Connect with us

INCIDENT

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ: ಅನಧಿಕೃತ ವ್ಯಕ್ತಿಗಳಿಂದ ಧ್ವಜಾರೋಹಣ ನಡೆದರೆ ಇತಿಹಾಸಕ್ಕೆ ಕಪ್ಪು ಚುಕ್ಕೆ – ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಎಚ್ಚರಿಕೆ

Published

on

ಪುತ್ತೂರು: ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಯಾವುದೇ ಅಧಿಕೃತ ಅನುಮತಿ ಇಲ್ಲದ ವ್ಯಕ್ತಿಗಳು ಧ್ವಜಾರೋಹಣ ನೆರವೇರಿಸುವುದು ದೇವಳದ ಪವಿತ್ರತೆಗೆ ಧಕ್ಕೆ ತರಲಿದೆ. ಕ್ರಿಮಿನಲ್ ಆರೋಪಿಯ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ಈ ಬಾರಿ ಧ್ವಜಾರೋಹಣ ಮಾಡಿದರೆ ಅದು ದೇವಸ್ಥಾನದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಲಿದೆ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಧಾರ್ಮಿಕ ವಿಧಿವಿಧಾನಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದರು.

ನಿಯಮ ಬಾಹಿರ ಧ್ವಜಾರೋಹಣದ ಆರೋಪ

ದೇವಸ್ಥಾನದ ನಿಯಮಾವಳಿಗಳ ಪ್ರಕಾರ, ಜಾತ್ರೋತ್ಸವದ ಧ್ವಜಾರೋಹಣ ಮತ್ತು ಅವರೋಹಣ ಮಾಡುವ ಜವಾಬ್ದಾರಿ ಕೇವಲ ದೇವಸ್ಥಾನದ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಮಾತ್ರ ಇರುತ್ತದೆ. ಈ ಬಗ್ಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರೇ ಲಿಖಿತ ಮಾಹಿತಿ ನೀಡಿದ್ದು, ಪ್ರಸ್ತುತ ನಾಗೇಶ್ ಮತ್ತು ಬಾಲಕೃಷ್ಣ ಎಂಬುವವರು ಮಾತ್ರ ಈ ಹುದ್ದೆಯಲ್ಲಿದ್ದಾರೆ.

ಪಿ.ಜಿ. ಜಗನ್ನಿವಾಸ ರಾವ್ ಅವರು ದೇವಸ್ಥಾನದ ನೌಕರರಲ್ಲ, ಅವರಿಗೆ ಯಾವುದೇ ಅನುವಂಶಿಕ ಹಕ್ಕೂ ಇಲ್ಲ. ಧಾರ್ಮಿಕ ದತ್ತಿ ಇಲಾಖೆ ಅಥವಾ ತಂತ್ರಿಗಳಿಂದ ಯಾವುದೇ ಲಿಖಿತ ಅನುಮತಿ ಇಲ್ಲದಿದ್ದರೂ ಅವರು ಅಕ್ರಮವಾಗಿ ಧ್ವಜಾರೋಹಣ ಮಾಡುತ್ತಿದ್ದಾರೆ,” ಎಂದು ಶ್ರೀನಾಥ್ ಆರೋಪಿಸಿದರು.

ಗರ್ಭಗುಡಿ ಪ್ರವೇಶ ಮತ್ತು ಅಕ್ರಮ ಚಟುವಟಿಕೆಗಳು

ದೇವಸ್ಥಾನದ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸಲು ಕೇವಲ ತಂತ್ರಿಗಳಿಗೆ, ಅರ್ಚಕರಿಗೆ ಮತ್ತು ಸಂಬಂಧಪಟ್ಟ ನೌಕರರಿಗೆ ಮಾತ್ರ ಅವಕಾಶವಿದೆ. ಆದರೆ, ಪಿ.ಜಿ. ಜಗನ್ನಿವಾಸ ರಾವ್, ಅವರ ಸಹೋದರ ಚಂದ್ರಶೇಖರ ರಾವ್ ಮತ್ತು ಪುತ್ರ ಕೃಷ್ಣ ಜೆ. ರಾವ್ ಅವರು ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಎಡನಾಳಿ ಪ್ರವೇಶಿಸುತ್ತಿದ್ದಾರೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ಘಟನೆಗಳ ಉಲ್ಲೇಖ:

