Connect with us

theft

ವಿಟ್ಲ ವ್ಯಾಪ್ತಿಯಲ್ಲಿ ಮತ್ತೆ ಬ್ಯಾಟರಿ ಕಳ್ಳರ ಅಟ್ಟಹಾಸ: ಒಂದೇ ರಾತ್ರಿ 4 ಲಾರಿಗಳ ಬ್ಯಾಟರಿ ಕಳ್ಳತನ!

Published

on

ವಿಟ್ಲ: ಮಳೆಗಾಲ ಆರಂಭವಾಗುತ್ತಿದ್ದಂತೆ ರಾತ್ರಿ ಹೊತ್ತು ರಸ್ತೆಬದಿ ಹಾಗೂ ಮೈದಾನಗಳಲ್ಲಿ ನಿಲ್ಲಿಸುವ ವಾಹನಗಳ ಬ್ಯಾಟರಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುವ ಖದೀಮರ ಗ್ಯಾಂಗ್ ವಿಟ್ಲ ಪರಿಸರದಲ್ಲಿ ಮತ್ತೆ ಸಕ್ರಿಯವಾಗಿದೆ. ಭಾನುವಾರ ರಾತ್ರಿ ಒಂದೇ ದಿನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಪ್ರತ್ಯೇಕ ವಾಹನಗಳ ಬ್ಯಾಟರಿಗಳನ್ನು ಚೋರರು ಕದ್ದೊಯ್ದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಸಾಲೆತ್ತೂರು ಮತ್ತು ಕುಡ್ತಮುಗೇರಿನಲ್ಲಿ ರಾತ್ರಿ ಹೊತ್ತು ನಿಲ್ಲಿಸಿದ್ದ ಪಿಕಪ್ ವಾಹನಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಇದೀಗ ಮತ್ತೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಅಳಕೆಮಜಲಿನಲ್ಲಿ ಎರಡು ಲಾರಿಗಳ ಬ್ಯಾಟರಿ ಕಳವು:

ಅಳಕೆಮಜಲು ಮಸೀದಿ ಆವರಣದ ಹೊರಗಡೆ ಎಂದಿನಂತೆ ಭಾನುವಾರ ರಾತ್ರಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಬ್ಯಾಟರಿಗಳನ್ನು ಚೋರರು ಎಗರಿಸಿದ್ದಾರೆ. ಪ್ರವೀಣ್ ಶೆಟ್ಟಿ ಎಂಬವರಿಗೆ ಸೇರಿದ ಗೂಡ್ಸ್ ಲಾರಿ ಹಾಗೂ ಸೋನಾ ಸಾಗರ್ ಇಬ್ರಾಹಿಂ ಎಂಬವರ ಲಾರಿಗಳ ಬ್ಯಾಟರಿಗಳು ಕಳವಾಗಿವೆ. ಸೋಮವಾರ ಬೆಳಗ್ಗೆ ಚಾಲಕರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮತ್ತೆರಡು ಕಡೆ ಕಳ್ಳತನ:

ಇದೇ ರಾತ್ರಿ ಅಳಕೆಮಜಲು ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ನಿನ್ನಿಕಲ್ಲು ಸಂಪರ್ಕಿಸುವ ಅಡ್ಡರಸ್ತೆ ಬಳಿ ನಿಲ್ಲಿಸಲಾಗಿದ್ದ ಕೋಳಿ ಸಾಗಾಟದ ಲಾರಿಯಿಂದಲೂ ಬ್ಯಾಟರಿಯನ್ನು ಕದಿಯಲಾಗಿದೆ. ಇದರೊಂದಿಗೆ ಉಕ್ಕುಡ ಚೆಕ್‌ಪೋಸ್ಟ್ ಸಮೀಪದ ಮಸೀದಿ ಬಳಿಯ ಮೈದಾನದಲ್ಲಿ ನಿಲ್ಲಿಸಿದ್ದ ಮತ್ತೊಂದು ಲಾರಿಯ ಬ್ಯಾಟರಿಯನ್ನೂ ಖದೀಮರು ಹೊತ್ತೊಯ್ದಿದ್ದಾರೆ.

