manglore police
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ; ಮಂಗಳೂರಿನಲ್ಲಿ ಡಿಜಿಪಿ ಡಾ. ಎಂ.ಎ. ಸಲೀಂ ಹೇಳಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಉತ್ತಮವಾಗಿದೆ. ಇದೇ ರೀತಿಯ ಶಾಂತಿ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿದ ಅವರು, ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಜಿಲ್ಲೆಯ ಪೊಲೀಸ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡರು:
ಶಾಂತಿ ಕಾಪಾಡಲು ಸೂಚನೆ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ಅಹಿತಕರ ಘಟನೆಗಳಿಲ್ಲದೆ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿದೆ. ಇದನ್ನು ಹೀಗೆಯೇ ಮುಂದುವರಿಸಿಕೊಂಡು ಹೋಗುವಂತೆ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ವರ್ಗಾವಣೆ ಮನವಿಗಳ ಪರಿಶೀಲನೆ: ಉತ್ತರ ಕರ್ನಾಟಕ ಭಾಗದ ಅನೇಕ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ವರ್ಗಾವಣೆ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಹಂತ ಹಂತವಾಗಿ ಅವರ ವರ್ಗಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಭರವಸೆ ನೀಡಿದರು.
ಆರೋಪದ ಕುರಿತ ಪ್ರಶ್ನೆಗೆ ಡಿಜಿಪಿ ಮೌನ: ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಡಿ.ಎ.ಆರ್.ನ ಎಸ್ಪಿ ಎನ್.ಎಸ್. ಕಾಶಿ ಅವರು ಸಲ್ಲಿಸಿದ್ದಾರೆ ಎನ್ನಲಾದ ದೂರಿನ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದರು. ಆದರೆ, ಈ ವಿವಾದಾತ್ಮಕ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಮೌನವಾಗಿಯೇ ಸ್ಥಳದಿಂದ ನಿರ್ಗಮಿಸಿದರು.

manglore police
ಸುಳ್ಳು ಸುದ್ದಿಗಳ ವಿರುದ್ಧ ಪೊಲೀಸ್ ಕಮೀಷನರ್ ಬೇಸರ; ಕಾನ್ಸ್ಟೇಬಲ್ಗಳ ವರ್ಗಾವಣೆ ವಿಳಂಬದ ಬಗ್ಗೆ ಅಂಕಿಅಂಶಗಳ ಸಮೇತ ಸ್ಪಷ್ಟನೆ
ಮಂಗಳೂರು: ಇತ್ತೀಚೆಗೆ ವೆಬ್ ಮೀಡಿಯಾವೊಂದರಲ್ಲಿ ಪ್ರಕಟವಾದ ಕಾನ್ಸ್ಟೇಬಲ್ಗಳ ವರ್ಗಾವಣೆ ಕುರಿತಾದ ವರದಿಗೆ ಮಂಗಳೂರು ಪೊಲೀಸ್ ಕಮೀಷನರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವರದಿಯಲ್ಲಿನ ಕೆಲವು ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡದಂತೆ ಅವರು ಮನವಿ ಮಾಡಿದ್ದಾರೆ.
ವರ್ಗಾವಣೆ ವಿಳಂಬಕ್ಕೆ ತಾಂತ್ರಿಕ ಕಾರಣಗಳೇನು?
ಸರ್ಕಾರದ ನಿಯಮಾವಳಿಗಳ ಪ್ರಕಾರ, ಒಂದು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಪ್ರಮಾಣವು ನಿಗದಿತ ಮಿತಿಯನ್ನು ಮೀರಿದರೆ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಕಮೀಷನರ್ ಅವರು ನೀಡಿರುವ ಅಂಕಿಅಂಶಗಳು ಹೀಗಿವೆ:
ಒಟ್ಟು ಅನುಮೋದಿತ ಹುದ್ದೆಗಳು (CPC): 801
ಪ್ರಸ್ತುತ ಇರುವ ಸಿಬ್ಬಂದಿ: 685
ಖಾಲಿ ಇರುವ ಹುದ್ದೆಗಳು: 116 (ಶೇ. 14.4)
ಒಂದು ವೇಳೆ ವರ್ಗಾವಣೆಗೊಂಡಿರುವ 63 ಕಾನ್ಸ್ಟೇಬಲ್ಗಳನ್ನು ಈಗಲೇ ಬಿಡುಗಡೆ ಮಾಡಿದರೆ, ಖಾಲಿ ಹುದ್ದೆಗಳ ಪ್ರಮಾಣವು ಶೇ. 22.1ಕ್ಕೆ ಏರುತ್ತದೆ. ನಿಯಮದ ಪ್ರಕಾರ ಖಾಲಿ ಹುದ್ದೆಗಳ ಪ್ರಮಾಣ ಶೇ. 15ನ್ನು ಮೀರುವಂತಿಲ್ಲ. ಇದೇ ಕಾರಣಕ್ಕೆ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಯಾವುದೇ ಹುದ್ದೆಗಳ ಕೊರತೆ ಇಲ್ಲದ ಕಾರಣ ವರ್ಗಾವಣೆಗೊಂಡ ಎಲ್ಲಾ APC (Armed Police Constables) ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.
