murder
ಕುಂದಾಪುರದಲ್ಲಿ ಭೀಕರ ಕೊಲೆ: ಉದ್ಯಮಿಗೆ ನಡುರಸ್ತೆಯಲ್ಲೇ ನಾಡಕೋವಿಯಿಂದ ಗುಂಡಿಕ್ಕಿ ಹತ್ಯೆ
ಕುಂದಾಪುರ: ಹಣಕಾಸಿನ ವೈಷಮ್ಯ ಮತ್ತು ಕ್ಷುಲ್ಲಕ ಸವಾಲಿನ ಹಿನ್ನೆಲೆಯಲ್ಲಿ ಉದ್ಯಮಿಯೊಬ್ಬರನ್ನು ನಾಡಕೋವಿಯಿಂದ ಗುಂಡಿಕ್ಕಿ ಭೀಕರವಾಗಿ ಕೊಲೆ ಮಾಡಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ಹೋಲಿ ರೋಸರಿ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಬಾರ್ಕೂರು-ಕಚ್ಚೂರು ಮೂಲದ ಉದ್ಯಮಿ, ‘ಮುನ್ನಾ’ ಎಂದೂ ಕರೆಯಲ್ಪಡುತ್ತಿದ್ದ ಐವನ್ ರಿಚರ್ಡ್ ಮಸ್ಕರೇನಸ್ (45) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ಕನ್ನಡಕುದ್ರು ನಿವಾಸಿ ಡೆರಿಕ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.
ಘಟನೆಯ ವಿವರ: ಪೊಲೀಸ್ ಮೂಲಗಳ ಪ್ರಕಾರ, ಮೃತ ಐವನ್ ಹಾಗೂ ಆರೋಪಿ ಡೆರಿಕ್ ನಡುವೆ ತೀವ್ರ ಹಣಕಾಸಿನ ದ್ವೇಷವಿತ್ತು. ಜುಲೈ 30ರ ತಡರಾತ್ರಿ ಇಬ್ಬರ ನಡುವೆ ಫೋನ್ನಲ್ಲಿ ತೀವ್ರ ಮಾತಿನ ಚಕಮಕಿ ನಡೆದು, ಪರಸ್ಪರ ಸವಾಲು ಹಾಕಿಕೊಳ್ಳಲಾಗಿತ್ತು. ಈ ವೇಳೆ “ತಾಕತ್ತಿದ್ದರೆ ಚರ್ಚ್ ರೋಡಿಗೆ ಬಾ” ಎಂದು ಡೆರಿಕ್, ಐವನ್ಗೆ ಕರೆ ನೀಡಿದ್ದ.
ಕುಡಿತದ ಮತ್ತಿನಲ್ಲಿದ್ದ ಐವನ್, ಶುಕ್ರವಾರ ಮುಂಜಾನೆ ಸುಮಾರು 3:30 ರ ವೇಳೆಗೆ ತಮ್ಮ ಸಂಗಾತಿ ಲಲಿತಾ ಅವರೊಂದಿಗೆ ಕಾರಿನಲ್ಲಿ ಕುಂದಾಪುರದ ಚರ್ಚ್ ರಸ್ತೆಗೆ ಬಂದಿದ್ದಾರೆ. ಲಿಲಿತಾ ಕಾರಿನಲ್ಲಿಯೇ ಕುಳಿತಿದ್ದು, ಅಲ್ಲಿ ಅವರಿಬ್ಬರ ಮದ್ಯೆ ಮತ್ತೆ ಗಲಾಟೆಯ ಮಾತುಗಳು ನಡೆದಿದೆ. ಗಲಾಟೆ ಜೋರಾಗಿದೆ. ಆ ಸಂದರ್ಭಕ್ಕೆ ಡೆರಿಕ್ ತನ್ನಲ್ಲಿದ್ದ ನಾಡಕೋವಿನಿಂದ ಐವನ್ ಕಡೆಗೆ ಗುಂಡು ಹಾರಿಸಿದ್ದಾನೆ. ಗುಂಡು ಐವನ್ ಅವರ ತೊಡೆಯ ಭಾಗಕ್ಕೆ ಹೊಕ್ಕಿದ್ದು, ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪೊಲೀಸ್ ತನಿಖೆ ತೀವ್ರ: ಘಟನೆಯ ವೇಳೆ ಜೊತೆಯಲ್ಲಿದ್ದ ಲಲಿತಾ ಅವರು ಆರೋಪಿಯನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಕುಂದಾಪುರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಎಫ್ಎಸ್ಎಲ್ (FSL) ಹಾಗೂ ಸೊಕೋ (SOCO) ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ಡೆರಿಕ್ ಬಂಧನಕ್ಕೆ ಬಲೆ ಬೀಸಿದ್ದಾರೆ.