ನಾಲ್ಕು ತಿಂಗಳ ಹಿಂದೆಯೂ ನಡೆದಿತ್ತು ಸರಣಿ ಕಳ್ಳತನ:

ವಿಟ್ಲ ಪರಿಸರದಲ್ಲಿ ಬ್ಯಾಟರಿ ಕಳ್ಳರ ಕಾಟ ಇದೇ ಮೊದಲಲ್ಲ. ಇನ್ನು ಸುಮಾರು 4 ತಿಂಗಳ ಹಿಂದೆಯೂ (ಫೆಬ್ರವರಿ ತಿಂಗಳಲ್ಲಿ) ಇದೇ ರೀತಿ ಕಳ್ಳರು ಸರಣಿ ಕಳ್ಳತನ ನಡೆಸಿ ಅಟ್ಟಹಾಸ ಮೆರೆದಿದ್ದರು. ಕೇವಲ 3 ದಿನಗಳ ಅವಧಿಯಲ್ಲಿ ವಿಟ್ಲದ ಕಲ್ಯಾಣಿ ರಸ್ತೆ, ಜಯನಗರ, ಒಕ್ಕೆತ್ತೂರು ಸೇರಿದಂತೆ ವಿಟ್ಲ ಕಸಬಾ ಮತ್ತು ಪೆರುವಾಯಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಒಟ್ಟು 9 ವಾಹನಗಳ ಬ್ಯಾಟರಿಗಳನ್ನು ಕಳ್ಳರು ಲೂಟಿ ಮಾಡಿದ್ದರು. ಆಗಲೂ ಲಾರಿ, ಟಿಪ್ಪರ್, ಪಿಕಪ್ ಹಾಗೂ ಜೆಸಿಬಿ ವಾಹನಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡಲಾಗಿತ್ತು.

ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಕಳ್ಳರು ಅದೇ ಚಾಳಿಯನ್ನು ಮುಂದುವರಿಸಿರುವುದು ವಾಹನ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ – ಪೊಲೀಸರಿಗೆ ದೂರು:

ವಿಟ್ಲ ವ್ಯಾಪ್ತಿಯಲ್ಲಿ ಭಾನುವಾರ ಒಂದೇ ರಾತ್ರಿ ಒಟ್ಟು ನಾಲ್ಕು ವಾಹನಗಳ ಬ್ಯಾಟರಿ ಕಳ್ಳತನ ನಡೆದಿರುವ ಬಗ್ಗೆ ಲಾರಿ ಚಾಲಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಕರಾಮತ್ತು ಸ್ಥಳೀಯ ಸಿಸಿಟಿವಿ (CC Camera) ಕ್ಯಾಮರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ಈ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ವಿಶೇಷ ಸೂಚನೆ (ವಾಹನ ಸವಾರರ ಗಮನಕ್ಕೆ): ಮಳೆಗಾಲದ ಕತ್ತಲನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರ ಗ್ಯಾಂಗ್ ಸಕ್ರಿಯವಾಗಿರುವುದರಿಂದ, ವಾಹನ ಮಾಲೀಕರು ರಾತ್ರಿ ವೇಳೆ ಜನಸಂದಣಿ ಇರುವ ಅಥವಾ ಸಿ.ಸಿ. ಕ್ಯಾಮರಾ ನಿಗಾ ಇರುವ ಸುರಕ್ಷಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವಂತೆ ವಿನಂತಿಸಲಾಗಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಮನೆಗೆ ನುಗ್ಗಿ ವೃದ್ಧ ವೈದ್ಯರ ಮೇಲೆ ಹಲ್ಲೆ, ದರೋಡೆ; ಆಕ್ಟಿವಾ ಕಳ್ಳತನ: ಇಡ್ಕಿದು ಗ್ರಾಮದಲ್ಲಿ ಸರಣಿ ಕಳ್ಳತನದಿಂದ ಬೆಚ್ಚಿಬಿದ್ದ ಜನತೆ

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದಲ್ಲಿ ಶನಿವಾರ ರಾತ್ರಿ ಭೀಕರ ದರೋಡೆ ಹಾಗೂ ಸರಣಿ ಕಳ್ಳತನ ಪ್ರಕರಣಗಳು ಜರುಗಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ.

