DEATH
ಮುಂಬೈ: ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು; ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ!
ಮುಂಬೈ: ಕಲ್ಲಂಗಡಿ ಹಣ್ಣು ಸೇವಿಸಿದ ಬೆನ್ನಲ್ಲೇ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನ ಪೈಧೋನಿಯಲ್ಲಿ ನಡೆದಿದ್ದು, ಈ ಪ್ರಕರಣ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತರ ಸ್ಥಿತಿ ಸಾಮಾನ್ಯ ವಿಷಾಹಾರ ಸೇವನೆಗಿಂತ ಭಿನ್ನವಾಗಿತ್ತು ಎಂದು ವೈದ್ಯರು ತಿಳಿಸಿರುವುದು ಘಟನೆಗೆ ಹೊಸ ತಿರುವು ನೀಡಿದೆ.
ಏನಿದು ಘಟನೆ? ಮುಂಬೈನ ಪೈಧೋನಿ ನಿವಾಸಿಗಳಾದ ಅಬ್ದುಲ್ಲಾ ದೋಕಾಡಿಯಾ (44), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಆಯೇಷಾ (16) ಹಾಗೂ ಝೈನಾಬ್ (12) ಸಾವನ್ನಪ್ಪಿದ ದುರ್ದೈವಿಗಳು. ರವಿವಾರ ರಾತ್ರಿ ಇಡೀ ಕುಟುಂಬ ಕಲ್ಲಂಗಡಿ ಹಣ್ಣನ್ನು ಸೇವಿಸಿತ್ತು. ತಿಂದ ಕೆಲವೇ ಗಂಟೆಗಳಲ್ಲಿ ಎಲ್ಲರಿಗೂ ತೀವ್ರವಾಗಿ ವಾಂತಿ ಆರಂಭವಾಗಿತ್ತು. ತಕ್ಷಣವೇ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ, ಕೆಲವೇ ಗಂಟೆಗಳ ಅಂತರದಲ್ಲಿ ನಾಲ್ವರೂ ಮೃತಪಟ್ಟಿದ್ದಾರೆ.
ವೈದ್ಯರ ಅನುಮಾನವೇನು? ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜೆಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಸುರಸೆ ಅವರು, ಇದು ಕೇವಲ ಸಾಮಾನ್ಯ ವಿಷಾಹಾರ ಸೇವನೆಯಲ್ಲ ಎಂದು ಶಂಕಿಸಿದ್ದಾರೆ.
- ತ್ವರಿತ ಸಾವು: ಸಾಮಾನ್ಯವಾಗಿ ವಿಷಾಹಾರ ಸೇವನೆಯಿಂದ ಇಷ್ಟು ಬೇಗ ಪ್ರಾಣಾಪಾಯ ಸಂಭವಿಸುವುದಿಲ್ಲ. ಆದರೆ ಇಲ್ಲಿ ಕೇವಲ ಕೆಲವೇ ಗಂಟೆಗಳಲ್ಲಿ ನಾಲ್ವರೂ ಮೃತಪಟ್ಟಿರುವುದು ಆಶ್ಚರ್ಯ ತಂದಿದೆ.
- ನರಮಂಡಲ ವೈಫಲ್ಯ: ಮೃತಪಟ್ಟವರು ವಾಂತಿ ಆರಂಭವಾದ ಬೆನ್ನಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು. ಇದು ಯಾವುದೋ ಪ್ರಬಲ ರಾಸಾಯನಿಕ ಅಥವಾ ಬಾಹ್ಯ ವಿಷಕಾರಿ ಅಂಶದ ಪ್ರಭಾವದಿಂದ ಮಾತ್ರ ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
- ಕ್ಲಿನಿಕಲ್ ಚಿತ್ರಣ: ಈ ಕುಟುಂಬದ ಆರೋಗ್ಯ ಹದಗೆಟ್ಟ ರೀತಿ ಸಾಮಾನ್ಯ ಕಲಬೆರಕೆ ಆಹಾರಕ್ಕಿಂತ ಭಿನ್ನವಾಗಿದ್ದು, ಯಾವುದೋ ಪ್ರಬಲ ವಿಷಕಾರಿ ಅಂಶ ಇವರ ದೇಹ ಸೇರಿರುವ ಸಾಧ್ಯತೆ ದಟ್ಟವಾಗಿದೆ.