judgement
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ!
ಮಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ದೋಷಿಗಳಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ಅವರು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!
2014ರ ಮೇ 15 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿಯ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಅವರು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿ ಬಂದ ಬೊಲೆರೋ ವಾಹನವೊಂದು ಅವರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಗಂಗಾಧರ ಪಾಂಗಾಳ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಬಿಂಬಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತವಲ್ಲ, ಬದಲಿಗೆ ಕೃತ್ಯ ಎಸಗಲು ರೂಪಿಸಿದ ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿತ್ತು.
ಕೊಲೆಗೆ ಕಾರಣವೇನು?
1ನೇ ಆರೋಪಿ ಸತೀಶ್ ಬೈಕಂಪಾಡಿಯನ್ನು ‘ಬೈಕಂಪಾಡಿ ಮೊಗವೀರ ಮಹಾಸಭಾ’ದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಈ ಅಮಾನತಿಗೆ ಮೃತ ಗಂಗಾಧರ ಪಾಂಗಾಳ ಅವರೇ ಮೂಲ ಕಾರಣವೆಂದು ಭಾವಿಸಿದ ಆರೋಪಿಗಳು, ಅವರ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದರು. ಈ ಹಳೆ ದ್ವೇಷ ತೀರಿಸಿಕೊಳ್ಳಲು ಒಳಸಂಚು ರೂಪಿಸಿದ ಆರೋಪಿಗಳು, ಗಂಗಾಧರ ಅವರನ್ನು ಸ್ಕೂಟರ್ನಲ್ಲಿ ಹಿಂಬಾಲಿಸಿ ಬಂದು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿದ್ದರು. ಗಂಗಾಧರ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.
ಶಿಕ್ಷೆಗೆ ಗುರಿಯಾದ ದೋಷಿಗಳು:
ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ನಾಲ್ವರು ಆರೋಪಿಗಳ ವಿವರ ಹೀಗಿದೆ:
- ಸತೀಶ್ ಬೈಕಂಪಾಡಿ (57 ವರ್ಷ) – ಎ-1 ಆರೋಪಿ (ಮೀನಕಳಿಯ ನಿವಾಸಿ)
- ಪುಷ್ಪರಾಜ್ (47 ವರ್ಷ) – ಎ-2 ಆರೋಪಿ (ಶಿವಳ್ಳಿ ಗ್ರಾಮ, ಉಡುಪಿ)
- ಹರೀಶ್ ಬೈಕಂಪಾಡಿ (61 ವರ್ಷ) – ಎ-3 ಆರೋಪಿ (ಮೀನಕಳಿಯ ನಿವಾಸಿ)
- ಭಾಸ್ಕರ್ ಬೈಕಂಪಾಡಿ (63 ವರ್ಷ) – ಎ-4 ಆರೋಪಿ (ಮೀನಕಳಿಯ ನಿವಾಸಿ)
(ಟಿಪ್ಪಣಿ: ಆರೋಪಿಗಳಾದ ಸತೀಶ್, ಹರೀಶ್ ಮತ್ತು ಭಾಸ್ಕರ್ ಬೈಕಂಪಾಡಿ ಅವರು ಸ್ವಂತ ಸಹೋದರರಾಗಿದ್ದಾರೆ.)
ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ದಂಡದ ವಿವರ:
ಐಪಿಸಿ ಕಲಂ 302, 120, 109 r/w 34 ಅಡಿ: ನಾಲ್ಕೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾ ಶಿಕ್ಷೆ).
ಐಪಿಸಿ ಕಲಂ 201 (ಸಾಕ್ಷ್ಯ ನಾಶ) r/w 34 ಅಡಿ: ಎಲ್ಲಾ ಆರೋಪಿಗಳಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ).
ಮೃತನ ಮಗಳಿಗೆ ಪರಿಹಾರ: ಆರೋಪಿಗಳಿಂದ ವಸೂಲಿ ಮಾಡಲಾಗುವ ಒಟ್ಟು ₹66,000 ದಂಡದ ಮೊತ್ತದಲ್ಲಿ, ₹50,000 ಹಣವನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ನೀಡಲು ಹಾಗೂ ಉಳಿದ ₹16,000 ಹಣವನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.
ವಾಹನಗಳು ಜಪ್ತಿ – ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಕೃತ್ಯ ಎಸಗಲು ಮತ್ತು ಸಂಚು ರೂಪಿಸಲು ಬಳಸಲಾಗಿದ್ದ ಆರೋಪಿಗಳಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರುಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕೂ ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತನಿಖಾ ತಂಡ ಮತ್ತು ಸರ್ಕಾರಿ ಅಭಿಯೋಜಕರು:
ಪಣಂಬೂರು ಪೊಲೀಸ್ ಠಾಣೆಯ അന്നಿನ ಇನ್ಸ್ಪೆಕ್ಟರ್ಗಳಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದರು. ತನಿಖಾಧಿಕಾರಿ ಲೋಕೇಶ್ ಎ.ಸಿ. ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್ಶೀಟ್) ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಪ್ರಬಲವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
manglore police
ಮಂಗಳೂರು: ಜಗಳದ ಬೆನ್ನಲ್ಲೇ ನಿದ್ರಿಸುತ್ತಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಭೀಕರ ಕೊಲೆ ಮಾಡಿದ ಅಣ್ಣ!
ಮಂಗಳೂರು: ಸಣ್ಣ ವಿಷಯಕ್ಕೆ ಆರಂಭವಾದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು, ನಿದ್ರೆಯಲ್ಲಿದ್ದ ಸ್ವಂತ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ನ ಚೊಕ್ಕಬೆಟ್ಟು ಮಠದ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತೆಗ್ಯಾಳು ಗ್ರಾಮದ ಮೂಲದ ಮಲ್ಲಿಕಾರ್ಜುನ (20) ಕೊಲೆಯಾದ ದುರ್ದೈವಿ. ಕೊಲೆ ಎಸಗಿದ ಆತನ ಅಣ್ಣ ಸೋಮನಾಥ (21) ಎಂಬುವವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಕೊಲೆಯಾದ ಮಲ್ಲಿಕಾರ್ಜುನ ಹಾಗೂ ಆರೋಪಿ ಸೋಮನಾಥ ಚೊಕ್ಕಬೆಟ್ಟು ಮಠದ ಬಳಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಇತ್ತೀಚೆಗಷ್ಟೇ ತಾಯಿ ಸ್ವಗ್ರಾಮಕ್ಕೆ ತೆರಳಿದ್ದರಿಂದ ಮನೆಯಲ್ಲಿ ಸಹೋದರರಿಬ್ಬರೇ ಇದ್ದರು.
ಭಾನುವಾರ ರಾತ್ರಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ತೀವ್ರ ಗಲಾಟೆ ನಡೆದಿದೆ. ಜಗಳದ ಬಳಿಕ ಮಲ್ಲಿಕಾರ್ಜುನ ಕೊಠಡಿಯಲ್ಲಿ ಮಲಗಿದ್ದ. ಆಕ್ರೋಶ ತಣಿಯದ ಅಣ್ಣ ಸೋಮನಾಥ, ತಡರಾತ್ರಿ ತಮ್ಮ ಗಾಢ ನಿದ್ರೆಯಲ್ಲಿದ್ದಾಗ ಭಾರಿ ಗಾತ್ರದ ಕಲ್ಲನ್ನು ಆತನ ತಲೆಗೆ ಎತ್ತಿ ಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಮಲ್ಲಿಕಾರ್ಜುನ ಸ್ಥಳದಲ್ಲೇ ಅಸಹಾಯಕವಾಗಿ ಕೊನೆಯುಸಿರೆಳೆದಿದ್ದಾನೆ.