ಕಳೆದ ವರ್ಷ ರಥೋತ್ಸವದ ವೇಳೆ ದೇವರು ರಥಾರೋಹಣ ಮಾಡುವ ಮುನ್ನವೇ ಜಗನ್ನಿವಾಸ ರಾವ್ ಅವರು ಯಾವುದೇ ಅರ್ಹತೆ ಇಲ್ಲದೆ ಪವಿತ್ರ ಬ್ರಹ್ಮರಥವನ್ನು ಏರಿ ನಿಂತಿದ್ದರು. ವೀರಮಂಗಲದಲ್ಲಿ ಶ್ರೀದೇವರ ಪವಿತ್ರ ಅವಭೃತ ಸ್ನಾನ ನಡೆಯುವ ಸಂದರ್ಭದಲ್ಲಿ ಜಗನ್ನಿವಾಸ ರಾವ್ ಮತ್ತು ಕೃಷ್ಣ ಜೆ. ರಾವ್ ಅವರು ನಿಯಮ ಮೀರಿ ದೇವರ ಅತೀ ಸಮೀಪಕ್ಕೆ ಹೋಗಿದ್ದರು.

ಕಾನೂನು ಹೋರಾಟದ ಎಚ್ಚರಿಕೆ

ದೇವಸ್ಥಾನದ ಪವಿತ್ರತೆ ಮತ್ತು ಆಚರಣೆಗಳನ್ನು ಉಳಿಸಿಕೊಳ್ಳಲು ದೇವಳದ ಅಧಿಕೃತ ಪದಾರ್ಥಿಗಳೇ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಬೇಕು ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ. ಒಂದು ವೇಳೆ ಈ ಬಾರಿಯೂ ಪಿ.ಜಿ. ಜಗನ್ನಿವಾಸ ರಾವ್ ಅವರು ಧ್ವಜಾರೋಹಣದಲ್ಲಿ ಭಾಗಿಯಾದರೆ ಅಥವಾ ಬ್ರಹ್ಮರಥ ಏರಿದರೆ ಅವರ ವಿರುದ್ಧ ಕಟು ಕಾನೂನು ಹೋರಾಟ ಸಂಘಟಿಸಲಾಗುವುದು ಎಂದು ವೇದಿಕೆಯು ಎಚ್ಚರಿಸಿದೆ.

ಜಾತಿ ಮರೆಮಾಚಿ ವಂಚಿಸಿದ ಆರೋಪ: ಭಕ್ತರ ಆಕ್ರೋಶ

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿಯಂತೆ, ಪಿ.ಜಿ. ಜಗನ್ನಿವಾಸ ರಾವ್ ಅವರು ಯಾವುದೇ ಬ್ರಾಹ್ಮಣ ಪಂಗಡಕ್ಕೆ ಸೇರಿದವರಲ್ಲ. ಆದರೂ ಅವರು ತಾವು ಬ್ರಾಹ್ಮಣ ಎಂದು ಸುಳ್ಳು ಹೇಳಿ, ‘ವೇದ ಸಂವರ್ಧನಾ ಪ್ರತಿಷ್ಠಾನ’ದ ಮೂಲಕ ದೇವಸ್ಥಾನದಲ್ಲಿ ರುದ್ರಪಾರಾಯಣ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಬ್ರಾಹ್ಮಣ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡುವ ಮೂಲಕ ದೇವಸ್ಥಾನದ ಸಂಪ್ರದಾಯ ಮತ್ತು ಶುದ್ಧ ಪಾವಿತ್ರ್ಯತೆಗೆ ಭಂಗ ತರುತ್ತಿದ್ದಾರೆ ಎಂಬ ಮಾತುಗಳು ಭಕ್ತವಲಯದಲ್ಲಿ ಜನಜನಿತವಾಗಿದೆ. ಬ್ರಾಹ್ಮಣ ಪಂಗಡಕ್ಕೆ ಸೇರದ ಇವರು ರಥೋತ್ಸವದ ಪೂರ್ವದಲ್ಲಿ ಪವಿತ್ರ ಬ್ರಹ್ಮರಥ ಏರಿದ್ದು ಹೇಗೆ? ಅವಭೃತ ಸ್ನಾನದ ವೇಳೆ ಮಗನ ಜೊತೆ ದೇವರ ಅತೀ ಸಮೀಪಕ್ಕೆ ಹೋಗಲು ಅನುಮತಿ ನೀಡಿದವರು ಯಾರು? ಇದು ದೇವಳದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಪ್ರಮಾದ,” ಎಂದು ಶ್ರೀನಾಥ್ ಪ್ರಶ್ನಿಸಿದ್ದಾರೆ.