ವೃದ್ಧ ವೈದ್ಯರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಕಳ್ಳರು

ಇಡ್ಕಿದು ಗ್ರಾಮದ ಕೋಲ್ಪೆ ಕೊಡಂಗೆ ನಿವಾಸಿಯಾದ ನಿವೃತ್ತ ವೈದ್ಯ ಡಾ. ಪುಂಡಿಕಾಯಿ ಸೂರ್ಯನಾರಾಯಣ ಭಟ್ (75) ಅವರ ಮನೆಗೆ ಶನಿವಾರ ರಾತ್ರಿ ಹಿಂಭಾಗದಿಂದ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಕೃತ್ಯ ಎಸಗಿದೆ. ಘಟನೆ ನಡೆದ ಸಮಯದಲ್ಲಿ ಸೂರ್ಯನಾರಾಯಣ ಭಟ್ ಅವರು ಕೆಳ ಅಂತಸ್ತಿನಲ್ಲಿ ಟಿವಿ ವೀಕ್ಷಿಸುತ್ತಿದ್ದರು. ಮನೆ ಮೇಲಿನ ಅಂತಸ್ತಿನಲ್ಲಿ ಅವರ ಪುತ್ರ (ಪುತ್ತೂರಿನ ಬಿಂದು ಕಂಪನಿ ಉದ್ಯೋಗಿ ಕಿಶನ್), ಸೊಸೆ ಹಾಗೂ ಕುಟುಂಬಸ್ಥರು ಇದ್ದರು.

ಅದೇ ಸಮಯಕ್ಕೆ ಹಿಂಭಾಗದಿಂದ ಮನೆ ಪ್ರವೇಶಿಸಿದ ಕಳ್ಳರು, ವೃದ್ಧ ವೈದ್ಯರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಅಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಭಟ್ ಅವರು ಗಾಯಗೊಂಡು ಜೋರಾಗಿ ಬೊಬ್ಬೆ ಹೊಡೆದ ತಕ್ಷಣ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಫಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ 2,60,000/- ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಸುಲಿಗೆ ಮಾಡಿ, ಮನೆಯ ಹಿಂಬಾಗಿಲಿನ ಮುಲಕ‌ ಪರಾರಿಯಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 163/2026, ಕಲಂ: 329(4), 115(2), 309(4) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆಕ್ಟಿವಾ ಸ್ಕೂಟರ್ ಕಳ್ಳತನ, ಬೈಕ್ ಕಳವಿಗೆ ಯತ್ನ

ಈ ಘಟನೆ ನಡೆದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿರುವ ಕೋಲ್ಪೆ ಕೊಡಂಚರಪಾಲು ನಿವಾಸಿ ಆನಂದ ಸಫಲ್ಯ ಎಂಬುವರ ಮನೆಯ ಅಂಗಳದಲ್ಲಿದ್ದ ಆಕ್ಟಿವಾ ಸ್ಕೂಟರ್ ಅನ್ನು ದುಷ್ಕರ್ಮಿಗಳು ಕದ್ದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಷ್ಟೇ ಅಲ್ಲದೆ, ಸಮೀಪದ ಮತ್ತೊಂದು ಮನೆಯ ಅಂಗಳದಲ್ಲಿದ್ದ ಬೈಕ್ ಒಂದರ ಲಾಕ್ ಮುರಿದು ಕಳವು ಮಾಡಲು ಯತ್ನಿಸಿದ್ದು, ಅದು ಸಾಧ್ಯವಾಗದೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಅಂಗಳದಲ್ಲಿ ನಿಲ್ಲಿಸಿದ್ದ KA-19-EY-6282ನೇ ನೋಂದಣಿಯ ದ್ವಿಚಕ್ರ ವಾಹನವು (ಅಂದಾಜು ಮೌಲ್ಯ 30,000/- ರೂ), ಮರುದಿನ ದಿನಾಂಕ: 26.07.2026 ರಂದು ಬೆಳಿಗ್ಗೆ ನೋಡಿದಾಗ ಕಾಣೆಯಾಗಿದ್ದು, ಈ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದರೂ ಪತ್ತೆಯಾಗದಿದ್ದು, ಈ ಹಿನ್ನೆಲೆಯಲ್ಲಿ ಸದ್ರಿಯವರು ನೀಡಿದ‌ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 162/2026, ಕಲಂ:303(2) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ‌ ಪ್ರಕರಣಕ್ಕೆ ಸಂಬಂಧಿಸಿದ ದ್ವಿಚಕ್ರ ವಾಹನ ಬಿ.ಸಿ ರೋಡ್ ಬಳಿ ಪತ್ತೆಯಾಗಿದ್ದು, ತನಿಖೆ ಮುಂದುವರಿದಿರುತ್ತದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ: ಪೊಲೀಸ್ ತನಿಖೆ ಚುರುಕು

