government
ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಐತಿಹಾಸಿಕ ತೀರ್ಮಾನಕ್ಕೆ ರಾಜ್ಯ ಸರಕಾರ ಬದ್ಧ ; ಸಂತೃಸ್ತರಿಗೆ ತಲಾ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ
ಬೆಂಗಳೂರು : ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಐತಿಹಾಸಿಕ ತೀರ್ಮಾನಕ್ಕೆ ರಾಜ್ಯ ಸರಕಾರ ಬದ್ದವಾಗಿದ್ದು, ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಇತ್ತೀಚೆಗೆ ನಡೆದ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಸಂಕಷ್ಟಕ್ಕೀಡಾಗಿದ್ದ ನಿವಾಸಿಗಳಿಗೆ ಪರ್ಯಾಯ ವಸತಿ ಸೌಕರ್ಯ ಘೋಷಿಸುವ ಮೂಲಕ ಸಂತ್ರಸ್ತರಿಗೆ ಸಂತಸವನ್ನು ನೀಡಿದೆ. . ಮಾನವೀಯತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರ್ಹ ಫಲಾನುಭವಿಗಳಿಗೆ ಬೈಯಪ್ಪನಹಳ್ಳಿಯಲ್ಲಿ ತಲಾ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಪ್ರಕಟಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರವು ಪ್ರಾಕೃತಿಕ ವಿಕೋಪ ಅಥವಾ ಇತರ ಕಾರಣಗಳಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಸಂತ್ರಸ್ತರ ಜೀವನವನ್ನು ಮತ್ತೆ ಹಳಿಗೆ ತರಲು ಸರ್ಕಾರವು ಪುನರ್ವಸತಿ ಯೋಜನೆಯಡಿ ಭಾರಿ ಮೊತ್ತದ ನೆರವು ಘೋಷಿಸಿದೆ.
ಕೇವಲ ತಾತ್ಕಾಲಿಕ ಶೆಡ್ಗಳ ಬದಲಿಗೆ, ಶಾಶ್ವತ ಮತ್ತು ಸುಭದ್ರವಾದ ಮನೆಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದ್ದು, ಪ್ರತಿ ಸಂತ್ರಸ್ತ ಕುಟುಂಬಕ್ಕೆ ತಲಾ 11.2 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಡಲು ಸರ್ಕಾರ ಬದ್ಧವಾಗಿದೆ. ಮನೆಗಳ ಜೊತೆಗೆ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕದoತಹ ಮೂಲಭೂತ ಸೌಕರ್ಯಗಳನ್ನೂ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕಳೆದ ಡಿಸೆಂಬರ್ 20ರಂದು ಕೋಗಿಲು ಲೇಔಟ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಸುಮಾರು 167 ಅಕ್ರಮ ಮನೆಗಳನ್ನು ನೆಲಸಮಗೊಳಿಸಿದ್ದರು. ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವಿಶೇಷವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಇದನ್ನು ‘ಬುಲ್ಡೋಜರ್ ರಾಜ್’ ಎಂದು ಟ್ವೀಟ್ ಮಾಡುವ ಮೂಲಕ ಕುಟುಕಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತೆರವು ಕಾರ್ಯಾಚರಣೆಯು ಕಾನೂನುಬದ್ಧವಾಗಿ ನೋಟಿಸ್ ನೀಡಿದ ಬಳಿಕವೇ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಆದರೂ ಮನುಷ್ಯತ್ವದ ಆಧಾರದ ಮೇಲೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ ಎಂದ ಅವರು, ಕೋಗಿಲು ಲೇಔಟ್ನಿಂದ ಕೇವಲ 7 ಕಿಲೋಮೀಟರ್ ಅಂತರದಲ್ಲಿರುವ ಬೈಯಪ್ಪನಹಳ್ಳಿಯ ಸರ್ವೆ ನಂಬರ್ 23ರಲ್ಲಿ ಮನೆಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ. ಹೊಸ ವರ್ಷದ ಆರಂಭದ ದಿನವೇ (ಜನವರಿ 1) ಈ ಮನೆಗಳನ್ನು ಹಸ್ತಾಂತರಿಸುವ ಗುರಿಯನ್ನು ಹೊಂದಲಾಗಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಈ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ರಾಜಕೀಯ ಟೀಕೆಗಳಿಗೂ ಉತ್ತರಿಸಿದ ಸಿಎಂ, ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಕಮ್ಯೂನಿಸ್ಟ್ ನಾಯಕರು ಇದರಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ಇಂತಹ ಒತ್ತುವರಿಗಳು ಅಧಿಕಾರಿಗಳ ಗಮನಕ್ಕೆ ಬಾರದೆ ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಅವರು, ತಪ್ಪಿತಸ್ಥ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಅರ್ಹ ಫಲಾನುಭವಿಗಳನ್ನು ಗುರುತಿಸಲು ಮುಂದಿನ ಮೂರು ದಿನಗಳ ಕಾಲ ಪ್ರತಿಯೊಂದು ಪ್ರಕರಣದ ದಾಖಲೆಗಳನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು. ಒತ್ತುವರಿಗಳನ್ನು ಸರ್ಕಾರ ಎಂದಿಗೂ ಪ್ರೋತ್ಸಾಹಿಸುವುದಿಲ್ಲ, ಆದರೆ ಅಲ್ಲಿ ವಾಸಿಸುತ್ತಿದ್ದವರ ಬದುಕನ್ನು ಗಮನದಲ್ಲಿಟ್ಟುಕೊಂಡು ವಸತಿ ಯೋಜನೆಯಡಿ ಸೂರು ಒದಗಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು
government
ಉಪ್ಪಿನಂಗಡಿ ಗ್ರಾ.ಪಂ. ಮೇಲೆ ಲೋಕಾಯುಕ್ತ ದಾಳಿ; ಪಿಡಿಒ ವಿರುದ್ಧ ಲಂಚದ ಆರೋಪಗಳ ಸುರಿಮಳೆ
ಉಪ್ಪಿನಂಗಡಿ, ಸೆ. 9: ವ್ಯಾಪಕ ಭ್ರಷ್ಟಾಚಾರ ಮತ್ತು ಅವ್ಯವಹಾರದ ದೂರುಗಳ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.
