Connect with us

complaint

BREAKING NEWS: ಸರ್ಕಾರಿ ಕೋಟಾದಡಿ ಸೀಟ್ ಪಡೆದ ಬಡ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಗೆ ವಂಚನೆ: ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು!

Published

on

ವಿಟ್ಲ / ಮಂಗಳೂರು (ಆಗಸ್ಟ್ 13): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಸಿಇಟಿ ಪರೀಕ್ಷೆಯ ಮೂಲಕ ಸರ್ಕಾರಿ ಮೀಸಲಾತಿ ಅಡಿಯಲ್ಲಿ ನರ್ಸಿಂಗ್ ಸೀಟ್ ಪಡೆದ ಬಡ ಪರಿಶಿಷ್ಟ ಜಾತಿಯ ವಿದ್ಯಾರ್ಥಿನಿಯೋರ್ವಳಿಗೆ ಶಿಕ್ಷಣ ಸಂಸ್ಥೆಯೊಂದು ಸಾವಿರಾರು ರೂಪಾಯಿ ಹೆಚ್ಚುವರಿ ಹಣ ವಸೂಲಿ ಮಾಡಿ, ತರಗತಿಯನ್ನೂ ನಡೆಸದೆ, ದಾಖಲೆಗಳನ್ನೂ ಹಿಂತಿರುಗಿಸದೆ ಶೈಕ್ಷಣಿಕ ಭವಿಷ್ಯ ಹಾಳುಗೆಡವಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರಿನ ಕೊಟ್ಟಾರ ಚೌಕಿ ಬಳಿ ಇರುವ ‘ಕರಾವಳಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್’ ಆಡಳಿತ ಮಂಡಳಿಯ ಮುಖ್ಯಸ್ಥ ಗಣೇಶ್ ರಾವ್ ಹಾಗೂ ಪ್ರಾಂಶುಪಾಲ ದಿಶಾನ್ ಎಂಬುವರ ವಿರುದ್ಧ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬಿ. ಗಣೇಶ್ ಎಂಬುವರು ವಿಟ್ಲ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.‌

ದೂರಿನಲ್ಲಿರುವ ಪ್ರಮುಖ ಅಂಶಗಳು:

ಸರ್ಕಾರಿ ಶುಲ್ಕ ಮೀರಿ ಹೆಚ್ಚುವರಿ ಹಣ ವಸೂಲಿ: ಸಿಇಟಿ ಮೂಲಕ ಕರಾವಳಿ ನರ್ಸಿಂಗ್ ಕಾಲೇಜಿಗೆ ಆಯ್ಕೆಯಾದ ವಿದ್ಯಾರ್ಥಿನಿಯಿಂದ ಸರ್ಕಾರಿ ನಿಯಮದಂತೆ ₹10,000 ಶುಲ್ಕ ಪಾವತಿಸಿಕೊಳ್ಳಲಾಗಿತ್ತು. ಆದರೆ KEA ನಿಯಮಗಳಿಗೆ ವಿರುದ್ಧವಾಗಿ ಕಾಲೇಜು ಆಡಳಿತ ಮಂಡಳಿಯು ಕೆನರಾ ಬ್ಯಾಂಕ್ ವಿದ್ಯಾಲಕ್ಷ್ಮಿ ಸಾಲದ ಯೋಜನೆಯಡಿ ಬರೋಬ್ಬರಿ ₹70,000 ಹೆಚ್ಚುವರಿ ಹಣವನ್ನು ಡಿಡಿ (DD) ಮೂಲಕ ಪಾವತಿಸಿಕೊಂಡಿದೆ.

ತರಗತಿ ಸ್ಥಗಿತ – ಭವಿಷ್ಯದ ಜೊತೆ ಆಟ: ಸುಮಾರು 13 ದಿನಗಳ ಕಾಲ ಮಾತ್ರ ತರಗತಿ ನಡೆಸಿದ ಕಾಲೇಜು ಆಡಳಿತ ಮಂಡಳಿ, ಕಳೆದ 7 ತಿಂಗಳಿಂದ ಯಾವುದೇ ತರಗತಿಯನ್ನು ನಡೆಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಂದೂ-ನಾಳೆ ಎಂದು ನೆಪ ಹೇಳಿ ದಿನ ದೂಡುತ್ತಿದೆ.

