Connect with us

Bantawala

ವಿಟ್ಲ ಪೊಲೀಸರ ಬಲೆಗೆ ಬಿದ್ದ ಗೋಸಾಗಾಟಗಾರರು. ಚನ್ನರಾಯಪಟ್ಟಣ to ಸಾಲೆತ್ತೂರು ಮಧ್ಯೆ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಗೋಸಾಗಾಟ..

Published

on

ಬಂಟ್ವಾಳ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ 26-02-2026 ರಂದು ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಾನೂನಿಗೆ ಮಣ್ಣೆರಚಿ ನಡೆಯುತ್ತಿದ್ದ ಅಕ್ರಮ ಗೋಸಾಗಾಟ ದಂಧೆಯ ಅಸಲಿಯತ್ತು ಬಯಲಾಗಿದೆ.

ವಿಟ್ಲ ಠಾಣಾ ಪೊಲೀಸ್ ಉಪನಿರೀಕ್ಷಕ(ಕಾ&ಸು) ರಾಮಕೃಷ್ಣ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋದಾಗ ರಸ್ತೆ ಬದಿ ನಿಂತಿದ್ದ KA-13-B-8178 ನೋಂದಣಿಯ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನವನ್ನು ಪರಿಶೀಲನೆ ನಡೆಸಿದ್ದಾರೆ.

ಆ ಸಂದರ್ಭ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಎಲ್ಲಿಂದಲೋ ಸಾಗಾಟ ಮಾಡಿಕೊಂಡು ಬಂದಿರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಾಹನದಲ್ಲಿದ್ದ ಮಂಡ್ಯ ನಿವಾಸಿಗಳಾದ ಚಾಲಕ ನವೀನ ಹಾಗೂ ಮತ್ತೊರ್ವ ಚೇತನ್ ಎಂಬವರಲ್ಲಿ ವಿಚಾರಿಸಿದ್ದಾರೆ.

ಪೊಲೀಸರು ವಿಚಾರಿಸುತ್ತಿದ್ದಂತೆ ವಾಹನದ ಚಾಲಕ ತನ್ನಲ್ಲಿದ್ದ ಕೆಲವೊಂದು ದಾಖಲೆಗಳ ತೋರಿಸಿ ಪೊಲೀಸರನ್ನೇ ಯಾಮಾರಿಸಲು ಸ್ಕೆಚ್ ಹಾಕಿದ್ದಾನೆ. ಈತನ ವರ್ತನೆಯಿಂದ ಸಂಶಯಗೊಂಡ ಪೊಲೀಸರು ಮತ್ತಷ್ಟು ಆಳವಾಗಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಂತೆ ಯಾರದೋ ಆಧಾರ್ ಕಾರ್ಡ್, ವಿಳಾಸ ಇನ್ನಿತರ ದಾಖಲೆಗಳ ಬಳಸಿ ಸಾಲೆತ್ತೂರು ನಿವಾಸಿ ಶಾಫಿ ಎಂಬಾತನಿಗೆ ಗೋವುಗಳನ್ನು ತಲುಪಿಸುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಚನ್ನರಾಯಪಟ್ಟಣದಿಂದ ಶಂಕರ ಎಂಬವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಾಲೆತ್ತೂರಿನ ಶಾಫಿ ಎಂಬವರಿಗೆ, ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತುಂಬಿಸಿ ಕಳುಹಿಸಿದ್ದು, ಸದ್ರಿ ಜಾನುವಾರುಗಳನ್ನು ಸಾಗಿಸಲು ಬೇರೆಯವರ ಹೆಸರಿನಲ್ಲಿ ದಾಖಲಾತಿಯನ್ನು ಪಡೆದು ಸಾಗಿಸುತ್ತಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ವಾಹನವನ್ನು ಹಾಗೂ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 51/2026, ಕಲಂ: 4, 7, 12 THE KARNATAKA PREVENTION OF SLAUGHTER AND PRESERVATION OF CATTLE ACT-2020, 4, 11 PREVENTION OF CRUELTY TO ANIMALS ACT, 1960 ಮತ್ತು 192(A) INDIAN MOTOR VEHICLES ACT, 1988 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದಾರೆ.

