Connect with us

Bantawala

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಸಾಮೂಹಿಕ ಧರಣಿ; 23 ವರ್ಷ ಕಳೆದರೂ ಮುಚ್ಚದ ಬ್ರಹ್ಮರಕೂಟ್ಲು ಟೋಲ್ ಗೇಟ್ : ನಿಯಮ ಬಾಹಿರ ಸುಂಕ ಸಂಗ್ರಹದ ವಿರುದ್ಧ ಜನಾಗ್ರಹ

Published

on

ಬಂಟ್ವಾಳ: ನಿಯಮ ಮೀರಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೇ ಮುಚ್ಚಬೇಕೆಂದು ಆಗ್ರಹಿಸಿ ‘ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ವತಿಯಿಂದ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3, ಮಂಗಳವಾರದಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೃಹತ್ ಪ್ರತಿಭಟನೆ ನಡೆಯಿತು.

ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಿಗ್ಗೆ 9-30ಕ್ಕೆ ಆರಂಭವಾದ ಪ್ರತಿಭಟನಾ ಸಭೆ ಮಧ್ಯಾಹ್ನ 12:30 ರವರೆಗೆ ನಡೆಯಿತು. ಸಾಮೂಹಿಕ ಧರಣಿಗೆ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಹೋರಾಟಗಾರರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು.
ಹೋರಾಟದ ನೇತೃತ್ವವನ್ನು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷರಾದ ಬಿ. ರಮಾನಾಥ ರೈ ಮತ್ತು ಟೋಲ್ ವಿರೋಧಿ ಹೋರಾಟಗಾರರಾದ ಮುನೀರ್ ಕಾಟಿಪಳ್ಳ ವಹಿಸಿದ್ದರು. ಸಂಚಾಲಕರಾದ ಮೋಹನ್ ಶೆಟ್ಟಿ ಮತ್ತು ಶೇಖರ್ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಮುಖಂಡರಾದ ಎಂ.ಜಿ.ಹೆಗಡೆ, ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ರಾಮಣ್ಣ ವಿಟ್ಲ, ಶೇಖರ್ ಲಾಯಿಲ, ಸುಹೈಲ್ ಖಂದಕ್, ಪದ್ಮರಾಜ್ ಪೂಜಾರಿ ಸೇರಿದಂತೆ ಹಲವಾರು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

“ಟೋಲ್ ಗೇಟ್ ತೆರವುಗೊಳ್ಳುವವರೆಗೂ ನಾವು ವಿಶ್ರಮಿಸುವುದಿಲ್ಲ. ಇದು ನಮ್ಮ ಮೊದಲ ಹಂತದ ಹೋರಾಟವಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರಾದ ಬಿ.ರಮಾನಾಥ ರೈ ಹೇಳಿದರು.