ತನಿಖೆ ಪ್ರಗತಿಯಲ್ಲಿ: ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕಲ್ಲಂಗಡಿ ಹಣ್ಣಿನಲ್ಲಿ ಅತಿಯಾದ ಕೀಟನಾಶಕ ಇತ್ತೇ ಅಥವಾ ಬೇರೆ ಯಾವುದಾದರೂ ರಾಸಾಯನಿಕ ಬೆರೆಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಒಂದೇ ಕುಟುಂಬದ ನಾಲ್ವರು ಹೀಗೆ ಅಕಾಲಿಕವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.


accident
ಅಜ್ಜ ಪುತ್ತಾಕನ ಕಣ್ಮುಂದೆಯೇ ವಿದ್ಯುತ್ ತಂತಿ ತಗುಲಿ ಮೊಮ್ಮಗ ದಾರುಣ ಸಾವು; ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತೇ ಎಳೆಯ ಜೀವ?
ಬಂಟ್ವಾಳ: ತೆಂಗಿನಕಾಯಿ ಕೀಳಲೆಂದು ದೋಂಟಿ ಹಿಡಿದು ತೋಟಕ್ಕಿಳಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾದ ಘೋರ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್ನ ಬಾಡಿಗೆ ಮನೆಯಲ್ಲಿ ವಾಸವಿರುವ ಮಹಮ್ಮದ್ ಶರೀಫ್ ಅವರ ಪುತ್ರ, ಪುತ್ತೂರು ಮೌಂಟೇನ್ ವ್ಯೂ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಹೀರ್ (15) ಮೃತಪಟ್ಟ ದುರ್ದೈವಿ. ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ ಬಾಲಕ ಇಂದು ಬೆಳಿಗ್ಗೆ ತನ್ನ ಅಜ್ಜ ಪುತ್ತಾಕ (ಮಾಯಬ್ಬ) ಅವರ ಮನೆಗೆ ಬಂದಿದ್ದ ಸಂದರ್ಭ ಈ ದುರಂತ ನಡೆದಿದೆ.

ಘಟನೆಯ ವಿವರ:
ಅಜ್ಜ ಪುತ್ತಾಕ ಅವರು ತನ್ನ ಮನೆಯ ಮುಂಭಾಗದಲ್ಲಿರುವ ಬಂಟ್ವಾಳದ ಅಬ್ಬಾಸ್ ಎಂಬವರ ಜಮೀನಿನಲ್ಲಿ ತೆಂಗಿನಕಾಯಿ ಕೀಳಲು ಕೂಲಿಯಾಳನ್ನು ಕರೆತರುವಂತೆ ಮೊಮ್ಮಗ ಶಹೀರ್ಗೆ ತಿಳಿಸಿದ್ದರು. ಅಜ್ಜನ ಮಾತಿನಂತೆ ಕೂಲಿಯಾಳನ್ನು ಕರೆತಂದ ಶಹೀರ್, ಉತ್ಸಾಹದಿಂದ ತಾನೂ ಕಾಯಿ ಕೀಳಲು ನೆರವಾಗಲೆಂದು ನೆರೆಮನೆಯಿಂದ ವಿದ್ಯುತ್ ಪ್ರವಾಹಕ ದೋಂಟಿಯನ್ನು (Iron/Conducting Rod) ಹಿಡಿದುಕೊಂಡು ಜಮೀನಿಗೆ ಹೋಗಿದ್ದಾನೆ. ಕೂಲಿಯಾಳು ಮರ ಹತ್ತುತ್ತಿರುವಾಗಲೇ, ಶಹೀರ್ ಸಣ್ಣ ಮರವೊಂದರಿಂದ ಕಾಯಿ ಕೀಳಲು ದೋಂಟಿ ಎತ್ತಿದ್ದಾನೆ. ಈ ವೇಳೆ ಮರದ ತೀರಾ ಸಮೀಪದಲ್ಲೇ ಹಾದುಹೋಗಿದ್ದ ಹೈಟೆನ್ಷನ್ (HT) ವಿದ್ಯುತ್ ಲೈನ್ಗೆ ದೋಂಟಿ ಸ್ಪರ್ಶಿಸಿದೆ. ತಕ್ಷಣವೇ ತೀವ್ರಗತಿಯ ವಿದ್ಯುತ್ ಆಘಾತಕ್ಕೊಳಗಾದ ಬಾಲಕನ ದೇಹವು ದೋಂಟಿ ಹಿಡಿತದೊಂದಿಗೆ ಸ್ಥಳದಲ್ಲೇ ಸುಟ್ಟು ಕರಟಿಹೋಗಿದೆ.