ರಜೆ ನಿರಾಕರಣೆಯ ಆರೋಪಕ್ಕೆ ಉತ್ತರ
ಲೇಖನದಲ್ಲಿ ಉಲ್ಲೇಖಿಸಲಾದ “ರಜೆ ನಿರಾಕರಣೆ” ವಿಚಾರವನ್ನು ಕಮೀಷನರ್ ಕಟುವಾಗಿ ಅಲ್ಲಗಳೆದಿದ್ದಾರೆ. “ನನ್ನ ಸಂಪೂರ್ಣ ಸೇವಾ ಅವಧಿಯಲ್ಲಿ ಯಾವುದೇ ಒಬ್ಬ ಕಾನ್ಸ್ಟೇಬಲ್ನ ಇ.ಎಲ್ (Earned Leave) ಅರ್ಜಿಯನ್ನು ನಾನು ತಿರಸ್ಕರಿಸಿಲ್ಲ. ವರದಿಗಾರರು ಜವಾಬ್ದಾರಿಯುತವಾಗಿ ಸತ್ಯವನ್ನು ಬರೆಯಬೇಕು” ಎಂದು ಅವರು ತಿಳಿಸಿದ್ದಾರೆ.
ಸಿಬ್ಬಂದಿ ಕ್ಷೇಮ ಮತ್ತು ನಗರದ ಭದ್ರತೆ
ಮಂಗಳೂರಿನಂತಹ ವಿದ್ಯಾವಂತ ಮತ್ತು ಜನನಿಬಿಡ ನಗರದಲ್ಲಿ ಪೊಲೀಸರ ಮೇಲೆ ನಿರೀಕ್ಷೆಗಳು ಹೆಚ್ಚು. ಟ್ರಾಫಿಕ್ ನಿರ್ವಹಣೆ, ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ತಡೆಗಟ್ಟಲು ಸಾಕಷ್ಟು ಸಿಬ್ಬಂದಿಯ ಅಗತ್ಯವಿದೆ.
ಕಾನ್ಸ್ಟೇಬಲ್ಗಳ ನೋವು ನಮಗೆ ಇತರರಿಗಿಂತ ಚೆನ್ನಾಗಿ ಅರ್ಥವಾಗುತ್ತದೆ. ಅವರು ತಮ್ಮ ವರ್ಗಾವಣೆಗಾಗಿ ಬಡ್ತಿಯನ್ನೇ ತ್ಯಜಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಲ್ಯಾಣ ಮತ್ತು ನಗರದ ಭದ್ರತೆ ಎರಡನ್ನೂ ಸಮತೋಲನ ಮಾಡುವುದು ನಮ್ಮ ಜವಾಬ್ದಾರಿ,” ಎಂದು ಕಮೀಷನರ್ ಹೇಳಿದ್ದಾರೆ.