ದಾಖಲೆಗಳನ್ನೂ ಕೊಡದೆ ಕಿರುಕುಳ: ಕಾಲೇಜಿನ ಈ ವಂಚನೆಯಿಂದ ಬೇಸತ್ತು, ಪಡೆದ ಹೆಚ್ಚುವರಿ ಹಣವನ್ನು ಮರುಪಾವತಿಸಿ ಹಾಗೂ ವಿದ್ಯಾರ್ಥಿನಿಯ 10ನೇ ತರಗತಿ, ಪಿಯುಸಿ ಅಂಕಪಟ್ಟಿ ಸೇರಿದಂತೆ ಮೂಲ ದಾಖಲೆಗಳನ್ನು (Original Documents) ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಮಂಡಳಿ ದಾಖಲೆ ನೀಡದೆ ಸತಾಯಿಸುತ್ತಿದೆ.

ಉನ್ನತ ಮಟ್ಟಕ್ಕೆ ದೂರಿನ ಪ್ರತಿಯನ್ನು ರವಾನೆ: ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆ ಮಾತ್ರವಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ಬೆಂಗಳೂರಿನ ಮಹಿಳಾ ಆಯೋಗಕ್ಕೂ ದೂರಿನ ಪ್ರತಿಯನ್ನು ಸಲ್ಲಿಸಲಾಗಿದೆ.

ಕೆಇಎ (KEA) ಪರೀಕ್ಷೆಯ ಮೂಲಕ ಮಂಗಳೂರಿನ ‘ಕರಾವಳಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್’ ಸಂಸ್ಥೆಗೆ ಆಯ್ಕೆಯಾಗಿದ್ದ ವಿದ್ಯಾರ್ಥಿನಿಯ ಶಿಕ್ಷಣಕ್ಕಾಗಿ, ಅವರ ಕುಟುಂಬವು ಕೆನರಾ ಬ್ಯಾಂಕ್ (ಅಜ್ಜಿನಡ್ಕ ಶಾಖೆ, ಬಂಟ್ವಾಳ) ಮೂಲಕ ‘ಪಿ.ಎಂ. ವಿದ್ಯಾಲಕ್ಷ್ಮಿ ಸಾಮಾನ್ಯ ಶಿಕ್ಷಣ ಸಾಲ’ದ ಅಡಿಯಲ್ಲಿ ₹70,000/- ಹಣವನ್ನು ಪಡೆದು ಡಿಡಿ (DD) ಮೂಲಕ ಕಾಲೇಜು ಆಡಳಿತ ಮಂಡಳಿಗೆ ಪಾವತಿಸಿತ್ತು.

ಮುಂದೆ ಯಾರೂ ಈ ವಂಚನೆಗೆ ಒಳಗಾಗಬಾರದು; ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ

ಈ ಪ್ರಕರಣವು ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ದಂದೆಗೆ ಕನ್ನಡಿ ಹಿಡಿದಿದ್ದು, ಇಂತಹ ವಂಚನೆ ತಡೆಯಲು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಲು ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳು ಅಗತ್ಯವಾಗಿವೆ ಬಡ ವಿದ್ಯಾರ್ಥಿನಿಯ ಕನಸನ್ನು ಚಿವುಟಿದ ಕರಾವಳಿ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ವಿರುದ್ಧ ಸರ್ಕಾರ ಮತ್ತು ಕಾನೂನು ಇಲಾಖೆ ತಕ್ಷಣವೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ!

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

complaint

ಪುತ್ತೂರು ಚಲೋ: ದ್ವೇಷ ಭಾಷಣ, ಪೊಲೀಸ್ ನಿಂದನೆ ಆರೋಪ; ಶ್ರೀಕಾಂತ್ ಶೆಟ್ಟಿ, ಸಂಘಟಕರ ವಿರುದ್ಧ ದೂರು

