Connect with us

Dakshina Kannada

ವಿಟ್ಲ ಜಾತ್ರೋತ್ಸವದ ಪ್ರಯುಕ್ತ ಜನವರಿ 20, ಹೂತೇರಿನಂದು ‘ವಿಟ್ಲೋತ್ಸವ-2026’

Published

on

ವರ್ಷಂಪ್ರತಿಯಂತೆ ಶ್ರೀ ಮಹಾತೋಭಾರ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ಜಾತ್ರೋತ್ಸವದ ಪ್ರಯುಕ್ತ ಹೂ ತೇರಿನಂದು ವರ್ಷಂಪ್ರತಿಯಂತೆ ವಿಆರ್‌ಸಿ ವಿಟ್ಲ ಇವರ ಆಶ್ರಯದಲ್ಲಿ ರಮಾನಾಥ್ ವಿಟ್ಲ ಇವರ ಸಾರಥ್ಯದಲ್ಲಿ 33ನೇ ವರ್ಷದ ಸಾಂಸ್ಕೃತಿಕ ಕಲಾ ಕಾಣಿಕೆ ‘ವಿಟ್ಲೋತ್ಸವ-2026’ ಸಾಂಸ್ಕೃತಿಕ ಕಾರ್ಯಕ್ರಮವು ಜನವರಿ 20ರಂದು ರಾತ್ರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಲಿದೆ.


ಈ ಸಾಂಸ್ಕೃತಿಕ ಕಲಾ ವೈಭವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಮತ್ತು ವಿಟ್ಲದವರೇ ಆದ ಖ್ಯಾತ ಸಾಹಿತಿ ಹಾಗೂ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಭಾಗವಹಿಸಲಿದ್ದಾರೆ


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮದ ಯಶಸ್ವೀ ಶಿವದೂತೇ ಗುಳಿಗೆ ನಾಟಕ ತಂಡದಿಂದ ಮತ್ತೊಂದು ಕಲಾಕಾಣಿಕೆ ಛತ್ರಪತಿ ಶಿವಾಜಿ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.


ವರ್ಷಂಪ್ರತಿಯಂತೆ ವಿಆರ್‌ಸಿ ವಿಟ್ಲ ಪ್ರತಿಭಾವಂತರನ್ನು ಗುರುತಿಸುವ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದು, ಈ ಬಾರಿ ಕೂಡಾ ಈಜು ಪಟುಗಳಾದ ಲಕ್ಷ್ಮಿ ಗಾಣಿಗ ಮತ್ತು ಚರಿತ ಅಮೀನ್ ಕೆ. ಅದೇ ರೀತಿ ಕಬಡ್ಡಿ ಪಟುಗಳಾದ ತೀರ್ಥೇಶ್, ತರುಣ ಕೃಷ್ಣ ಜಿ.ಎಸ್ ಮತ್ತು ಮಹಮ್ಮದ್ ಶಾಹಿದ್ ಅವರನ್ನು ಆಯ್ಕೆ ಮಾಡಿದ್ದು, ಪ್ರತಿಭಾವಂತರು ವೇದಿಕೆಯಲ್ಲಿ ಗಣ್ಯರಿಂದ ಪುರಸ್ಕೃತಗೊಳ್ಳಲಿರುವರು.
ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು, ಕಲಾಭಿಮಾನಿಗಳು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವೀ 33ನೇ ವರ್ಷದ ವಿಟ್ಲೋತ್ಸವ-2026 ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸಹಕರಿಸಬೇಕೆಂದು ವಿಆರ್ ಸಿ ವಿಟ್ಲ ಇದರ ಮುಖ್ಯಸ್ಥರಾದ ರಮಾನಾಥ್ ವಿಟ್ಲ ವಿನಂತಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ದಾಬಸ್‌ಪೇಟೆ ಬಳಿ ಭೀಕರ ಅಪಘಾತ: ಲಾರಿ ಡಿಕ್ಕಿಗೆ ಕಾರು ಸಂಪೂರ್ಣ ನಜ್ಜುಗುಜ್ಜು, ಸಿದ್ದೀಕ್ ಸೂರ್ಯ ಸೇರಿ ಮೂವರು ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು!