ಮಂಡ್ಯ ಕಡೆಯಿಂದ ನಿರಂತರವಾಗಿ ಬೋಗಸ್‌ ದಾಖಲೆಗಳನ್ನು ಸೃಷ್ಠಿಸಿ ಕರಾವಳಿ ಭಾಗಕ್ಕೆ ಮಾಂಸಕ್ಕಾಗಿ ಗೋವುಗಳನ್ನು ಅಕ್ರಮವಾಗಿ ತರಲಾಗುತ್ತಿದೆ ಎಂದು ಹಲವಾರು ಸಮಯಗಳಿಂದ ಕೇಳಿಬರುತ್ತಿದೆ. ದನ ಮಾರಾಟಗಾರರು ಮತ್ತು ಪಡೆದುಕೊಳ್ಳುವವರ ವ್ಯವಸ್ಥಿತ ಜಾಲವೊಂದು ನಿರಂತರವಾಗಿ ದನ ಸಾಗಾಟ ಮಾಡುತ್ತಿದ್ದು, ಕರಾವಳಿ ಭಾಗದಿಂದಲೂ( ಸುಬ್ರಹ್ಮಣ್ಯ ಸುಳ್ಯ ಕಡೆಯಿಂದ ) ಸಾಕಾಣಿಕೆ ಹೆಸರಿನಲ್ಲಿ ಮೈಸೂರು ಕಡೆಗೆ ದನಗಳ ಸಾಗಾಟವಾಗುತ್ತಿದ್ದು, ಇದರ ಮದ್ಯೆ ಪೊಲೀಸರು ಮತ್ತು ಪಶುವೈದ್ಯರನ್ನೇ ಏಮಾರಿಸಿ ದಲ್ಲಾಳಿಗಳ ಚಾಲಾಕಿತನ ನಡೆಯುತ್ತಲೇ ಇದೆ. ಫೆ. 26ರಂದು ಕರೈಯಲ್ಲಿ ಗೋಸಾಗಾಟವನ್ನು ತಡೆದಾಗ ನಕಲಿ ದಾಖಲೆಗಳನ್ನು ತೋರಿಸುವ ಪ್ರಯತ್ನಗಳು ನಡೆದವಾದರೂ ವಿಟ್ಲ ಪೊಲೀಸರಲ್ಲಿ ದಲ್ಲಾಳಿಗಳ ಚಾಲಾಕಿತನ ನಡೆಯಲಿಲ್ಲ. ಅಕ್ರಮ ಗೋಸಾಗಾಟಗಾರರ ಹೆಡೆಮುರಿ ಕಟ್ಟುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

Continue Reading
Advertisement

Bantawala

ಕಬಕ: ಅಕ್ರಮ ಕೇರಳ ಲಾಟರಿ ಮಾರಾಟ ಜಾಲಕ್ಕೆ ಪೊಲೀಸರ ಲಗ್ಗೆ – ಮಂಗಳೂರು ತಂಡದಿಂದ ಮಿಂಚಿನ ದಾಳಿ

Published

on

ಪುತ್ತೂರು: ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರ ವಿಶೇಷ ತಂಡ ಭೇದಿಸಿದೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಜಂಕ್ಷನ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಪಾನ್ ಬೀಡಾ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕ ಸೇರಿದಂತೆ ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.

ಕಬಕ ಜಂಕ್ಷನ್‌ನಲ್ಲಿರುವ ಪಾನ್ ಬೀಡಾ ಅಂಗಡಿಯೊಂದರಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ, ಗುಪ್ತವಾಗಿ ಕೇರಳ ಲಾಟರಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಗಡಿ ಭಾಗಗಳಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಆಗಮಿಸಿದ ವಿಶೇಷ ತಂಡವು ಕಾರ್ಯಾಚರಣೆ ರೂಪಿಸಿತ್ತು.

