Bantawala
ಕಲ್ಲಡ್ಕದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗೋಳ್ತಮಜಲ್ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ರಿಜಿಸ್ಟರ್ ಸಹಯೋಗದಲ್ಲಿ ನಡೆದ ತಪಾಸಣೆ
ಕಲ್ಲಡ್ಕದಲ್ಲಿ ಗೋಳ್ತಮಜಲ್ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ರಿಜಿಸ್ಟರ್ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಫೆಬ್ರವರಿ 13 ಶುಕ್ರವಾರ ಗೋಳ್ತಮಜಲ್ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟ ರಿಜಿಸ್ಟರ್ ಇದರ ಆಶಯದಲ್ಲಿ ವಿವಿಧ ಸಂಘಟನೆಗಳಾದ ಲಯನ್ಸ್ ಕ್ಲಬ್ ಅಮ್ಟೂರು, ಆಶೀರ್ವಾದ ಸಂಜೀವಿನಿ ಒಕ್ಕೂಟ (ರಿ) ಗೋಳ್ತಮಜಲು, ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ ಬಾಳ್ತಿಲ, ಆಯುಷ್ಮಾನ್ ಆರೋಗ್ಯ ಕೇಂದ್ರ ಗೋಳ್ತಮಜಲು, ಹಾಗೂ ವಿಜನ್ ಸ್ಪ್ರಿಂಗ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಜರಗಿತು.

ಶಿಬಿರದಲ್ಲಿ ರಕ್ತದ ಒತ್ತಡ ತಪಾಸಣೆ, ಮಧುಮೇಹ ತಪಾಸಣೆ, ಅಭಾ ನೋಂದಣಿ ಹಾಗೂ ಉಚಿತ ಕಣ್ಣಿನ ತಪಾಸಣೆಗಳನ್ನು ನಡೆಸಲಾಯಿತು.

ಉದ್ಘಾಟನಾ ಸಭಾ ಕಾರ್ಯಕ್ರಮವು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಲ್ಲಡ್ಕ ಬಾಳ್ತಿಲ ಆರೋಗ್ಯ ಕೇಂದ್ರದ ಡಾ. ಜಯಪ್ರಕಾಶ್ ಅವರು ಆರೋಗ್ಯದ ಮಹತ್ವದ ಬಗ್ಗೆ ಮಾಹಿತಿ ನೀಡಿದರು

ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರೇಮ ಪುರುಷೋತ್ತಮ, ಲಯನ್ಸ್ ಕ್ಲಬ್ ಅಂಮ್ಟೂರು ಅಧ್ಯಕ್ಷರಾದ ಶ್ರೀ ಎಲಿಯಾಸ್ ಡಿಸೋಜಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುನೀಲ್ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಜಯಪ್ರಕಾಶ್, ಸಮುದಾಯ ಆರೋಗ್ಯ ಅಧಿಕಾರಿ ಡಾ. ಆಕಾಶ್, ವಿಜನ್ ಸ್ಪ್ರಿಂಗ್ ಸಂಸ್ಥೆಯ ಇನ್ಚಾರ್ಜ್ ಶ್ರೀ ಜಲೀಲ್, ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಶ್ರೀಮತಿ ಕುಸುಮ, ತಾಲೂಕು ವ್ಯವಸ್ಥಾಪಕ ಶ್ರೀ ಪ್ರದೀಪ್ ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ವತಿಯಿಂದ ಮೊದಲ 50 ಜನರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು ಲೀಲಾ ಡಿ. ಶೆಟ್ಟಿ ಪ್ರಾರ್ಥಿಸಿ, ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಪುಷ್ಪ ಸ್ವಾಗತಿಸಿ, ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಭವಾನಿ ಕಾರ್ಯಕ್ರಮ ನಿರೂಪಿಸಿದರು. .
Bantawala
ಕಬಕ: ಅಕ್ರಮ ಕೇರಳ ಲಾಟರಿ ಮಾರಾಟ ಜಾಲಕ್ಕೆ ಪೊಲೀಸರ ಲಗ್ಗೆ – ಮಂಗಳೂರು ತಂಡದಿಂದ ಮಿಂಚಿನ ದಾಳಿ
ಪುತ್ತೂರು: ಕರ್ನಾಟಕದಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರ ವಿಶೇಷ ತಂಡ ಭೇದಿಸಿದೆ. ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬಕ ಜಂಕ್ಷನ್ನಲ್ಲಿ ಕಾರ್ಯಾಚರಿಸುತ್ತಿದ್ದ ಪಾನ್ ಬೀಡಾ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು, ಮಾಲೀಕ ಸೇರಿದಂತೆ ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.
