Connect with us

DEATH

ಮುಂಬೈ: ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು; ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ಮಾಹಿತಿ!

Published

on

ಮುಂಬೈ: ಕಲ್ಲಂಗಡಿ ಹಣ್ಣು ಸೇವಿಸಿದ ಬೆನ್ನಲ್ಲೇ ಒಂದೇ ಕುಟುಂಬದ ನಾಲ್ವರು ಸದಸ್ಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನ ಪೈಧೋನಿಯಲ್ಲಿ ನಡೆದಿದ್ದು, ಈ ಪ್ರಕರಣ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತರ ಸ್ಥಿತಿ ಸಾಮಾನ್ಯ ವಿಷಾಹಾರ ಸೇವನೆಗಿಂತ ಭಿನ್ನವಾಗಿತ್ತು ಎಂದು ವೈದ್ಯರು ತಿಳಿಸಿರುವುದು ಘಟನೆಗೆ ಹೊಸ ತಿರುವು ನೀಡಿದೆ.

ಏನಿದು ಘಟನೆ? ಮುಂಬೈನ ಪೈಧೋನಿ ನಿವಾಸಿಗಳಾದ ಅಬ್ದುಲ್ಲಾ ದೋಕಾಡಿಯಾ (44), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಆಯೇಷಾ (16) ಹಾಗೂ ಝೈನಾಬ್ (12) ಸಾವನ್ನಪ್ಪಿದ ದುರ್ದೈವಿಗಳು. ರವಿವಾರ ರಾತ್ರಿ ಇಡೀ ಕುಟುಂಬ ಕಲ್ಲಂಗಡಿ ಹಣ್ಣನ್ನು ಸೇವಿಸಿತ್ತು. ತಿಂದ ಕೆಲವೇ ಗಂಟೆಗಳಲ್ಲಿ ಎಲ್ಲರಿಗೂ ತೀವ್ರವಾಗಿ ವಾಂತಿ ಆರಂಭವಾಗಿತ್ತು. ತಕ್ಷಣವೇ ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ, ಕೆಲವೇ ಗಂಟೆಗಳ ಅಂತರದಲ್ಲಿ ನಾಲ್ವರೂ ಮೃತಪಟ್ಟಿದ್ದಾರೆ.

ವೈದ್ಯರ ಅನುಮಾನವೇನು? ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಜೆಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಸುರಸೆ ಅವರು, ಇದು ಕೇವಲ ಸಾಮಾನ್ಯ ವಿಷಾಹಾರ ಸೇವನೆಯಲ್ಲ ಎಂದು ಶಂಕಿಸಿದ್ದಾರೆ.

  • ತ್ವರಿತ ಸಾವು: ಸಾಮಾನ್ಯವಾಗಿ ವಿಷಾಹಾರ ಸೇವನೆಯಿಂದ ಇಷ್ಟು ಬೇಗ ಪ್ರಾಣಾಪಾಯ ಸಂಭವಿಸುವುದಿಲ್ಲ. ಆದರೆ ಇಲ್ಲಿ ಕೇವಲ ಕೆಲವೇ ಗಂಟೆಗಳಲ್ಲಿ ನಾಲ್ವರೂ ಮೃತಪಟ್ಟಿರುವುದು ಆಶ್ಚರ್ಯ ತಂದಿದೆ.
  • ನರಮಂಡಲ ವೈಫಲ್ಯ: ಮೃತಪಟ್ಟವರು ವಾಂತಿ ಆರಂಭವಾದ ಬೆನ್ನಲ್ಲೇ ಪ್ರಜ್ಞೆ ಕಳೆದುಕೊಂಡಿದ್ದರು. ಇದು ಯಾವುದೋ ಪ್ರಬಲ ರಾಸಾಯನಿಕ ಅಥವಾ ಬಾಹ್ಯ ವಿಷಕಾರಿ ಅಂಶದ ಪ್ರಭಾವದಿಂದ ಮಾತ್ರ ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
  • ಕ್ಲಿನಿಕಲ್ ಚಿತ್ರಣ: ಈ ಕುಟುಂಬದ ಆರೋಗ್ಯ ಹದಗೆಟ್ಟ ರೀತಿ ಸಾಮಾನ್ಯ ಕಲಬೆರಕೆ ಆಹಾರಕ್ಕಿಂತ ಭಿನ್ನವಾಗಿದ್ದು, ಯಾವುದೋ ಪ್ರಬಲ ವಿಷಕಾರಿ ಅಂಶ ಇವರ ದೇಹ ಸೇರಿರುವ ಸಾಧ್ಯತೆ ದಟ್ಟವಾಗಿದೆ.