ಏಕಪಕ್ಷೀಯ ವರದಿಗಳ ವಿರುದ್ಧ ಅಸಮಾಧಾನ
ಪೊಲೀಸ್ ಸಿಬ್ಬಂದಿಯ ಮೇಲೆ ನಡೆಯುವ ದಾಳಿಗಳ ಬಗ್ಗೆ ಮೌನ ವಹಿಸಿ, ಇಂತಹ ಆಡಳಿತಾತ್ಮಕ ವಿಷಯಗಳನ್ನು ತಪ್ಪಾಗಿ ಬಿಂಬಿಸುವ ಮನಸ್ಥಿತಿಯ ಬಗ್ಗೆ ಕಮೀಷನರ್ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಟ್ರಾಫಿಕ್ ಪೊಲೀಸರ ಮೇಲೆ ನಡೆದ ದಾಳಿ ಅಥವಾ ರೌಡಿ ಶೀಟರ್ಗಳಿಂದ ಎಎಸ್ಐ ಮೇಲೆ ನಡೆದ ಹಲ್ಲೆಯಂತಹ ಪ್ರಕರಣಗಳ ಸಂದರ್ಭದಲ್ಲಿಯೂ ಮಾಧ್ಯಮಗಳು ಇದೇ ರೀತಿಯ ಆಸಕ್ತಿ ತೋರಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
crime
ಐಪಿಎಸ್ ಅಧಿಕಾರಿಗಳ ವಿರುದ್ಧ ಕಿರುಕುಳದ ಗಂಭೀರ ಆರೋಪ: ಸ್ಫೋಟಕ ಮಾಹಿತಿ ಹೊರಹಾಕಲು ಅನುಮತಿ ಕೋರಿದ ಎಸ್ಪಿ
ಕರ್ನಾಟಕ ಪೊಲೀಸ್ ಇಲಾಖೆಯೊಳಗಿನ ಆಂತರಿಕ ಅಸಮಾಧಾನ ಈಗ ಬಹಿರಂಗ ರೂಪ ಪಡೆದಿದೆ. ಹೊರರಾಜ್ಯದ ಕೆಲವು ಐಪಿಎಸ್ ಅಧಿಕಾರಿಗಳು ಸ್ಥಳೀಯ ಕನ್ನಡದ ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ತಾರತಮ್ಯ ಎಸಗುತ್ತಿದ್ದಾರೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಪೊಲೀಸ್ ಅಧೀಕ್ಷಕ ಎಸ್.ಎಸ್. ಕಾಶಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಪತ್ರ ಬರೆದಿರುವ ಅವರು, ಇಲಾಖೆಯ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಕಿರುಕುಳದ ಕುರಿತು ಸಾರ್ವಜನಿಕವಾಗಿ ಸ್ಫೋಟಕ ಮಾಹಿತಿಗಳನ್ನು ಹೊರಹಾಕಲು ತಮಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ.

ಪತ್ರದಲ್ಲಿರುವ ಪ್ರಮುಖ ಅಂಶಗಳು:
ತಾರತಮ್ಯದ ಆರೋಪ: ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಹೊರರಾಜ್ಯದ ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ಬಲದಿಂದ ಕೆಳಹಂತದ ಸಿಬ್ಬಂದಿ ಹಾಗೂ ಸ್ಥಳೀಯ ಕನ್ನಡಿಗ ಅಧಿಕಾರಿಗಳ ಮೇಲೆ ದರ್ಪ ಮತ್ತು ತಾರತಮ್ಯ ತೋರುತ್ತಿದ್ದಾರೆ.
ವ್ಯವಸ್ಥಿತ ಕಿರುಕುಳ: ಮೂಲತಃ ಕನ್ನಡಿಗರಾಗಿರುವ ಅಧಿಕಾರಿಗಳನ್ನು ತುಳಿಯುವ ಉದ್ದೇಶದಿಂದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಎಸ್ಪಿ ಕಾಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಿರ್ದಿಷ್ಟ ಅಧಿಕಾರಿಗಳ ವಿರುದ್ಧ ದೂರು: ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಕೆಲವು ಅಧಿಕಾರಿಗಳ ಕಾರ್ಯವೈಖರಿ ಮತ್ತು ಅವರು ಅಧೀನ ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಪತ್ರದಲ್ಲಿ ನೇರವಾಗಿ ಪ್ರಸ್ತಾಪಿಸಲಾಗಿದೆ.
ಅವಕಾಶಕ್ಕಾಗಿ ಮನವಿ: ಈ ದೌರ್ಜನ್ಯಗಳ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ವಿವರಗಳನ್ನು ನೀಡಲು ಏಪ್ರಿಲ್ 18 ರಿಂದ ಏಪ್ರಿಲ್ 29ರ ನಡುವೆ 30 ನಿಮಿಷಗಳ ಕಾಲಾವಕಾಶ ನೀಡಬೇಕೆಂದು ಅವರು ವಿನಂತಿಸಿದ್ದಾರೆ.
