Connect with us

Puttur

ಡಾ. ಪ್ರಸಾದ್ ಭಂಡಾರಿಯವರ ರಾಜಕೀಯ ಮೀರಿದ ದೈವಭಕ್ತಿ: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯ ಯಶಸ್ಸಿಗೆ ಶಾಸಕರು ಮತ್ತು ಕಾಂಗ್ರೆಸ್ ಆಡಳಿತ ಮಂಡಳಿಯನ್ನು ಶ್ಲಾಘಿಸಿದ ಬಿಜೆಪಿ ಮುಖಂಡ

Published

on

ಪುತ್ತೂರು: ರಾಜಕೀಯ ವೈಮನಸ್ಸುಗಳನ್ನು ಬದಿಗಿಟ್ಟು ಕೇವಲ ಭಕ್ತಿಯ ನೆಲೆಯಲ್ಲಿ ಶ್ಲಾಘನೆ ವ್ಯಕ್ತಪಡಿಸುವ ಅಪರೂಪದ ಘಟನೆಗೆ ಪುತ್ತೂರು ಸಾಕ್ಷಿಯಾಗಿದೆ. ಪುತ್ತೂರಿನ ಐತಿಹಾಸಿಕ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವರ ಈ ಬಾರಿಯ ಜಾತ್ರೋತ್ಸವವು ಅತ್ಯಂತ ವೈಭವದಿಂದ ಮತ್ತು ಶಿಸ್ತುಬದ್ಧವಾಗಿ ನಡೆದ ಹಿನ್ನೆಲೆಯಲ್ಲಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಖ್ಯಾತ ವೈದ್ಯ ಡಾ. ಎಂ. ಕೆ. ಪ್ರಸಾದ್ ಭಂಡಾರಿ ಅವರು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ಆಡಳಿತ ಸಮಿತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಏನಿದೆ ವೈರಲ್ ಪತ್ರದಲ್ಲಿ?

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಪತ್ರ ಬರೆದಿರುವ ಡಾ. ಪ್ರಸಾದ್ ಭಂಡಾರಿ ಅವರು, ಈ ಬಾರಿಯ ಜಾತ್ರೆಯ ಯಶಸ್ಸಿನ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ವೈಭವದ ಆಚರಣೆ: “ಈ ಬಾರಿಯ ಮಹಾಲಿಂಗೇಶ್ವರನ ಜಾತ್ರೆ ಅತ್ಯಂತ ‘Super’ ಆಗಿ, ಬಹಳ ವಿಜೃಂಭಣೆಯಿಂದ ಜರುಗಿದೆ. ಇಷ್ಟು ‘Grand’ ಆಗಿ ಈ ಹಿಂದೆ ಎಂದೂ ನಡೆದಿರಲಿಲ್ಲ,” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಉತ್ತಮ ವ್ಯವಸ್ಥೆ: ಭಕ್ತಾದಿಗಳಿಗೆ ಊಟ, ಉಪಹಾರ ಮತ್ತು ಕಾಫಿ-ತಿಂಡಿಯ ವ್ಯವಸ್ಥೆಯು ಅಚ್ಚುಕಟ್ಟಾಗಿ ಸಾಗಿತ್ತು ಎಂಬುದನ್ನು ಅವರು ವಿಶೇಷವಾಗಿ ಸ್ಮರಿಸಿದ್ದಾರೆ.

ಆಡಳಿತಕ್ಕೆ ಮೆಚ್ಚುಗೆ: “ಯಾವಾಗಲೂ ನೀವೇ ಆಡಳಿತ ಮಾಡಿದರೆ ಒಳ್ಳೆಯದು. ದೇವರು ನಿಮಗೆ ಸಂಪೂರ್ಣ ಆಶೀರ್ವಾದ ನೀಡಲಿ,” ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯ ಕಾರ್ಯವೈಖರಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿರುತ್ತವೆ. ಆದರೆ, ಪುತ್ತೂರಿನಂತಹ ಸೂಕ್ಷ್ಮ ಪ್ರದೇಶದಲ್ಲಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕಗೊಂಡ ಸಮಿತಿಯ ಕೆಲಸವನ್ನು ಶ್ಲಾಘಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ಅಶೋಕ್ ರೈಯವರಿಗೂ ಪತ್ರ ಬರೆದು ಡಾ. ಎಂ. ಕೆ. ಪ್ರಸಾದ್ ಶ್ಲಾಘನೆ