Published

on

ಪುತ್ತೂರು: ಇತ್ತೀಚೆಗೆ ನಡೆದ ‘ಪುತ್ತೂರು ಚಲೋ’ ಕಾರ್ಯಕ್ರಮದಲ್ಲಿ ದ್ವೇಷಪೂರಿತ ಘೋಷಣೆ ಕೂಗಿದ ಕಾರ್ಯಕರ್ತರು, ಪ್ರಚೋದನಾಕಾರಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕಾರ್ಯಕ್ರಮದ ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರು ಮಾನವ ಬಂಧುತ್ವ ವೇದಿಕೆಯ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ ಅವರು ಈ ದೂರನ್ನು ಸಲ್ಲಿಸಿದ್ದು, ಪುತ್ತೂರು ನಗರ ಪೊಲೀಸರು ದೂರು ಸ್ವೀಕರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ದೂರಿನಲ್ಲೇನಿದೆ? ಆಗಸ್ಟ್ 31ರಂದು ದರ್ಬೆಯ ಜಿರಾಕ್ಸ್ ಅಂಗಡಿಯ ಗಲಾಟೆಯನ್ನು ಮುಂದಿಟ್ಟುಕೊಂಡು ನಡೆಸಲಾದ ‘ಪುತ್ತೂರು ಚಲೋ’ ಮೆರವಣಿಗೆಯಲ್ಲಿ ಕೆಲವು ಕಾರ್ಯಕರ್ತರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು “ಪಾಕಿಸ್ತಾನದ ನಾಯಿಗಳು”, “ಬಾಂಗ್ಲಾದೇಶದ ಕನ್ನಿಗಳು” ಎಂಬ ದ್ವೇಷಪೂರಿತ ಘೋಷಣೆಗಳನ್ನು ಕೂಗಿದ್ದಾರೆ. ಸಂಘಟಕರ ಕುಮ್ಮಕ್ಕಿನಿಂದ ಸಮಾಜದಲ್ಲಿ ಕೋಮು ವೈಮನಸ್ಯ ಮೂಡಿಸಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವರ ವಿರುದ್ಧ ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. “ಪೊಲೀಸ್ ಇಲಾಖೆಯಲ್ಲಿ ಗಂಡಸುತನ ಇರುವ ಯಾವ ಅಧಿಕಾರಿಯೂ ಇಲ್ಲ, ಹಿಂದೂ ಸಂಘಟನೆಗಳನ್ನು ದಮನ ಮಾಡಲು ಪೊಲೀಸರು ಕಾಂಟ್ರಾಕ್ಟ್ ಪಡೆದಿದ್ದಾರೆ. ಪೊಲೀಸರು ವರದಕ್ಷಿಣೆ, ಉಯಿಲು ತಕರಾರು ಕೇಸ್‌ಗಳಲ್ಲಿ ಬೆದರಿಸಿ ಡೀಲ್ ಕುದುರಿಸುತ್ತಿದ್ದಾರೆ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ರೌಡಿಶೀಟ್ ತೆರೆಯುವ ಪೊಲೀಸರು ನಾಲಾಯಕ್ ನಪುಂಸಕರು” ಎಂದು ನಿಂದಿಸಿ, ಸಾರ್ವಜನಿಕರಲ್ಲಿ ಇಲಾಖೆಯ ಬಗ್ಗೆ ಕೀಳು ಅಭಿಪ್ರಾಯ ಮೂಡಿಸಲು ಯತ್ನಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

ಶ್ರೀಕಾಂತ್ ಶೆಟ್ಟಿ ಅವರು ಈ ಹಿಂದೆಯೂ ಇಂತಹ ಪ್ರಚೋದನಾಕಾರಿ ಭಾಷಣಗಳ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಹಿನ್ನೆಲೆ ಹೊಂದಿದ್ದಾರೆ. ಆದ್ದರಿಂದ ದ್ವೇಷ ಭಾಷಣ ಮಾಡಿದ ಶ್ರೀಕಾಂತ್ ಶೆಟ್ಟಿ, ಪ್ರಚೋದನಾಕಾರಿ ಘೋಷಣೆ ಕೂಗಿದ ಕಾರ್ಯಕರ್ತರು ಹಾಗೂ ಸಂಘಟಕರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅಮಳ ರಾಮಚಂದ್ರ ಆಗ್ರಹಿಸಿದ್ದಾರೆ

Continue Reading

complaint

ಮಂಗಳೂರಿನ ಜಿ.ಆರ್. ಮೆಡಿಕಲ್ ಕಾಲೇಜಿನ MBBS ಸೀಟು ರದ್ದತಿಗೆ KEAಗೆ ಮನವಿ: ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ ಒತ್ತಾಯ