ಕಾರ್ಯಾಚರಣೆ ನಡೆದ ರೀತಿ:
ನಿಗಾ ಇರಿಸಿದ ತಂಡ: ಮಂಗಳೂರಿನಿಂದ ಬಂದ ವಿಶೇಷ ತಂಡದ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಮಾನ್ಯ ನಾಗರಿಕರಂತೆ ಪಾನ್ ಬೀಡಾ ಅಂಗಡಿಯ ಮಾಲೀಕನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಯುವಕರು ಲಾಟರಿ ಖರೀದಿಸಲು ಬಂದಾಗ, ಪೊಲೀಸರು ಹಠಾತ್ ದಾಳಿ ನಡೆಸಿ ಲಾಟರಿ ಟಿಕೆಟ್‌ಗಳ ಸಮೇತ ಮಾಲೀಕ ಮತ್ತು ಗ್ರಾಹಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ವಿದ್ಯಾಪುರ ನಿವಾಸಿ ಜಗದೀಶ ಯಾನೆ ಜಗ್ಗ ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರು ಕಾರ್ಯಾಚರಣೆಗೆ ಪ್ರಮುಖ ಕಾರಣವಾಗಿದೆ.

ಕಾನೂನು ಕ್ರಮ ಮತ್ತು ತನಿಖೆ:
ದಾಳಿಯ ವೇಳೆ ಅಂಗಡಿಯಲ್ಲಿದ್ದ ಅಕ್ರಮ ಕೇರಳ ಲಾಟರಿ ಟಿಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಲಾಟರಿ ಮಾರಾಟ ಮಾಡುವುದು ಕಾನೂನುಬಾಹಿರ. ಗಡಿ ಭಾಗದ ಮೂಲಕ ಅಕ್ರಮವಾಗಿ ಲಾಟರಿ ತಂದು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳು ಅಥವಾ ದೊಡ್ಡ ವಿತರಕರು ಇದ್ದಾರೆಯೇ ಎಂಬ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಗಡಿ ಭಾಗದ ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.

Continue Reading

Bantawala

ವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..

Published

on

ಹೌದು..ತುಳುನಾಡಿನ ಪರಂಪರೆಯೇ ಹೀಗೆ..ಎಲ್ಲೂ ನ್ಯಾಯ ಸಿಗದಿದ್ದಾಗ ಕೊನೆಯದಾಗಿ ನೊಂದವರು ಹೋಗುವುದು ದೈವದ ಸನ್ನಿಧಿಗೆ..ಇದು ತುಳುನಾಡಿನಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ. ನಮ್ಮ ಸಮಾಜದಲ್ಲಿ ದೈವಭಕ್ತಿ ಮತ್ತು ನಂಬಿಕೆ ಅನಾದಿಕಾಲದಿಂದಲೂ ಮಹತ್ವ ಪಡೆದಿದೆ. ಇತ್ತೀಚೆಗೆ ಕರಾವಳಿ ಪ್ರದೇಶದ ವಿಟ್ಲದಲ್ಲಿ ನಡೆದ ಒಂದು ಘಟನೆ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ.

ಮನೆಯಲ್ಲಿದ್ದ ಎರಡು ಗೋವುಗಳನ್ನು ಕಳ್ಳ ಕದ್ದು ಖಸಾಯಿಖಾನೆಗೆ ಮಾರಾಟ ಮಾಡಿದಾಗ, ಗೋವುಗಳನ್ನು ಕಳೆದುಕೊಂಡ ಮಾಲಿಕರು ಪೊಲೀಸರಿಗೆ ದೂರು ನೀಡಿದರೂ, ಕಳ್ಳನ ಪತ್ತೆ ಸಾಧ್ಯವಾಗಲಿಲ್ಲ. ನಿರಾಶರಾದ ಮಾಲಿಕರು ತಮ್ಮ ಮನೆಯ ಆರಾಧ್ಯ ದೈವವಾದ ಕಲ್ಲುರ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಂದೆ ಏನಾಯಿತು ಎಂಬುವುದೇ ದೈವದ ಕಾರಣೀಕ ಶಕ್ತಿ….ಕಲ್ಲುರ್ಟಿ ದೈವದ ಮುಂದೆ ಬಂದು ದನ ಕಳ್ಳತನ ಮಾಡಿದ್ದನ್ನು ತಪ್ಪೊಪ್ಪಿಕೊಂಡ ಕುಖ್ಯಾತ ಗೋಕಳ್ಳ..