ತಮ್ಮ ಏಳುತ್ತಿಲ್ಲವೆಂದು ನಾಟಕ ಆಡಿದ ಆರೋಪಿ!
ಕೃತ್ಯ ಎಸಗಿದ ಬಳಿಕ ಆರೋಪಿ ಸೋಮನಾಥ ಅತ್ಯಂತ ಚಾಲಾಕಿತನದಿಂದ ನಡೆದುಕೊಂಡಿದ್ದಾನೆ. ಸೋಮವಾರ ಬೆಳಿಗ್ಗೆ ಎದ್ದು ನೆರೆಹೊರೆಯವರ ಬಳಿ ಹೋಗಿ, “ನನ್ನ ತಮ್ಮ ನಿದ್ರೆಯಿಂದ ಏಳುತ್ತಲೇ ಇಲ್ಲ” ಎಂದು ನಾಟಕವಾಡಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ತಕ್ಷಣವೇ ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ವಿಚಾರಣೆ ವೇಳೆ ಕೃತ್ಯ ಒಪ್ಪಿಕೊಂಡ ಅಣ್ಣ
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸುರತ್ಕಲ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ರಾತ್ರಿ ಇಬ್ಬರ ನಡುವೆ ಜಗಳ ನಡೆದಿತ್ತು. ಕೋಪದ ಕೈಗೆ ಬುದ್ಧಿಕೊಟ್ಟು ತಾನೇ ತಮ್ಮನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಥಳಕ್ಕೆ ಹಿರಿಯ ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಹೆಚ್.ಎಂ., ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್ ಹಾಗೂ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ಹಾಗೂ ವಿಧಿವಿಜ್ಞಾನ ತಜ್ಞರ (FSL) ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
murder
ಪ್ರಿಯಕರನ ಜೊತೆ ಸಂಸಾರ, ವಿಮೆ ಹಣದ ಆಸೆ: ಹಾವಿನಿಂದ ಕಚ್ಚಿಸಿ ಪತಿಯ ಹತ್ಯೆಗೈದ ಪತ್ನಿ ಬಂಧನ!
ಪ್ರಿಯಕರನೊಂದಿಗೆ ಬದುಕು ಕಟ್ಟಿಕೊಳ್ಳಲು ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡುವುದು ನಡೆಯುತ್ತಲೇ ಇದೆ. ಇದೀಗ ಇನ್ನಷ್ಟು ಬೆಚ್ಚಿ ಬೀಳಿಸುವ ಹೊಸ ಸಂಚಿನಿಂದ ಮಾಡಿದ ಆಘಾತಕಾರಿ ಕೊಲೆಯೊಂದನ್ನು ಪತ್ನಿ ಮಾಡಿರುವುದು ಬೆಳಕಿಗೆ ಬಂದಿದೆ.
ಮೀರತ್: ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ದುರಾಸೆ ಹಾಗೂ ಪತಿಯ ಹೆಸರಲ್ಲಿದ್ದ ಜೀವ ವಿಮೆ (Life Insurance) ಹಣಕ್ಕೆ ಕಣ್ಣಿಟ್ಟು, ಪತಿಯನ್ನೇ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿದ್ದ ಕೌರ್ಯದ ಘಟನೆಯೊಂದು ಉತ್ತರ ಪ್ರದೇಶದ ಮೀರತ್ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ, ಮೃತನ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅತುಲ್ ಕೊಲೆಯಾದ ದುರದೃಷ್ಟಕರ ಪತಿ. ಘಟನೆಗೆ ಸಂಬಂಧಿಸಿದಂತೆ ಆತನ ಪತ್ನಿ ದಾಮಿನಿ, ಪ್ರಿಯಕರ ತುಷಾರ್ ಹಾಗೂ ಆತನಿಗೆ ಸಹಕರಿಸಿದ ಸೋನು ಮತ್ತು ಉದಯ್ ಎಂಬವರನ್ನು ಪೊಲೀಸರು ಕಷ್ಟಡಿಗೆ ಪಡೆದಿದ್ದಾರೆ.
