Connect with us

complaint

ವಿಟ್ಲ ಪ್ರತ್ಯೇಕ ತಾಲೂಕು ಘೋಷಣೆಗೆ ಒತ್ತಾಯ: ಶಾಸಕ ಅಶೋಕ್ ಕುಮಾರ್ ರೈಗೆ ಹೋರಾಟ ಸಮಿತಿಯಿಂದ ಮನವಿ

Published

on

ವಿಟ್ಲ: ದಶಕಗಳ ಕಾಲದ ಬೇಡಿಕೆಯಾದ ವಿಟ್ಲವನ್ನು ಪ್ರತ್ಯೇಕ ತಾಲೂಕನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿಯ ಪದಾಧಿಕಾರಿಗಳು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಬಂಟ್ವಾಳ ತಾಲೂಕಿನ ಹೋಬಳಿ ಕೇಂದ್ರವಾಗಿರುವ ವಿಟ್ಲವು ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ತಾಲೂಕಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಸಮಿತಿಯು ಶಾಸಕರ ಗಮನಕ್ಕೆ ತಂದಿದೆ.

ಅರ್ಧ ಶತಮಾನದ ಹೋರಾಟದ ಇತಿಹಾಸ (1973 ರಿಂದ):

ವಿಟ್ಲ ತಾಲೂಕು ರಚನೆಯ ಬೇಡಿಕೆಗೆ ಸುಮಾರು 53 ವರ್ಷಗಳ ಸುದೀರ್ಘ ಇತಿಹಾಸವಿದೆ ಎಂದು ಹೋರಾಟ ಸಮಿತಿ ನೆನಪಿಸಿದೆ.

1973ರ ವಾಸುದೇವ ರಾವ್ ಸಮಿತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ತಾಲೂಕುಗಳ ರಚನೆ ಕುರಿತು ಅಧ್ಯಯನ ನಡೆಸಲು ಅಂದಿನ ಸರ್ಕಾರ ನೇಮಿಸಿದ್ದ ಶ್ರೀ ವಾಸುದೇವ ರಾವ್ ಸಮಿತಿಯು ವಿಟ್ಲ ತಾಲೂಕು ರಚನೆಯ ಅಗತ್ಯದ ಕುರಿತು ವರದಿ ನೀಡಿತ್ತು.

ದಿವಂಗತರ ಹೋರಾಟ: ದಿವಂಗತ ಬಾಬು ಶೆಟ್ಟಿ ವಿಟ್ಲ, ದಿವಂಗತ ಸಂಸದ ನಾರಾಯಣ ಭಟ್ (ಅಂದಿನ ರಾಜ್ಯ ಸರ್ಕಾರದ ಆಹಾರ ಸಚಿವರಾಗಿದ್ದವರು) ಹಾಗೂ ಶ್ರೀ ಬಿ. ವಿಠಲದಾಸ ಶೆಟ್ಟಿ ಅವರು ಅಂದಿನ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಟ್ಲ ತಾಲೂಕು ರಚಿಸುವಂತೆ ಒತ್ತಾಯಿಸಿದ್ದರು.

1985ರ ಪುನರ್ ವಿಂಗಡನಾ ಸಮಿತಿ: ಈ ಸಮಿತಿಯು ತನ್ನ ವರದಿಯಲ್ಲಿ ವಿಟ್ಲ ತಾಲೂಕು ರಚನೆಗೆ ಶಿಫಾರಸು ಮಾಡಿತ್ತಾದರೂ ಅದು ಕಾರ್ಯಗತವಾಗಲಿಲ್ಲ.

2013ರ ಹೋರಾಟ: 2013 ರಲ್ಲಿ ವಿಟ್ಲ ತಾಲೂಕು ರಚನೆಗಾಗಿ ಮಾಣಿಲ ಗ್ರಾಮದ ಮುರುವ ಮಹಾಬಲ ಭಟ್ಟರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆದಿತ್ತು. ಆದರೆ, ತದನಂತರದ ದಿನಗಳಲ್ಲಿ ಜಿಲ್ಲೆಯ ಉಳ್ಳಾಲ, ಕಡಬ, ಮೂಡಬಿದ್ರೆ ಮುಂತಾದ ಹೊಸ ತಾಲೂಕುಗಳು ರಚನೆಯಾದರೂ ವಿಟ್ಲ ತಾಲೂಕು ರಚನೆ ಮಾತ್ರ ಕೇವಲ ಕನಸಾಗಿಯೇ ಉಳಿದಿದೆ.

