community
ಪುತ್ತೂರಿನಲ್ಲಿ ಪ್ರತಿಭಟನೆಗೆ ಸೂಕ್ತ ಅನುಮತಿ ಕಡ್ಡಾಯ: ನಿಯಮ ಪಾಲನೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಎಚ್ಚರಿಕೆ
ಪುತ್ತೂರು: ಆಗಸ್ಟ್ 31 ರಂದು ಪುತ್ತೂರಿನಲ್ಲಿ ಸಂಘ ಪರಿವಾರವು ‘ಪುತ್ತೂರು ಚಲೋ’ ಹಾಗೂ ಮುಸ್ಲಿಂ ಯುವಜನ ಪರಿಷತ್ ‘ಸೌಹಾರ್ದ ಚಲೋ’ ಕಾರ್ಯಕ್ರಮಗಳಿಗೆ ಕರೆ ನೀಡಿರುವ ಬೆನ್ನಲ್ಲೇ, ತಾಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರು ಪ್ರಮುಖ ಸ್ಪಷ್ಟನೆ ಮತ್ತು ಸೂಚನೆಗಳನ್ನು ನೀಡಿದ್ದಾರೆ.
ಪೋಲಿಸ್ ಇಲಾಖೆಯ ಮುಖ್ಯ ಸೂಚನೆಗಳು:
ಸಲ್ಲಿಕೆಯಾದ ಅರ್ಜಿಯ ಮರುಪರಿಶೀಲನೆ: ಆ.31ರಂದು ಪ್ರತಿಭಟನಾ ಸಭೆ ನಡೆಸಲು ಒಂದು ಸಂಘಟನೆಯು ಆ.27ರ ಬೆಳಿಗ್ಗೆ ಅರ್ಜಿ ಸಲ್ಲಿಸಿರುತ್ತದೆ. ಆದರೆ ಅರ್ಜಿಯಲ್ಲಿ ಉಲ್ಲೇಖಿಸಲಾದ ಪ್ರತಿಭಟನಾ ಸ್ಥಳವು ಸರ್ಕಾರದ ಮಾರ್ಗಸೂಚಿಗಳ (Guidelines) ಪ್ರಕಾರ ಇಲ್ಲದಿರುವುದರಿಂದ, ಸೂಕ್ತ ಸ್ಥಳವನ್ನು ಗುರುತಿಸಿ ಮರುಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗಿದೆ ಹಾಗೂ ಮಾರ್ಗಸೂಚಿಯ ಪ್ರತಿಯನ್ನು ನೀಡಲಾಗಿದೆ.
ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ: ಅದೇ ದಿನ (ಆ.31) ಮತ್ತೊಂದು ಸಂಘಟನೆಯು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಈವರೆಗೆ ಆ ಸಂಘಟನೆಯಿಂದ ಅಧಿಕೃತ ಅರ್ಜಿ ಸಲ್ಲಿಕೆಯಾಗಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸಿದಲ್ಲಿ, ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಬೇರೊಂದು ದಿನಾಂಕವನ್ನು ನಿಗದಿಪಡಿಸಿ ಅನುಮತಿ ಪಡೆಯಲು ಸೂಚಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ವಿನಂತಿ: ಸಾರ್ವಜನಿಕರು ಯಾವುದೇ ಪ್ರತಿಭಟನೆ ಅಥವಾ ಸಮಾವೇಶಗಳಲ್ಲಿ ಭಾಗವಹಿಸುವ ಮೊದಲು, ಆಯೋಜಕರು ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಕಾನೂನಾತ್ಮಕ ಅನುಮತಿಯನ್ನು ಪಡೆದುಕೊಂಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ
community
ಭಾರತದಲ್ಲಿ ಮುಸ್ಲಿಮರು ಇರಬಾರದು ಎನ್ನುವವನು ಹಿಂದೂವೇ ಅಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ
ನ್ಯೂಯಾರ್ಕ್: “ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವ ಯಾವುದೇ ವ್ಯಕ್ತಿ ಎಂದಿಗೂ ಹಿಂದೂವಾಗಿ ಉಳಿಯಲು ಸಾಧ್ಯವಿಲ್ಲ” ಎಂದು ಆರೆಸ್ಸೆಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಅಮೆರಿಕದ ನ್ಯೂಯಾರ್ಕ್ನಲ್ಲಿ ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಅಂಡ್ ಡೈಲಾಗ್’ (AHEAD) ಸಂಘಟನೆಯು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಆಯೋಜಿಸಿದ್ದ ‘ಯುನಿವರ್ಸಲ್ ಯೂನಿಟಿ ಸೆಲೆಬ್ರೇಷನ್’ (ಜಾಗತಿಕ ಏಕತಾ ಸಮಾವೇಶ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಸೇರಿದಂತೆ ವಿವಿಧ ಧರ್ಮಗಳ ಪ್ರಮುಖ ನಾಯಕರು ಭಾಗವಹಿಸಿದ್ದರು.