ಹಾಲಿನಲ್ಲಿ ನಿದ್ರೆ ಮಾತ್ರೆ, ಬಳಿಕ ಹಾವಿನಿಂದ ಕಚ್ಚಿಸಿ ಕೊಲೆ!
ಪೋಲಿಸರ ತನಿಖೆಯ ಪ್ರಕಾರ, ಮೃತ ಅತುಲ್ ಪತ್ನಿ ದಾಮಿನಿ ‘ಕೃಷ್ಣ ಕಿಡ್ಸ್ ಸ್ಕೂಲ್’ ಎಂಬ ಪ್ಲೇ-ಸ್ಕೂಲ್ ನಡೆಸುತ್ತಿದ್ದರು. ಅಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ತುಷಾರ್ ಎಂಬಾತನೊಂದಿಗೆ ದಾಮಿನಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಪತಿಯನ್ನು ದಾರಿಯಿಂದ ತಪ್ಪಿಸಿ, ಪ್ರಿಯಕರನೊಂದಿಗೆ ಬಾಳುವ ಉದ್ದೇಶ ಹಾಗೂ ಪತಿಯ ಜೀವ ವಿಮೆ ಹಣವನ್ನು ಗಿಟ್ಟಿಸಿಕೊಳ್ಳಲು ಇಬ್ಬರೂ ಸೇರಿ ಅತುಲ್ನನ್ನು ಕೊಲ್ಲಲು ಸ್ಕೆಚ್ ಹಾಕಿದ್ದರು.

ಯೋಜನೆಯಂತೆ, ದಾಮಿನಿ ಪತಿ ಅತುಲ್ ಅವರಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು. ಅತುಲ್ ಗಾಢ ನಿದ್ರೆಗೆ ಜಾರುತ್ತಿದ್ದಂತೆ, ಪ್ರಿಯಕರ ತುಷಾರ್ ವಿಷಪೂರಿತ ಹಾವನ್ನು ತಂದುಕೊಟ್ಟಿದ್ದ. ಆ ಹಾವಿನಿಂದ ಅತುಲ್ ಅವರಿಗೆ ಕಚ್ಚಿಸಿ, ಕೊಲೆ ಮಾಡಲಾಗಿತ್ತು. ಹಾವಿನ ಕಡಿತದಿಂದಲೇ ಮೃತಪಟ್ಟಿದ್ದಾರೆ ಎಂದು ಬಿಂಬಿಸಿ, ಸಾವನ್ನು ಸಹಜ ಘಟನೆಯಂತೆ ತೋರಿಸುವುದು ಆರೋಪಿಗಳ ತಂತ್ರವಾಗಿತ್ತು.
24 ಗಂಟೆಯಲ್ಲೇ ಬಲೆಗೆ ಬಿದ್ದ ಆರೋಪಿಗಳು
ಅತುಲ್ ಅವರ ಸಾವಿನ ಕುರಿತು ಕುಟುಂಬಸ್ಥರಿಗೆ ಹಾಗೂ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಪತ್ನಿ ದಾಮಿನಿ ಮತ್ತು ಪ್ರಿಯಕರ ತುಷಾರ್ ಅವರ ಅಸಲಿ ಬಣ್ಣ ಬಯಲಾಗಿದೆ.
ವಿಷಪೂರಿತ ಹಾವನ್ನು ತರಲು ತುಷಾರ್ಗೆ ಸೋನು ಹಾಗೂ ಉದಯ್ ಎಂಬುವವರು ನೆರವಾಗಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ನಾಲ್ವರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