ಇತ್ತೀಚೆಗೆ ಅದ್ಧೂರಿಯಾಗಿ ಸಂಪನ್ನಗೊಂಡ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಯಶಸ್ಸಿನ ಕುರಿತು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಪತ್ರ ಬರೆದಿರುವ ಡಾ. ಪ್ರಸಾದ್ ಭಂಡಾರಿ ಅವರು ಅಭಿವೃದ್ಧಿಯ ಹರಿಕಾರ ಸ್ಥಳೀಯ ಕಾಂಗ್ರೇಸ್‌ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರಿಗೆ ಪತ್ರ ಬರೆದು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ದಾಖಲೆ ಬರೆದ ಈ ವರ್ಷದ ಜಾತ್ರೆ: ತಮ್ಮ ಪತ್ರದಲ್ಲಿ ಈ ವರ್ಷದ ಜಾತ್ರಾ ಸಂಭ್ರಮವನ್ನು ಮುಕ್ತಕಂಠದಿಂದ ಕೊಂಡಾಡಿರುವ ಡಾ. ಪ್ರಸಾದ್ ಅವರು, “ಈ ಬಾರಿಯ ಜಾತ್ರೆಯು ಅತ್ಯದ್ಭುತವಾಗಿ ಮತ್ತು ಭವ್ಯವಾಗಿ ಮೂಡಿಬಂದಿದೆ. ಇದು ಹಿಂದಿನ ಎಲ್ಲಾ ವರ್ಷಗಳ ವೈಭವವನ್ನು ಮೀರಿಸುವಂತೆ ಆಯೋಜಿಸಲ್ಪಟ್ಟಿದೆ” ಎಂದು ಬಣ್ಣಿಸಿದ್ದಾರೆ.

ಪುಣ್ಯಕ್ಷೇತ್ರವಾಗಿ ಬೆಳಗಲಿ ಪುತ್ತೂರು: ಶಾಸಕರ ಅಭಿವೃದ್ಧಿ ದೃಷ್ಟಿಕೋನವನ್ನು ಶ್ಲಾಘಿಸಿರುವ ಅವರು, “ಅಶೋಕ್ ರೈ ಅವರ ನಾಯಕತ್ವದಲ್ಲಿ ದೇವಸ್ಥಾನವು ಹೊಸ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಪುತ್ತೂರು ಒಂದು ಪ್ರಮುಖ ಪುಣ್ಯಕ್ಷೇತ್ರವಾಗಿ (Pilgrimage Centre) ಹೊರಹೊಮ್ಮಲಿದೆ ಎಂಬ ದೃಢ ವಿಶ್ವಾಸ ನನಗಿದೆ” ಎಂದು ತಿಳಿಸಿದ್ದಾರೆ.

ಶಾಸಕರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ಕೇಳಿ ಬರುತ್ತಿದ್ದು, ಡಾಕ್ಟರ್ರ ಈ ಪತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ದೈವ ಕಾರ್ಯದಲ್ಲಿ ರಾಜಕೀಯ ಇರಬಾರದು ಎಂಬುದಕ್ಕೆ ಈ ಪತ್ರವೇ ಸಾಕ್ಷಿ. ಡಾ. ಪ್ರಸಾದ್ ಭಂಡಾರಿಯವರ ದೊಡ್ಡಗುಣ ಮತ್ತು ಈಶ್ವರ ಭಟ್ ಅವರ ಸಮರ್ಥ ನಾಯಕತ್ವಕ್ಕೆ ಇದು ಹಿಡಿದ ಕೈಗನ್ನಡಿ,” ಎಂದು ಭಕ್ತರು ಅಭಿಪ್ರಾಯಪಡುತ್ತಿದ್ದಾರೆ.