ಕಬಕ ಜಂಕ್ಷನ್ನಲ್ಲಿರುವ ಪಾನ್ ಬೀಡಾ ಅಂಗಡಿಯೊಂದರಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ, ಗುಪ್ತವಾಗಿ ಕೇರಳ ಲಾಟರಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಗಡಿ ಭಾಗಗಳಲ್ಲಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮಂಗಳೂರಿನಿಂದ ಆಗಮಿಸಿದ ವಿಶೇಷ ತಂಡವು ಕಾರ್ಯಾಚರಣೆ ರೂಪಿಸಿತ್ತು.

ಕಾರ್ಯಾಚರಣೆ ನಡೆದ ರೀತಿ:
ನಿಗಾ ಇರಿಸಿದ ತಂಡ: ಮಂಗಳೂರಿನಿಂದ ಬಂದ ವಿಶೇಷ ತಂಡದ ಪೊಲೀಸರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಮಾನ್ಯ ನಾಗರಿಕರಂತೆ ಪಾನ್ ಬೀಡಾ ಅಂಗಡಿಯ ಮಾಲೀಕನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಯುವಕರು ಲಾಟರಿ ಖರೀದಿಸಲು ಬಂದಾಗ, ಪೊಲೀಸರು ಹಠಾತ್ ದಾಳಿ ನಡೆಸಿ ಲಾಟರಿ ಟಿಕೆಟ್ಗಳ ಸಮೇತ ಮಾಲೀಕ ಮತ್ತು ಗ್ರಾಹಕರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಕಬಕ ವಿದ್ಯಾಪುರ ನಿವಾಸಿ ಜಗದೀಶ ಯಾನೆ ಜಗ್ಗ ಎಂದು ಗುರುತಿಸಲಾಗಿದೆ. ಈತ ತನ್ನ ಅಂಗಡಿಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ನೀಡಿದ ದೂರು ಕಾರ್ಯಾಚರಣೆಗೆ ಪ್ರಮುಖ ಕಾರಣವಾಗಿದೆ.

ಕಾನೂನು ಕ್ರಮ ಮತ್ತು ತನಿಖೆ:
ದಾಳಿಯ ವೇಳೆ ಅಂಗಡಿಯಲ್ಲಿದ್ದ ಅಕ್ರಮ ಕೇರಳ ಲಾಟರಿ ಟಿಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಲಾಟರಿ ಮಾರಾಟ ಮಾಡುವುದು ಕಾನೂನುಬಾಹಿರ. ಗಡಿ ಭಾಗದ ಮೂಲಕ ಅಕ್ರಮವಾಗಿ ಲಾಟರಿ ತಂದು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಜಾಲದ ಹಿಂದೆ ಬೇರೆ ಯಾರಾದರೂ ಪ್ರಭಾವಿಗಳು ಅಥವಾ ದೊಡ್ಡ ವಿತರಕರು ಇದ್ದಾರೆಯೇ ಎಂಬ ಬಗ್ಗೆ ಸ್ಥಳೀಯ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯು ಗಡಿ ಭಾಗದ ಅಕ್ರಮ ದಂಧೆಕೋರರಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
Bantawala
ವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
ಹೌದು..ತುಳುನಾಡಿನ ಪರಂಪರೆಯೇ ಹೀಗೆ..ಎಲ್ಲೂ ನ್ಯಾಯ ಸಿಗದಿದ್ದಾಗ ಕೊನೆಯದಾಗಿ ನೊಂದವರು ಹೋಗುವುದು ದೈವದ ಸನ್ನಿಧಿಗೆ..ಇದು ತುಳುನಾಡಿನಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ. ನಮ್ಮ ಸಮಾಜದಲ್ಲಿ ದೈವಭಕ್ತಿ ಮತ್ತು ನಂಬಿಕೆ ಅನಾದಿಕಾಲದಿಂದಲೂ ಮಹತ್ವ ಪಡೆದಿದೆ. ಇತ್ತೀಚೆಗೆ ಕರಾವಳಿ ಪ್ರದೇಶದ ವಿಟ್ಲದಲ್ಲಿ ನಡೆದ ಒಂದು ಘಟನೆ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ.