ಹಿಂದುತ್ವ ಮತ್ತು ಬಹುತ್ವದ ಕುರಿತು ಭಾಗವತ್ ಹೇಳಿದ್ದೇನು?
ಸಂವಾದದಲ್ಲಿ ಹಿಂದುತ್ವದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಹಿಂದುತ್ವದ ನೈಜ ಅರ್ಥವನ್ನು ವಿವರಿಸಿದರು:
ಸಮಾನತೆ ಮತ್ತು ಗೌರವ: “ನೀವು ನಿಮ್ಮನ್ನು ‘ಹಿಂದೂ’ ಎಂದು ಕರೆದುಕೊಳ್ಳಬೇಕಾದರೆ, ವಿಶ್ವದ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಗುರಿಯತ್ತ ಸಾಗುತ್ತವೆ ಎಂಬುದನ್ನು ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಘನತೆ ಇದೆ ಎಂಬುದನ್ನು ಧೃಢವಾಗಿ ನಂಬಬೇಕು. ಮನುಷ್ಯರ ನಡುವೆ ಯಾವುದೇ ರೀತಿಯ ಭೇದಭಾವವಿಲ್ಲ.”
ಏಕತೆ ಮತ್ತು ವೈವಿಧ್ಯತೆ: “ಅಮೆರಿಕದ ಸಂದರ್ಭದಲ್ಲಿ ‘ಬಹುತ್ವ’ (Pluralism) ಎಂಬ ಪದವನ್ನು ಬಳಸಿದರೆ, ಭಾರತದ ಸಂದರ್ಭದಲ್ಲಿ ‘ವೈವಿಧ್ಯತೆಯಲ್ಲಿ ಏಕತೆ’ ಎನ್ನಲಾಗುತ್ತದೆ. ಆದರೆ, ಈ ಏಕತೆ ಮತ್ತು ವೈವಿಧ್ಯತೆಗಳೆರಡೂ ಭಾರತ ಹಾಗೂ ಅಮೆರಿಕ—ಎರಡೂ ದೇಶಗಳ ಡಿಎನ್ಎಯಲ್ಲೇ ಇವೆ.”
ಜಾಗತಿಕ ಕರ್ತವ್ಯ: ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಉಲ್ಲೇಖಿಸಿದ ಅವರು, “ರಾಷ್ಟ್ರಗಳು ಕೇವಲ ಭೌಗೋಳಿಕ ಗಡಿಗಳಲ್ಲ. ಪ್ರತಿಯೊಂದು ದೇಶಕ್ಕೂ ಜಗತ್ತಿನಲ್ಲಿ ನಿರ್ದಿಷ್ಟ ಕರ್ತವ್ಯವಿದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ತಾನು ಅರಿತು, ಅದನ್ನು ಇಡೀ ಜಗತ್ತಿಗೆ ತೋರಿಸಿಕೊಡುವ ಮಹತ್ವದ ಪಾತ್ರವನ್ನು ವಹಿಸಬೇಕಿದೆ.”