ಪ್ರಸ್ತುತ ಈ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, “ಪುತ್ತೂರಿನ ಸೌಹಾರ್ದತೆ ಮತ್ತು ದೈವಭಕ್ತಿಗೆ ಇದೊಂದು ಮಾದರಿ” ಎಂಬ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಪುತ್ತೂರು: ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ; ಹಳೇ ದ್ವೇಷದ ಹಿನ್ನೆಲೆಯಲ್ಲಿ ಐದಾರು ಮಂದಿ ಕಿಡಿಗೇಡಿಗಳಿಂದ ಹಲ್ಲೆ

Published

on


ಪುತ್ತೂರು: ನಗರದ ಹೃದಯಭಾಗದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಕಿಡಿಗೇಡಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ, ಪುತ್ತೂರಿನ ಕಾಲೇಜೊಂದರ ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿ ಆದಿಲ್ ಹುಸೇನ್ (21) ಹಲ್ಲೆಗೊಳಗಾದವರು.

ಘಟನೆಯ ಹಿನ್ನೆಲೆ:
ದೂರಿನಲ್ಲಿ ತಿಳಿಸಿರುವಂತೆ, ಆದಿಲ್ ಹುಸೇನ್ ಅವರು ಏಪ್ರಿಲ್ 22ರಂದು ಕಾಲೇಜು ಮುಗಿಸಿ ಸಂಜೆ ಸುಮಾರು 5:00 ಗಂಟೆಯ ವೇಳೆಗೆ ತನ್ನ ಗೆಳೆಯರಾದ ಸುಹೇಲ್ ಮತ್ತು ಅಝಾರ್ ಅವರೊಂದಿಗೆ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಚಹಾ ಅಂಗಡಿಗೆ ತೆರಳಿದ್ದರು. ಸಂಜೆ 6:20ರ ಸುಮಾರಿಗೆ ಚಹಾ ಕುಡಿಯುತ್ತಿದ್ದಾಗ ಏಕಾಏಕಿ ಬಂದ ತಂಡವು ಹಲ್ಲೆ ನಡೆಸಿದೆ.

ಸವಿವರವಾದ ದೂರು:
ಆದಿಲ್ ಅವರು ಚಹಾ ಕುಡಿಯುತ್ತಿದ್ದಾಗ ಹಿಂದಿನಿಂದ ಬಂದ ತಂಡವು ಏಕಾಏಕಿ ದಾಳಿ ನಡೆಸಿದೆ. ದೂರಿನಲ್ಲಿ ಹೆಸರಿಸಲಾದ ಬಿ.ಕೆ. ಮೊಹಿನುದ್ದೀನ್, ಮೋಹದ್ ಹಾಗೂ ಇತರ ಸುಮಾರು 5 ಮಂದಿ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೆದರಿಸಿ, ಹಲ್ಲೆ ನಡೆಸಿದ್ದಾರೆ.

ಹಲ್ಲೆಯ ಸ್ವರೂಪ: ಆರೋಪಿಗಳು ಆದಿಲ್‌ನ ಮೇಲೆ ಕಲ್ಲಿನಿಂದ ಬಲಗೈ, ಮುಖ, ಬಲಕಾಲು, ಮೊಣಗಂಟಿಗೆ ಮಾರಣಾಂತಿಕವಾಗಿ ಗುದ್ದಿದ್ದಾರೆ. ಈ ವೇಳೆ ಆದಿಲ್‌ನ ಕಣ್ಣಿನ ಮೇಲ್ಬಾಗ ಹಾಗೂ ಮೂಗಿಗೆ ತೀವ್ರ ಏಟು ಬಿದ್ದಿದ್ದು, ರಕ್ತಸ್ರಾವವಾಗಿದೆ.