ಯಾಕೆ ವಿಟ್ಲ ತಾಲೂಕಾಗಬೇಕು? ಪ್ರಸ್ತುತ ಸಮಸ್ಯೆಗಳು:

ಅತಿ ದೊಡ್ಡ ತಾಲೂಕಿನ ಹೊರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬಂಟ್ವಾಳ ತಾಲೂಕು ಅತ್ಯಂತ ದೊಡ್ಡದಾಗಿದ್ದು, ಬರೋಬ್ಬರಿ 75 ಗ್ರಾಮಗಳನ್ನು ಒಳಗೊಂಡಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಇದನ್ನು ವಿಭಜಿಸುವುದು ಅನಿವಾರ್ಯ.

50 ಕಿ.ಮೀ ದೂರದ ಪ್ರಯಾಣ: ವಿಟ್ಲ ಹೋಬಳಿ ವ್ಯಾಪ್ತಿಯ ಕರೋಪಾಡಿ, ಕನ್ಯಾನ, ಪೆರುವಾಯಿ, ಮಾಣಿಲ, ಕೇಪು, ಪುಣಚ, ಬಿಳಿಯೂರು, ಕುಳ, ವಿಟ್ಲ, ಮುಡ್ನೂರು, ಕೊಳ್ನಾಡು, ಸಾಲೆತ್ತೂರು ಇತ್ಯಾದಿ ಗ್ರಾಮಗಳ ಸಾರ್ವಜನಿಕರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಪಟ್ಟಾ, ಸರ್ಕಾರಿ ಕೆಲಸಗಳು ಹಾಗೂ ಬ್ಯಾಂಕ್ ಕಚೇರಿಗಳ ಕೆಲಸಕ್ಕಾಗಿ ಸುಮಾರು 25 ರಿಂದ 50 ಕಿ.ಮೀ. ದೂರದ ಬಂಟ್ವಾಳ ತಾಲೂಕು ಕಚೇರಿಗೆ ಅಲೆಯಬೇಕಾಗಿದೆ. ಇದು ಗಡಿನಾಡಿನ ಈ ಭಾಗದ ಜನರ ಆರ್ಥಿಕ ಮತ್ತು ಸಮಯದ ನಷ್ಟಕ್ಕೆ ಕಾರಣವಾಗಿದೆ.

ಗಡಿ ಪ್ರದೇಶದ ಅಭಿವೃದ್ಧಿ: ಕೇರಳ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ವಿಟ್ಲ ಭಾಗದ ಸಮಗ್ರ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ವಿಸ್ತರಣೆಗೆ ತಾಲೂಕು ಕೇಂದ್ರದ ಅವಶ್ಯಕತೆ ಹೆಚ್ಚಿದೆ.

ಮನವಿಯ ಮುಖ್ಯಾಂಶಗಳು:

ಬೃಹತ್ ತಾಲೂಕಿನ ವಿಭಜನೆ: ಬಂಟ್ವಾಳ ತಾಲೂಕು 75 ಗ್ರಾಮಗಳನ್ನು ಹೊಂದಿದ್ದು, ಜಿಲ್ಲೆಯಲ್ಲೇ ಅತಿ ದೊಡ್ಡ ತಾಲೂಕಾಗಿದೆ. ಆಡಳಿತಾತ್ಮಕ ಸುಲಭತೆಗಾಗಿ ಇದನ್ನು ವಿಭಜಿಸ ಬೇಕು.

ದೂರದ ಪ್ರಯಾಣ: ಕರೋಪಾಡಿ, ಕನ್ಯಾನ, ಪೆರುವಾಯಿ ಸೇರಿದಂತೆ ಗಡಿಭಾಗದ ಜನರು ಸರಕಾರಿ ಕೆಲಸಗಳಿಗಾಗಿ ಸುಮಾರು 30 ರಿಂದ 50 ಕಿ.ಮೀ ದೂರದ ಬಂಟ್ವಾಳಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಅರ್ಹತೆಗಳು: ವಿಟ್ಲ ಹೋಬಳಿಯು 65,547 ಎಕರೆ ವಿಸ್ತೀರ್ಣ ಹೊಂದಿದ್ದು, ವಾರ್ಷಿಕ ಕೋಟಿಗಟ್ಟಲೆ ಭೂ ಕಂದಾಯ ಮತ್ತು ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸುತ್ತಿದೆ. 2011ರ ಜನಗಣತಿಯಂತೆ ಸುಮಾರು 1.94 ಲಕ್ಷ ಜನಸಂಖ್ಯೆಯನ್ನು ಈ ಭಾಗ ಹೊಂದಿದೆ.