ದೈವದ ನ್ಯಾಯ – ಭಕ್ತಿಗೆ ಎಚ್ಚರಿಕೆ ನೀಡಿದ ನಿಜ ಘಟನೆ

ಕಳೆದ ವರ್ಷ ಗಣೇಶ ಚತುರ್ಥಿ ದಿನದಂದು ವಿಟ್ಲ ಹೊರವಲಯದ ಮಂಗಲಪದವು ಭಜನಾ ಮಂದಿರದ ಪರಿಸರದಲ್ಲಿ ರಾತ್ರಿ ಹೊತ್ತು ಮಲಗಿದ್ದ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಎರಡು ಗಿರ್ ಜಾತಿಯ ಎತ್ತುಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಎತ್ತುಗಳ ಮಾಲಿಕ ಶಿವಾನಂದ ವಿಟ್ಲ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಬ್ರೆಝಾ ಕಾರಿನಲ್ಲಿ ಬಂದ ಕುಖ್ಯಾತ ಅಂತರ್ ರಾಜ್ಯ ಗೋಕಳ್ಳರು ಎರಡು ಎತ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಖಚಿತ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಎಷ್ಟೇ ಹುಡುಕಾಡಿದ್ದರೂ ಚಾಲಾಕಿ ಗೋಕಳ್ಳರು ಮಾತ್ರ ಈವರೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೈವದ ಮೊರೆ ಹೋದ ಮಾಲಿಕ ಶಿವಾನಂದ..
ತಮ್ಮ ಮನೆಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಗೋವುಗಳನ್ನು ಸಲಹುತ್ತಿರುವ ನ್ಯಾಯವಾದಿ ಶಿವಾನಂದ ವಿಟ್ಲ ಎತ್ತುಗಳು ನಾಪತ್ತೆಯಾದ ಬಳಿಕ ತೀವ್ರವಾಗಿ ನೊಂದುಕೊಂಡಿದ್ದರು. ಇದಾದ ಕೆಲದಿನಗಳ ಬಳಿಕ ನಾಪತ್ತೆಯಾಗಿದ್ದ ರಾಮ-ಲಕ್ಷ್ಮಣ ಜೋಡಿ ಎತ್ತುಗಳು ಮರಳಿ ಬರುವ ಆಸೆಗಳೇ ಕಮರಿಹೋಗಿತ್ತು. ಅಂತಿಮವಾಗಿ ತಾವು ನಂಬುವ ಕೆಲಿಂಜ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ಮಡಿವಾಳ ಕೋಡಿ ಕೆಳಗಿನಕೆಲಿಂಜದ ಕಲ್ಲುರ್ಟಿ ದೈವದ ಮುಂದೆ ಕಣ್ಣೀರು ಸುರಿಸಿ ಗೋಕಳ್ಳರಿಗೆ ನೀನೇ ಸರಿಯಾದ ಶಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು.

ಗೋಕಳ್ಳರಿಗೆ ಮುನಿದ ದೈವ..
ಗೋಕಳ್ಳರು ಯಾರು, ಎಲ್ಲಿಯವರೆಂಬ ಬಗ್ಗೆ ಸಾರ್ವಜನಿಕವಾಗಿ ಸುದ್ದಿ ಹರಿದಾಡುತ್ತಿದ್ದರೂ ಪೊಲೀಸರ ಕೈಗೆ ಮಾತ್ರ ಖದೀಮರು ಸಿಗದೇ ಕಣ್ಣುಮುಚ್ಚಾಲೆ ಆಡುತ್ತಿದ್ದರು. ಮಾಲಿಕ ಶಿವಾನಂದರು ದೈವದ ಮೊರೆ ಹೋದ ಕೆಲ ದಿನಗಳಲ್ಲೇ ಕುಖ್ಯಾತ ಗೋಕಳ್ಳರ ಕಾರು ಗೋವುಗಳನ್ನು ಕದ್ದು ತರುತ್ತಿದ್ದಾಗ ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿ ಹೊಡೆದು ಅಲ್ಲಿನ ಪೊಲೀಸರ ವಶವಾಗಿತ್ತು. ಇದಾದ ಕೆಲದಿನಗಳ ಬಳಿಕ ಅದೇ ಗೋಕಳ್ಳರು ಕೇರಳದಲ್ಲಿ ಪೊಲೀಸರ ಬಲೆಗೆ ಸಿಲುಕಿ ಹೈರಾಣರಾದರು.