ಪ್ರಾಣ ಬೆದರಿಕೆ: “ನೀನು ಇವತ್ತು ಮಿಸ್ ಆಗಿದ್ದೀಯಾ, ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ” ಎಂದು ಆರೋಪಿಗಳು ಈ ಸಂದರ್ಭದಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಹಳೇ ದ್ವೇಷವೇ ಕಾರಣ?
ಕಳೆದ ಆರು ತಿಂಗಳ ಹಿಂದೆ ಕಾಲೇಜಿನ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಆದಿಲ್ ಮತ್ತು ಈ ತಂಡದ ನಡುವೆ ಮಾತಿನ ಚಕಮಕಿ ನಡೆದಿತ್ತು. ಅದೇ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಈ ತಂಡವು ಹೊಂಚು ಹಾಕಿ ಪುತ್ತೂರು ಪೇಟೆಯಲ್ಲಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಚಿಕಿತ್ಸೆ ಮತ್ತು ಮುಂದಿನ ಕ್ರಮ:
ಹಲ್ಲೆಯಿಂದ ಗಾಯಗೊಂಡ ಆದಿಲ್ ಅವರನ್ನು ಕೂಡಲೇ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ತಲೆಗೆ ಬಲವಾದ ಏಟು ಬಿದ್ದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸೂಚನೆಯಂತೆ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ನೀಡಿದ ಹೇಳಿಕೆಯಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಿ.ಕೆ. ಮೊಹಿನುದ್ದೀನ್, ಮೋಹದ್ ಮತ್ತು ತಂಡದ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 49/2026, ಕಲಂ: 189(2), 191(2), 191(3), 352,115(2), 118(1),351(2), ಜೊತೆಗೆ 190 ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Continue Reading

crime

ಪುತ್ತೂರು: ಯುವತಿ ವಂಚನೆ ಪ್ರಕರಣ – ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ ಎಂದು ಡಿಎನ್‌ಎ ದೃಢ; ಮದುವೆಯಾಗುವುದು ಉತ್ತಮ ಎಂದ ಹೈಕೋರ್ಟ್

Published

on

ಪುತ್ತೂರು: ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೃಷ್ಣ ಜೆ.ರಾವ್‌ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. “ಇಲ್ಲದಿದ್ದರೆ ಯುವತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದೀರಾ?” ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭಿಣಿಯನ್ನಾಗಿಸಿ ವಂಚಿಸಿದ ಆರೋಪ ಎದುರಿಸುತ್ತಿರುವ ಪುತ್ತೂರು ಬಿಜೆಪಿ ಮುಖಂಡ ಹಾಗೂ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ಅವರೇ ಮಗುವಿನ ತಂದೆ ಎಂದು ಡಿಎನ್‌ಎ ವರದಿಯಿಂದ ದೃಢಪಟ್ಟಿದೆ.

ಪ್ರಕರಣದ ಹಿನ್ನೆಲೆ: ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಕೃಷ್ಣ ರಾವ್ ತನ್ನ ಮಾಜಿ ಸಹಪಾಠಿಯೊಂದಿಗೆ ಪ್ರೀತಿಯ ನಾಟಕವಾಡಿ, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಕಳೆದ ವರ್ಷ ಜೂನ್ 28ರಂದು ಮಗುವಿಗೆ ಜನ್ಮ ನೀಡಿದ್ದಾಳೆ.

ಆರಂಭದಲ್ಲಿ ಮದುವೆಗೆ ನಿರಾಕರಿಸಿದ್ದ ಕೃಷ್ಣ, ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ ತನಗೆ 21 ವರ್ಷ ತುಂಬಿಲ್ಲ ಎಂಬ ಕಾರಣ ನೀಡಿ, ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. 21 ವರ್ಷ ತುಂಬಿದ ಬಳಿಕವೂ ಕೃಷ್ಣ ಮದುವೆಗೆ ನಿರಾಕರಿಸಿ ‘ಮಗು ನನ್ನದಲ್ಲ’ ಎಂದು ವಾದಿಸಿದ್ದ. ಇದರಿಂದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಂಧನಕ್ಕೊಳಗಾಗಿದ್ದ ಕೃಷ್ಣ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಡಿಎನ್‌ಎಯಲ್ಲಿ ಸತ್ಯ ಬಹಿರಂಗ: ನ್ಯಾಯಾಲಯದ ಆದೇಶದಂತೆ ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಕೃಷ್ಣ ಜೆ. ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿದೆ. ಆದರೂ ಆರೋಪಿ ಮದುವೆಗೆ ಒಪ್ಪುತ್ತಿಲ್ಲ. ಬಿಜೆಪಿ ನಾಯಕರ ಸಂಧಾನ ಪ್ರಯತ್ನವೂ ವಿಫಲವಾಗಿದೆ.

ಹೈಕೋರ್ಟ್ ಹೇಳಿದ್ದೇನು? ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, “ಯುವತಿಗೆ ಆರೋಪಿಯಿಂದಲೇ ಮಗುವಾಗಿರುವುದರಿಂದ ಮದುವೆಯಾಗುವುದೇ ಉತ್ತಮ. ಯುವತಿ ಹಾಗೂ ಮಗುವನ್ನು ಅನಾಥವನ್ನಾಗಿಸುವುದು ಸರಿಯಲ್ಲ. ತಂದೆಯಾಗಿರುವುದರಿಂದ ಮಗುವಿನ ಆರೈಕೆ ಮಾಡುವುದು ಆರೋಪಿಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟಿದೆ.

“ಇಲ್ಲದಿದ್ದರೆ ಯುವತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಲು ಸಿದ್ಧರಿದ್ದೀರಾ?” ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಪ್ರಶ್ನಿಸಿ, ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.

ಆರೋಪಿ ಪರ ವಾದ: ಕೃಷ್ಣ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, “7 ವರ್ಷಗಳ ಹಿಂದೆ ಪ್ರೀತಿ ಇತ್ತು. ಕ್ರಿಮಿನಲ್ ಕೇಸ್‌ನಿಂದಾಗಿ ರಾಜಿಯಾಗಿಲ್ಲ. ರಾಜಕೀಯ ವಿರೋಧಿಗಳು ಆರೋಪಿಯ ತಂದೆಯ ತೇಜೋವಧೆ ಮಾಡಿದ್ದಾರೆ. ಕ್ರಿಮಿನಲ್ ಕೇಸ್‌ನಲ್ಲೂ ಆರೋಪಿಗಳನ್ನಾಗಿಸಿದ್ದಾರೆ” ಎಂದು ಹೇಳಿದ್ದಾರೆ.

ಪ್ರಕರಣ ರಾಜಕೀಯ ವಲಯ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.

Continue Reading

PRESS MEET

ಪುತ್ತೂರು ಜಾತ್ರೆ ಅಂಗಡಿ ಹರಾಜು: ಅವ್ಯವಹಾರದ ಆರೋಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

Published

on

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯು ಇದೀಗ ಪರ-ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸಂತೆ ವ್ಯಾಪಾರಸ್ಥರೊಬ್ಬರು ಆರೋಪಿಸಿದ್ದರೆ, ದೇವಸ್ಥಾನದ ಆಡಳಿತ ಮಂಡಳಿಯು ಈ ಆರೋಪಗಳನ್ನು ತಳ್ಳಿಹಾಕಿದ್ದು, ವ್ಯಾಪಾರಿಗಳ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ನಡೆದಿದೆ: ಮಹೇಶ್ ದಾಸ್ ಆರೋಪ