ವಿಟ್ಲ ಹೋಬಳಿಯನ್ನು ಪ್ರತ್ಯೇಕಿಸಿದರೂ ಸಹ ಬಂಟ್ವಾಳ ತಾಲೂಕು 41 ಗ್ರಾಮಗಳು ಹಾಗೂ 1,94,860 ಜನಸಂಖ್ಯೆಯೊಂದಿಗೆ ವಿಶಾಲವಾಗಿಯೇ ಉಳಿಯುತ್ತದೆ. ಆದ್ದರಿಂದ ಭೌಗೋಳಿಕ, ಜನಸಂಖ್ಯೆ ಹಾಗೂ ಸರ್ಕಾರಿ ಸೌಲಭ್ಯಗಳ ಲಭ್ಯತೆಯ ಅನುಗುಣವಾಗಿ ವಿಟ್ಲ ತಾಲೂಕು ರಚನೆ ತೀರಾ ನ್ಯಾಯಸಮ್ಮತವಾಗಿದೆ.

ಸಮಿತಿಯ ವಿನಂತಿ ಮತ್ತು ಮುಂದಿನ ನಡೆ:

ವಿಟ್ಲ ಭಾಗದ ಜನರ ಸಹಬಾಳ್ವೆ, ಸಮಪಾಲು, ಶಾಂತಿ ಸೌಹಾರ್ದತೆ ಹಾಗೂ ಈ ಮೂಲಕ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದಿಕ್ಕಿನಲ್ಲಿ ವಿಟ್ಲ ತಾಲೂಕು ರಚನೆಯನ್ನು ಮಾಡಿಕೊಡಬೇಕಾಗಿ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಸಕರಲ್ಲಿ ವಿನಂತಿಸಿಕೊಂಡಿದ್ದಾರೆ. ಮಾನ್ಯ ಶಾಸಕರು ಕೂಡಾ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷ ಬಿ ಕೆ ಬಶೀರ್, ಪ್ರ.ಕಾರ್ಯದರ್ಶಿ ರಮಾನಾಥ ವಿಟ್ಲ,ಉಪಾಧ್ಯಕ್ಷ ಹಸೈನಾರ್ ಕಡಂಬು, ಸುದರ್ಶನ್ ಪಡಿಯಾರ್, ಕಾನ ಈಶ್ವರಭಟ್, ರಾಮಣ್ಣ ಕರೋಪಾಡಿ,ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ,ರಾಮಮುಗೇರ,ಜಾಫರ್ ಖಾನ್, ಶ್ರೀಧರ್ ಶೆಟ್ಟಿ ಪೊಲ್ಯ,ಸದಾನಂದಗೌಡ ಸೇರಾಜೆ,ಇಕ್ಬಾಲ್ ವಿಟ್ಲ, ದಿನಕರ ಆಳ್ವ ವಿಟ್ಲ ಮೊದಲಾವರು ಉಪಸ್ಥಿತರಿದ್ದರು





ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಅಲೆಕ್ಕಾಡಿಯಲ್ಲಿ ಜೀವಭಯದಲ್ಲೇ ಸಾರ್ವಜನಿಕರ ಸಂಚಾರ: ಹಿರಿದಾದ ಮರ, ವಿದ್ಯುತ್ ತಂತಿಗಳ ಜಾಲ – ದುರಂತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಖಚಿತ!

Published

on

ಮುರುಳ್ಯ / ಸುಳ್ಯ: ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮದ್ಯೆ ಬರುವ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಸ್ ತಂಗುದಾಣದ ಬಳಿ ಸಾರ್ವಜನಿಕರ ಜೀವಕ್ಕೆ ಭಾರಿ ಬೆದರಿಕೆ ಎದುರಾಗಿದೆ. ರಸ್ತೆ ಬದಿಯಲ್ಲಿರುವ ಹಿರಿದಾದ ಅಕೇಶಿಯಾ ಹಾಗೂ ಅಪಾಯಕಾರಿ ನೀಲಗಿರಿ ಮರಗಳು ತಂಗುದಾಣ ಹಾಗೂ ವಿದ್ಯುತ್ ಲೈನ್‌ಗಳ ಮೇಲೆ ವಾಲಿ ನಿಂತಿದ್ದು, ಯಾವಾಗ ಬೇಕಾದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.