ಸುರತ್ಕಲ್ ಟೋಲ್ ಗೇಟ್ ತೆರವಿಗೆ ಪ್ರಮುಖ ಕಾರಣರಾದ ಹುಟ್ಟು ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಹೆದ್ದಾರಿ ಇಲಾಖೆಯ ನಿಯಮ-ನಿಬಂಧನೆಗಳನ್ನು ಗಾಳಿಗೆ ತೂರಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಬ್ರಹ್ಮರಕೂಟ್ಲು ಟೋಲ್ ವಾಹನ ಸವಾರರ ಸುಲಿಗೆ ಕೇಂದ್ರವಾಗಿದೆ. ಪ್ರತೀ ಅರುವತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಟೋಲ್ ಇರಬೇಕು, ಶೌಚಾಲಯ, ಅಂಬ್ಯುಲೆನ್ಸ್, ಸುಸಜ್ಜಿತ ಸರ್ವಿಸ್ ರಸ್ತೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಇರಬೇಕೆಂಬ ಹೆದ್ದಾರಿ ಇಲಾಖೆಯ ನಿಯಮಗಳಿದ್ದರೂ ಬ್ರಹ್ಮರಕೂಟ್ಲು ಟೋಲ್ ಮಾತ್ರ ಇದ್ಯಾವುದನ್ನೂ ಪಾಲಿಸಿಲ್ಲ. ಅದೂ ಅಲ್ಲದೇ ಉಪ್ಪಿನಂಗಡಿ ವಳಾಲು, ಬಂಟ್ವಾಳ ಪಣಕಜೆ, ಗಂಜಿಮಠಗಳಲ್ಲಿ ಹೊಸ ಟೋಲ್ ಗೇಟ್ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ. ಇಂದಿನ ಪ್ರತಿಭಟನೆಯು ಪ್ರಥಮ ಹಂತದ ಪ್ರತಿಭಟನೆಯಾಗಿದ್ದು ತಕ್ಷವೇ ಟೋಲ್ ಗೇಟ್ ತೆರವು ಮಾಡದಿದ್ದಲ್ಲಿ ಬ್ರಹ್ಮರಕೂಟ್ಲು ಟೋಲ್ ಇಲ್ಲೇ ಪಕ್ಕದ ನೇತ್ರಾವತಿ ನದಿ ಸೇರುವುದು ಪಕ್ಕಾ ಎಂಬುದನ್ನು ಅರಿತುಕೊಳ್ಳಲಿ ಎಂದು ಮುಂದಿನ ಹೋರಾಟದ ತೀವ್ರತೆಯನ್ನು ಪರೋಕ್ಷವಾಗಿ ಹೇಳಿದರು. ಸಾವಿರಾರು ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆಯ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಎಚ್ಚರಿಸಿ, ಕಳೆದ 23 ವರ್ಷಗಳಿಂದ ನಿರಂತರವಾಗಿ ಸುಂಕ ಸಂಗ್ರಹಿಸುತ್ತಿರುವ ಈ ಕೇಂದ್ರವು ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

B.O.T ಮಾದರಿಯಲ್ಲಿ ನಿರ್ಮಾಣವಾದ ಈ ಸಾಮಾನ್ಯ ಚತುಷ್ಪಥ ರಸ್ತೆಯಲ್ಲಿ ಕಳೆದ ಎರಡು ದಶಕಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. “ಹೂಡಿದ ಬಂಡವಾಳ ಮರು ಸಂಗ್ರಹವಾಗಿಲ್ಲ” ಎಂಬ ಪ್ರಾಧಿಕಾರದ ವಾದವು ಜನಸಾಮಾನ್ಯರ ದನಿಯನ್ನು ಹತ್ತಿಕ್ಕುವ ತಂತ್ರವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಎರಡು ಟೋಲ್ ಗೇಟ್ ನಡುವೆ ಕನಿಷ್ಠ 60 ಕಿ.ಮೀ ಅಂತರವಿರಬೇಕು. ಆದರೆ, ಇಲ್ಲಿ ಕೇವಲ 32 ಕಿ.ಮೀ ದೂರದಲ್ಲಿ ತಲಪಾಡಿ ಮತ್ತು 44 ಕಿ.ಮೀ ದೂರದಲ್ಲಿ ಹೆಜಮಾಡಿ ಟೋಲ್ ಗೇಟ್‌ಗಳು ಕಾರ್ಯಾಚರಿಸುತ್ತಿವೆ. ಇದು ನೇರ ಕಾನೂನು ಉಲ್ಲಂಘನೆಯಾಗಿದೆ. ಈಗಾಗಲೇ ಜಿಲ್ಲೆಯ ಸುತ್ತಮುತ್ತ ಉಪ್ಪಿನಂಗಡಿಯ ವಳಾಲು (31 ಕಿ.ಮೀ), ಪಣಕಜೆ (28 ಕಿ.ಮೀ) ಮತ್ತು ಗಂಜಿಮಠ (32 ಕಿ.ಮೀ) ಗಳಲ್ಲಿ ಹೊಸ ಟೋಲ್ ಕೇಂದ್ರಗಳು ನಿರ್ಮಾಣವಾಗುತ್ತಿವೆ. ಇವೆಲ್ಲವೂ ಕಾರ್ಯಾರಂಭ ಮಾಡಿದರೆ ದಕ್ಷಿಣ ಕನ್ನಡದ ಪ್ರಯಾಣಿಕರಿಗೆ ಹೆದ್ದಾರಿ ಸಂಚಾರವೇ ಶಾಪವಾಗಲಿದೆ. ಈ ರಸ್ತೆಯಲ್ಲಿ ಸರಿಯಾದ ಸರ್ವೀಸ್ ರಸ್ತೆಗಳಿಲ್ಲ, ಯಾವುದೇ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ಸೌಲಭ್ಯಗಳಿಲ್ಲ. ಹೀಗಿದ್ದರೂ ದುಬಾರಿ ಸುಂಕ ವಸೂಲಿ ಮಾಡುತ್ತಿರುವುದು ನ್ಯಾಯವಲ್ಲ.

“ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೇಂದ್ರ ಭೂಸಾರಿಗೆ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ” ಎಂದು ಹೋರಾಟದ ಸಂಚಾಲಕರು ತಿಳಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದ್ದು, ನ್ಯಾಯಯುತ ತೀರ್ಮಾನಕ್ಕಾಗಿ ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

ಮನವಿಯ ಯಥಾ ಪ್ರತಿ..

ರಿಗೆ,
ಯೋಜನಾ ನಿರ್ದೇಶಕರು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
ಮಂಗಳೂರು

ವಿಷಯ : ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ಕುರಿತು.

ನಂತೂರು – ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮರಕೂಟ್ಲು ಬಳಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಮುಚ್ಚಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. B.O.T ಮಾದರಿಯಲ್ಲಿ ನಿರ್ಮಾಣಗೊಂಡಿರುವ ಬಿ ಸಿ ರೋಡ್ ನಂತೂರು ಹೆದ್ದಾರಿಯಲ್ಲಿ 23 ವರ್ಷಗಳ ಕಾಲ ನಿರಂತರ ಸುಂಕ ಸಂಗ್ರಹಿಸಿದ ತರುವಾಯವೂ ಟೋಲ್ ಗೇಟ್ ಮುಚ್ಚದಿರುವುದು ಒಪ್ಪಲು ಸಾಧ್ಯವಿಲ್ಲದ ಸಂಗತಿ. ಯಾವುದೇ ಬೈಪಾಸ್, ಮೇಲ್ಸೇತುವೆ, ಅಂಡರ್ ಪಾಸ್ ಗಳಿಲ್ಲದ, ಸರಿಯಾದ ಸರ್ವೀಸ್ ರಸ್ತೆಗಳನ್ನು ಹೊಂದಿರದ, ಗುಣಮಟ್ಟದ ನಿರ್ವಹಣೆ ಇಲ್ಲದ ನಾಲ್ಕು ಪಥಗಳ ಸಾಮಾನ್ಯ ರಸ್ತೆಗೆ 23 ವರ್ಷಗಳಿಗೂ ದೀರ್ಘ ಕಾಲ ಟೋಲ್ ಸಂಗ್ರಹಿಸಿಯೂ “ಹೂಡಿದ ಹಣ ಮರು ಸಂಗ್ರಹ ಆಗಿಲ್ಲ” ಎಂದರೆ ನಂಬಲು ಸಾಧ್ಯವಿಲ್ಲ.

ಅದಲ್ಲದೆ, ಬ್ರಹ್ಮರಕೂಟ್ಲುಟೋಲ್ ಗೇಟ್ ಗೆ 32 ಕಿ ಮೀ ದೂರದ ತಲಪಾಡಿ, 44 ಕಿ.ಮೀ ದೂರದ ಹೆಜಮಾಡಿಯಲ್ಲಿ ಎಳೆಂಟು ವರ್ಷಗಳ ಈಚೆಗೆ ಹೊಸ ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿವೆ. ಇದು ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರವಾದ 60 ಕಿ ಮೀ ನಿಯಮದ ನೇರ ಉಲ್ಲಂಘನೆ ಆಗಿದೆ. ಇಷ್ಟಲ್ಲದೆ, ಈಗ ಬ್ರಹ್ಮರಕೂಟ್ಟು ಟೋಲ್ ಗೇಟ್ ನಿಂದ ಬೆಂಗಳೂರು ಕಡೆಗೆ 31 ಕಿ ಮೀ ದೂರದ ಉಪ್ಪಿನಂಗಡಿಯ ವಳಾಲು ಎಂಬಲ್ಲಿ ಹಾಗೂ ಚಿಕ್ಕಮಗಳೂರು ಕಡೆಗಿನ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ 28 ಕಿ ಮೀ ದೂರದಲ್ಲಿ, ಸಾಣೂರು ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಗಂಜಿಮಠ ಎಂಬಲ್ಲಿ 32 ಕೀ ಮೀ ದೂರದಲ್ಲಿ ಹೀಗೆ ಹೊಸದಾಗಿ ಮೂರು ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಹಂತದಲ್ಲಿದೆ. ಇದೆಲ್ಲವೂ ಅಂತರದ ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲದೆ, ಈ ಭಾಗದಲ್ಲಿ ಹೆದ್ದಾರಿ ಪ್ರಯಾಣವೆ ತೀರಾ ದುಬಾರಿಯಾಗಿ ಅಸಹನೀಯ ಸಂದರ್ಭ ಸೃಷ್ಟಿಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ.

ಅಂತರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹಲವಾರು ಟೋಲ್ ಗೇಟ್ ಗಳನ್ನು ಸ್ಥಾಪಿಸುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ತೀವ್ರ ಅತೃಪ್ತಿ, ಆಕ್ಷೇಪಗಳಿಗೆ ಕಾರಣವಾಗುತ್ತಿದೆ ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪುನ‌ರ್ ಪರಿಶೀಲನೆ ನಡೆಸಬೇಕು. ನಿಯಮಗಳನ್ನು ನ್ಯಾಯಯುತವಾಗಿ ಅನುಷ್ಠಾನಗೊಳಿಸಬೇಕು.

ಬ್ರಹ್ಮರಕೂಟ್ಲುಟೋಲ್ ಗೇಟ್ ನಲ್ಲಿ 23 ವರ್ಷಗಳ ದೀರ್ಘ ಅವರಿಗೆ ಸುಂಕ ಸಂಗ್ರಹ ನಡೆಸಲಾಗಿರುವುವುದು, ತೀವ್ರ ವಾಹನ ದಟ್ಟಣೆಯ ಈ ರಸ್ತೆಯಲ್ಲಿ ಅಗಾಧ ಮೊತ್ತದ ಹಣ ಮರು ಸಂಗ್ರಹ ಆಗಿರುವುದು ಸೇರಿದಂತೆ ಯಾವುದೇ ಆಯಾಮದಲ್ಲಿ ನೋಡಿದರೂ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವುಗೊಳಿಸುವುದು ನ್ಯಾಯಯುತವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೆ ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯನ್ನು ಸಾಮೂಹಿಕ ಧರಣಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿನಂತಿಸುತ್ತಿದ್ದೇವೆ. ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ತೀರ್ಮಾನಿನದಿದ್ದಲ್ಲಿ ಮುಂದಕ್ಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಇತೀ ತಮ್ಮ ವಿಶ್ವಾಸಿಗಳು
ಸಂಚಾಲಕರು

ಯಥಾ ಪ್ರತಿ

  1. ಶ್ರೀ ನಿತಿನ್ ಗಡ್ಕರಿ, ಭೂ ಸಾರಿಗೆ ಸಚಿವರು. ನವದೆಹಲಿ
  2. ಶ್ರೀ ದಿನೇಶ್ ಗುಂಡೂರಾವ್, ಮಾನ್ಯ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆ
  3. ಶ್ರೀ ಬ್ರಿಜೇಶ್ ಚೌಟ, ಮಾನ್ಯ ಸಂಸದರು, ದಕ್ಷಿಣ ಕನ್ನಡ, ಮಂಗಳೂರು.
  4. ಮಾನ್ಯ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.
  5. ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು ( ಐ ಜಿ ಪಿ) ಪಶ್ಚಿಮ ವಲಯ, ಮಂಗಳೂರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ವಿಟ್ಲ ಪೊಲೀಸರ ಬಲೆಗೆ ಬಿದ್ದ ಫರ್ಟಿಲೈಸರ್ ಮಾಫಿಯಾ; ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ತಂಡದಿಂದ ದಾಳಿ;ವಿಟ್ಲ ಪೊಲೀಸರ ಭರ್ಜರಿ ಕಾರ್ಯಾಚರಣೆ; ಅಕ್ರಮ ದಂಧೆ ಜಾಲ ಬೇಧಿಸಿದ ಖಾಕಿ ಪಡೆ!