ಕೈಕೊಟ್ಟ ಅನಾರೋಗ್ಯ..
ಗೋಕಳ್ಳರಿಗೆ ಒಂದರ ಮೆಲೊಂದು ಬರಸಿಡಿಲಿನಂತೆ ಕಷ್ಟಗಳು ಬೆನ್ನುಬಿದ್ದವು. ಐವರ ತಂಡದ ಗೋಕಳ್ಳರ ಮುಖಂಡನಿಗೆ ಅನಾರೋಗ್ಯ ಕಾಡತೊಡಗಿತು. ರಕ್ತ ವಾಂತಿಯಿಂದ ಆರಂಭವಾದ ಅನಾರೋಗ್ಯ ಈತನ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿತು. ರಾತ್ರಿ ಹೊತ್ತು ಮಲಗಿದ್ದಲ್ಲಿಯೇ ಕಿರುಚಾಟ, ಚೀರಾಟ ಆರಂಭವಾಗಿ ಅಕ್ಷರಶಃ ಮಾನಸಿಕ ರೋಗಿಯಂತಾಗಿದ್ದಾನೆ.
ಹಲವಾರು ಕಡೆಗಳಲ್ಲಿನ ತಜ್ಞ ವೈದ್ಯರ ಬಳಿ ಕರೆದೊಯ್ದು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿದರೂ ಯಾವುದೇ ಫಲಿತಾಂಶವಿಲ್ಲ. ಕೊನೆಗೆ ತಮ್ಮದೇ ಧರ್ಮಗುರುವೊಬ್ಬರ ಬಳಿಗೆ ಅನಾರೋಗ್ಯ ಪೀಡಿತನ ಕರೆದೊಯ್ದು ವಿಚಾರ ತಿಳಿಸಿದ್ದಾರೆ. ಆ ಸಮಯ ಈತನ ಹಿನ್ನೆಲೆ ಕೆದಕಿದ ಪ್ರಸಿದ್ಧ ಧರ್ಮಗುರು ಕಲ್ಲುರ್ಟಿ ದೈವದ ಶಾಪ ವಿಮೋಚನೆ ಮಾಡಬೇಕೆಂದೂ ಇಲ್ಲವಾದರೆ ಕೆಲ ದಿನಗಳಲ್ಲೇ ರಕ್ತವಾಂತಿ ಮಾಡಿ ಸಾಯುವ ಬಗ್ಗೆ ಮುನ್ಸೂಚನೆ ನೀಡಿದ್ದರೆನ್ನದಾಗಿದೆ.

ದೈವದ ಮುಂದೆ ತಪ್ಪೊಪ್ಪಿಕೊಂಡ ಗೋಕಳ್ಳ..
ಧರ್ಮ ಗುರುವಿನ ಅಣತಿಯಂತೆ ಗೋಕಳ್ಳತನ ನಡೆಸಿದ ವಿಟ್ಲ ಠಾಣಾ ವ್ಯಾಪ್ತಿಯ ಪರಿಚಯಸ್ಥರೊಬ್ಬರ ಮೂಲಕ ಮಂಗಲಪದವು ಎತ್ತುಗಳ ಮಾಲಿಕರ ಸಂಪರ್ಕಿಸಿ ವಿಚಾರ ನಡೆಸಿದರು. ಆ ಸಮಯ ಪ್ರೀತಿಯ ಎತ್ತುಗಳು ನಾಪತ್ತೆಯಾದ ಬಗ್ಗೆ ಮನನೊಂದು ಕಲ್ಲುರ್ಟಿ ದೈವದ ಮೊರೆ ಹೋಗಿದ್ದೇನೆ ಎಂದು ನ್ಯಾಯವಾದಿ ಶಿವಾನಂದ ವಿಟ್ಲ ಮನಸು ಬಿಚ್ಚಿ ಹೇಳಿದ್ದಾರೆ. ಈ ಬಗ್ಗೆ ಪರಿಹಾರಕ್ಕಾಗಿ ನಾವು ದೈವದ ಮುಂದೆ ಬರುತ್ತೇವೆಂದು ಅನಾರೋಗ್ಯ ಪೀಡಿತ ಗೋಕಳ್ಳ ವಿನಂತಿಸಿದ್ದಾನೆ. ಅದರಂತೆ ಮಂಗಳವಾರ ರಾತ್ರಿ ಕೆಳಗಿನಕೆಲಿಂಜದಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆ ನಡೆಯುತ್ತಿರುವ ಸಂದರ್ಭ ದೈವದ ಮುಂದೆ ಹಾಜರಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ದೈವಗಳ ತವರೂರು ತುಳುನಾಡಿನ ಧಾರ್ಮಿಕ ನಂಬಿಕೆ ಮತ್ತು ಶಕ್ತಿಗೆ ಪುಷ್ಟಿ ನೀಡಿದೆ.