ಸಂತೆ ವ್ಯಾಪಾರಸ್ಥ ಮಹೇಶ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಗದ್ದೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದರೂ ಕೇವಲ 320 ಅಂಗಡಿಗಳನ್ನು ಮಾತ್ರ ಹರಾಜು ಮಾಡಲಾಗಿದೆ. ಉಳಿದ ಅಂಗಡಿಗಳನ್ನು ಹರಾಜು ಮಾಡದೆ ಅಕ್ರಮವಾಗಿ ಹಣ ಪಡೆಯಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಒಂದು ಸ್ಟಾಲ್‌ನಿಂದ ಕಸ ವಿಲೇವಾರಿ ಹೆಸರಿನಲ್ಲಿ 1,000 ರೂ.ನಂತೆ ಸುಮಾರು 3.20 ಲಕ್ಷ ರೂ. ವಸೂಲಿ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಕಾನೂನು ಇಲ್ಲಿ ಪಾಲನೆಯಾಗಿಲ್ಲ ಎಂದೂ ಅವರು ದೂರಿದ್ದಾರೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.

ಈಶ್ವರ ಭಟ್ ಪಂಜಿಗುಡ್ಡೆ ತೀಕ್ಷ್ಣ ಪ್ರತಿಕ್ರಿಯೆ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಅವರು ತಳ್ಳಿಹಾಕಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಯ ಪ್ರತಿ ಪೈಸೆಗೂ ಪಾರದರ್ಶಕವಾದ ಲೆಕ್ಕವಿದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿ ಮಾಡಿದವರು ಮಂಗಳಾದೇವಿಯಲ್ಲಿ, ವಿಟ್ಲದಲ್ಲಿ, ಕುದ್ರೋಳಿಯಲ್ಲಿ ಮತ್ತು ಪುತ್ತೂರಿನಲ್ಲೂ ಗಲಾಟೆ ಮಾಡಿದ್ದಾರೆ. ವ್ಯಾಪಾರಸ್ಥರ ಮದ್ಯೆ ಅವರಿಗೆ ಹೊಂದಾಣಿಕೆ ಇಲ್ಲದೆ ಅವರ ವೈಯುಕ್ತಿಕ ವಿಷಯವನ್ನು ದೇವಸ್ಥಾನಕ್ಕೆ ತರುವುದು ಸರಿಯಲ್ಲ.

ನಿಯಮ ಮೀರಿ ಅಂಗಡಿ ನೀಡಲಾಗಿಲ್ಲ: ಸ್ಪಷ್ಟನೆ

ಜಾತ್ರಾ ಗದ್ದೆಯ ಹರಾಜಿನಲ್ಲಿ ಒಬ್ಬರಿಗೆ ಕೇವಲ ಒಂದು ಅಂಗಡಿ ನೀಡಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ದೊಡ್ಡ ವ್ಯಾಪಾರಸ್ಥರಿಗೆ ಕೇವಲ 10×10ಅಳತೆಯ ಒಂದು ಸಣ್ಣ ಅಂಗಡಿಯಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಒಂದಕ್ಕಿಂತ ಹೆಚ್ಚು ಅಂಗಡಿಯನ್ನು ನೀಡಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ,” ಎಂದರು.

ಕಸ ವಿಲೇವಾರಿ ಮತ್ತು ಭಂಡಾರಕ್ಕೆ ಸೇರಿದ ಹಣ

ಅಂಗಡಿಗಳಿಂದ ಕಸ ವಿಲೇವಾರಿ ಹೆಸರಿನಲ್ಲಿ ತಲಾ 1,000 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಮೊತ್ತವನ್ನು ಪ್ರತಿ ದಿನದ ಸ್ವಚ್ಛತೆ ಮತ್ತು ಕಸ ವಿಲೇವಾರಿ ವಾಹನಗಳ ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 50,000 ರೂ. ಉಳಿತಾಯವಾಗಿದ್ದು, ಅದು ನೇರವಾಗಿ ದೇವಸ್ಥಾನದ ಭಂಡಾರಕ್ಕೆ ಸೇರಿದೆ. ಈ ಹಣ ಈಶ್ವರ ಭಟ್ ಅವರ ವೈಯಕ್ತಿಕ ಕಿಸೆಗೆ ಹೋಗುವುದಿಲ್ಲ, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಪ್ರಮಾಣದ ಆದಾಯ ಸಂಗ್ರಹ