ಸ್ಥಳೀಯರ ಆತಂಕವೇನು?

ಅಲೆಕ್ಕಾಡಿ ಬಸ್ ನಿಲ್ದಾಣವು ಪ್ರತಿನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರಿಂದ ರಶ್ ಆಗಿರುತ್ತದೆ. ಬಸ್ ಕಾಯುವ ಪ್ರಯಾಣಿಕರು ಹಾಗೂ ಆಟೋ ರಿಕ್ಷಾಗಳು ನಿಲ್ಲುವ ಸ್ಥಳದ ಮೇಲೆಯೇ ಈ ಬೃಹತ್ ಮರಗಳ ಕೊಂಬೆಗಳು ಮತ್ತು ವಿದ್ಯುತ್ ಮಾರ್ಗಗಳು (Power lines) ಹಾದುಹೋಗಿವೆ.

ಕಳೆದ ವರ್ಷವೇ ಈ ಸಂಬಂಧ ಗ್ರಾಮಸ್ಥರು ಪಂಜ ವಲಯ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಆದರೆ ಅರಣ್ಯ ಇಲಾಖೆ ಕೇವಲ ಒಂದೇ ಒಂದು ಮರವನ್ನು ತೆರವುಗೊಳಿಸಿ ಕೈತೊಳೆದುಕೊಂಡಿದೆ ಹೊರತು ಪೂರ್ಣ ಪ್ರಮಾಣದ ಪರಿಹಾರ ಕಲ್ಪಿಸಿಲ್ಲ.

ಮತ್ತೆ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಗೆ ದೂರು:

ಇದೀಗ ಮಳೆಗಾಲ ತೀವ್ರಗೊಳ್ಳುತ್ತಿದ್ದು, ಗಾಳಿ-ಮಳೆಗೆ ಈ ಮರಗಳು ಬಿದ್ದರೆ ಕನಿಷ್ಠ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಸಮಗೊಳ್ಳುವ ಜತೆಗೆ, ಸ್ಥಳದಲ್ಲಿದ್ದವರ ಪ್ರಾಣಕ್ಕೇ ಕಂಟಕವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲೆಕ್ಕಾಡಿಯ ನಾಗರಿಕರು ಮುರುಳ್ಯ ಗ್ರಾಮ ಪಂಚಾಯತ್, ಪಂಜ ವಲಯ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಇಲಾಖೆಗೆ ಪುನಃ ಮನವಿ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಐ ಬ್ಯಾನರ್ ಅಭಿಯಾನ:

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು “ಅಲೆಕ್ಕಾಡಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಜೀವಭಯ!” ಎಂಬ ಎಐ (AI) ವಿನ್ಯಾಸದ ಜಾಗೃತಿ ಪೋಸ್ಟರ್‌ಗಳು ಹಾಗೂ ಅರ್ಜಿ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.

ತಕ್ಷಣವೇ ಕ್ರಮಕ್ಕೆ ಆಗ್ರಹ:

ಯಾವುದೇ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯ ಆಡಳಿತ ಜಂಟಿ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿರುವ ಮರಗಳು ಮತ್ತು ಕೊಂಬೆಗಳನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

Continue Reading

Belthangady

ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!

Published

on

ವಿಶೇಷ ವಿಶ್ಲೇಷಣಾ ವರದಿ

ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆಗಳು, ಕೇವಲ ಒಂದು ಹಳೆಯ ಕ್ರಿಮಿನಲ್ ಕಡತವನ್ನುಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಯಾಗಬಾರದು. ಇದು ಭಾರತೀಯ ತನಿಖಾ ವ್ಯವಸ್ಥೆಗೆ ತನ್ನ ವಿಶ್ವಾಸಾರ್ಹತೆಯನ್ನು ನಾಗರಿಕ ಸಮಾಜದ ಎದುರು ಸಾಬೀತು ಪಡಿಸುವ ಮತ್ತು ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಅತ್ಯಂತ ಗಂಭೀರ ಸುಸಂದರ್ಭವಾಗಿದೆ.

ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ, ನ್ಯಾಯಾಲಯವು ಸಿಬಿಐ ತನಿಖೆಯ ವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಹೊಸ ತನಿಖೆಯ ಭರವಸೆ ಮೂಡಿದೆ. ಆದರೆ, ಈ ಹಂತದಲ್ಲಿ ಉದ್ಭವಿಸುವ ಅತ್ಯಂತ ಗಂಭೀರ ಪ್ರಶ್ನೆ ಎಂದರೆ—“ಹಿಂದಿನ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡ ಮೇಲೆ, ಆ ಲೋಪಗಳಿಗೆ ಕಾರಣರಾದ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಬೇಡವೇ?”

ತನಿಖಾಧಿಕಾರಿಯ ಕರ್ತವ್ಯ ಲೋಪವನ್ನು ತನಿಖೆ ಮಾಡೋರು ಯಾರು?

ಒಬ್ಬ ಸಾಮಾನ್ಯ ನಾಗರಿಕ ಕಾನೂನು ಉಲ್ಲಂಘಿಸಿದರೆ ಅಥವಾ ತಪ್ಪು ಮಾಡಿದರೆ ಆತನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಒಂದು ಜವಾಬ್ದಾರಿಯುತ ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯೇ ತನಿಖೆಯಲ್ಲಿ ಗಂಭೀರ ಲೋಪವೆಸಗಿದಾಗ ಈ ತಪ್ಪಿತಸ್ಥಅಧಿಕಾರಿಯ ಕರ್ತವ್ಯಲೋಪವನ್ನು ಪ್ರಶ್ನಿಸುವವರು ಯಾರು ಎಂಬುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ!

ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ನಡೆಯಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ನ್ಯಾಯಸಮ್ಮತವೋ, ಅಷ್ಟೇ ಪ್ರಾಮುಖ್ಯತೆಯನ್ನು ಈ ಹಿಂದೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ಕರ್ತವ್ಯ ಪರಿಶೀಲನೆಗೂ ನೀಡಬೇಕಾಗಿದೆ. ಮರು ತನಿಖೆ ಎಂದರೆ ಕೇವಲ “ಹೊಸ ಆರೋಪಿಯನ್ನು ಹುಡುಕುವುದು” ಮಾತ್ರವಲ್ಲ; “ಹಿಂದಿನ ತನಿಖೆಗಳು ಏಕೆ ಮತ್ತು ಯಾರಿಂದ ಮತ್ತು ಹೇಗೆ ವಿಫಲವಾದವು?” ಎಂಬುದರ ಸತ್ಯಾಸತ್ಯತೆಯನ್ನು ಹೊರಗೆಳೆಯುವುದೂ ಆಗಿದೆ.

ಮೂರೂ ಹಂತಗಳ ವೈಫಲ್ಯ: ಪ್ರಶ್ನೆಗೆ ಸಿಲುಕಿದ ತನಿಖಾ ಸಂಸ್ಥೆಗಳು

ಈ ಪ್ರಕರಣದಲ್ಲಿ ತನಿಖೆಯು ಮೂರು ಪ್ರಮುಖ ಹಂತಗಳನ್ನು ದಾಟಿ ಬಂದಿದೆ:

  1. ಸ್ಥಳೀಯ ಪೊಲೀಸ್ ತನಿಖೆ (ಜಿಲ್ಲಾ ಮಟ್ಟ)
  2. ರಾಜ್ಯ ಸಿಐಡಿ ತನಿಖೆ (ರಾಜ್ಯ ಸರ್ಕಾರದ ಅಧೀನ)
  3. ಸಿಬಿಐ ತನಿಖೆ (ಕೇಂದ್ರ ಸರ್ಕಾರದ ಅಧೀನ)

ಈ ಮೂರೂ ಹಂತಗಳ ತನಿಖೆಗಳು ಮುಗಿದ ಮೇಲೆಯೂ ಸಮಾಜದಲ್ಲಿ ಮತ್ತು ಸಂತ್ರಸ್ತ ಕುಟುಂಬದಲ್ಲಿ ಸತ್ಯದ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ ಎಂದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಷ್ಟೇ ಅಲ್ಲ— ಈವರೆಗೆ ತನಿಖೆ ನಡೆಸಿದ ತನಿಖಾಸಂಸ್ಥೆಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಗಳ ಮೇಲೆ ಅಪನಂಬಿಕೆ ಬಂದಿದೆ. ಇದನ್ನು ಹೋಗಲಾಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ.