ಸ್ಥಳೀಯ ಸಮಾಜ ಸೇವಕ ಇಕ್ಬಾಲ್ ಮತ್ತು ಇತರರು ಇತರರು ತಕ್ಷಣ ಧಾವಿಸಿ, ಮತ್ತಷ್ಟು ಕರಟುತ್ತಿದ್ದ ಮೃತದೇಹವನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಯ ಪ್ರಕ್ರಿಯೆಗಳನ್ನು ಮುಗಿಸಿ, ಗಡಿಯಾರಕ್ಕೆ ತಂದು ಸಾರ್ವಜನಿಕ ವೀಕ್ಷಣೆಯ ಬಳಿಕ ಮೃತದೇಹವನ್ನು ದಫನ ಸಂಸ್ಕಾರಕ್ಕಾಗಿ ಅವರ ತಂದೆಯ ಜಮಾತ್ ಇರುವ ಮೂಲ ನಿವಾಸವಾದ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆಗೆ ಕೊಂಡೊಯ್ಯಲಾಗಿದೆ.

ಇಲಾಖೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:
ಈ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೆದ್ದಾರಿ ಕಾಮಗಾರಿಯ ವೇಳೆ ತೆಗೆದ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿತ್ತು. ಇದರಿಂದಾಗಿ ನೆಲದ ಮಟ್ಟ ಏರಿಕೆಯಾಗಿ, ಬಹಳ ಎತ್ತರದಲ್ಲಿದ್ದ ಅಪಾಯಕಾರಿ ಹೈಟೆನ್ಷನ್ ತಂತಿಗಳು (H T Line ) ಈಗ ತೀರಾ ಹತ್ತಿರಕ್ಕೆ ಬಂದಿವೆ. ಈ ಬಗ್ಗೆ ಅಪಾಯವನ್ನು ಅರಿತ ಸ್ಥಳೀಯರು ಅಪಾಯಕಾರಿ ಹೈಟೆನ್ಷನ್ ತಂತಿಗಳು ಹಾದುಹೋಗುವ ಕಂಬವನ್ನು ನಿಯಮಾನುಸಾರವಾಗಿ ಏರಿಸಬೇಕು ಅಂದರೆ ಎತ್ತರದ ಕಂಬವನ್ನು ಹಾಕಬೇಕು ಎಂದು ಅದೆಷ್ಟೋ ಬಾರಿ ಕೇಳಿ ಕೊಂಡಿದ್ದಾರೆ. ಹೆದ್ದಾರಿ ಏರಿಸಿರುವುದರಿಂದ ತಂತಿಗಳು ಕೆಳಗೆ ಬಂದಿವೆ, ಹೆದ್ದಾರಿ ಪ್ರಾಧಿಕಾರದವರು ಆ ಕೆಲಸವನ್ನು ಮಾಡಬೇಕು ಎಂದು ಕರೆಂಟ್ ಇಲಾಖೆಯವರು ಶಾಕ್ ನೀಡಿದರೆ ವಿದ್ಯುತ್ ಇಲಾಖೆಯ ಕಾರ್ಯ ನಿರ್ವಹಣೆ ನಮಗೆ ಬರುವುದಿಲ್ಲ ಎಂಬುವುದು ಹೆದ್ದಾರಿ ದೊಡ್ಡವರ ವಾದ . ಅಂತೂ ಇಂತೂ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಲಾಖೆಗಳ ಈ ‘ಕಣ್ಣುಮುಚ್ಚಾಲೆ’ ಆಟಕ್ಕೆ ಇಂದು ಅಮಾಯಕ ವಿದ್ಯಾರ್ಥಿ ಬಲಿಯಾಗಿದ್ದಾನೆ.