ದೇವಸ್ಥಾನದ ಆದಾಯದ ಕುರಿತು ಅಂಕಿಅಂಶಗಳನ್ನು ನೀಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಗಣನೀಯ ಪ್ರಗತಿಯಾಗಿದೆ ಎಂದರು:

ಅಮ್ಯೂಸ್‌ಮೆಂಟ್ ಪಾರ್ಕ್: ಈ ಹಿಂದೆ 50 ಲಕ್ಷ ರೂ.ಗೆ ಹರಾಜಾಗಿದ್ದರೂ ಬಿಡ್‌ದಾರರು ಪಾವತಿಸಿದ್ದು ಕೇವಲ 35 ಲಕ್ಷ ರೂ. ಮಾತ್ರ. ಉಳಿದ ಹಣಕ್ಕಾಗಿ ದೇವಸ್ಥಾನದಿಂದ ಕೇಸ್ ದಾಖಲಿಸಲಾಗಿದೆ.

ಪ್ರಸಕ್ತ ಸಾಲಿನ ಆದಾಯ: ಈ ಬಾರಿ ಕೇವಲ 35 ಲಕ್ಷ ರೂ.ನಿಂದ ಬಿಡ್ಡಿಂಗ್ ಆರಂಭಿಸಿ, ದಾಖಲೆಯ 66 ಲಕ್ಷ ರೂ. ಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಒಟ್ಟು ಜಮೆ: ಈ ಬಾರಿ ಜಾಯಿಂಟ್ ವೀಲ್‌ನಿಂದ 66 ಲಕ್ಷ ರೂ. ಹಾಗೂ ವಿವಿಧ ಸ್ಟಾಲ್‌ಗಳಿಂದ 69.28 ಲಕ್ಷ ರೂ. ಸೇರಿ ಒಟ್ಟು 1.36 ಕೋಟಿ ರೂ. ಹಣ ದೇವಸ್ಥಾನಕ್ಕೆ ಜಮೆಯಾಗಿದೆ.

ಪಾರದರ್ಶಕ ಹರಾಜು ಪ್ರಕ್ರಿಯೆ

ಲೈಟಿಂಗ್ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಅವರು, ಊರಿನವರಿಗೆ ನೀಡಬೇಕೆಂಬ ಒತ್ತಾಯವಿತ್ತಾದರೂ, ಸ್ಥಳೀಯರು 6 ಲಕ್ಷ ರೂ.ಗಳಿಗೆ ಕೇಳಿದ್ದರು. ಆದರೆ ನಾವು ಅದಕ್ಕಿಂತ ಕಡಿಮೆ ದರಕ್ಕೆ ನೀಡುವ ಮೂಲಕ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ಹರಾಜಿನ ಹೊರತಾಗಿ ಬಂದವರಿಂದ ಪಡೆದ ಪ್ರತಿಯೊಂದು ಪೈಸೆಗೂ ದೇವಸ್ಥಾನದ ವತಿಯಿಂದಲೇ ರಶೀದಿ ನೀಡಲಾಗಿದೆ ಮತ್ತು ಪ್ರತಿಯೊಬ್ಬರ ಹೆಸರು ಸಮೇತ ಲೆಕ್ಕವಿದೆ ಎಂದು ಅವರು ವಿವರಿಸಿದರು.

“ಲಕ್ಷಾಂತರ ಭಕ್ತರು ಜಾತ್ರೆಯ ಯಶಸ್ಸನ್ನು ಶ್ಲಾಘಿಸುತ್ತಿರುವಾಗ, ಕೇವಲ ಐದಾರು ಮಂದಿ ಟೀಕೆ ಮಾಡುತ್ತಿರುವುದು ವಿಷಾದನೀಯ. ಇಂತಹ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಈಶ್ವರ ಭಟ್ ಪಂಜಿಗುಡ್ಡೆಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Continue Reading

Trending

Copyright © 2025 Deevatige

error: Content is protected !!