ಮನೆಯಲ್ಲಿದ್ದ ಎರಡು ಗೋವುಗಳನ್ನು ಕಳ್ಳ ಕದ್ದು ಖಸಾಯಿಖಾನೆಗೆ ಮಾರಾಟ ಮಾಡಿದಾಗ, ಗೋವುಗಳನ್ನು ಕಳೆದುಕೊಂಡ ಮಾಲಿಕರು ಪೊಲೀಸರಿಗೆ ದೂರು ನೀಡಿದರೂ, ಕಳ್ಳನ ಪತ್ತೆ ಸಾಧ್ಯವಾಗಲಿಲ್ಲ. ನಿರಾಶರಾದ ಮಾಲಿಕರು ತಮ್ಮ ಮನೆಯ ಆರಾಧ್ಯ ದೈವವಾದ ಕಲ್ಲುರ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಂದೆ ಏನಾಯಿತು ಎಂಬುವುದೇ ದೈವದ ಕಾರಣೀಕ ಶಕ್ತಿ….ಕಲ್ಲುರ್ಟಿ ದೈವದ ಮುಂದೆ ಬಂದು ದನ ಕಳ್ಳತನ ಮಾಡಿದ್ದನ್ನು ತಪ್ಪೊಪ್ಪಿಕೊಂಡ ಕುಖ್ಯಾತ ಗೋಕಳ್ಳ..
ದೈವದ ನ್ಯಾಯ – ಭಕ್ತಿಗೆ ಎಚ್ಚರಿಕೆ ನೀಡಿದ ನಿಜ ಘಟನೆ
ಕಳೆದ ವರ್ಷ ಗಣೇಶ ಚತುರ್ಥಿ ದಿನದಂದು ವಿಟ್ಲ ಹೊರವಲಯದ ಮಂಗಲಪದವು ಭಜನಾ ಮಂದಿರದ ಪರಿಸರದಲ್ಲಿ ರಾತ್ರಿ ಹೊತ್ತು ಮಲಗಿದ್ದ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಎರಡು ಗಿರ್ ಜಾತಿಯ ಎತ್ತುಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಎತ್ತುಗಳ ಮಾಲಿಕ ಶಿವಾನಂದ ವಿಟ್ಲ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಬ್ರೆಝಾ ಕಾರಿನಲ್ಲಿ ಬಂದ ಕುಖ್ಯಾತ ಅಂತರ್ ರಾಜ್ಯ ಗೋಕಳ್ಳರು ಎರಡು ಎತ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಖಚಿತ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಎಷ್ಟೇ ಹುಡುಕಾಡಿದ್ದರೂ ಚಾಲಾಕಿ ಗೋಕಳ್ಳರು ಮಾತ್ರ ಈವರೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೈವದ ಮೊರೆ ಹೋದ ಮಾಲಿಕ ಶಿವಾನಂದ..
ತಮ್ಮ ಮನೆಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಗೋವುಗಳನ್ನು ಸಲಹುತ್ತಿರುವ ನ್ಯಾಯವಾದಿ ಶಿವಾನಂದ ವಿಟ್ಲ ಎತ್ತುಗಳು ನಾಪತ್ತೆಯಾದ ಬಳಿಕ ತೀವ್ರವಾಗಿ ನೊಂದುಕೊಂಡಿದ್ದರು. ಇದಾದ ಕೆಲದಿನಗಳ ಬಳಿಕ ನಾಪತ್ತೆಯಾಗಿದ್ದ ರಾಮ-ಲಕ್ಷ್ಮಣ ಜೋಡಿ ಎತ್ತುಗಳು ಮರಳಿ ಬರುವ ಆಸೆಗಳೇ ಕಮರಿಹೋಗಿತ್ತು. ಅಂತಿಮವಾಗಿ ತಾವು ನಂಬುವ ಕೆಲಿಂಜ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ಮಡಿವಾಳ ಕೋಡಿ ಕೆಳಗಿನಕೆಲಿಂಜದ ಕಲ್ಲುರ್ಟಿ ದೈವದ ಮುಂದೆ ಕಣ್ಣೀರು ಸುರಿಸಿ ಗೋಕಳ್ಳರಿಗೆ ನೀನೇ ಸರಿಯಾದ ಶಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು.
ಗೋಕಳ್ಳರಿಗೆ ಮುನಿದ ದೈವ..