ಪುತ್ತಾಕ ಕುಟುಂಬಕ್ಕೆ ಆಘಾತದ ಮೇಲೆ ಆಘಾತ:
ಗಡಿಯಾರ ಪುತ್ತಾಕ ಅವರು ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸುವ ಹೆಸರಾಂತ ಸಮಾಜ ಸೇವಕ. ಆದರೆ ವಿಧಿಯ ಆಟ ಮಾತ್ರ ಕ್ರೂರವಾಗಿದೆ. 13 ವರ್ಷಗಳ ಹಿಂದೆ ಪೇರಮೊಗರು ಎಂಬಲ್ಲಿ ನಡೆದ ಲಾರಿ ಅಪಘಾತದಲ್ಲಿ ಪುತ್ತಾಕ ಅವರು ತಮ್ಮ ಇಬ್ಬರು ಪುತ್ರರಾದ ಆಶಿಕ್ ಮತ್ತು ಶಫೀಕ್ ಅವರನ್ನು ಕಳೆದುಕೊಂಡಿದ್ದರು. ಅಂದು ಅಪಘಾತದ ಜಾಗದಿಂದ ಮಕ್ಕಳ ಶವವನ್ನು ಹೊರತೆಗೆದಿದ್ದ ಅಜ್ಜ, ಇಂದು ತನ್ನ ಕಣ್ಮುಂದೆಯೇ ತನ್ನ ಪ್ರೀತಿಯ ಮೊಮ್ಮಗ ವಿದ್ಯುತ್ ಆಘಾತಕ್ಕೆ ಬಲಿಯಾದುದನ್ನು ಕಂಡು ಕಂಗಾಲಾಗಿದ್ದಾರೆ. ಪತ್ನಿ ಕೂಡ ಕಳೆದ ಹಲವು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಈ ಕುಟುಂಬಕ್ಕೆ ದುಃಖದ ಮೇಲೆ ದುಃಖ ಮಳೆಗರೆದಂತಾಗಿದೆ.
ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

DEATH
ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣರವರ ಸಹೋದರ ಗಂಗಾಧರ ಸುವರ್ಣ ಹೃದಯಾಘಾತದಿಂದ ನಿಧನ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ಅವರ ಸಹೋದರ, ಉದ್ಯಮಿ ಗಂಗಾಧರ ಸುವರ್ಣ (66) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ನರಿಮೊಗರು ಸುವರ್ಣ ಎಸ್ಟೇಟ್ ಮಾಲಕರಾದ ವೇದನಾಥ ಸುವರ್ಣ ಅವರ ಸಹೋದರರಾಗಿರುವ ಇವರು, ಶಿವಗಂಗಾ ಕನ್ಸ್ಟ್ರಕ್ಷನ್ ಸಂಸ್ಥೆಯ ಉದ್ಯಮಿಯಾಗಿದ್ದರು. ಕೃಷಿಕರೂ ಆಗಿದ್ದ ಇವರು ದಿ. ಕಮಲಾಕ್ಷಿ ಮತ್ತು ಮಾಯಿಲಪ್ಪ ಸುವರ್ಣ ದಂಪತಿಯ ಪುತ್ರ.
ಘಟನೆಯ ವಿವರ: ಏಪ್ರಿಲ್ 24ರಂದು ರಾತ್ರಿ ಗಂಗಾಧರ ಸುವರ್ಣ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಪುತ್ತೂರಿನ ದರ್ಬೆ ಹಿತ ಆಸ್ಪತ್ರೆಗೆ ಕರೆತರಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತರ ಕುಟುಂಬ: ಮೃತರು ಪತ್ನಿ ಶರ್ಮಿಳಾ, ಪುತ್ರ ಕೌಶಿಕ್, ಪುತ್ರಿ ಕೀರ್ತನಾ, ಸಹೋದರ ವೇದನಾಥ ಸುವರ್ಣ ಹಾಗೂ ಸಹೋದರಿಯರಾದ ತಿಲೋತ್ತಮ ಬಪ್ಪಳಿಗೆ, ವೀಣಾ ಬಪ್ಪಳಿಗೆ ಮತ್ತು ವಿನಯ ಸುಳ್ಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಗಂಗಾಧರ ಸುವರ್ಣ ಅವರ ನಿಧನಕ್ಕೆ ಸ್ಥಳೀಯ ಗಣ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ.

DEATH
ಕಳೆಂಜಿಮಲೆ ರಕ್ಷಿತಾರಣ್ಯದ ತಪ್ಪಲಲ್ಲಿ ಕಾಟಿಯ ದುರಂತ ಅಂತ್ಯ
ಬಂಟ್ವಾಳ ತಾಲೂಕು ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಲವು ವರ್ಷಗಳಿಂದ ಸ್ವಚ್ಚಂದವಾಗಿ ಸುತ್ತಾಡುತ್ತಿದ್ದ(ಕಾಟಿ)ಕಾಡೆತ್ತು ಹಗ್ಗದ ಉರುಳಿಗೆ ಸಿಲುಕಿ ದುರಂತ ಅಂತ್ಯ ಕಂಡಿದೆ.