Published

on

ದಾಬಸ್‌ಪೇಟೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-48ರ ದಾಬಸ್‌ಪೇಟೆ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ, ನಿಯಂತ್ರಣ ತಪ್ಪಿದ ಕಾರು ಪಾದಾಚಾರಿಯೊಬ್ಬರಿಗೆ ಗುದ್ದಿದೆ. ಈ ಘಟನೆಯಲ್ಲಿ ಒಟ್ಟು ಮೂವರು ಗಾಯಗೊಂಡು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೂವರು ಅದೃಷ್ಟವಶಾತ್ ಪಾರು: ಅಪಘಾತಕ್ಕೊಳಗಾದ ಕಾರಿನಲ್ಲಿ ರಾಜೀವ್ ಗಾಂಧಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸಿದ್ದೀಕ್ ಸೂರ್ಯ ಸೇರಿದಂತೆ ಕೇವಲ ಇಬ್ಬರು ಪ್ರಯಾಣಿಸುತ್ತಿದ್ದರು. ಲಾರಿ ಡಿಕ್ಕಿ ಹೊಡೆದ ತಕ್ಷಣ ಕಾರಿನ ಏರ್‌ಬ್ಯಾಗ್‌ಗಳು ಸಮಯಕ್ಕೆ ಸರಿಯಾಗಿ ತೆರೆದುಕೊಂಡಿದ್ದರಿಂದ ಹಾಗೂ ಕಾರಿನಲ್ಲಿದ್ದ ಇಬ್ಬರು ಸೀಟ್ ಬೆಲ್ಟ್ ಧರಿಸಿದ್ದರಿಂದ ಭೀಕರ ಅಪಘಾತದಲ್ಲೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಹಾಗೂ ಪಾದಾಚಾರಿ ಗಿರೀಶ್ ಸೇರಿದಂತೆ ಒಟ್ಟು ಮೂವರು ಈ ಭೀಕರ ಘಟನೆಯಲ್ಲಿ ಪ್ರಾಣಾಪಾಯದಿಂದ ಮುಕ್ತರಾಗಿದ್ದಾರೆ.

ಘಟನೆಯ ವಿವರ: ದಿನಾಂಕ 17/06/2026ರ ಬುಧವಾರ ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ ದಾಬಸ್‌ಪೇಟೆಯ ಕೆ.ಐ.ಎ.ಡಿ.ಬಿ (KIADB) ಕೈಗಾರಿಕಾ ಪ್ರದೇಶದ 4ನೇ ಹಂತದ ಮಣಿಪಾಲ್ ಕಂಪನಿ ರಸ್ತೆಯ ತಿರುವಿನ ಬಳಿ ಈ ಘಟನೆ ನಡೆದಿದೆ. ಹೊನ್ನೇನಹಳ್ಳಿ ಕಡೆಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಲಾರಿ (ನೊಂದಣಿ ಸಂಖ್ಯೆ: KA 01 AT 8889) ಚಾಲಕ, ಮುಂಭಾಗದಿಂದ ಬರುತ್ತಿದ್ದ ಮಾರುತಿ ಸುಜುಕಿ ಡಿಸೈರ್ ಕಾರಿಗೆ (ನೊಂದಣಿ ಸಂಖ್ಯೆ: KA 19 MJ 4018) ಜೋರಾಗಿ ಡಿಕ್ಕಿ ಹೊಡೆದಿದ್ದಾನೆ.

ಲಾರಿ ಡಿಕ್ಕಿ ಹೊಡೆದ ತೀವ್ರತೆಗೆ ಕಾರು ನಿಯಂತ್ರಣ ತಪ್ಪಿ, ಅದೇ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ, ಸ್ಥಳೀಯ ಕೈಗಾರಿಕಾ ಪ್ರದೇಶದ ಕೂಲಿ ಕಾರ್ಮಿಕರಾದ ಗಿರೀಶ್ (54 ವರ್ಷ) ಅವರಿಗೆ ಬಲವಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಗಿರೀಶ್ ಅವರು ರಸ್ತೆಗೆ ಬಿದ್ದು ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಲ್ಲದೆ ಅಪಘಾತದ ತೀವ್ರತೆಗೆ ಕಾರು ರಸ್ತೆ ಪಕ್ಕದ ಡಿವೈಡರ್ ಮೇಲೇರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದ ಭೀಕರ ಶಬ್ದ ಕೇಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ದಾಬಸ್‌ಪೇಟೆಯ ‘ಮೆಡಿಟ್ರೀಟ್ ಆಸ್ಪತ್ರೆ’ಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಲಾರಿ ಚಾಲಕನು ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.