Published

on

Breaking News

ವಿಟ್ಲ: ರೈತರಿಗೆ ಕೇಂದ್ರ ಸರ್ಕಾರವು ರಿಯಾಯಿತಿ (ಸಬ್ಸಿಡಿ) ದರದಲ್ಲಿ ನೀಡುವ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಶೇಖರಿಸಿ, ಚೀಲಗಳನ್ನು ಬದಲಾಯಿಸಿ ಬೇರೆಡೆಗೆ ಹೆಚ್ಚಿನ ಬೆಲೆಗೆ ಸಾಗಾಟ ಮಾಡುತ್ತಿದ್ದ ರಾಜ್ಯಮಟ್ಟದ ವ್ಯವಸ್ಥಿತ ಜಾಲವೊಂದನ್ನು ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ತಂಡ ಯಶಸ್ವಿಯಾಗಿ ಬೇಧಿಸಿದೆ. ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಬಂಧನ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಖಂಡಿಗ ಸರ್ಕಾರಿ ಶಾಲೆಯ ಬಳಿಯ ನಿವಾಸಿ ಕೆ. ಮಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಅಶ್ರಫ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಮನೆಯಲ್ಲೇ ಕಾನೂನುಬಾಹಿರವಾಗಿ ಯೂರಿಯಾ ರಸಗೊಬ್ಬರವನ್ನು ಸಂಗ್ರಹಿಸಿ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಖದೀಮರ ದಂಧೆಯ ಸ್ವರೂಪ: ಕೇಂದ್ರ ಸರ್ಕಾರವು ರೈತರಿಗೆ ನೀಡುವ ಸಬ್ಸಿಡಿ ಯೂರಿಯಾವನ್ನು ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ಸೊಸೈಟಿಗಳ ಮೂಲಕ ಬೇನಾಮಿ ರೈತರ ಹೆಸರಿನಲ್ಲಿ ಈ ಜಾಲವು ಖರೀದಿಸುತ್ತಿತ್ತು. ಬಳಿಕ, ಸರ್ಕಾರದ ಅಧಿಕೃತ ಮೊಹರು ಹೊಂದಿರುವ ಹಳದಿ ಚೀಲಗಳಿಂದ ಯೂರಿಯಾವನ್ನು ಹೊರತೆಗೆದು, ‘ಟೆಕ್ನಿಕಲ್ ಗ್ರೇಡ್’ ಎಂದು ನಮೂದಿಸಲಾದ 50 ಕೆಜಿಯ ಬಿಳಿ ಚೀಲಗಳಿಗೆ ತುಂಬಿಸಲಾಗುತ್ತಿತ್ತು. ಈ ರೀತಿ ಪ್ಯಾಕ್ ಮಾಡಲಾದ ರಸಗೊಬ್ಬರವನ್ನು ಕೇರಳದ ಫ್ಲೈವುಡ್ ಕಾರ್ಖಾನೆಗಳಿಗೆ ಅತ್ಯಧಿಕ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬೃಹತ್ ಪ್ರಮಾಣದ ರಸಗೊಬ್ಬರ, ಲಾರಿ ಜಪ್ತಿ: ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ತಲಾ 50 ಕಿಲೋ ತೂಕದ 342 ಚೀಲ ಯೂರಿಯಾ ರಸಗೊಬ್ಬರ ಪತ್ತೆಯಾಗಿದೆ. ಇದರೊಂದಿಗೆ ತುಮಕೂರು ಮತ್ತು ಹಾಸನ ಭಾಗಗಳಿಂದ ತಲಾ 300 ರೂಪಾಯಿಯಂತೆ ಖರೀದಿಸಿ ಸಾಗಿಸುತ್ತಿದ್ದ ಲಾರಿಯಲ್ಲಿದ್ದ ಮತ್ತೊಂದು 300 ಚೀಲ (ಒಟ್ಟು 642 ಚೀಲ) ರಸಗೊಬ್ಬರ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ KA 11 A 6017 ಸಂಖ್ಯೆಯ ಟಾಟಾ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತರ ಹಿತಾಸಕ್ತಿಗೆ ಕನ್ನ: ಪ್ರಸ್ತುತ ಮಾರುಕಟ್ಟೆಯಲ್ಲಿ ತಲಾ 50 ಕಿಲೋ ತೂಕದ ಯೂರಿಯಾ ಚೀಲದ ನೈಜ ಬೆಲೆ 1,457.29 ರೂ. ಆಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು 1,190.79 ರೂ. ಸಬ್ಸಿಡಿ ನೀಡುತ್ತದೆ. ಹೀಗಾಗಿ ರೈತರಿಗೆ ಇದು ಕೇವಲ 266.50 ರೂ.ಗೆ ಲಭ್ಯವಾಗುತ್ತದೆ. ಆದರೆ, ಇಂತಹ ರಿಯಾಯಿತಿ ದರದ ರಸಗೊಬ್ಬರವನ್ನು ರಸಗೊಬ್ಬರ ಮಾರಾಟ ಕೇಂದ್ರಗಳ ಸಿಬ್ಬಂದಿಗಳ ಜೊತೆ ಶಾಮೀಲಾಗಿ ಕಳ್ಳಮಾರ್ಗದಿಂದ ಲೂಟಿ ಮಾಡುತ್ತಿರುವುದು ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ದಾಳಿ ನಡೆದ ಸ್ಥಳಕ್ಕೆ ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ, ಸಹಾಯಕ ನಿರ್ದೇಶಕಿ ವೀಣಾ, ಜಿಲ್ಲಾ ಜಾಗೃತ ದಳದ (ವಿಜಿಲೆನ್ಸ್) ಅಧಿಕಾರಿ ನಾಗವೇಣಿ, ಕೊಳ್ನಾಡು ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳಾದ ವಿನಯ್ ಕುಮಾರ್, ಗದಿಗೆಪ್ಪ, ಮಾಯಪ್ಪ, ಸಾಬು ಮಿರ್ಜಿ ಸೇರಿದಂತೆ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಕಾನೂನುಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರು ಕಛೇರಿಯ ಕೃಷಿ ಅಧಿಕಾರಿಗಳಾದ ನಂದನ ಶೆಣೈ ಪಿ, (ತಾಂತ್ರಿಕ)ರವರಿಗೆ ಮಾಹಿತಿ ನೀಡಲಾಗಿ ಸದ್ರಿಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ : 127/2026 ಕಲಂ: 3(2)(a), 3(2)(d), 3(2)(c), 3(2)(f) ESSENTIAL COMMODITIES ACT, 1955 ಯಂತೆ ಪ್ರಕರಣ ದಾಖಲಾಗಿರುತ್ತದೆ.