ಮುಂದೆ ನಿಂತಿರುವ ಆರೋಪಿ ವ್ಯಕ್ತಿ ತನ್ನೆಲ್ಲಾ ತಪ್ಪುಗಳ ದೈವದೆದುರು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ದರ್ಶನದ ದೈವ ಪಾತ್ರಿ ನೀನು ಮಾಡಿದ ತಪ್ಪು ಕೆಲಸಕ್ಕಾಗಿ ನನ್ನ ಮಂಚದಲ್ಲಿ ಶಾಶ್ವತವಾಗಿ ಬೆಳ್ಳಿಯ ಗೋವು ನೆಲೆಯಾಗಬೇಕು. ಅದು ನಿನಗೆ ಸಾಧ್ಯವೇ ಎಂದು ಪ್ರಶ್ನಿಸಿದೆ. ನೂರಾರು ಭಕ್ತರ ಸಮ್ಮುಖದಲ್ಲೇ ದೈವದ ಮಾತಿಗೆ ಅನಾರೋಗ್ಯ ಪೀಡಿತ ಆರೋಪಿ ಸ್ಥಾನದಲ್ಲಿರುವ ಯುವಕ ಒಪ್ಪಿಗೆ ಸೂಚಿಸಿದ್ದು ಬರುವ ತಿಂಗಳು ವಾರ್ಷಿಕ ಕೋಲದ ಮೊದಲು ಹರಕೆ ರೂಪವಾಗಿ ಬೆಳ್ಳಿಯ ಗೋವು ತಂದೊಪ್ಪಿಸುತ್ತೇನೆ. ಇನ್ಮುಂದೆ ಯಾವುದೂ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಕೈಮುಗಿದು ಪ್ರಾರ್ಥಿಸಿದ ಬಳಿಕ ದೈವವು ಪ್ರಸಾದ ನೀಡಿದೆ.
ಅಂತೂ ತುಳುನಾಡಿನ ದೈವ ಕಲ್ಲುರ್ಟಿ ಗೋಕಳ್ಳನಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿರುವುದು ಭಕ್ತರ ಪಾಲಿಗೆ ದೈವದ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

Continue Reading

accident

ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Published

on

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದೆ.

ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿ ಭಾರತಿ (48) ಅಪಘಾತಕ್ಕೀಡಾದ ಮಹಿಳೆ. ಇವರು ತನ್ನ ಮಗಳು ದೀಪ್ತಿ ಅವರೊಂದಿಗೆ ಸಜಿಪಮುನ್ನೂರಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಬಂದಿದ್ದರು. ಕಾಣಿಕೆ ಮುಗಿಸಿ ವಾಪಸ್ಸಾಗುವಾಗ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಡಿಕ್ಕಿಯ ರಭಸಕ್ಕೆ ಭಾರತಿ ಅವರು ಗಾಳಿಯಲ್ಲಿ ಹಾರಿ ರಸ್ತೆಯ ಬದಿಗೆ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಭಾರತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

Trending

Copyright © 2025 Deevatige