ಪುತ್ರನ ವಿರುದ್ಧ ಕ್ರಿಮಿನಲ್ ಕೇಸ್: ವಚನಭ್ರಷ್ಟರಾದ ಜಗನ್ನಿವಾಸ ರಾವ್

ಪಿ.ಜಿ. ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪವಿದ್ದು, ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ತನ್ನ ಸಹಪಾಠಿಯಾದ ಹಿಂದೂ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಮಗು ಜನಿಸಿದ ನಂತರ ಮದುವೆಯಾಗಲು ನಿರಾಕರಿಸಿ ಮೋಸ ಮಾಡಿದ್ದಾರೆ ಎಂಬ ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಪಿ.ಜಿ. ಜಗನ್ನಿವಾಸ ರಾವ್ ಅವರು ಪೊಲೀಸ್ ಠಾಣೆಯಲ್ಲೇ ತನ್ನ ಮಗನನ್ನು ಅದೇ ಯುವತಿಯೊಂದಿಗೆ ಮದುವೆ ಮಾಡಿಸುವುದಾಗಿ ದೃಢಪತ್ರ ಬರೆದುಕೊಟ್ಟಿದ್ದರು. ಆದರೆ, ನಂತರ ಮದುವೆ ಮಾಡಿಸದೆ ವಚನಭ್ರಷ್ಟರಾಗಿ ಸಂತ್ರಸ್ತೆಗೆ ಮೋಸ ಮಾಡಿದ್ದಾರೆ ಎಂದು ಯುವತಿಯ ತಾಯಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಆಪಾದಿಸಿದ್ದಾರೆ.

ಧಾರ್ಮಿಕ ಕಾರ್ಯಗಳಿಂದ ದೂರವಿಡಲು ಆಗ್ರಹ

ಒಂದೆಡೆ ಕ್ರಿಮಿನಲ್ ಹಿನ್ನೆಲೆ ಹಾಗೂ ಇನ್ನೊಂದೆಡೆ ದೇವಸ್ಥಾನದ ಸಂಪ್ರದಾಯಗಳ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಈ ವ್ಯಕ್ತಿಗಳು ಜಾತ್ರೋತ್ಸವದ ಧ್ವಜಾರೋಹಣ ಅಥವಾ ಯಾವುದೇ ಪವಿತ್ರ ಕೈಂಕರ್ಯಗಳಲ್ಲಿ ಭಾಗಿಯಾಗಬಾರದು ಎಂದು ವೇದಿಕೆ ಒತ್ತಾಯಿಸಿದೆ. “ದೇವಸ್ಥಾನದ ಖಾಯಂ ಪದಾರ್ಥಿಗಳೇ ಧಾರ್ಮಿಕ ವಿಧಿಗಳನ್ನು ನೆರವೇರಿಸಬೇಕು. ನಿಯಮ ಮೀರಿ ಅಕ್ರಮವಾಗಿ ಗರ್ಭಗುಡಿಯ ಎಡನಾಳಿ ಪ್ರವೇಶಿಸುವ ಅಥವಾ ರಥ ಏರುವ ಪ್ರಯತ್ನ ನಡೆಸಿದರೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾನೂನುಬದ್ಧವಾಗಿ ಕಟು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದು, ಈ ಬಗ್ಗೆ “ದೇವಳದ ತಂತ್ರಿಗಳಲ್ಲಿ, ಆಡಳಿತ ವರ್ಗದವರಲ್ಲಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಲ್ಲಿ ಮಾಧ್ಯಮಗಳ ಮುಖಾಂತರ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.


ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

fire

ಕೋಲ್ಕತ್ತಾ ಸರ್ಕಾರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ: 4,000 ಇವಿಎಂಗಳು ಭಸ್ಮ, ವಿಧ್ವಂಸಕ ಕೃತ್ಯದ ಶಂಕೆ?

Published

on

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಅಲಿಪೋರ್‌ನಲ್ಲಿರುವ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 4,000 ಎಲೆಕ್ಟ್ರಾನಿಕ್ ಮತಯಂತ್ರಗಳು (EVM) ಸಂಪೂರ್ಣವಾಗಿ ಸುಟ್ಟು ಬೂದಿಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ (FIR) ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

24 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ

ಸೌತ್ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದ ಒಂಭತ್ತು ಅಂತಸ್ತಿನ ಈ ಕಟ್ಟಡದಲ್ಲಿ ಬುಧವಾರ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಸಿಬ್ಬಂದಿ ಸುಮಾರು 24 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಗುರುವಾರ ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದಾಗ್ಯೂ, ಕಟ್ಟಡದ ಕೆಲವು ಭಾಗಗಳಲ್ಲಿ ಇನ್ನೂ ತಾಪಮಾನ ಹೆಚ್ಚಿರುವುದರಿಂದ ರಕ್ಷಣಾ ಮತ್ತು ತಂಪುಗೊಳಿಸುವ ಕಾರ್ಯ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ, ಕಟ್ಟಡಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಚುನಾವಣಾ ಇವಿಎಂಗಳ ನಾಶ

ಈ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದ 10 ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂಗಳನ್ನು ಈ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿತ್ತು. ಅವೆಲ್ಲವೂ ಈ ಬೆಂಕಿಯಲ್ಲಿ ನಾಶವಾಗಿವೆ ಎಂದು ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ಖಚಿತಪಡಿಸಿದ್ದಾರೆ.

ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತಪಡಿಸಿದ ಸಚಿವರು

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೌಶಿಕ್ ಚೌಧರಿ ಅವರು ಇದರಲ್ಲಿ ವಿಧ್ವಂಸಕ ಕೃತ್ಯ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

“ಇದು ಮೇಲ್ನೋಟಕ್ಕೆ ಸಾಮಾನ್ಯ ಬೆಂಕಿಯ ಅವಘಡದಂತೆ ಕಾಣುತ್ತಿಲ್ಲ. ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಮಧ್ಯದ ನಾಲ್ಕು, ಐದು ಮತ್ತು ಆರನೇ ಮಹಡಿಗಳಿಗೆ ಯಾವುದೇ ಹಾನಿಯಾಗದೆ, ನೇರವಾಗಿ ಏಳು, ಎಂಟು, ಒಂಭತ್ತು ಮತ್ತು ಹತ್ತನೇ ಮಹಡಿಗಳಿಗೆ ಬೆಂಕಿ ಹೇಗೆ ವ್ಯಾಪಿಸಿತು ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ,” ಎಂದು ಅವರು ಹೇಳಿದ್ದಾರೆ.

ರಾಜಕೀಯ ಕೆಸರೆರಚಾಟ

ಈ ಘಟನೆಯು ರಾಜ್ಯದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ಕೇಂದ್ರ ಸಚಿವ ಸುಕಾಂತ ಮಜುಂದಾರ್ ಹಾಗೂ ಬಿಜೆಪಿ ನಾಯಕ ರಾಕೇಶ್ ಸಿಂಗ್ ಅವರು, ಇದೊಂದು ಯೋಜಿತ ಪಿತೂರಿ ಇರಬಹುದು ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಪೂರಕವಾದ ಯಾವುದೇ ಅಧಿಕೃತ ಸಾಕ್ಷ್ಯಗಳು ಇದುವರೆಗೆ ಲಭ್ಯವಾಗಿಲ್ಲ.