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ, ಬಂಟ್ವಾಳ ಡಿವೈಎಸ್ಪಿ ಹಾಗೂ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸರಣಿ ಕಳ್ಳತನಕ್ಕೆ ಗ್ರಾಮಸ್ಥರ ಆಕ್ರೋಶ: ರಾತ್ರಿ ಗಸ್ತಿಗೆ ಆಗ್ರಹ

ಇಡ್ಕಿದು ಗ್ರಾಮದಲ್ಲಿ ಕಳೆದ ಕೆಲವು ಸಮಯದಿಂದ ಸರಣಿ ಕಳ್ಳತನ ಪ್ರಕರಣಗಳು ಮರುಕಳಿಸುತ್ತಿದ್ದರೂ, ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರ ಮೇಲೆಯೇ ಹಲ್ಲೆ ನಡೆಸಿ ದರೋಡೆ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ತಕ್ಷಣವೇ ಈ ಭಾಗದಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಕಳ್ಳರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Continue Reading

arrest

ಪೊಲೀಸರ ಸಾಹಸ: ಕಳ್ಳತನ ಪ್ರಕರಣಗಳ ಆರೋಪಿಗಳ ಬಂಧನ

Published

on

ದಕ್ಷಿಣ ಕನ್ನಡ: ಸುಳ್ಯ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಮತ್ತು ಕಳವು ಯತ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

1. ಸುಳ್ಯದಲ್ಲಿ ಬ್ಯಾಟರಿ ಕಳವು: ಆರೋಪಿಯಿಂದ 5 ಬ್ಯಾಟರಿಗಳು ವಶ

ಮೇ 14, 2026 ರಂದು ರಾತ್ರಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವಾಹನಗಳಲ್ಲಿದ್ದ 5 ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ (ಅ.ಕ್ರ 68/2026 ಕಲಂ: 303(2) BNS) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿತ್ತು.

ಈಗಾಗಲೇ ವಿಟ್ಲ ಪೊಲೀಸ್ ಠಾಣೆಯ ವಿವಿಧ 5 ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೇರಳ ಕಾಸರಗೋಡು ನಿವಾಸಿ ಅಬ್ದುಲ್ ಮಜಿದ್ (33) ಎಂಬಾತನನ್ನು ಜುಲೈ 20, 2026 ರಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸುಳ್ಯ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿದ್ದ 5 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

2. ಪರಂಗಿಪೇಟೆ ಕೆನರಾ ಬ್ಯಾಂಕ್ ಕಳವು ಯತ್ನ ಪ್ರಕರಣ: ಓರ್ವನ ಬಂಧನ

ಇನ್ನೊಂದೆಡೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪರಂಗಿಪೇಟೆಯಲ್ಲಿರುವ ಕೆನರಾ ಬ್ಯಾಂಕಿನ ಮೇಲ್ಛಾವಣಿಯನ್ನು ಕೊರೆದು, ಒಳಪ್ರವೇಶಿಸಿ ಹಣ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲು ಯತ್ನಿಸಿದ ಘಟನೆ ಜೂನ್ 13, 2026 ರಂದು ನಡೆದಿತ್ತು.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ (ಅ.ಕ್ರ: 106/2026 ಕಲಂ: 331(3), 331(4), 305(a), 62 BNS) ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಬಂಟ್ವಾಳ ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂಬಾತನನ್ನು ಜುಲೈ 22, 2026 ರಂದು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ.