1996ರ ಚರ್ಖಿ ದಾದ್ರಿ ವಿಮಾನ ದುರಂತದ ಉದಾಹರಣೆ
ನೆರವು ನೀಡುವಾಗ ಧರ್ಮ ಮುಖ್ಯವಲ್ಲ ಎಂಬುದಕ್ಕೆ 1996ರ ಜುಲೈ 12ರಂದು ಹರಿಯಾಣದ ಚರ್ಖಿ ದಾದ್ರಿ ಬಳಿ ನಡೆದ ಭೀಕರ ವಿಮಾನ ದುರಂತದ ನೆನಪನ್ನು ಅವರು ಹಂಚಿಕೊಂಡರು. (ಸೌದಿ ಅರೇಬಿಯನ್ ಹಾಗೂ ಕಝಾಕಿಸ್ತಾನ್ ವಿಮಾನಗಳು ಆಗಸದಲ್ಲೇ ಡಿಕ್ಕಿಯಾಗಿ 349 ಮಂದಿ ಮೃತಪಟ್ಟಿದ್ದರು.)
“ಅಂದು ಎರಡು ಅರಬ್ ದೇಶಗಳ ವಿಮಾನಗಳು ಡಿಕ್ಕಿಯಾಗಿದ್ದವು ಮತ್ತು ಪ್ರಯಾಣಿಕರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದರು. ಘಟನಾ ಸ್ಥಳಕ್ಕೆ ನಮ್ಮ ಆರೆಸ್ಸೆಸ್ ಸ್ವಯಂಸೇವಕರು ಮೊದಲು ತಲುಪಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದರು. ಮೃತದೇಹಗಳನ್ನು ಹೊರತೆಗೆದು, ಗುರುತು ಹಿಡಿದು, ಸಂಬಂಧಿಕರು ಬಂದಾಗ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲು ಶ್ರಮಿಸಿದರು. ಆ ಸಂದರ್ಭದಲ್ಲಿ ನಾವು ಸಂತ್ರಸ್ತರು ‘ಮುಸ್ಲಿಮರು’ ಎಂದು ಎಂದಿಗೂ ಭಾವಿಸಿರಲಿಲ್ಲ.”
ಮಾನವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆ
ಉತ್ತಮ ಚಿಂತನೆಯೇ ದೇವತ್ವ: ಪ್ರಾಣಿಗಳು ಕೇವಲ ಆಹಾರ ಮತ್ತು ದೈಹಿಕ ಅಗತ್ಯಗಳಿಗಾಗಿ ಜೀವಿಸುತ್ತವೆ. ಆದರೆ ಮನುಷ್ಯನಿಗೆ ನಾಳೆಯ ಅಗತ್ಯವನ್ನು ಊಹಿಸಿ ಯೋಚಿಸುವ ಸಾಮರ್ಥ್ಯವಿದೆ. “ಉತ್ತಮ ಮತ್ತು ಸರಿಯಾದ ಚಿಂತನೆ ಮನುಷ್ಯನನ್ನು ದೇವರ ಸಮೀಪಕ್ಕೆ ಕರೆದೊಯ್ಯುತ್ತದೆ; ತಪ್ಪು ಚಿಂತನೆ ಆತನನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸುತ್ತದೆ” ಎಂದರು.
ರಾಜಕೀಯ ಸ್ವಾರ್ಥದ ಆಟ: ಪ್ರಸ್ತುತ ರಾಜಕೀಯವು ಸ್ವಾರ್ಥದ ಆಟವಾಗಿದೆ ಎಂದ ಅವರು, ಆರೆಸ್ಸೆಸ್ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಅಭಿಪ್ರಾಯ ಬಲವಾಗಿದ್ದಾಗ ರಾಜಕಾರಣಿಗಳು ಅದರ ವಿರುದ್ಧ ಹೋಗಲು ಸಾಧ್ಯವಿಲ್ಲ, ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಮೇಯರ್ ಝೊಹ್ರಾನ್ ಮಮ್ದಾನಿ ವಿರೋಧ
ಮೋಹನ್ ಭಾಗವತ್ ಅವರ ಈ ಕಾರ್ಯಕ್ರಮಕ್ಕೂ ಮುನ್ನ ನಡೆದ ಮತ್ತೊಂದು ಸಭೆಯಲ್ಲಿ ಮಾತನಾಡಿದ್ದ ಮೇಯರ್ ಝೊಹ್ರಾನ್ ಮಮ್ದಾನಿ, RSS ವಿರುದ್ಧ ಕಳವಳ ವ್ಯಕ್ತಪಡಿಸಿದ್ದರು.
ಭಾರತದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತು RSS ನಡುವೆ ಸೈದ್ಧಾಂತಿಕ ನಂಟಿದೆ ಎಂದು ಹೇಳಿದ್ದ ಮಮ್ದಾನಿ, RSS ಅನ್ನು ‘ಕೋಮು ಸಂಘಟನೆ’ ಎಂದು ಕರೆದಿದ್ದರು. ಅಲ್ಲದೆ, ತಮ್ಮ ಕುಟುಂಬದಿಂದ ತಾವು ಕಲಿತ ಭಾರತವು ಬಹುತ್ವ ಮತ್ತು ಜಾತ್ಯತೀತತೆಯ ಸಂಕೇತವಾಗಿದೆ, ಆದರೆ ಇಂತಹ ಚಳವಳಿಗಳು ಬೆಳೆಯುತ್ತಿರುವುದು ಆತಂಕಕಾರಿ ಎಂದು ಅಭಿಪ್ರಾಯಪಟ್ಟಿದ್ದರು.
community
ಪುತ್ತೂರು ದರ್ಬೆ ಹಲ್ಲೆ ಪ್ರಕರಣ: “ರಾಜಕೀಯ, ಕೋಮು ಗಲಭೆ ಬೇಡ, ಕೇಸ್ ವಾಪಸ್ ಪಡೆಯಲು ಸಿದ್ಧ” – ಸಂತ್ರಸ್ತೆ ಮುಬಾಶಿರಾ ಮನವಿ
ಪುತ್ತೂರು: ದರ್ಬೆಯ ಜೆರಾಕ್ಸ್ ಅಂಗಡಿಯಲ್ಲಿ ಜನನ ಪ್ರಮಾಣಪತ್ರ ಲ್ಯಾಮಿನೇಷನ್ ಮಾಡುವ ವೇಳೆ ಉಂಟಾದ ಸಣ್ಣ ತಾಂತ್ರಿಕ ಸಮಸ್ಯೆಯಿoದ ಆರಂಭವಾದ ಗಲಾಟೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮುಬಾಶಿರಾ ಅವರು ಸ್ಪಷ್ಟನೆ ನೀಡಿದ್ದು, ಈ ವಿಚಾರದಲ್ಲಿ ಯಾರೂ ರಾಜಕೀಯ ಲಾಭ ಪಡೆಯುವುದು ಬೇಡ ಹಾಗೂ ಕೋಮು ಬಣ್ಣ ಬಳಿಯುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಮುಬಾಶಿರಾ ಕುಟುಂಬದವರು ಜನನ ಪ್ರಮಾಣಪತ್ರವನ್ನು ಲ್ಯಾಮಿನೇಷನ್ ಮಾಡಿಸಲು ದರ್ಬೆಯ ಜೆರಾಕ್ಸ್ ಅಂಗಡಿಗೆ ನೀಡಿದ್ದರು. ಈ ವೇಳೆ ಯಂತ್ರದಲ್ಲಾದ ತಾಂತ್ರಿಕ ಸಮಸ್ಯೆಯಿಂದಾಗಿ ಪ್ರಮಾಣಪತ್ರ ಸುಟ್ಟುಹೋಗಿತ್ತು. ಕೇವಲ ₹300 ಹಣದ ವಿಚಾರವಾಗಿ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು, ಕೊನೆಗೆ ಹಲ್ಲೆಯಲ್ಲಿ ಅಂತ್ಯಗೊಂಡಿತ್ತು. ಆದರೆ, ಪ್ರಸ್ತುತ ಈ ಸಣ್ಣ ಘಟನೆ ಕೋಮು ವೈಷಮ್ಯ ಹಾಗೂ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವುದಕ್ಕೆ ಸಂತ್ರಸ್ತೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತೆ ಮುಬಾಶಿರಾ ಅವರ ಹೇಳಿಕೆಯ ಪ್ರಮುಖ ಮುಖ್ಯಾಂಶಗಳು:
ರಾಜಕೀಯ, ಗಲಭೆ ಬೇಡ: “ನಮ್ಮ ವಿಚಾರವನ್ನು ಮುಂದಿಟ್ಟುಕೊಂಡು ಯಾರೂ ರಾಜಕೀಯ ಲಾಭ ಪಡೆಯುವುದು ಬೇಡ. ಬೇಕಿದ್ದರೆ ನಾವು ನೀಡಿದ ದೂರನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ನಮಗೆ ಯಾವುದೇ ರೀತಿಯ ಗಲಭೆ ಅಥವಾ ಕೋಮು ಸಂಘರ್ಷ ಬೇಕಾಗಿಲ್ಲ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಧರ್ಮ-ಪಕ್ಷಗಳ ಹೆಸರಿನಲ್ಲಿ ವಿಭಜಿಸಬೇಡಿ: “ಹಿಂದೂ-ಮುಸ್ಲಿಂ, ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ ಎಂದು ಪ್ರಕರಣವನ್ನು ವಿಭಜಿಸುವುದು ನಮಗೆ ಬೇಕಿಲ್ಲ. ಇಷ್ಟು ಸಣ್ಣ ವಿಚಾರ ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾವು ಊಹಿಸಿರಲಿಲ್ಲ. ಈ ಪ್ರಕರಣವನ್ನು ಇಲ್ಲಗೇ ಕೈಬಿಡಿ” ಎಂದು ವಿನಂತಿಸಿದ್ದಾರೆ.
ಘಟನೆಯ ವಿವರಣೆ: “ಘಟನೆ ನಡೆದಾಗ ಅಂಗಡಿಯವರೇ ನಮಗೆ ಹೊಡೆದರು, ನಾವು ಅಲ್ಲಿ ಏನೂ ಮಾಡಿಲ್ಲ. ಘಟನೆಯ ಬಳಿಕ ನಾವು ನೇರವಾಗಿ ಆಸ್ಪತ್ರೆಗೆ ದಾಖಲಾದೆವು. ಆ ನಂತರ ಅಂಗಡಿಯ ಬಳಿ ಗಲಾಟೆ ನಡೆಸಿದವರು ನಮ್ಮ ಪರಿಚಯದವರೂ ಅಲ್ಲ, ನಮ್ಮ ಊರಿನವರೂ ಅಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆ ವೆಚ್ಚ ನೀಡಿದರೆ ಸಾಕು: “ನಮಗೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮಗೆ ಉಂಟಾಗಿರುವ ಆಸ್ಪತ್ರೆಯ ಖರ್ಚು-ವೆಚ್ಚವನ್ನು ನೀಡಿದರೆ ಅಷ್ಟೇ ಸಾಕು, ನಮಗೆ ಬೇರೇನೂ ಬೇಡ” ಎಂದು ಮುಬಾಶಿರಾ ಹೇಳಿದ್ದಾರೆ.
ಸಣ್ಣ ಕಾರಣಕ್ಕೆ ಆರಂಭವಾದ ಗಲಾಟೆ ಇದೀಗ ಪ್ರದೇಶದಲ್ಲಿ ಕೋಮು ಸಂಘರ್ಷದ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಸೌಹಾರ್ದತೆ ಮತ್ತು ಶಾಂತಿಯನ್ನು ಬಯಸಿ ಸಂತ್ರಸ್ತೆ ಮುಬಾಶಿರಾ ಅವರು ನೀಡಿರುವ ಈ ಮನವಿ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಮಹತ್ವವನ್ನು ಪಡೆದುಕೊಂಡಿದೆ
community
ನಾರಾಯಣ ಗುರು ನಿಗಮಕ್ಕೆ ಬಜೆಟ್ ನಲ್ಲಿ ಅನುದಾನವಿಲ್ಲ ; ಸರಕಾರದ ಕ್ರಮಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ ತೀವ್ರ ಅಸಮಾಧಾನ
ಕಾಂಗ್ರೆಸ್ ಸರ್ಕಾರವು ನಾಲ್ಕನೇ ಬಾರಿ ಮಂಡಿಸಿದ ಬಜೆಟ್ ನಲ್ಲೂ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಘೋಷಿಸದೆ ಸಮುದಾಯವನ್ನು ಕಡೆಗಣಿಸಿರುವ ಬಗ್ಗೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ತೀವ್ರವಾಗಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಗಮನಸೆಳೆದ ಪಕ್ಷಾತೀತ ಶಾಸಕರಿಗೆ ಅಭಿನಂದನೆ ಸಲ್ಲಿಸಿದೆ.