ಎಫ್‌ಐಆರ್ ದಾಖಲು, ವಿಧಿವಿಜ್ಞಾನ ತನಿಖೆಗೆ ಕಾಯ್ದಿರಿಸಿದ ಪೊಲೀಸರು

ಸೌತ್ 24 ಪರಗಣ ಜಿಲ್ಲಾಡಳಿತದ ಪರವಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ADM) ಅಲಿಪೋರ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ (ವಿದ್ಯುತ್ ದೋಷ) ಕಾರಣದಿಂದ ಬೆಂಕಿ ಹತ್ತಿಕೊಂಡಿದೆಯೇ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವಿಧಿವಿಜ್ಞಾನ (Forensic) ತಜ್ಞರು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಲಿದ್ದು, ಅವರ ವೈಜ್ಞಾನಿಕ ವರದಿ ಬಂದ ನಂತರವಷ್ಟೇ ಬೆಂಕಿ ಅವಘಡದ ಅಸಲಿ ಕಾರಣ ಏನೆಂಬುದು ಅಧಿಕೃತವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವಿಎಂಗಳ ಜೊತೆಗೆ ಕಟ್ಟಡದಲ್ಲಿದ್ದ ಪ್ರಮುಖ ಸರ್ಕಾರಿ ದಾಖಲೆಗಳು ಹಾಗೂ ಮೂಲಸೌಕರ್ಯಗಳಿಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ಸದ್ಯ ಅಧಿಕಾರಿಗಳು ಲೆಕ್ಕಹಾಕುತ್ತಿದ್ದಾರೆ




Continue Reading

INCIDENT

ಬಾವಿಗೆ ಇಳಿದು ಉಸಿರುಗಟ್ಟಿ ಕುಸಿದ ವ್ಯಕ್ತಿ: ಪತ್ನಿಯ ಸಮಯಪ್ರಜ್ಞೆ, ಅಗ್ನಿಶಾಮಕ ದಳದ ಸಾಹಸದಿಂದ ಬದುಕುಳಿದ ನವೀನ್!

Published

on

ಸುಳ್ಯ: ಮುಂಗಾರು ಮಳೆ ಆರಂಭಕ್ಕೂ ಮುನ್ನ ಸ್ವಂತ ಮನೆಯ ಬಾವಿ ಸ್ವಚ್ಛಗೊಳಿಸಲು ಇಳಿದ ವ್ಯಕ್ತಿಯೊಬ್ಬರು ಆಮ್ಲಜನಕದ ಕೊರತೆಯಿಂದ ಬಾವಿಯೊಳಗೇ ಉಸಿರುಗಟ್ಟಿ ಕುಸಿದು ಬಿದ್ದು, ತದನಂತರ ಪತ್ನಿಯ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಸಕಾಲಿಕ ಸಾಹಸದಿಂದ ಪ್ರಾಣಾಪಾಯದಿಂದ ಪಾರಾದ ರೋಮಾಂಚನಕಾರಿ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಸಮೀಪದ ಕಂದಡ್ಕ ಎಂಬಲ್ಲಿ ನಡೆದಿದೆ.

ಕಂದಡ್ಕ ನಿವಾಸಿ ನವೀನ್ ಫೆರಾವೋ ಬದುಕುಳಿದ ಅದೃಷ್ಟವಂತ. ಅವರ ಪತ್ನಿ, ಸುಳ್ಯ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿರುವ ರೂತ್ ಮೇರಿ ಅವರ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆಯ ವಿವರ:

ಮಳೆಗಾಲ ಆರಂಭವಾಗುವ ಮುನ್ನ ಬಾವಿ ಕ್ಲೀನ್ ಮಾಡೋಣ ಎಂದು ನವೀನ್ ಅವರು ತಮ್ಮ ಮನೆಯ ಸುಮಾರು 40 ಅಡಿ ಆಳದ ಬಾವಿಗೆ ಹಗ್ಗದ ಸಹಾಯದಿಂದ ಇಳಿದಿದ್ದಾರೆ. ಬಾವಿಯ ತಳಭಾಗದ ಕೊನೆಯ ಎರಡು ರಿಂಗ್‌ಗಳು ಬಾಕಿ ಇರುವಾಗ ಅವರಿಗೆ ತೀವ್ರ ಆಮ್ಲಜನಕದ (Oxygen) ಕೊರತೆ ಉಂಟಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ನವೀನ್ ತಕ್ಷಣವೇ ವಾಪಸ್ ಮೇಲೆ ಬರಲು ಪ್ರಯತ್ನಿಸಿದರಾದರೂ, ಅಷ್ಟರಲ್ಲೇ ಪ್ರಜ್ಞೆ ತಪ್ಪಿ ಬಾವಿಯೊಳಗೆ ಕುಸಿದು ಬಿದ್ದಿದ್ದಾರೆ.

ಪತ್ನಿಯ ಸಮಯಪ್ರಜ್ಞೆ – ದೇವತೆಯಂತೆ ಬಂದ ಅಗ್ನಿಶಾಮಕ ದಳ:

ಬಾವಿಯ ಮೇಲಿದ್ದ ಮೌರಿಸ್ ಡಿಸೋಜಾ ಹಾಗೂ ನವೀನ್ ಅವರ ಮಾವ ಮಾರ್ಕ್ ಅವರು ತಕ್ಷಣವೇ ನವೀನ್ ಪತ್ನಿ ರೂತ್ ಮೇರಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೂತ್ ಮೇರಿ, ನೆರೆಹೊರೆಯವರನ್ನು ಕರೆಯುವುದರ ಜೊತೆಗೆ ಅತ್ಯಂತ ಜಾಣ್ಮೆಯಿಂದ ಅಗ್ನಿಶಾಮಕ ದಳಕ್ಕೆ ಮತ್ತು ತಾಲೂಕು ಆಸ್ಪತ್ರೆಯ ಸಿಬ್ಬಂದಿ ಲೀಲಾಧರ್ ಅವರಿಗೆ ಕರೆ ಮಾಡಿ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.

ಮಾಹಿತಿ ಸಿಗುತ್ತಿದ್ದಂತೆ ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಆಮ್ಲಜನಕದ ಕವಚ ಧರಿಸಿ ಬಾವಿಯೊಳಗೆ ಇಳಿದು ಅತ್ಯಂತ ಸಾಹಸದಿಂದ ನವೀನ್ ಅವರನ್ನು ಮೇಲಕ್ಕೆ ಎತ್ತಿದ್ದಾರೆ.

ಜೀವರಕ್ಷಕವಾದ ಸಿಪಿಆ‌ರ್ (CPR) ಚಿಕಿತ್ಸೆ:

ಬಾವಿಯಿಂದ ಮೇಲಕ್ಕೆ ಎತ್ತಿದಾಗ ನವೀನ್ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆದರೆ ವೃತ್ತಿಯಿಂದ ನರ್ಸ್ ಆಗಿರುವ ಪತ್ನಿ ರೂತ್ ಮೇರಿ ಅವರು ಧೃತಿಗೆಡದೆ, ತಕ್ಷಣವೇ ಪತಿಗೆ ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ (CPR) ನೀಡಿದ್ದಾರೆ. ಇವರ ಸಕಾಲಿಕ ಸಿಪಿಆರ್ ಚಿಕಿತ್ಸೆಯ ಫಲವಾಗಿ ನವೀನ್ ತಕ್ಷಣವೇ ಉಸಿರಾಡಲು ಆರಂಭಿಸಿದ್ದಾರೆ.