ಈಗಾಗಲೇ ಈ ವಿಚಾರವಾಗಿ ಮೌಖಿಕವಾಗಿ ಮತ್ತು ಲಿಖಿತವಾಗಿ ಹಲವು ಬಾರಿ ದೂರು ನೀಡಿದ್ದರೂ ಸಹ ಶೇಕಡಾ 80 ರಷ್ಟು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕಾಶಿ ಅವರ ಈ ಪತ್ರವು ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧವೇ ಎಸ್ಪಿ ದರ್ಜೆಯ ಅಧಿಕಾರಿಯೊಬ್ಬರು ಬಹಿರಂಗವಾಗಿ ತಿರುಗಿಬಿದ್ದಿರುವುದು ಇಲಾಖೆಯಲ್ಲಿನ ಆಂತರಿಕ ಶಿಸ್ತಿನ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ.
ಮಂಗಳೂರು ಕಮೀಷನರ್ ಕರ್ಮ ಕಾಂಡ ಬಯಲು ಮಾಡುತ್ತೇನೆ ಎಂಬ ಮಾತಿನ ಹಿಂದೆ ಖಡಕ್ ಅಧಿಕಾರಿಯವರನ್ನು ಕರಾವಳಿಯಿಂದ ಎತ್ತಂಗಡಿ ಮಾಡುವ ಸಂಚು ಇರಬಹುದೇನೋ ಎಂಬ ಸಂಶಯದ ಸುಳಿಗಳು ಕಾಣುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ಕಮಿಷನರೇಟ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದ ಆ ಮೂಲಕ ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೆಲವೇ ತಿಂಗಳುಗಳಲ್ಲಿ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರ ಕಾರ್ಯ ವೈಖರಿ ಕೆಲವರಿಗೆ ನುಂಗಲಾರದ ತುತ್ತಾಗಿ ಈ ಸಂಚು ನಡೆಯುತ್ತಿರಬಹುದೇ ಎಂಬುವುದು ಸಾರ್ವಜನಿಕ ಪ್ರಶ್ನೆ.

crime
ಮಂಗಳೂರು: 46 ಲಕ್ಷ ಮೌಲ್ಯದ MDMA ವಶ; ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳ ಬಂಧನ
ಮಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಕಂಕನಾಡಿ ನಗರ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 46.5 ಲಕ್ಷ ರೂಪಾಯಿ ಮೌಲ್ಯದ MDMA ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ದಿನಾಂಕ 19-04-2026ರಂದು ಮಂಗಳೂರಿನ ಜೆಪ್ಪಿನ ಮೊಗರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ MDMA ಮಾರಾಟ ಮಾಡಲು ಪೆಡ್ಲರ್ಗಳು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಬೆನ್ನತ್ತಿದ ಕಂಕನಾಡಿ ನಗರ ಪೊಲೀಸರು, ಕೆಎ 70 ಕೆ 3333 ನಂಬರ್ನ ಬಜಾಜ್ ಫ್ರೀಡಂ ಬೈಕ್ ಅನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 465.8 ಗ್ರಾಂ ತೂಕದ MDMA ಪತ್ತೆಯಾಗಿದೆ. ಕೂಡಲೇ ಪೊಲೀಸರು ಪೆರ್ಮಾನ್ನೂರು ನಿವಾಸಿಗಳಾದ 40 ವರ್ಷದ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ ಹಾಗೂ 37 ವರ್ಷದ ನಜರತ್ ಅಲಿ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತ ಪರ್ವೇಜ್ ಒಬ್ಬ ರೂಢಿಗತ ಡ್ರಗ್ ಪೆಡ್ಲರ್ ಆಗಿದ್ದು, ಈತನ ಮೇಲೆ ಈಗಾಗಲೇ ಮಂಗಳೂರಿನ ಪಾಂಡೇಶ್ವರ, ವಾಮಂಜೂರು, ಬಂದರು ಠಾಣೆಗಳು ಸೇರಿದಂತೆ ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟದ ಪ್ರಕರಣಗಳು ದಾಖಲಾಗಿವೆ. ಈತ ಹೊರ ಜಿಲ್ಲೆಗಳಿಂದ ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ತಂದು ಮಂಗಳೂರಿನ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ. ಈತನ ಕೃತ್ಯಕ್ಕೆ ನಜರತ್ ಅಲಿ ಸಾಥ್ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 46,50,000/- ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾರೆ. ಈ ಜಾಲದ ಹಿಂದೆ ಇರುವ ಇತರ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

-
crime3 weeks agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime3 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