ರಕ್ಷಿತಾರಣ್ಯದ ತಪ್ಪಲು ಪ್ರದೇಶದ ವಿಟ್ಲ ಪಡ್ನೂರು ಗ್ರಾಮದ ಅನಿಲಕಟ್ಟೆ ಪೂರ್ಲಿಪ್ಪಾಡಿ ಎಂಬಲ್ಲಿನ ದಿ.ಮೋನಪ್ಪ ಗೌಡರ ಸ್ವಾಧೀನದ ಜಮೀನಿನಲ್ಲಿರುವ ನಾಲ್ಕೈದು ಕುಟುಂಬಗಳ ಕೃಷಿಗೆ ಅನುಕೂಲವಾಗುವ ಕೆದುವಾರು ಪಾಲಿನ ಕೆರೆಗೆ ನೀರು ಕುಡಿಯಲು ಕಾಡೆತ್ತು ಬರುತ್ತಿತ್ತು.

ನಿನ್ನೆ(ಶುಕ್ರವಾರ)ಸಂಜೆ ಕುತ್ತಿಗೆಯಲ್ಲಿ ಪಾಲಿಥೀನ್ ಹಗ್ಗ ಬಿಗಿದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಡೆತ್ತು ನೋವು ತಾಳಲಾರದೇ ಕೆರೆಗೆ ನೀರು ಕುಡಿಯಲು ಬಂದಿರುವುದು ಸ್ಥಳೀಯರ ಕಣ್ಣಿಗೆ ಕಂಡು ಬಂದಿತ್ತು. ತಕ್ಷಣವೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಅರಣ್ಯಾಧಿಕಾರಿಗಳ ತಂಡ ಶುಕ್ರವಾರ ಮುಸ್ಸಂಜೆಯೇ ಸ್ಥಳಕ್ಕಾಗಮಿಸಿ ಕುತ್ತಿಗೆಯಲ್ಲಿ ಬಿಗಿದಿದ್ದ ಹಗ್ಗದ ಉರುಳು ತುಂಡರಿಸಿದ್ದಾರೆ.
ಶನಿವಾರ ಬೆಳಗ್ಗೆ ಅದೇ ಅರಣ್ಯದೊಳಗಿನ ಕೆರೆಯ ಬದಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಡೆತ್ತು ಇಹಲೋಕ ತ್ಯಜಿಸಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ, ಉಕ್ಕುಡ ವಲಯ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸುಮಾರು ಹತ್ತು ಹದಿನೈದು ದಿನಗಳ ಹಿಂದೆ ಎಲ್ಲೋ ಕಾಟಿ ಮಾಂಸದ ರುಚಿ ಸವಿಯಲು ಜೊಲ್ಲು ಸುರಿಸಿದ್ದ ನರರಾಕ್ಷಸರು ಹತ್ಯೆಗೈಯಲು ಕಾಡೆತ್ತಿನ ಕುತ್ತಿಗೆಗೆ ಪಾಲಿಥೀನ್ ಹಗ್ಗದ ಉರುಳು ಬಿಗಿದಿರುವುದು ಸ್ಪಷ್ಟವಾಗಿದೆ.
ದೈತ್ಯ ದೇಹದ ಬಲಶಾಲಿಯಾಗಿದ್ದ ಕಾಡೆತ್ತು ನರರಾಕ್ಷಸರ ಪಾಲಿಥೀನ್ ಹಗ್ಗವನ್ನು ತುಂಡರಿಸಿದ್ದರೂ ಕುತ್ತಿಗೆಗೆ ಬಿಗಿದ ಉರುಳು ತೆಗೆಯಲಾಗಿಲ್ಲ. ದಿನದಿನಕ್ಕೆ ಕುತ್ತಿಗೆಯ ಉರುಳು ಬಿಗಿದ ಕಾರಣ ಕಾಡೆತ್ತಿನ ಕುತ್ತಿಗೆಯ ಅಡಿಭಾಗದಲ್ಲಿ ಭಾರಿ ಪ್ರಮಾಣದ ಗಾಯಗಳಾಗಿ ಹುಳ ಹುಟ್ಟಿಕೊಂಡಿದೆ. ನೋವು ತಡೆಯಲಾಗದೇ ಎಂದಿನಂತೆ ಬರುತ್ತಿದ್ದ ದಾರಿಯಲ್ಲೇ ಬಂದು ಕೆರೆಯಲ್ಲಿ ನೀರು ಕುಡಿದ ಬಳಿಕ ಇಂದು ಬೆಳಗ್ಗೆ ಕಾಡೆತ್ತು ಇಹಲೋಕ ತ್ಯಜಿಸಿದೆ.
ಇಲಾಖಾ ನಿಯಮದಂತೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಬಳಿಕ ಅರಣ್ಯದಲ್ಲೇ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

-
crime1 month agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime3 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala4 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala4 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