Published

on

ಬೆಂಗಳೂರು: ಮಂಗಳೂರಿನ ‘ಜಿ.ಆರ್. ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್’ (GRMCHRC) ನಲ್ಲಿರುವ 150 MBBS ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೌನ್ಸೆಲಿಂಗ್ ಸೀಟ್ ಮ್ಯಾಟ್ರಿಕ್ಸ್‌ನಿಂದ ತಕ್ಷಣವೇ ರದ್ದುಗೊಳಿಸಬೇಕು ಅಥವಾ ತಡೆಹಿಡಿಯಬೇಕು ಎಂದು ‘ನವ ಭಾರತ ಶಿಕ್ಷಾ ಪ್ರತಿಷ್ಠಾನ’ದ ರಾಜ್ಯ ಸಂಯೋಜಕ ಡಾ. ಗೋವಿಂದರಾಜು ಕೆ. ಅವರು KEA ಕಾರ್ಯನಿರ್ವಾಹಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖ ಆರೋಪಗಳು ಮತ್ತು ಮನವಿಯ ಮುಖ್ಯಾಂಶಗಳು:

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ: ಈ ಹಿಂದೆ ಕಾಲೇಜಿನಲ್ಲಿ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯ ಹಾಗೂ ಸೂಕ್ತ ಬೋಧಕರ ಕೊರತೆ ಇದ್ದ ಕಾರಣ ಹೈಕೋರ್ಟ್ ಮಧ್ಯಪ್ರವೇಶಿಸಿ, ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ನಷ್ಟ, ಮಾನಸಿಕ ಶ್ರಮ ಮತ್ತು ಆರ್ಥಿಕ ನಷ್ಟ ಉಂಟಾಗಿದೆ.

NMC ನಿಯಮಗಳ ಉಲ್ಲಂಘನೆ: ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾರ್ಗದರ್ಶಿ ಸೂತ್ರಗಳನ್ನು ಕಾಲೇಜು ಉಲ್ಲಂಘಿಸಿದೆ. ಆಸ್ಪತ್ರೆಯಲ್ಲಿ ಹೊರರೋಗಿಗಳ (OPD) ಸಂಖ್ಯೆ, ಹಾಸಿಗೆಗಳ ಭರ್ತಿ (Bed Occupancy), ಶಸ್ತ್ರಚಿಕಿತ್ಸಾ ಕೊಠಡಿಗಳ (OT) ಕಾರ್ಯನಿರ್ವಹಣೆ ಮತ್ತು ಚಿಕಿತ್ಸಾ ಸೌಲಭ್ಯಗಳು NMC ಮಾನದಂಡಗಳಿಗೆ ತಕ್ಕಂತೆ ಇಲ್ಲದಿರುವುದು ಕಂಡುಬಂದಿದೆ.

ಬೋಧಕರ ಕೊರತೆ: ಕಾಲೇಜು ಅತ್ಯಂತ ಗ್ರಾಮೀಣ ಭಾಗದಲ್ಲಿದ್ದು, ಉತ್ತಮ ವೈದ್ಯರು ಹಾಗೂ ಬೋಧಕರನ್ನು ನಿಯಮಿತ ಪ್ರಮಾಣದಲ್ಲಿ ಉಳಿಸಿಕೊಳ್ಳಲು ಸಂಸ್ಥೆ ಸಂಪೂರ್ಣ ವಿಫಲವಾಗಿದೆ.

ಪ್ರಮುಖ ಆಗ್ರಹಗಳು:

ಸೀಟುಗಳ ರದ್ದು: ಸಂಸ್ಥೆಯು NMC ಯಿಂದ ಸಂಪೂರ್ಣ ಅನುಮತಿ ಪಡೆಯುವವರೆಗೆ KEA ನಡೆಸುವ NEET UG ಕೌನ್ಸೆಲಿಂಗ್‌ನಲ್ಲಿ GRMCHRC ಯ MBBS ಸೀಟುಗಳನ್ನು ಸೇರಿಸಬಾರದು.