Continue Reading

arrest

ಮಂಗಳೂರು: ಮನೆ ಕಾಮಗಾರಿ ವೇಳೆ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು – 24 ಗಂಟೆಯೊಳಗೆ ಆರೋಪಿ ಅರೆಸ್ಟ್!

Published

on

ಮಂಗಳೂರು: ಮನೆ ಕಾಮಗಾರಿಗೆ ಬಂದಿದ್ದ ಕೆಲಸಗಾರನೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ್ದ ಪ್ರಕರಣವನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶ ಮೂಲದ, ಪ್ರಸ್ತುತ ಮಂಗಳೂರಿನ ಬಂದರ್ ಅಜಿಜುದ್ದೀನ್ ರಸ್ತೆಯಲ್ಲಿ ವಾಸವಿದ್ದ ಜಹೀರುದ್ದೀನ್ (24) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ:

ಮಂಗಳೂರು ನಗರದ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿ ಜುಲೈ 6ರಂದು ಮನೆಯೊಂದರ ಹಿಂಭಾಗದ ಕೊಠಡಿಯ ಛಾವಣಿ ಹಾಗೂ ಹಾಲ್‌ನಲ್ಲಿ ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ಮನೆಯ ಟೇಬಲ್ ಡ್ರಾವರ್‌ನಲ್ಲಿದ್ದ ಸಣ್ಣ ಪರ್ಸ್‌ನಿಂದ:

  • 20 ಗ್ರಾಂ ತೂಕದ ಚಿನ್ನದ ಕಡಗ
  • 17 ಗ್ರಾಂ ತೂಕದ ಚಿನ್ನದ ಚೈನ್
  • 12 ಗ್ರಾಂ ತೂಕದ 2 ಚಿನ್ನದ ಉಂಗುರಗಳು (8 ಗ್ರಾಂ + 4 ಗ್ರಾಂ)
  • ಸೊನಾಟಾ ಕಂಪನಿಯ ಗೋಲ್ಡ್ ಕೋಟೆಡ್ ವಾಚ್

ಸೇರಿದಂತೆ ಒಟ್ಟು 49 ಗ್ರಾಂ ತೂಕದ, ಅಂದಾಜು ₹6,37,000 ಮೌಲ್ಯದ ಸ್ವತ್ತುಗಳು ಕಳುವಾಗಿದ್ದವು. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ 68/2026, ಕಲಂ 305 ಬಿ.ಎನ್.ಎಸ್) ದಾಖಲಾಗಿತ್ತು.

ಕ್ಷಿಪ್ರ ಕಾರ್ಯಾಚರಣೆ – ಜೈಲು ಪಾಲು:

ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ರಂಗಕ್ಕಿಳಿದ ಪೊಲೀಸರು, ಕಾಮಗಾರಿ ಕೆಲಸದಲ್ಲಿದ್ದ ಕೆಲಸಗಾರರನ್ನು ಕೂಲಂಕುಷವಾಗಿ ತನಿಖೆಗೆ ಒಳಪಡಿಸಿದರು. ವಿಚಾರಣೆ ವೇಳೆ ಆರೋಪಿ ಜಹೀರುದ್ದೀನ್ ತಾನೇ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯಿಂದ ಕಳವು ಮಾಡಲಾಗಿದ್ದ ಎಲ್ಲಾ ಚಿನ್ನಾಭರಣಗಳು ಹಾಗೂ ವಾಚ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿದೆ.

ಪೊಲೀಸ್ ತಂಡಕ್ಕೆ ಶ್ಲಾಘನೆ:

ಸದರಿ ಕಳವು ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಮಂಗಳೂರು ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಡಿ.ಆರ್. ಮಂಜಪ್ಪ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ರೀ ಅರುಣ್ ಕುಮಾರ್ ಡಿ. ಹಾಗೂ ಠಾಣೆಯ ಸಿಬ್ಬಂದಿ ತಂಡದ ಕ್ಷಿಪ್ರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!