ತನಿಖೆ ಪ್ರಗತಿಯಲ್ಲಿ: ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕಲ್ಲಂಗಡಿ ಹಣ್ಣಿನಲ್ಲಿ ಅತಿಯಾದ ಕೀಟನಾಶಕ ಇತ್ತೇ ಅಥವಾ ಬೇರೆ ಯಾವುದಾದರೂ ರಾಸಾಯನಿಕ ಬೆರೆಸಲಾಗಿತ್ತೇ ಎಂಬ ಬಗ್ಗೆ ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಒಂದೇ ಕುಟುಂಬದ ನಾಲ್ವರು ಹೀಗೆ ಅಕಾಲಿಕವಾಗಿ ಮೃತಪಟ್ಟಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಸಜಿಪದಲ್ಲಿ ಭೀಕರ ರಸ್ತೆ ಅಪಘಾತ: ಸಾಮಾಜಿಕ ಕಾರ್ಯಕರ್ತ, ಯುವ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು

Published

on

ಬಂಟ್ವಾಳ: ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಇಂದು ಸಂಜೆ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಸಜಿಪ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಅಹಮದ್ ಆಸೀರ್ (22) ಮೃತಪಟ್ಟ ದುರ್ದೈವಿ ಆಕ್ಟಿವಾ ಸವಾರರಾಗಿದ್ದಾರೆ.

ಘಟನೆಯ ವಿವರ:

ಅಹಮದ್ ಆಸೀರ್ ಅವರು ಇಂದು ಸಂಜೆ ತನ್ನ ಮನೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿರುವ ಸಜಿಪ ಬೇಂಕೆ ಎಂಬ ಪ್ರದೇಶಕ್ಕೆ ಆಕ್ಟಿವಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಮಾರುತಿ ಕಾರು ಇವರ ದ್ವಿಚಕ್ರ ವಾಹನಕ್ಕೆ ನೇರವಾಗಿ ಮತ್ತು ಪ್ರಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಆಕ್ಟಿವಾ ವಾಹನವು ಗುರುತು ಸಿಗದಷ್ಟು ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತಕ್ಷಣವೇ ತಲೆ ಮತ್ತು ದೇಹಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸೀರ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಂಬನಿ ಮಿಡಿದ ಸಜಿಪ ಪರಿಸರದ ಜನತೆ:

ಮೃತ ಅಹಮದ್ ಆಸೀರ್ ಅವರು ಸಣ್ಣ ವಯಸ್ಸಿನಲ್ಲೇ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರು SKSSF ಸಜೀಪನಡು ಶಾಖೆಯ ಸಕ್ರಿಯ ಸದಸ್ಯರಾಗಿದ್ದರಲ್ಲದೆ, ತುರ್ತು ಮತ್ತು ಆಪತ್ಕಾಲೀನ ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸುವ ಹೆಸರಾಂತ “ವಿಖಾಯ ACTIVE WING” ತಂಡದ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಸದಾ ಪರರ ಸೇವೆಗೆ ಸಿದ್ಧರಿರುತ್ತಿದ್ದ ಎಳೆಯ ಪ್ರಾಯದ ಯುವಕನ ಅಕಾಲಿಕ ಮರಣದ ಸುದ್ದಿ ಸಜಿಪ ಸುತ್ತಮುತ್ತಲಿನ ನಾಗರಿಕರಲ್ಲಿ ಮತ್ತು ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ.

ಪೊಲೀಸ್ ತನಿಖೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಕೈಗೊಂಡಿದ್ದಾರೆ.




Continue Reading

accident

ಕನ್ಯಾನ: ಬಾಕ್ಸೈಟ್ ಗಣಿಗಾರಿಕೆ ಸ್ಥಳದಲ್ಲಿ ಭೀಕರ ದುರಂತ; ಟಿಪ್ಪರ್ ಲಾರಿ ಚಲಿಸಿ ಚಾಲಕ ಸ್ಥಳದಲ್ಲೇ ಸಾವು

Published

on

ವಿಟ್ಲ: ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಭೀಕರ ಅಪಘಾತವೊಂದು ಸಂಭವಿಸಿದ್ದು, ಟಿಪ್ಪರ್ ಲಾರಿಯ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮ ನಿವಾಸಿ ಮಹೇಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಅಕ್ರಮ ಎನ್ನಲಾದ ಬಾಕ್ಸೈಟ್ ದಂಧೆ ನಡೆಯುವ ಸ್ಥಳಕ್ಕೆ ತೆರಳಿದ್ದ ಲಾರಿಯಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಚಾಲಕ ಮಹೇಶ್ ಅವರು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಏಕಾಏಕಿ ಲಾರಿ ಮುನ್ನಡೆದಿದ್ದರಿಂದ, ಅವರು ಲಾರಿಯ ಚಕ್ರಗಳ ಅಡಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಘಟನೆ ನಡೆದ ತಕ್ಷಣ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ಗುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ವಿಟ್ಲ ಠಾಣಾ ಅಕ್ರ 132/2026 ಕಲಂ: 106(1) BNS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕರ ಆಕ್ರೋಶ: ಪ್ರದೇಶದಲ್ಲಿ ರಾಜಕೀಯ ನಾಯಕರು ಪಕ್ಷಬೇಧ ಮರೆತು ನಡೆಸುತ್ತಿದ್ದಾರೆ ಎನ್ನಲಾದ ಈ ಬಾಕ್ಸೈಟ್ ದಂಧೆಯ ವಿರುದ್ಧ ಸ್ಥಳೀಯ ನಾಗರಿಕರು ನಿರಂತರವಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿಂದೆ ಬಾಕ್ಸೈಟ್ ಲಾರಿಗಳ ಅಟ್ಟಹಾಸ ಹಾಗೂ ದಬ್ಬಾಳಿಕೆಯಿಂದಾಗಿ ವಿಟ್ಲ ಸೇರಿದಂತೆ ಸುತ್ತಮುತ್ತಲಿನ ವಾಹನ ಚಾಲಕರು ಮತ್ತು ಸಾರ್ವಜನಿಕರು ತೀವ್ರ ಹೈರಾಣಾಗಿದ್ದರು. ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದರೂ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಈ ದಂಧೆಯು, ಇಂದು ಸ್ವತಃ ತನ್ನದೇ ಲಾರಿಯ ಚಾಲಕನ ಬಲಿ ಪಡೆದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ





Continue Reading

Bantawala

ಆಝಾನ್ ನೀಡುತ್ತಿದ್ದಾಗಲೇ ಕುಸಿದು ಬಿದ್ದು ಧರ್ಮಗುರು ಮೃತ್ಯು

Published

on

ಅತ್ಯಂತ ಅಪರೂಪದ ಹಾಗೂ ಇಡೀ ಮುಸ್ಲಿಂ ಸಮುದಾಯವನ್ನು ಭಾವುಕರನ್ನಾಗಿಸುವ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯೊಂದರಲ್ಲಿ ಸಂಭವಿಸಿದೆ. ಮಸೀದಿಯಲ್ಲಿ ಆಝಾನ್ (ಬಾಂಗ್) ನೀಡುತ್ತಿದ್ದ ಸಂದರ್ಭದಲ್ಲೇ ಧರ್ಮಗುರುಗಳೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಚ್ಚೆಕೆರೆ ನಿವಾಸಿ, ನೂಜಿ ಉಸ್ಮಾನ್ ಅವರ ಪುತ್ರ ಹಾಗೂ SYS ಕುಕ್ಕಾಜೆ ಯೂನಿಟ್ ಸದಸ್ಯರಾಗಿದ್ದ ಅಬ್ದುಲ್ ಲತೀಫ್ ಮದನಿ (50) ಮೃತಪಟ್ಟ ದುರ್ದೈವಿ ಧರ್ಮಗುರುಗಳಾಗಿದ್ದಾರೆ.

ಇಂದು ಸಂಜೆ ಸುಮಾರು 4 ಗಂಟೆಯ ನಮಾಜ್ ಸಮಯಕ್ಕೆ ಸರಿಯಾಗಿ ಹೊನ್ನಾವರದ ಮಸೀದಿಯಲ್ಲಿ ಅಬ್ದುಲ್ ಲತೀಫ್ ಮದನಿ ಅವರು ಆಝಾನ್ ನೀಡುತ್ತಿದ್ದರು. ಈ ವೇಳೆ ಅವರಿಗೆ ದಿಢೀರನೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ. ಪರಿಣಾಮವಾಗಿ ಅವರು ಮೈಕ್ ಮುಂದೆಯೇ ಸ್ಥಳದಲ್ಲೇ ಕುಸಿದು ಬಿದ್ದು, ಕೊನೆಯುಸಿರೆಳೆದಿದ್ದಾರೆ. ಆಝಾನ್ ಕೂಗುತ್ತಿದ್ದಾಗಲೇ ಧರ್ಮಗುರುಗಳು ಮೃತಪಟ್ಟ ಘಟನೆ ಸ್ಥಳೀಯವಾಗಿ ತೀವ್ರ ಸಂಕಷ್ಟತೆ ಹಾಗೂ ಭಾವುಕತೆಯನ್ನು ಮೂಡಿಸಿದೆ.

ರಾತ್ರಿ ಹುಟ್ಟೂರಿಗೆ ಪಾರ್ಥಿವ ಶರೀರ ಆಗಮನ: ಸದ್ಯ ಮೃತರ ಪಾರ್ಥಿವ ಶರೀರವನ್ನು ಹೊನ್ನಾವರದಿಂದ ಅವರ ಹುಟ್ಟೂರಾದ ಬಂಟ್ವಾಳದ ಮಂಚಿ ಗ್ರಾಮದ ಪುಚ್ಚೆಕೆರೆಗೆ ತರುವ ವ್ಯವಸ್ಥೆಯನ್ನು ಮುಸ್ಲಿಂ ಬಾಂಧವರು ಮಾಡುತ್ತಿದ್ದಾರೆ. ಇಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮೃತದೇಹವು ಸ್ವಗೃಹಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಧಾರ್ಮಿಕ ವಲಯದ ಪ್ರಮುಖರನ್ನು ಅಗಲಿದ್ದಾರೆ. ಧರ್ಮಗುರುಗಳ ನಿಧನಕ್ಕೆ SYS ಸಂಘಟನೆ ಹಾಗೂ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ




Continue Reading

Trending

Copyright © 2025 Deevatige

error: Content is protected !!