Continue Reading

Bantawala

ಕುಳ ಕಂದಾಯ ಕಛೇರಿಯಲ್ಲಿ ಧರಣ್ ದರ್ಭಾರ್..ನಾಗರಿಕರು ಹೈರಾಣ..ಜಿಲ್ಲಾಧಿಕಾರಿಗೆ ದೂರು..

Published

on

ಬಂಟ್ವಾಳ: ತಾಲೂಕಿನ ಕುಳ ಗ್ರಾಮದ ಆಡಳಿತ ಅಧಿಕಾರಿಯ (VA) ಕಚೇರಿಯು ಸಾರ್ವಜನಿಕರ ಸೇವೆಗೆ ಇರಬೇಕಾದ ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ವ್ಯಕ್ತಿಗಳ ಹಣ ವಸೂಲಿ ಕೇಂದ್ರವೋ ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ. ಕಚೇರಿಯೊಳಗೆ ಧರಣ್ ಮಾಣಿ ಎಂಬ ಖಾಸಗಿ ಬ್ರೋಕರ್‌ನನ್ನು ಕಾನೂನುಬಾಹಿರವಾಗಿ ಕೂರಿಸಿಕೊಂಡು, ಅಮಾಯಕ ಗ್ರಾಮೀಣ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಜಿಗಣೆ ದಂಧೆ ಬೆಳಕಿಗೆ ಬಂದಿದೆ.

ಕಚೇರಿ ಕೆಲಸಕ್ಕೆ ಬಂದರೆ ಜೇಬಿಗೆ ಕತ್ತರಿ!