ಪೊಲೀಸ್ ದೂರು ದಾಖಲು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾದಾಚಾರಿ ಗಿರೀಶ್ ಅವರು ನೀಡಿದ ಹೇಳಿಕೆಯ ಮೇರೆಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಅಪರಾಧ ಸಂಖ್ಯೆ: 114/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 125(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ದಾಬಸ್‌ಪೇಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಖಂಗೊಂಡಿದ್ದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದಾರೆ. ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಲಾರಿ ಚಾಲಕನ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ಸಿದ್ದಾರೆ.





Continue Reading

Dakshina Kannada

ಮಂಗಳೂರು: ಗ್ಯಾಸ್ ಬೆಲೆ ಏರಿಕೆ, ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ‘ವಿಮೆನ್ ಇಂಡಿಯಾ ಮೂವ್‌ಮೆಂಟ್’ ಪ್ರತಿಭಟನೆ

Published

on

ಮಂಗಳೂರು: ಅಡುಗೆ ಅನಿಲ (ಗ್ಯಾಸ್) ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಮಹಿಳೆಯರು, ಕೂಲಿ ಕಾರ್ಮಿಕರು ಮತ್ತು ಸಾಮಾನ್ಯ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ, ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ವತಿಯಿಂದ ಮಂಗಳೂರು ತಾಲೂಕು ಕಚೇರಿ ಮುಂಭಾಗ ತೀವ್ರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೆಲೆ ಏರಿಕೆಯನ್ನು ಖಂಡಿಸುವ ವಿವಿಧ ಬೇಡಿಕೆಗಳ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಬಡವರ ಮೇಲೆ ಆರ್ಥಿಕ ಹೊರೆ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ WIM ಮಂಗಳೂರು ನಗರ ಅಧ್ಯಕ್ಷೆ ಆಯಿಷಾ ಯಾಸ್ಮಿನ್ ಅವರು, “ನಿರಂತರವಾಗಿ ಏರಿಕೆಯಾಗುತ್ತಿರುವ ಗ್ಯಾಸ್ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಬದುಕು ನಡೆಸುವುದು ದುಸ್ತರವಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ, ಜನಸಾಮಾನ್ಯರ ಮೇಲಿನ ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ತಪ್ಪು ಆರ್ಥಿಕ ನೀತಿಗಳ ಪರಿಣಾಮ: ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಬಜ್ಪೆ ಮಾತನಾಡಿ, “ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ಮಹಿಳೆಯರು ಮತ್ತು ದುಡಿಯುವ ವರ್ಗದ ಜನರು ದೈನಂದಿನ ಜೀವನ ನಿರ್ವಹಣೆಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರವು ಕಾರ್ಪೊರೇಟ್ ಪರ ನೀತಿಗಳನ್ನು ಬಿಟ್ಟು ಜನಪರ ನೀತಿಗಳನ್ನು ಜಾರಿಗೆ ತರಬೇಕು,” ಎಂದು ಒತ್ತಾಯಿಸಿದರು.

ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮ: WIM ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಮಾತನಾಡಿ, “ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಸಾರ್ವಜನಿಕರ ಪ್ರಮುಖ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆದಿದೆ. ಇದರಿಂದಾಗಿ ಮಹಿಳೆಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಸರ್ಕಾರವು ತಕ್ಷಣವೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು,” ಎಂದು ಎಚ್ಚರಿಸಿದರು.

ಈ ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ಪ್ರಮುಖ ಮುಖಂಡರು, ನೂರಾರು ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು




Continue Reading

arrest

ಗುರುಪುರ ನದಿಯಿಂದ ಅಕ್ರಮ ಮರಳು ಕಳ್ಳತನ: ಬಜಪೆ ಪೊಲೀಸರ ಭರ್ಜರಿ ದಾಳಿ, 127 ಲಾರಿ ಲೋಡ್ ಮರಳು ವಶ, ಓರ್ವನ ಬಂಧನ!