ಲೋಕಾಯುಕ್ತ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ತಂಡವು ಕಚೇರಿಗೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿತು. ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ವರ್ತಕರು, ಬಾರ್ ಮಾಲಕರು ಮತ್ತು ಸಾರ್ವಜನಿಕರು ತಮ್ಮ ಅಳಲನ್ನು ಲೋಕಾಯುಕ್ತರ ಮುಂದೆ ತೋಡಿಕೊಂಡರು.
ಪೆಟ್ರೋಲ್ ಪಂಪ್ ಪರವಾನಿಗೆ ನವೀಕರಣಕ್ಕೆ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ, ಕಟ್ಟಡ ತೆರಿಗೆ ಕಟ್ಟಲು ಹೋದರೂ ತೆಗೆದುಕೊಳ್ಳುತ್ತಿಲ್ಲ. ಪಿಡಿಒ ಹೇಳದೆ ಯಾವ ಕೆಲಸವೂ ಆಗುವುದಿಲ್ಲ, ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ ಎಂದು ಪಂಜಳದ ಉದ್ಯಮಿ ಚಂದ್ರಶೇಖರ ತಾಳಜೆ ಆರೋಪಿಸಿದರು.
1987ರಿಂದ ಬಾರ್ ನಡೆಸುತ್ತಿದ್ದೇನೆ, ಈ ಬಾರಿ ನನ್ನ ಬಾರ್ ಲೈಸೆನ್ಸ್ ನವೀಕರಣಕ್ಕೂ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಎಂದು ಉಲ್ಲಾಸ್ ಬಾರ್ ಮಾಲಕ ಕರುಣಾಕರ ಸುವರ್ಣ, ನಿರಾಲ ಬಾರ್ನ ನವೀನ ರೈ, ಕಾರ್ತಿಕ್ ಬಾರ್ನ ಆದಿತ್ಯ ಭಟ್ ಅವರು ದೂರು ನೀಡಿದರು.
ಗ್ರಾ.ಪಂ. ಕಟ್ಟಡಗಳ ಹರಾಜು ಅವಧಿ ಮುಗಿದರೂ ಮರು ಹರಾಜು ನಡೆಸದೆ, ಹಳೆಯದವರಿಂದಲೇ ಹೆಚ್ಚುವರಿ ಹಣ ಪಡೆದು ಮುಂದುವರಿಸಲಾಗುತ್ತಿದೆ. ರಾತ್ರಿ ವೇಳೆ ಪಿಡಿಒ ಮತ್ತು ಕೆಲ ಸಿಬ್ಬಂದಿಗಳು ಮಧ್ಯವರ್ತಿಗಳೊಂದಿಗೆ ಕಚೇರಿಯಲ್ಲಿ ರಹಸ್ಯ ಸಭೆ ನಡೆಸುತ್ತಾರೆ, ಸಿಸಿ ಕ್ಯಾಮರಾ ಪರಿಶೀಲಿಸಿ ಎಂದು ಸಾಮಾಜಿಕ ಕಾರ್ಯಕರ್ತ ರಹಿಮಾನ್ ಪೊರುಂಕಾಜೆ ಒತ್ತಾಯಿಸಿದರು.
ಈ ವೇಳೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಡಿವೈಎಸ್ಪಿ ಗಾನ ಕುಮಾರಿ, ಪಿಡಿಒ ಅರ್ಜಿ ತೆಗೆದುಕೊಳ್ಳಬೇಡಿ ಎಂದರೂ ಅದು ನಿಮ್ಮ ಕರ್ತವ್ಯವಲ್ಲ. ಬಂದ ಎಲ್ಲಾ ಅರ್ಜಿಗಳಿಗೆ ಹಿಂಬರಹ ನೀಡಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿ ಎಂದು ಸೂಚಿಸಿದರು. ದಾಳಿ ವೇಳೆ ಪ್ರಭಾರ ಪಿಡಿಒ ವಿಲ್ಯಡ್ ಲಾರೆನ್ಸ್ ರೊಡ್ರಿಗಸ್ ಕಚೇರಿಯಲ್ಲಿ ಗೈರಾಗಿದ್ದರು.