ಕುಳ ಮತ್ತು ಇಡ್ಕಿದು ಜೋಡು ಗ್ರಾಮಗಳಾಗಿದ್ದು, ಇಲ್ಲಿನ ಕಂದಾಯ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಬಡ, ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಈ ದಲ್ಲಾಳಿ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಬೇಡಿಕೆಯಿಟ್ಟಷ್ಟು ಹಣ ನೀಡದಿದ್ದರೆ, ಅಂತವರ ಫೈಲ್‌ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಸಿ, ಜನ ಸಾಮಾನ್ಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕುಳ ಗ್ರಾಮಸ್ಥರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲ್ಲಾಳಿಗೆ ಗ್ರಾಮ ಸಹಾಯಕ ರಾಘವನ ‘ಶ್ರೀರಕ್ಷೆ’!

ಈ ಇಡೀ ಅಕ್ರಮ ದಂಧೆಯ ಹಿಂದೆ ಕುಳ ಗ್ರಾಮದ ಸಹಾಯಕನಾಗಿರುವ ಇಡೀದು ಗ್ರಾಮದ ರಾಘವ ಗೌಡ ಎಂಬಾತನ ಪೂರ್ಣ ಶ್ರೀರಕ್ಷೆ ಹಾಗೂ ಶಾಮೀಲಾತಿ ಇರುವುದು ಸಾಕ್ಷ್ಯಸಮೇತ ಬಹಿರಂಗವಾಗಿದೆ. ದಿನಾಂಕ 08/06/2026 ರಂದು ಬೆಳಿಗ್ಗೆ 9:18 ರ ಸುಮಾರಿಗೆ ಸ್ಥಳೀಯ ನಾಗರಿಕರಾದ ಸಚಿನ್ ಉರಿಮಜಲು ಅವರು ಕಚೇರಿಗೆ ಭೇಟಿ ನೀಡಿದಾಗ, ಗ್ರಾಮ ಸಹಾಯಕನ ಅಧಿಕೃತ ಪೀಠದಲ್ಲೇ ಈ ಬ್ರೋಕರ್ ಧರಣ್ ಆಸೀನನಾಗಿ ದರ್ಬಾರ್ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನು ಸಚಿನ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸಿದಾಗ, ಗ್ರಾಮ ಸಹಾಯಕ ರಾಘವ ತಕರಾರು ಎಬ್ಬಿಸಿದ್ದಲ್ಲದೆ, ಕಚೇರಿಯ ಫೈಲ್/ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಅಕ್ರಮವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾನೆ!

ತನ್ನನ್ನು ವಿಎ (ಗ್ರಾಮ ಆಡಳಿತ ಅಧಿಕಾರಿ) ಮತ್ತು ರಾಘವ ಅವರೇ ಇಲ್ಲಿಗೆ ನೇಮಿಸಿದ್ದಾರೆ ಎಂದು ಸ್ವತಃ ದಲ್ಲಾಳಿ ಧರಣ್ ಒಪ್ಪಿಕೊಂಡಿರುವುದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟಿದೆ.

ಜಾರಿಕೊಂಡ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್!

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುರ್ಚಿ ಹಾಕಿ ದರ್ಬಾರ್ ನಡೆಸುತ್ತಿರುವ ಬಗ್ಗೆ ಪತ್ರಿಕೆಯು ಗ್ರಾಮ ಆಡಳಿತ ಅಧಿಕಾರಿ (VA) ಅನಿಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ. “ನಾನು ಕುಳ ಗ್ರಾಮದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಉಳಿದ ದಿನಗಳಲ್ಲಿ ಗ್ರಾಮ ಸಹಾಯಕ ರಾಘವ ಇರುತ್ತಾರೆ. ಕಚೇರಿಯೊಳಗೆ ದಲ್ಲಾಳಿ ಇರುವ ಬಗ್ಗೆ ನನಗೆ ತಿಳಿದಿಲ್ಲ, ನಾನು ಯಾರನ್ನೂ ನೇಮಿಸಿಲ್ಲ” ಎಂದು ದಿನಾಂಕ 10/06/2026 ರಂದು ಹೇಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದಲೇ ಇಂತಹ ದಲ್ಲಾಳಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು: ಹೋರಾಟದ ಎಚ್ಚರಿಕೆ

ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಬ್ರೋಕರ್ ಧರಣ್‌ನನ್ನು ತಕ್ಷಣವೇ ಕಚೇರಿಯಿಂದ ತೆರವುಗೊಳಿಸಬೇಕು ಮತ್ತು ಆತನಿಗೆ ಕಚೇರಿಯೊಳಗೆ ಅಕ್ರಮವಾಗಿ ನೆಲೆಸಲು ಆಶ್ರಯ ನೀಡಿದ ಗ್ರಾಮ ಸಹಾಯಕ ರಾಘವ ವಿರುದ್ಧ ತಕ್ಷಣವೇ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೂರುದಾರರಾದ ಸಚಿನ್ ಉರಿಮಜಲು ಅವರು ಬಂಟ್ವಾಳ ತಹಶೀಲ್ದಾರರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸಹಾಯಕ ಕಮಿಷನರ್‌ ಅವರಿಗೆ ಜಿಪಿಎಸ್ ಫೋಟೋ ಸಾಕ್ಷ್ಯಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ.

“ಸರ್ಕಾರಿ ಕಚೇರಿಯನ್ನು ಇವರು ತಮ್ಮ ಹಿರಿಯರ ಖಾಸಗಿ ಆಸ್ತಿ ಎಂದುಕೊಂಡಿದ್ದಾರೆಯೇ? ಕೂಡಲೇ ಈ ಭ್ರಷ್ಟ ಜಾಲದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾಧ್ಯಮ ಮಿತ್ರರನ್ನು ಕರೆಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ದೂರುದಾರರು ಎಚ್ಚರಿಸಿದ್ದಾರೆ.




Continue Reading

accident

ಮಾಣಿ ಸಮೀಪ ನಿಯಂತ್ರಣ ತಪ್ಪಿ ಚರಂಡಿಗೆ ಜಿಗಿದ ಇನ್ನೋವಾ ಕಾರು;ತಪ್ಪಿದ ಭೀಕರ ಪ್ರಾಣಾಪಾಯ

Published

on

ಮಾಣಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಅಳಿರಾ ಎಂಬಲ್ಲಿ ಇಂದು ಮಧ್ಯಾಹ್ನ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್‌ಪಾತ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಆಳವಾದ ಚರಂಡಿಯನ್ನು ಜಿಗಿದು, ಪಕ್ಕದಲ್ಲಿದ್ದ ಬಾಳೆ ಗಿಡಗಳ ಗುಂಟೆಗೆ ಬಡಿದು ನಿಂತಿದೆ.

ಅದೃಷ್ಟವಶಾತ್ ಬಚಾವ್

ಅಪಘಾತದ ಸಮಯದಲ್ಲಿ ಕಾರಿನಲ್ಲಿ ನಾಲ್ಕು ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಅಪಘಾತದ ತೀವ್ರತೆಗೆ ಇನ್ನೋವಾ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸದ್ಯ ಕ್ರೇನ್ ಮುಖಾಂತರ ಕಾರನ್ನು ಮೇಲಕ್ಕೆತ್ತಿ ರಸ್ತೆಗೆ ತರುವ ಕಾರ್ಯಾಚರಣೆ ನಡೆಯುತ್ತಿದೆ.

ಒಂದೇ ದಿನ ಎರಡು ಅಪಘಾತ: ಸವಾರರಲ್ಲಿ ಆತಂಕ

ಇದೇ ರಾಷ್ಟ್ರೀಯ ಹೆದ್ದಾರಿಯ ಕೇವಲ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಷ್ಟೇ ಮತ್ತೊಂದು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಈ ಬೆನ್ನಲ್ಲೇ ಮಧ್ಯಾಹ್ನ ಮತ್ತೊಂದು ಭೀಕರ ಅಪಘಾತ ಸಂಭವಿಸಿರುವುದು ಸ್ಥಳೀಯ ಹಾಗೂ ಹೆದ್ದಾರಿ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಮಾಣಿ ಪರಿಸರದಲ್ಲಿ ಹೆದ್ದಾರಿ ಸಂಚಾರದ ವೇಳೆ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




Continue Reading

Trending

Copyright © 2025 Deevatige

error: Content is protected !!