ಕಾಂಗ್ರೆಸ್ ಸರಕಾರ ಬಂದು ಮೂರು ವರ್ಷದಲ್ಲಿ ನಾಲ್ಕನೇ ಬಜೆಟ್ ಮಂಡಿಸಿದರೂ ನೂತನವಾಗಿ ರಚನೆ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ ಅನುದಾನ ಬಿಡುಗಡೆ ಮಾಡದಿರುವುದು ಅತ್ಯಂತ ಖೇದಕರ. ಈ ಬಾರಿ ರಾಜ್ಯದ ಈಡಿಗ ಮತ್ತು 26 ಪಂಗಡಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ಈ ಬಗ್ಗೆ ನಡೆಸಿದ ಹೋರಾಟವನ್ನು ಸರಕಾರವು ಕಡೆಗಣಿಸಿ ಸಮುದಾಯದ ಜನರಿಗೆ ದ್ರೋಹ ಎಸಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈಡಿಗ ನಿಗಮ ರಚನೆಯಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರೂ ನಾರಾಯಣ ಗುರು ಅಭಿವೃದ್ಧಿ ಕೋಶಕ್ಕೆ ಮೀಸಲಿಟ್ಟಿದ್ದ 10 ಕೋಟಿ ರೂಪಾಯಿ ಹಣವನ್ನು ಮಾತ್ರ ವರ್ಗಾವಣೆ ಮಾಡಲಾಗುವುದು ಎಂದು ಸರಕಾರ ನೀಡಿರುವ ಹೇಳಿಕೆ ಈ ಸಮಾಜಕ್ಕೆ ಮಾಡಿದ ಅಗೌರವ. ಕನಿಷ್ಠ 500 ಕೋಟಿ ರೂ ಅನುದಾನ ಒದಗಿಸುವಂತೆ ಒತ್ತಾಯಿಸಿ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿ ಇತ್ತೀಚೆಗೆ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಕಲಬುರಗಿಯ ಚಿತ್ತಾಪುರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ 42 ದಿನಗಳ ಕಾಲ 708 ಕೀ . ಮೀ ಪಾದಯಾತ್ರೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ತಂಗಡಗಿಯವರ ಮೂಲಕ ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ನೀಡದಿರುವುದು ರಾಜ್ಯದ 12 ಜಿಲ್ಲೆಗಳಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ ಸಮುದಾಯವನ್ನು ತೀವ್ರವಾಗಿ ಕಡೆಗಣಿಸಿದಂತಾಗಿದೆ. ಸಮಾಜದ ಹಿರಿಯ ಮುಖಂಡರಾದ ಮಾಲಿಕಯ್ಯ ಗುತ್ತೇದಾರ್ ಮತ್ತು ಎಚ್ ಆರ್ ಶ್ರೀನಾಥ್ ದಣಿ ಗಳು ಮುಖ್ಯಮಂತ್ರಿ ಅವರ ಜೊತೆ ನೇರವಾಗಿ ಮಾತನಾಡಿ ಚರ್ಚೆ ಮಾಡಿದ್ದರೂ ಬಜೆಟ್ಟಿನಲ್ಲಿ ಯಾವುದೇ ಘೋಷಣೆಗಳಿಲ್ಲದೆ ಇರುವುದು ಸರಕಾರದ ನಿರ್ಲಕ್ಷಕ್ಕೆ ಉದಾಹರಣೆಯಾಗಿದೆ. ಸಮುದಾಯಕ್ಕಾಗಿ ರಚನೆ ಮಾಡಿದ ನಿಗಮಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಯಾವುದೇ ರಾಜಕೀಯ ಪಕ್ಷಪಾತ ಧೋರಣೆ ಮಾಡದೆ ರಾಜ್ಯದ ಹಿಂದುಳಿದ ಸಮುದಾಯದ ನಾಲ್ಕನೇ ಅತಿ ದೊಡ್ಡ ಪಂಗಡದ ಬೇಡಿಕೆಯನ್ನು ಈಡೇರಿಸಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹಿಂದುಳಿದ ಖಾತೆಯ ಸಚಿವರು ತಕ್ಷಣ 500 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿ ಸಮುದಾಯದ ಇತರ ಕೆಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್, ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್, ಕುಪೇಂದ್ರ ಗುತ್ತೇದಾರ್ ನಾಗೂರ್,ಅಶೋಕ್ ಗುತ್ತೇದಾರ್ ಬಡದಾಳ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಡಾ.ಸದಾನಂದ ಪೆರ್ಲ, ರಾಜೇಶ್ ಡಿ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಸುರೇಶ್ ಗುತ್ತೇದಾರ್ ಮಟ್ಟೂರ್, ಇ. ತಿಮ್ಮಪ್ಪ ಗಂಗಾವತಿ, ಮಲ್ಲಿಕಾರ್ಜುನ ಕುಕ್ಕುಂದಿ, ಮಹೇಶ್ ಗುತ್ತೇದಾರ ಹೊಳಕುಂದ, ಪ್ರವೀಣ್ ಜತ್ತನ್, ಸುರೇಶ್ ಗುತ್ತೇದಾರ್ ಕರದಾಳ, ಬಿ.ಎಂ ರಾವೂರು, ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರ ಪಕ್ಷಾತೀತ ಧ್ವನಿಗೆ ಮೆಚ್ಚುಗೆ :
ವಿಧಾನಸಭೆಯ ಪ್ರಶ್ನೋತ್ತರ ವೇಳೆ ಮಾ. 11ರಂದು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ವಿಷಯ ಪ್ರಸ್ತಾಪಿಸಿ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಪ್ರತ್ಯೇಕ ಅನುದಾನ ಬಿಡುಗಡೆ ಆಗಿಲ್ಲ. ನಿಗಮದ ರಚನೆಯ ಉದ್ದೇಶವಾದರೂ ಏನು ಎಂದು ಸರಕಾರವನ್ನು ಪ್ರಶ್ನಿಸಿದಾಗ ಸಚಿವ ತಂಗಡಗಿಯವರು ನಾರಾಯಣ ಗುರು ಅಭಿವೃದ್ಧಿ ಕೋಶದ ಹತ್ತು ಕೋಟಿ ನೀಡುವುದಾಗಿ ಉತ್ತರಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸುನಿಲ್ ಕುಮಾರ್ ಕನಿಷ್ಠ 50 ಕೋಟಿ ನಿಗಮಕ್ಕೆ ಇಡಬೇಕು ಎಂದು ಒತ್ತಾಯಿಸಿದರು ಈ ನಡುವೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಲಿಂಗಾಯತ ನಿಗಮ ಗಳಿಗೆಲ್ಲ 200 ರಿಂದ 300 ಕೋಟಿ ಕೊಡುತ್ತೀರಿ. ನಮ್ಮ ಸಮುದಾಯಕ್ಕೆ 100 ಕೋಟಿ ಯಾಕೆ ಕೊಡುವುದಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ 26 ಪಂಗಡಗಳಲ್ಲಿರುವ ಹಿಂದುಳಿದ ಜನ ಸಮುದಾಯಕ್ಕೆ ಸರಕಾರ ಸ್ಪಂದಿಸದಿರುವುದು ದುಃಖಕರ. ಬಿಲ್ಲವರ ಬೆಂಬಲದಿಂದ ಕರಾವಳಿಯ ಶಾಸಕರು ವಿಧಾನಸಭೆಗೆ ಬರುವಂತಾಗಿದೆ. ಅವರ ಋಣ ನಮ್ಮ ಮೇಲೆ ಇದೆ. ನಿಗಮಕ್ಕೆ ಅನುದಾನ ಘೋಷಣೆ, ಕುಲಕಸುಬು