Published

on

ಮಂಗಳೂರು: ಗುರುಪುರ (ಫಲ್ಗುಣಿ) ನದಿಯಿಂದ ಅಕ್ರಮವಾಗಿ ಮರಳು ಕಳ್ಳತನ ನಡೆಸಿ, ಬೃಹತ್ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದ ಅಡ್ಡೆಯೊಂದರ ಮೇಲೆ ಮಂಗಳೂರು ನಗರ ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಅಂದಾಜು 6.35 ಲಕ್ಷ ರೂಪಾಯಿ ಮೌಲ್ಯದ 127 ಲಾರಿ ಲೋಡ್ ಅಕ್ರಮ ಮರಳನ್ನು ಜಪ್ತಿ ಮಾಡಲಾಗಿದ್ದು, ಓರ್ವ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.

ರಹಸ್ಯ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗರು ಗ್ರಾಮದ ಮಳಲಿ ಸಂಕೇಶ ಎಂಬಲ್ಲಿ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಎಂಬವರು ನದಿಯಿಂದ ಮರಳನ್ನು ಕಳ್ಳತನ ಮಾಡಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಬಾತ್ಮಿದಾರರಿಂದ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಜಂಟಿ ಕಾರ್ಯಾಚರಣೆ ರೂಪಿಸಲಾಯಿತು.

ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ H N ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಶ್ರೀ ಪವನ್ ಮತ್ತು ಸಿಬ್ಬಂದಿ ವರ್ಗದವರು ಜಂಟಿಯಾಗಿ ಮಳಲಿ ಸಂಕೇಶದ ದಾಸ್ತಾನು ಪ್ರದೇಶದ ಮೇಲೆ ದಾಳಿ ನಡೆಸಿದರು.

5 ಕಡೆಗಳಲ್ಲಿ ಬೃಹತ್ ದಾಸ್ತಾನು ಪತ್ತೆ

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಆರೋಪಿಗಳಾದ ಅನ್ವಿತ್ ಮತ್ತು ರಾಜೇಂದ್ರ ಮೆಂಡಾ ಒಟ್ಟು 5 ಪ್ರತ್ಯೇಕ ಸ್ಥಳಗಳಲ್ಲಿ ಮರಳನ್ನು ಅಕ್ರಮವಾಗಿ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಐದೂ ಸ್ಥಳಗಳಿಂದ ಒಟ್ಟು ಸುಮಾರು 127 ಲಾರಿ ಲೋಡ್ ಅಕ್ರಮ ಮರಳನ್ನು ಪತ್ತೆಹಚ್ಚಲಾಗಿದ್ದು, ಇದರ ಅಂದಾಜು ಮೌಲ್ಯ 6,35,000/- ರೂಪಾಯಿ ಎಂದು ಸದ್ಯಕ್ಕೆ ಲೆಕ್ಕಾಚಾರ ಹಾಕಲಾಗಿದೆ. ವಶಪಡಿಸಿಕೊಂಡ ಎಲ್ಲಾ ಮರಳನ್ನು ಸರ್ಕಾರದ ವಶಕ್ಕೆ ಒಪ್ಪಿಸಲಾಗಿದೆ.

ಪ್ರಕರಣ ದಾಖಲು, ಆರೋಪಿಯ ಬಂಧನ

ಈ ಕಾನೂನುಬಾಹಿರ ಕೃತ್ಯಕ್ಕೆ ಸಂಬಂಧಿಸಿದಂತೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 103/2026, ಕಲಂ 303(2) ಜೊತೆಗೆ 3(5) BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮೊಗರು ಗ್ರಾಮದ ಅನ್ವಿತ್ ಎಂಬಾತನನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಜೇಂದ್ರ ಮೆಂಡಾ ಸೇರಿದಂತೆ ಇನ್ನುಳಿದ ಆರೋಪಿಗಳ ಪತ್ತೆಗಾಗಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಜಾಲ ಬೀಸಲಾಗಿದೆ.




Continue Reading

Trending

Copyright © 2025 Deevatige

error: Content is protected !!