ಗೋಕಳ್ಳರು ಯಾರು, ಎಲ್ಲಿಯವರೆಂಬ ಬಗ್ಗೆ ಸಾರ್ವಜನಿಕವಾಗಿ ಸುದ್ದಿ ಹರಿದಾಡುತ್ತಿದ್ದರೂ ಪೊಲೀಸರ ಕೈಗೆ ಮಾತ್ರ ಖದೀಮರು ಸಿಗದೇ ಕಣ್ಣುಮುಚ್ಚಾಲೆ ಆಡುತ್ತಿದ್ದರು. ಮಾಲಿಕ ಶಿವಾನಂದರು ದೈವದ ಮೊರೆ ಹೋದ ಕೆಲ ದಿನಗಳಲ್ಲೇ ಕುಖ್ಯಾತ ಗೋಕಳ್ಳರ ಕಾರು ಗೋವುಗಳನ್ನು ಕದ್ದು ತರುತ್ತಿದ್ದಾಗ ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿ ಹೊಡೆದು ಅಲ್ಲಿನ ಪೊಲೀಸರ ವಶವಾಗಿತ್ತು. ಇದಾದ ಕೆಲದಿನಗಳ ಬಳಿಕ ಅದೇ ಗೋಕಳ್ಳರು ಕೇರಳದಲ್ಲಿ ಪೊಲೀಸರ ಬಲೆಗೆ ಸಿಲುಕಿ ಹೈರಾಣರಾದರು.
ಕೈಕೊಟ್ಟ ಅನಾರೋಗ್ಯ..
ಗೋಕಳ್ಳರಿಗೆ ಒಂದರ ಮೆಲೊಂದು ಬರಸಿಡಿಲಿನಂತೆ ಕಷ್ಟಗಳು ಬೆನ್ನುಬಿದ್ದವು. ಐವರ ತಂಡದ ಗೋಕಳ್ಳರ ಮುಖಂಡನಿಗೆ ಅನಾರೋಗ್ಯ ಕಾಡತೊಡಗಿತು. ರಕ್ತ ವಾಂತಿಯಿಂದ ಆರಂಭವಾದ ಅನಾರೋಗ್ಯ ಈತನ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿತು. ರಾತ್ರಿ ಹೊತ್ತು ಮಲಗಿದ್ದಲ್ಲಿಯೇ ಕಿರುಚಾಟ, ಚೀರಾಟ ಆರಂಭವಾಗಿ ಅಕ್ಷರಶಃ ಮಾನಸಿಕ ರೋಗಿಯಂತಾಗಿದ್ದಾನೆ.
ಹಲವಾರು ಕಡೆಗಳಲ್ಲಿನ ತಜ್ಞ ವೈದ್ಯರ ಬಳಿ ಕರೆದೊಯ್ದು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿದರೂ ಯಾವುದೇ ಫಲಿತಾಂಶವಿಲ್ಲ. ಕೊನೆಗೆ ತಮ್ಮದೇ ಧರ್ಮಗುರುವೊಬ್ಬರ ಬಳಿಗೆ ಅನಾರೋಗ್ಯ ಪೀಡಿತನ ಕರೆದೊಯ್ದು ವಿಚಾರ ತಿಳಿಸಿದ್ದಾರೆ. ಆ ಸಮಯ ಈತನ ಹಿನ್ನೆಲೆ ಕೆದಕಿದ ಪ್ರಸಿದ್ಧ ಧರ್ಮಗುರು ಕಲ್ಲುರ್ಟಿ ದೈವದ ಶಾಪ ವಿಮೋಚನೆ ಮಾಡಬೇಕೆಂದೂ ಇಲ್ಲವಾದರೆ ಕೆಲ ದಿನಗಳಲ್ಲೇ ರಕ್ತವಾಂತಿ ಮಾಡಿ ಸಾಯುವ ಬಗ್ಗೆ ಮುನ್ಸೂಚನೆ ನೀಡಿದ್ದರೆನ್ನದಾಗಿದೆ.
ದೈವದ ಮುಂದೆ ತಪ್ಪೊಪ್ಪಿಕೊಂಡ ಗೋಕಳ್ಳ..