ಸೇಂದಿಯನ್ನು ಮಹಾರಾಷ್ಟ್ರ, ತೆಲಂಗಾಣ, ಕೇರಳದ ರಾಜ್ಯಗಳಲ್ಲಿರುವಂತೆ ಮುಂದುವರಿಸಲು ಅವಕಾಶ ನೀಡುವುದು, ಕುಲಕಸುಬು ಕಳೆದುಕೊಂಡು ಇದೀಗ ಕಲ್ಯಾಣ ಕರ್ನಾಟಕ ಭಾಗದಿಂದ 1,25,000 ಕ್ಕೂ ಸಂತ್ರಸ್ಥರಾಗಿ ಹೆಚ್ಚಿನ ಜನ ಮಹಾರಾಷ್ಟ್ರ ಗೋವಾ ಹೈದರಾಬಾದ್ ಬೆಂಗಳೂರಿಗೆ ವಲಸೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅದಕ್ಕಾಗಿ ಸರಕಾರ ತಕ್ಷಣ ನಿಗಮಕ್ಕೆ ಹಣ ಬಿಡುಗಡೆ ಮಾಡಿ ಈ ಸಮುದಾಯದ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು. ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಮಾತನಾಡಿ ಬಿಲ್ಲವರು ಮತ್ತು ಈಡಿಗರ ಕಲ್ಯಾಣದ ದೃಷ್ಟಿಯಿಂದ ರಚನೆ ಮಾಡಿದ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಿ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ಸಮುದಾಯದ ಬಗ್ಗೆ ಶಾಸಕರು ಪಕ್ಷಾತೀತವಾಗಿ ಪಟ್ಟು ಹಿಡಿದು ಸರ್ಕಾರದ ಮೇಲೆ ಒತ್ತಡ ಹಾಕಿರುವುದಕ್ಕೆ ಹೋರಾಟ ಸಮಿತಿಯು ಎಲ್ಲಾ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿಮಗೆ ಅನುದಾನ ಬೇಡವೇ? ಸ್ಪೀಕರ್ ಗೆ ಪ್ರಶ್ನಿಸಿದ ಸುನಿಲ್
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಚಿವ ತಂಗಡಗಿ ಮತ್ತು ವಿಧಾನಸಭೆಯ ಉಪನಾಯಕರಾದ ಸುನಿಲ್ ಮಧ್ಯೆ ಬಿಸಿ ಬಿಸಿ ವಾಗ್ವಾದ ನಡೆಯುತ್ತಿದ್ದಾಗ ಸುನಿಲ್ ಕುಮಾರ್ ಸ್ಪೀಕರ್ ಯುಟಿ ಖಾದರ್ ಅವರಿಗೆ ನೇರವಾಗಿ ಅನುದಾನ ನಿಮಗೆ ಬೇಡವೇ? ಎಂದು ಪ್ರಶ್ನಿಸಿದರು. ಸ್ಪೀಕರ್ ನಯವಾಗಿ ಬೇಕು ಎಂದು ಹೇಳಿದಾಗ ಹಾಗಾದರೆ ಮಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾರಾಯಣ ಗುರು – ಗಾಂಧಿ ಸಂಗಮದ ಶತಮಾನೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ತಾವು ತೋರಿಸಿದ ಉತ್ಸಾಹ ಮತ್ತು ನಾರಾಯಣ ಗುರು, ನಾರಾಯಣ ಗುರು ಎಂದು ಅಲ್ಲಿ ಉಲ್ಲೇಖಿಸಿ ಗೌರವ ಸೂಚಿಸಿದ್ದೀರಿ. ಆ ಕಾರ್ಯಕ್ರಮಕ್ಕೆ ಮಾಡಿದ ವೆಚ್ಚದಷ್ಟು ನಿಗಮಕ್ಕೆ ಕೊಡದಿರುವುದು ಸರಿಯೇ? ತಾವು ಸಚಿವರಿಗೆ ಹೇಳಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಹಿಂದುಳಿದ ವರ್ಗಗಳ ಸಚಿವರನ್ನು ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
