರೋಕರ್‌ನನ್ನು ಕಾನೂನುಬಾಹಿರವಾಗಿ ಕೂರಿಸಿಕೊಂಡು, ಅಮಾಯಕ ಗ್ರಾಮೀಣ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಜಿಗಣೆ ದಂಧೆ ಬೆಳಕಿಗೆ ಬಂದಿದೆ.

ಕಚೇರಿ ಕೆಲಸಕ್ಕೆ ಬಂದರೆ ಜೇಬಿಗೆ ಕತ್ತರಿ!

ಕುಳ ಮತ್ತು ಇಡ್ಕಿದು ಜೋಡು ಗ್ರಾಮಗಳಾಗಿದ್ದು, ಇಲ್ಲಿನ ಕಂದಾಯ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಬಡ, ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಈ ದಲ್ಲಾಳಿ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಬೇಡಿಕೆಯಿಟ್ಟಷ್ಟು ಹಣ ನೀಡದಿದ್ದರೆ, ಅಂತವರ ಫೈಲ್‌ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಸಿ, ಜನ ಸಾಮಾನ್ಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕುಳ ಗ್ರಾಮಸ್ಥರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲ್ಲಾಳಿಗೆ ಗ್ರಾಮ ಸಹಾಯಕ ರಾಘವನ ‘ಶ್ರೀರಕ್ಷೆ’!

ಈ ಇಡೀ ಅಕ್ರಮ ದಂಧೆಯ ಹಿಂದೆ ಕುಳ ಗ್ರಾಮದ ಸಹಾಯಕನಾಗಿರುವ ಇಡೀದು ಗ್ರಾಮದ ರಾಘವ ಗೌಡ ಎಂಬಾತನ ಪೂರ್ಣ ಶ್ರೀರಕ್ಷೆ ಹಾಗೂ ಶಾಮೀಲಾತಿ ಇರುವುದು ಸಾಕ್ಷ್ಯಸಮೇತ ಬಹಿರಂಗವಾಗಿದೆ. ದಿನಾಂಕ 08/06/2026 ರಂದು ಬೆಳಿಗ್ಗೆ 9:18 ರ ಸುಮಾರಿಗೆ ಸ್ಥಳೀಯ ನಾಗರಿಕರಾದ ಸಚಿನ್ ಉರಿಮಜಲು ಅವರು ಕಚೇರಿಗೆ ಭೇಟಿ ನೀಡಿದಾಗ, ಗ್ರಾಮ ಸಹಾಯಕನ ಅಧಿಕೃತ ಪೀಠದಲ್ಲೇ ಈ ಬ್ರೋಕರ್ ಧರಣ್ ಆಸೀನನಾಗಿ ದರ್ಬಾರ್ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನು ಸಚಿನ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸಿದಾಗ, ಗ್ರಾಮ ಸಹಾಯಕ ರಾಘವ ತಕರಾರು ಎಬ್ಬಿಸಿದ್ದಲ್ಲದೆ, ಕಚೇರಿಯ ಫೈಲ್/ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಅಕ್ರಮವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾನೆ!

ತನ್ನನ್ನು ವಿಎ (ಗ್ರಾಮ ಆಡಳಿತ ಅಧಿಕಾರಿ) ಮತ್ತು ರಾಘವ ಅವರೇ ಇಲ್ಲಿಗೆ ನೇಮಿಸಿದ್ದಾರೆ ಎಂದು ಸ್ವತಃ ದಲ್ಲಾಳಿ ಧರಣ್ ಒಪ್ಪಿಕೊಂಡಿರುವುದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟಿದೆ.

ಜಾರಿಕೊಂಡ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್!

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುರ್ಚಿ ಹಾಕಿ ದರ್ಬಾರ್ ನಡೆಸುತ್ತಿರುವ ಬಗ್ಗೆ ಪತ್ರಿಕೆಯು ಗ್ರಾಮ ಆಡಳಿತ ಅಧಿಕಾರಿ (VA) ಅನಿಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ. “ನಾನು ಕುಳ ಗ್ರಾಮದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಉಳಿದ ದಿನಗಳಲ್ಲಿ ಗ್ರಾಮ ಸಹಾಯಕ ರಾಘವ ಇರುತ್ತಾರೆ. ಕಚೇರಿಯೊಳಗೆ ದಲ್ಲಾಳಿ ಇರುವ ಬಗ್ಗೆ ನನಗೆ ತಿಳಿದಿಲ್ಲ, ನಾನು ಯಾರನ್ನೂ ನೇಮಿಸಿಲ್ಲ” ಎಂದು ದಿನಾಂಕ 10/06/2026 ರಂದು ಹೇಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದಲೇ ಇಂತಹ ದಲ್ಲಾಳಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು: ಹೋರಾಟದ ಎಚ್ಚರಿಕೆ

ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಬ್ರೋಕರ್ ಧರಣ್‌ನನ್ನು ತಕ್ಷಣವೇ ಕಚೇರಿಯಿಂದ ತೆರವುಗೊಳಿಸಬೇಕು ಮತ್ತು ಆತನಿಗೆ ಕಚೇರಿಯೊಳಗೆ ಅಕ್ರಮವಾಗಿ ನೆಲೆಸಲು ಆಶ್ರಯ ನೀಡಿದ ಗ್ರಾಮ ಸಹಾಯಕ ರಾಘವ ವಿರುದ್ಧ ತಕ್ಷಣವೇ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೂರುದಾರರಾದ ಸಚಿನ್ ಉರಿಮಜಲು ಅವರು ಬಂಟ್ವಾಳ ತಹಶೀಲ್ದಾರರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸಹಾಯಕ ಕಮಿಷನರ್‌ ಅವರಿಗೆ ಜಿಪಿಎಸ್ ಫೋಟೋ ಸಾಕ್ಷ್ಯಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ.

“ಸರ್ಕಾರಿ ಕಚೇರಿಯನ್ನು ಇವರು ತಮ್ಮ ಹಿರಿಯರ ಖಾಸಗಿ ಆಸ್ತಿ ಎಂದುಕೊಂಡಿದ್ದಾರೆಯೇ? ಕೂಡಲೇ ಈ ಭ್ರಷ್ಟ ಜಾಲದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾಧ್ಯಮ ಮಿತ್ರರನ್ನು ಕರೆಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ದೂರುದಾರರು ಎಚ್ಚರಿಸಿದ್ದಾರೆ.




Continue Reading

DEATH

ಪುತ್ತೂರು: ಖ್ಯಾತ ಉದ್ಯಮಿ, ಸಾಮಾಜಿಕ ಮುಖಂಡ ಸಾಗರ್ ಇಬ್ರಾಹಿಮ್ ಹಾಜಿ ನಿಧನ

Published

on

ಪುತ್ತೂರು: ಪುತ್ತೂರಿನ ಪ್ರಮುಖ ಉದ್ಯಮಿ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖಂಡರಾದ ಬೆದ್ರಾಳ ನಿವಾಸಿ ಸಾಗರ್ ಇಬ್ರಾಹಿಮ್ ಹಾಜಿ (ಸಾಗರ್ ಮೊಹಮ್ಮದ್ ಹಾಜಿ) ಅವರು ಇಂದು (ಜೂನ್ 5) ಮುಂಜಾನೆ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೆಲವು ಸಮಯದಿಂದ ಅನಾರೋಗ್ಯ ಕಾಡುತ್ತಿತ್ತು. ಇಂದು ಮುಂಜಾನೆ ಸುಮಾರು 3:45ರ ವೇಳೆಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಗಣನೀಯ ಸಾಮಾಜಿಕ ಸೇವೆ: ಮೃತರು ಪುತ್ತೂರು ಪರಿಸರದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಪುತ್ತೂರಿನ ಬಡಕ್ಕೋಡಿ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಜಂಇಯ್ಯತ್ತುಲ್ ಫಲಾಹ್ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಎಸ್‌ಡಿಪಿಐ (SDPI) ಸಮಿತಿಯ ಅಧ್ಯಕ್ಷರಾಗಿ ಹಾಗೂ ಹಲವಾರು ಪ್ರಮುಖ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.

ಕುಟುಂಬ: ಮೃತರು ಪುತ್ರ ಜಸೀನ್, ಸಹೋದರರಾದ ಮುಹಮ್ಮದ್, ಹಸೈನಾರ್ ಹಾಗೂ ಅಗಲಿದ ಸಹೋದರರಾದ ಮರ್ಹೂಮ್ ಯೂಸುಫ್ (ಮೋನುಚ್ಚ), ಮರ್ಹೂಮ್ ಉಮ್ಮರ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಂತಿಮ ಸಂಸ್ಕಾರ: ಮೃತರ ಜನಾಝಾವನ್ನು ಪುತ್ತೂರಿನ ಬೆದ್ರಾಳದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು. ಸಾರ್ವಜನಿಕ ಮಯ್ಯತ್ ಸಂದರ್ಶನದ ಬಳಿಕ, ಬಡಕ್ಕೋಡಿ ಜುಮಾ ಮಸೀದಿಯಲ್ಲಿ ಜನಾಝಾ ನಮಾಝ್ ನೆರವೇರಿಸಿ, ಅಲ್ಲಿನ ದಫನ ಭೂಮಿಯಲ್ಲಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ






Continue Reading

crime

ಪುತ್ತೂರು: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ತೀರ್ಥಾಕ್ಷ ಎಂಬಾತನ ವಿರುದ್ಧ ಪೋಕ್ಸೋ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲು

Published

on

ಪುತ್ತೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳನ್ನು ಬಲವಂತವಾಗಿ ಲೈಂಗಿಕ ಸಂಪರ್ಕಕ್ಕೆ ಒಳಪಡಿಸಿದ ಆರೋಪದ ಮೇಲೆ ತೀರ್ಥಾಕ್ಷ ಎಂಬಾತನ ವಿರುದ್ಧ ಪುತ್ತೂರಿನಲ್ಲಿ ಪೋಕ್ಸೋ ಸೇರಿದಂತೆ ವಿವಿಧ ಗಂಭೀರ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ (POCSO Act) ಕಲಂ 4, 8, 12, ಭಾರತೀಯ ನ್ಯಾಯ ಸಂಹಿತೆಯ (BNS 2023) ಕಲಂ 64 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015 ರ ಸೆಕ್ಷನ್ 3(1)(w)(i)(ii) ರ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ.

ಪ್ರಕರಣದ ಹಿನ್ನೆಲೆ:

ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ನಿವಾಸಿಯಾದ ಬಾಲಕಿಯು ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಇತ್ತೀಚೆಗೆ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಹಾಗೂ ರಾತ್ರಿ ವೇಳೆ ಮನೆಯಿಂದ ಹೊರಗೆ ಹೋಗಿ ತಡವಾಗಿ ಬರುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರಿಗೆ ಸಂಶಯ ಮೂಡಿತ್ತು.

ಜೂನ್ 4ರಂದು ತಡರಾತ್ರಿ 1 ಗಂಟೆಯ ಸುಮಾರಿಗೆ ಬಾಲಕಿ ತನ್ನ ಕೊಠಡಿಯಲ್ಲಿ ಇಲ್ಲದಿರುವುದನ್ನು ಕಂಡು ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಹಿಂಬಾಗಿಲು ತೆರೆದಿದ್ದು, ಮನೆಯಿಂದ ಸುಮಾರು 500 ಮೀಟರ್ ದೂರದ ಖಾಲಿ ಜಾಗದಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ನಿಂತಿರುವುದು ಕಂಡುಬಂದಿದೆ. ಅಲ್ಲಿಯೇ ಬಾಲಕಿಯೂ ಇದ್ದಳು.

ವಿಚಾರಣೆ ವೇಳೆ ಬಯಲಾದ ಸತ್ಯ:

ಮನೆಯವರು ಬಾಲಕಿಯನ್ನು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ. 2026ರ ಫೆಬ್ರವರಿ 21ರಂದು ಪೆರ್ನೆಯಲ್ಲಿ ನಡೆದ ನೇಮೋತ್ಸವದ ಸಂದರ್ಭದಲ್ಲಿ ತೀರ್ಥಾಕ್ಷ ಎಂಬಾತ ಪರಿಚಯವಾಗಿದ್ದಾಗಿ ಆಕೆ ತಿಳಿಸಿದ್ದಾಳೆ. ಇಬ್ಬರೂ ಫೋನ್ ಸಂಪರ್ಕದಲ್ಲಿದ್ದು, ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ತೀರ್ಥಾಕ್ಷ, ಬಾಲಕಿಯನ್ನು ಒತ್ತಾಯಪಡಿಸಿ ರಾತ್ರಿ ವೇಳೆ ಮನೆಯ ಹಿಂಭಾಗದ ಖಾಲಿ ಜಾಗಕ್ಕೆ ಬರುವಂತೆ ಮಾಡಿದ್ದಾನೆ. ಈ ಹಿಂದೆ 3-4 ಬಾರಿ ಅಲ್ಲಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಮೂರನೇ ಬಾರಿ ರಾತ್ರಿ 1:00 ಗಂಟೆಯ ಸುಮಾರಿಗೆ ಅಲ್ಲಿಗೆ ಬಂದವನು, ಬಾಲಕಿಯ ಇಷ್ಟಕ್ಕೆ ವಿರುದ್ಧವಾಗಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




Continue Reading

Trending

Copyright © 2025 Deevatige

error: Content is protected !!