ಉನ್ನತ ಮಟ್ಟದ ತನಿಖೆ: ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರು ಮತ್ತು ತಜ್ಞರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಿ, ಕಾಲೇಜು ಮತ್ತು ಆಸ್ಪತ್ರೆಗೆ ದಿಢೀರ್ ಪರಿಶೀಲನೆ (Surprise Inspection) ನಡೆಸಬೇಕು.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ರಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (RGUHS) ಪ್ರತಿಯನ್ನು ರವಾನಿಸಲಾಗಿದ್ದು, ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಹಿತರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ

Continue Reading

Bantawala

ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕದ ಅವ್ಯವಸ್ಥೆ: ಮಣ್ಣಿನೊಳಗೆ ಹೂತುಹಾಕುವ ಕಳ್ಳ ವ್ಯವಹಾರ ಬಯಲು!

Published

on

ಬಂಟ್ವಾಳ/ಉಳ್ಳಾಲ: ಉಳ್ಳಾಲ ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕವು ನಿರ್ವಹಣೆಯಿಲ್ಲದೆ ಭಾರಿ ಅವ್ಯವಸ್ಥೆಯ ಗಂಟಾಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಿಂದ ತರಲಾಗುವ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಸಂಸ್ಕರಿಸಬೇಕಾದ ಸಂಸ್ಥೆ, ಯಾವುದೇ ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಲೋಡುಗಟ್ಟಲೆ ಕಸವನ್ನು ರಾಶಿ ಹಾಕಿ ಪರಿಸರವನ್ನು ದುರ್ನಾತಮಯಗೊಳಿಸಿದೆ.

ನರಕಸದೃಶ ವಾತಾವರಣ, ಜಲಮೂಲ ಕಲಿಷಿತ: ತ್ಯಾಜ್ಯದ ರಾಶಿಯಿಂದಾಗಿ ಸುತ್ತಮುತ್ತಲಿನ ಪರಿಸರದಲ್ಲಿ ತೀವ್ರ ದುರ್ನಾತ ಬೀರುತ್ತಿದ್ದು, ಮಂಚಿ ಹಾಗೂ ಕುಕ್ಕಾಜೆ-ಸಜಿಪ ಸಂಪರ್ಕ ರಸ್ತೆಯಲ್ಲಿ ಸಂಚರಿಸುವುದೇ ನರಕಸದೃಶವಾಗಿದೆ. ಹಕ್ಕಿಗಳು, ನಾಯಿ-ನರಿಗಳು ತ್ಯಾಜ್ಯವನ್ನು ಹೆಕ್ಕಿ ತಂದು ಸ್ಥಳೀಯ ನಾಗರಿಕರ ಕುಡಿಯುವ ನೀರಿನ ಬಾವಿ ಹಾಗೂ ಟ್ಯಾಂಕ್‌ಗಳಿಗೆ ಎಸೆಯುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

https://deevatigenews.com/wp-content/uploads/2026/08/WhatsApp-Video-2026-08-19-at-16.06.21-1.mp4

ಹಿಟಾಚಿ ಮೂಲಕ ತ್ಯಾಜ್ಯ ಹೂತುಹಾಕುವ ಕಳ್ಳ ವ್ಯವಹಾರ! ಲಕ್ಷಾಂತರ ರೂಪಾಯಿ ಸರ್ಕಾರಿ ಅನುದಾನ ವೆಚ್ಚ ಮಾಡಿ ನಿರ್ಮಿಸಿದ ಈ ಘಟಕದಲ್ಲಿ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಬದಲಿಗೆ, ಹಿಟಾಚಿ ಯಂತ್ರ ಬಳಸಿ ಭಾರಿ ಗಾತ್ರದ ಗುಂಡಿ ತೋಡಿ ಕಸವನ್ನು ಮಣ್ಣಿನ ಅಡಿಯಲ್ಲಿ ಹೂತುಹಾಕಲಾಗುತ್ತಿದೆ. ಸ್ಥಳೀಯರು ನೀಡಿದ ದೂರಿನನ್ವಯ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ, ಪುರಸಭಾ ಅಧಿಕಾರಿಗಳ ಈ ಬೇಜವಾಬ್ದಾರಿ ಹಾಗೂ ವೈಫಲ್ಯ ಬಹಿರಂಗಗೊಂಡಿದೆ.

ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಕೆ: ಸರ್ಕಾರದ ಹಣ ಪೋಲು ಮಾಡಿ, ಪರಿಸರ ನಾಶಕ್ಕೆ ಕಾರಣರಾಗಿರುವ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಸಮದ್ ಕೈಕಂಬ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ

Continue Reading

Trending

Copyright © 2025 Deevatige

error: Content is protected !!