ಅಧಿಕಾರದ ಸರಪಳಿಗಳು ಬೇರೆ ಬೇರೆಯಾಗಿರಬಹುದು; ಆದರೆ ಭಾರತೀಯ ಸಂವಿಧಾನದ ಮುಂದೆ ಪ್ರತಿಯೊಂದು ತನಿಖಾ ಸಂಸ್ಥೆಯ ಕರ್ತವ್ಯವೂ ಒಂದೇ:

  • ಸತ್ಯವನ್ನು ಪತ್ತೆಹಚ್ಚುವುದು
  • ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು
  • ಯಾವುದೇ ಕಾರಣಕ್ಕೂ ನಿರಪರಾಧಿಯನ್ನು ಬಲಿಪಶು ಮಾಡದಿರುವುದು
  • ನಿಜವಾದ ಅಪರಾಧಿಯನ್ನು ಯಾವುದೇ ಪ್ರಭಾವಕ್ಕೂ ಒಳಗಾಗದೆ ರಕ್ಷಿಸದಿರುವುದು

ಈ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗುವುದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಾಶ/ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ.

ಹೊಸ ತನಿಖಾ ಸಂಸ್ಥೆಯ ಮುಂದೆ ಇರಬೇಕಾದ ನೈಜ ಆದ್ಯತೆಗಳು

ಒಂದು ವೇಳೆ ಈ ಪ್ರಕರಣದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡ ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಷ್ಟೇ ಆಗಿರಬಾರದು. ಹಾಗೂ ಪ್ರಕರಣ ದಾರಿತಪ್ಪಲು ಕಾರಣರು ಯಾರು.? ಎಂಬುವುದರ ಪತ್ತೆಗಾಗಿ:

  • ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸಿದರು?
  • ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಯಾವುದನ್ನು ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಸಂಗ್ರಹಿಸಲಿಲ್ಲ?
  • ಯಾವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು ಹಾಗೂ ಯಾವುದನ್ನು ಕಡೆಗಣಿಸಲಾಯಿತು?
  • ತನಿಖೆಯು ತಪ್ಪು ದಿಕ್ಕಿಗೆ ತಿರುಗಲು ಯಾವ ಅಧಿಕಾರಿಯ ನಿರ್ಧಾರ ಕಾರಣವಾಯಿತು?

ನೂತನ ತನಿಖಾ ಸಂಸ್ಥೆ ಎಂದರೆ ಅದು ಕೇವಲ ಹೆಸರು ಬದಲಾವಣೆ ಎಂದಾಗಬಾರದು. ಅದು ಹಿಂದಿನ ತನಿಖಾ ಲೋಪಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕು.

ಸಂವಿಧಾನದ ಆಶಯ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷ

ಭಾರತೀಯ ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಎಲ್ಲರೂ ಸಮಾನ) ಮತ್ತು ಕಲಂ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಪ್ರಕ್ರಿಯೆ ಮತ್ತು ತನಿಖೆಯನ್ನು ಖಾತರಿಪಡಿಸುತ್ತವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ಸಮಗ್ರ ನ್ಯಾಯವ್ಯವಸ್ಥೆಯ ಬುನಾದಿಯೇ ದುರ್ಬಲಗೊಳ್ಳುತ್ತದೆ.

ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ತನಿಖಾ ಸಂಸ್ಥೆಗಳು ಇರುವುದು ಯಾರಿಗೆ? ಸರ್ಕಾರಗಳಿಗಾಗಿಯೇ? ಅಧಿಕಾರಿಗಳಿಗಾಗಿಯೇ? ರಾಜಕೀಯ ಪಕ್ಷಗಳಿಗಾಗಿಯೇ? ಅಥವಾ ದೇಶದ ನೊಂದ ಕುಟುಂಬದ ಜನಸಾಮಾನ್ಯರಿಗಾಗಿಯೇ?

ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪಕ್ಷದ ಬೆಂಬಲಿತರು ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿತರು ರಾಜ್ಯದ ಅಧೀನ ದಲ್ಲಿರುವ ತನಿಖಾ ಸಂಸ್ಥೆಗಳ ವೈಫಲ್ಯಗಳನ್ನು ಅಥವಾ ಲೋಪಗಳನ್ನು ಸಮರ್ಥಿಸಿಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ಕಾರ ಎಂದರೆ ಒಂದು ರಾಜಕೀಯ ಪಕ್ಷದ ಗೊಂಬೆಯಲ್ಲ; ಅದು ಸಂವಿಧಾನದಡಿಯಲ್ಲಿ ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಥವಾ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗುತ್ತಿರ ಬಹುದು, ಆದರೆ ನ್ಯಾಯದ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.

ಬೇಕಾಗಿದೆ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ)

ತನಿಖಾಧಿಕಾರಿ ಮಾಡುವ ಒಂದು “ಉದ್ದೇಶಪೂರ್ವಕ ಕರ್ತವ್ಯ ಲೋಪ”ದಿಂದಾಗಿ ಒಬ್ಬ ನಿರಪರಾಧಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, ನಿಜವಾದ ಅಪರಾಧಿ ಸಮಾಜದಲ್ಲಿ ಮುಕ್ತವಾಗಿ ಓಡಾಡಬಹುದು, ಮತ್ತು ಒಂದು ಬಡ ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ರಸ್ತೆಯಲ್ಲಿ ಅಲೆಯಬೇಕಾಗಬಹುದು. ಆದ್ದರಿಂದ, ಸೌಜನ್ಯ ಪ್ರಕರಣದ ಮರು ತನಿಖೆಯ ಜೊತೆಗೆ ಒಂದು ಸ್ವತಂತ್ರ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ) ಅತ್ಯಗತ್ಯವಾಗಿದೆ.

  • ಒಂದು ಮಗ್ಗಲಿನಲ್ಲಿ: ಅಪರಾಧದ ನೈಜ ತನಿಖೆ (ಅಪರಾಧಿಯನ್ನು ಪತ್ತೆಹಚ್ಚುವುದು).
  • ಮತ್ತೊಂದು ಮಗ್ಗಲಿನಲ್ಲಿ: ಹಿಂದಿನ ತನಿಖೆಗಳ ವೈಫಲ್ಯ ಮತ್ತು ಲೋಪಗಳ ಕುರಿತು ಸ್ವತಂತ್ರ ವಿಚಾರಣೆ.

ಇದು ವೈಯುಕ್ತಿಕ ದ್ವೇಷ ಸಾಧನೆ ಅಲ್ಲ, ಬದಲಾಗಿ “ಕಾನೂನಿಗಿಂತ ಯಾರೂ ಮೇಲಲ್ಲ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಎಸಗಿದರೆ ಶಿಕ್ಷೆಯನ್ನು ಅನುಭವಿಸಲೇ ಬೇಕು “ ಎಂಬ ಸಂವಿಧಾನದ ಆಶಯವನ್ನು ಸ್ಥಾಪಿಸುವುದಕ್ಕಾಗಿ. ಆಗಿದೆ.

ನ್ಯಾಯದ ಕೊನೆಯ ಭರವಸೆ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗುವುದು ಎಷ್ಟು ಮುಖ್ಯವೋ, ಈ ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯ ಹೊರಬರುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ, ನಾಳೆ ಮತ್ತೊಂದು ಬಡ ಕುಟುಂಬದ ಮಗಳ ಪ್ರಕರಣ—ಮತ್ತೆ ಅದೇ ಕಡತಗಳನ್ನು ತಿರುಚಿ ನೋಡಿ ನಕಲು ಮಾಡುವುದು, ಮುಖವಾಡ ಬದಲಿಸಿದ ಅದೇ ಅಧಿಕಾರಿಗಳು, ಅದೇ ದಾಖಲೆಗಳು ಮತ್ತು ಕೊನೆಗೆ “ಸಾಕ್ಷ್ಯಾಧಾರಗಳ ಕೊರತೆ, ಕೇಸ್‌ ಕ್ಲೋಸ್” ಎಂಬ ಅದೇ ಹಳೆಯ ವ್ಯವಸ್ಥೆಯೇ ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂಬುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ನೋವಿನ ಮಾತುಗಳು.

ಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ಮಧ್ಯಪ್ರವೇಶವು ದೇಶದ ನ್ಯಾಯವ್ಯವಸ್ಥೆಗೆ ಸಿಕ್ಕಿರುವ ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಒಂದು ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಮಾನದಂಡವನ್ನು ಸ್ಥಾಪಿಸಲು ಬಳಸಿಕೊಳ್ಳಬೇಕಿದೆ.

ಸೌಜನ್ಯಗೆ ನ್ಯಾಯ ಸಿಗಬೇಕು, ಸತ್ಯಕ್ಕೆ ಜಯವಾಗಬೇಕು ಮತ್ತು ತನಿಖಾ ವೈಫಲ್ಯವೆಸಗಿದ ವ್ಯವಸ್ಥೆಯೂ ನ್ಯಾಯದ ಮುಂದೆ ತಲೆಬಾಗಲೇಬೇಕು.

Continue Reading

complaint

ಪುತ್ತೂರು ಶಾಸಕ ಅಶೋಕ್ ರೈಗೆ ಕಾನೂನು ಸಂಕಷ್ಟ: ಮಾಜಿ ಶಾಸಕ ಸಂಜೀವ ಮಠಂದೂರು ಅವರಿಂದ ಕ್ರಿಮಿನಲ್ ಕೇಸ್ ದಾಖಲು!

Published

on

ಪುತ್ತೂರು: ಮಾಜಿ ಶಾಸಕರ ವಿರುದ್ಧ ಲಂಚ ಸ್ವೀಕಾರದ ಸುಳ್ಳು ಆರೋಪ ಮಾಡಿ ಮಾನಹಾನಿ ಉಂಟುಮಾಡಿದ ಆರೋಪದಡಿ, ಪುತ್ತೂರಿನ ಹಾಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪುತ್ತೂರಿನ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸುಳ್ಳು ಆರೋಪದ ಕಿಡಿ: ಕಳೆದ ಮೇ 25, 2026 ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮದವರನ್ನು ಕರೆಸಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, “ಪುತ್ತೂರಿನ ಇದೇ ಹಿಂದಿನ ಮಾಜಿ ಶಾಸಕರು ಅವರ ಸಮಯದಲ್ಲಿ ಹಕ್ಕು ಪತ್ರ ನೀಡಲು ಎಕ್ರೆಗೆ 2 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಿದ್ದರು. ನನ್ನ ಬಳಿ ಇದಕ್ಕೆ 45 ಜನ ಸಾಕ್ಷಿಗಳಿದ್ದಾರೆ” ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದರು.

ಮಾನಹಾನಿ ವಿರುದ್ಧ ಪೊಲೀಸ್ ದೂರು ಹಾಗೂ ಕೋರ್ಟ್ ಮೆಟ್ಟಿಲೇರಿದ ಮಾಜಿ ಶಾಸಕ: ಹಾಲಿ ಶಾಸಕರ ಈ ಹೇಳಿಕೆಯು ಸಮಾಜದಲ್ಲಿ ತಮ್ಮ ತೇಜೋವಧೆ ಮಾಡುವ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದ ಸುಳ್ಳು ಹೇಳಿಕೆಯಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊದಲು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ಮುಂದುವರಿದ ಭಾಗವಾಗಿ, ನಿನ್ನೆ (ಜುಲೈ 4, 2026) ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ದಾಖಲೆ ಸಹಿತ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ನ್ಯಾಯಾಲಯದಲ್ಲಿ ವಾದ ಮಂಡನೆ: ದೂರುದಾರರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಪರವಾಗಿ ಪ್ರಖ್ಯಾತ ವಕೀಲರಾದ ಶಿವಾನಂದ .ಎಂ. ವಕ್ಕೆತ್ತಿರಿ ವಿಟ್ಲ ಅವರು ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿದರು. ದೂರನ್ನು ಸ್ವೀಕರಿಸಿ, ಪ್ರಾಥಮಿಕ ವಾದ ಆಲಿಸಿದ ನ್ಯಾಯಾಲಯವು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಈ ಹಕ್ಕುಪತ್ರ ವಿವಾದ ಮತ್ತು ಕಾನೂನು ಹೋರಾಟ ಸದ್ಯ ಪುತ್ತೂರು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.




Continue Reading

Trending

Copyright © 2025 Deevatige

error: Content is protected !!