ಧರ್ಮ ಗುರುವಿನ ಅಣತಿಯಂತೆ ಗೋಕಳ್ಳತನ ನಡೆಸಿದ ವಿಟ್ಲ ಠಾಣಾ ವ್ಯಾಪ್ತಿಯ ಪರಿಚಯಸ್ಥರೊಬ್ಬರ ಮೂಲಕ ಮಂಗಲಪದವು ಎತ್ತುಗಳ ಮಾಲಿಕರ ಸಂಪರ್ಕಿಸಿ ವಿಚಾರ ನಡೆಸಿದರು. ಆ ಸಮಯ ಪ್ರೀತಿಯ ಎತ್ತುಗಳು ನಾಪತ್ತೆಯಾದ ಬಗ್ಗೆ ಮನನೊಂದು ಕಲ್ಲುರ್ಟಿ ದೈವದ ಮೊರೆ ಹೋಗಿದ್ದೇನೆ ಎಂದು ನ್ಯಾಯವಾದಿ ಶಿವಾನಂದ ವಿಟ್ಲ ಮನಸು ಬಿಚ್ಚಿ ಹೇಳಿದ್ದಾರೆ. ಈ ಬಗ್ಗೆ ಪರಿಹಾರಕ್ಕಾಗಿ ನಾವು ದೈವದ ಮುಂದೆ ಬರುತ್ತೇವೆಂದು ಅನಾರೋಗ್ಯ ಪೀಡಿತ ಗೋಕಳ್ಳ ವಿನಂತಿಸಿದ್ದಾನೆ. ಅದರಂತೆ ಮಂಗಳವಾರ ರಾತ್ರಿ ಕೆಳಗಿನಕೆಲಿಂಜದಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆ ನಡೆಯುತ್ತಿರುವ ಸಂದರ್ಭ ದೈವದ ಮುಂದೆ ಹಾಜರಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ದೈವಗಳ ತವರೂರು ತುಳುನಾಡಿನ ಧಾರ್ಮಿಕ ನಂಬಿಕೆ ಮತ್ತು ಶಕ್ತಿಗೆ ಪುಷ್ಟಿ ನೀಡಿದೆ.
ಮುಂದೆ ನಿಂತಿರುವ ಆರೋಪಿ ವ್ಯಕ್ತಿ ತನ್ನೆಲ್ಲಾ ತಪ್ಪುಗಳ ದೈವದೆದುರು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ದರ್ಶನದ ದೈವ ಪಾತ್ರಿ ನೀನು ಮಾಡಿದ ತಪ್ಪು ಕೆಲಸಕ್ಕಾಗಿ ನನ್ನ ಮಂಚದಲ್ಲಿ ಶಾಶ್ವತವಾಗಿ ಬೆಳ್ಳಿಯ ಗೋವು ನೆಲೆಯಾಗಬೇಕು. ಅದು ನಿನಗೆ ಸಾಧ್ಯವೇ ಎಂದು ಪ್ರಶ್ನಿಸಿದೆ. ನೂರಾರು ಭಕ್ತರ ಸಮ್ಮುಖದಲ್ಲೇ ದೈವದ ಮಾತಿಗೆ ಅನಾರೋಗ್ಯ ಪೀಡಿತ ಆರೋಪಿ ಸ್ಥಾನದಲ್ಲಿರುವ ಯುವಕ ಒಪ್ಪಿಗೆ ಸೂಚಿಸಿದ್ದು ಬರುವ ತಿಂಗಳು ವಾರ್ಷಿಕ ಕೋಲದ ಮೊದಲು ಹರಕೆ ರೂಪವಾಗಿ ಬೆಳ್ಳಿಯ ಗೋವು ತಂದೊಪ್ಪಿಸುತ್ತೇನೆ. ಇನ್ಮುಂದೆ ಯಾವುದೂ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಕೈಮುಗಿದು ಪ್ರಾರ್ಥಿಸಿದ ಬಳಿಕ ದೈವವು ಪ್ರಸಾದ ನೀಡಿದೆ.
ಅಂತೂ ತುಳುನಾಡಿನ ದೈವ ಕಲ್ಲುರ್ಟಿ ಗೋಕಳ್ಳನಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿರುವುದು ಭಕ್ತರ ಪಾಲಿಗೆ ದೈವದ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

accident
ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದೆ.
ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿ ಭಾರತಿ (48) ಅಪಘಾತಕ್ಕೀಡಾದ ಮಹಿಳೆ. ಇವರು ತನ್ನ ಮಗಳು ದೀಪ್ತಿ ಅವರೊಂದಿಗೆ ಸಜಿಪಮುನ್ನೂರಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಬಂದಿದ್ದರು. ಕಾಣಿಕೆ ಮುಗಿಸಿ ವಾಪಸ್ಸಾಗುವಾಗ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಡಿಕ್ಕಿಯ ರಭಸಕ್ಕೆ ಭಾರತಿ ಅವರು ಗಾಳಿಯಲ್ಲಿ ಹಾರಿ ರಸ್ತೆಯ ಬದಿಗೆ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಭಾರತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-
crime5 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 days agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