ಆಸ್ಪತ್ರೆಯಲ್ಲಿ ಚುರುಕಿನ ಚಿಕಿತ್ಸೆ – ನವೀನ್ ಚೇತರಿಕೆ:

ಅಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ‘ಶಿವ ಆಂಬುಲೆನ್ಸ್’ ಮೂಲಕ ನವೀನ್ ಅವರನ್ನು ತಕ್ಷಣವೇ ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ರೂತ್ ಮೇರಿ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಅಲ್ಲಿನ ಸಿಬ್ಬಂದಿ ಪ್ರೇಮಾವತಿ ಸಿಸ್ಟರ್ ಅವರಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ವೇಗವಾಗಿ ತುರ್ತು ಚಿಕಿತ್ಸೆ ನೀಡಿದ್ದರಿಂದ ನವೀನ್ ಅವರು ಪ್ರಾಣಾಪಾಯದಿಂದ ಪಾರಾಗಿ, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸ್ ಸಿಬ್ಬಂದಿಯವರೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃತಜ್ಞತೆ ಸಲ್ಲಿಕೆ: ಕರೆ ಮಾಡಿದ ತಕ್ಷಣವೇ ಓಡೋಡಿ ಬಂದು ಜೀವರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಆಂಬುಲೆನ್ಸ್ ಚಾಲಕ ಹಾಗೂ ಮಾಲೀಕರ ಸಂಘದವರಿಗೆ, ಸುಳ್ಯ ತಾಲೂಕು ಆಸ್ಪತ್ರೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಸಿಬ್ಬಂದಿಗೆ ಮತ್ತು ಸಂಕಷ್ಟದ ಸಮಯದಲ್ಲಿ ಹೆಗಲಿಗೆ ನಿಂತ ನೆರೆಹೊರೆಯ ಸಾರ್ವಜನಿಕರಿಗೆ ನವೀನ್ ಫೆರಾವೋ ಕುಟುಂಬಸ್ಥರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.




Continue Reading

DEATH

ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ

Published

on

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಸಂಚಕ್ಕಡವ್ (ಪೊನೋರಂ) ಎಂಬಲ್ಲಿ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಇಬ್ಬರು ಸೋದರ ಸಂಬಂಧಿ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು (ಶನಿವಾರ) ಸಂಜೆ ಸಂಭವಿಸಿದೆ

ಅಬೂಬಕರ್ ಎಂಬುವವರ ಪುತ್ರರಾದ ಮುಸಮ್ಮಿಲ್ (14 ವರ್ಷ – 8ನೇ ತರಗತಿ) ಮತ್ತು ಮುನ್ಸಿರ್ (10 ವರ್ಷ – 5ನೇ ತರಗತಿ) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇವರ ನೆರೆಮನೆಯ 9 ವರ್ಷದ ಮತ್ತೊಬ್ಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಮೃತ ಬಾಲಕರು ಸ್ಥಳೀಯ ಅಡೂರು ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ .

ಘಟನೆಯ ವಿವರ: ಶಾಲಾ ರಜಾದಿನಗಳ ಹಿನ್ನೆಲೆಯಲ್ಲಿ ಈ ಮಕ್ಕಳು ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿದ್ದ ಬಸ್ ಕಾಯುವ ನಿಲ್ದಾಣದ (Bus Waiting Shed) ಬಳಿ ಆಟವಾಡುತ್ತಾ ಪುಟ್ಟದೊಂದು ತಾತ್ಕಾಲಿಕ ಅಂಗಡಿಯನ್ನು ಇಟ್ಟುಕೊಂಡಿದ್ದರು . ಇಂದು ಸಂಜೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮೂವರೂ ಮಕ್ಕಳು ಅದೇ ಶೆಡ್‌ನ ಒಳಗೆ ಕುಳಿತಿದ್ದರು . ಈ ವೇಳೆ ಮಳೆಯ ತೀವ್ರತೆಗೆ ರಸ್ತೆಗಿಂತ ಎತ್ತರದಲ್ಲಿದ್ದ ಇವರ ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಏಕಾಏಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ .

ಗೋಡೆಯ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ನೇರವಾಗಿ ಬಸ್ ಶೆಡ್ ಹಾಗೂ ಅದರೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ . ಮಣ್ಣಿನ ರಾಶಿಯಡಿ ಸಿಲುಕಿದ ಮಕ್ಕಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಇಬ್ಬರು ಸಹೋದರರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು . ಸದ್ಯ ಗಾಯಗೊಂಡ ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಿಂದ ಅಡೂರು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ






Continue Reading

Trending

Copyright © 2025 Deevatige

error: Content is protected !!