ಸಾರ್ವಜನಿಕರ ಎಲ್ಲಾ ದೂರುಗಳನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ದೂರು ನೀಡಲು ಬಾಕಿ ಇರುವವರು ಇಂದು ಸಂಜೆ 4 ಗಂಟೆಗೆ ಗ್ರಾ.ಪಂ. ಸಭಾಂಗಣಕ್ಕೆ ಬರುವಂತೆ ಕರೆ ನೀಡಿದ್ದಾರೆ.
DEATH
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನಿಧನ : ಇಂದು ತಿಪಟೂರಿನಲ್ಲಿ ಅಂತಿಮ ಸಂಸ್ಕಾರ
ಬೆಂಗಳೂರು: ಮಾಜಿ ಶಿಕ್ಷಣ ಸಚಿವ, ತಿಪಟೂರು ಕ್ಷೇತ್ರದ ಹಿರಿಯ ರಾಜಕಾರಣಿ ಬಿ.ಸಿ. ನಾಗೇಶ್ (67) ಅವರು ತೀವ್ರ ಅನಾರೋಗ್ಯದಿಂದ ಮಂಗಳವಾರ (ಆಗಸ್ಟ್ 18) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ತೀವ್ರತರದ ಬ್ರೈನ್ ಟ್ಯೂಮರ್ (ಮಿದುಳಿನ ಗಂಟು) ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಈಗಾಗಲೇ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿರುವ ಮಗಳ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು, ಕೊನೆಯುಸಿರೆಳೆದಿದ್ದಾರೆ. ಮೃತರು ಓರ್ವ ಮಗ ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
ಆಗಸ್ಟ್ 19ರಂದು (ಬುಧವಾರ) ಅವರ ಸ್ವಂತ ಊರಾದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸಾರ್ವಜನಿಕ ದರ್ಶನ ಹಾಗೂ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಎಬಿವಿಪಿಯಿಂದ ರಾಜಕೀಯ ಜೀವನ ಆರಂಭ:
1959ರ ಜುಲೈ 1ರಂದು ಜನಿಸಿದ ಬಿ.ಸಿ. ನಾಗೇಶ್ ಅವರು, ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮೂಲಕ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪೂರ್ಣಕಾಲಿಕ ಪ್ರಚಾರಕರಾಗಿ ಹಲವು ವರ್ಷಗಳ ಕಾಲ ಸಂಘಟನಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
1984ರಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಯಾದ ಅವರು, ಪಕ್ಷದ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಂಡು ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎರಡು ಬಾರಿ ಶಾಸಕ, ಪ್ರಾಥಮಿಕ ಶಿಕ್ಷಣ ಸಚಿವರಾಗಿ ಸೇವೆ:
ಶಾಸಕರಾಗಿ: 2008ರಲ್ಲಿ ಮೊದಲ ಬಾರಿಗೆ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾಗೇಶ್, 2018ರಲ್ಲಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. (2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು).
ಸಚಿವರಾಗಿ: 2021ರಿಂದ 2023ರವರೆಗಿನ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ‘ಸಕಾಲ’ ಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಸಚಿವರಾಗಿದ್ದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಾಲಾ ಕಾಂಪೌಂಡ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಸುದ್ದಿಯಲ್ಲಿದ್ದರು.
ಗಣ್ಯರ ಕಂಬನಿ:
ಬಿ.ಸಿ. ನಾಗೇಶ್ ಅವರ ಅಗಲಿಕೆಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ತೀವ್ರ ಕಂಬನಿ ಮಿಡಿದಿದ್ದಾರೆ. ‘ನಿಷ್ಠಾವಂತ ಸಂಘಟಕ ಹಾಗೂ ಸರಳ ರಾಜಕಾರಣಿಯನ್ನು ರಾಜ್ಯ ಕಳೆದುಕೊಂಡಂತಾಗಿದೆ’ ಎಂದು ಸಂತಾಪ ಸೂಚಿಸಿದ್ದಾರೆ.
government
ಆಹಾರ ಭದ್ರತೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ: ಹೋಟೆಲ್, ಮೆಡಿಕಲ್ ಸ್ಟೋರ್ಗಳಲ್ಲಿ ಇನ್ಮುಂದೆ QR ಕೋಡ್ ಮೂಲಕ ನೇರ ದೂರು ಸೌಲಭ್ಯ
ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಸಾರ್ವಜನಿಕರು ಸೇವೆ ಪಡೆಯುವ ಸ್ಥಳಗಳಲ್ಲಿ ನೇರವಾಗಿ ದೂರು ಸಲ್ಲಿಸಲು QR ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಹೋಟೆಲ್ಗಳು, ಮೆಡಿಕಲ್ ಸ್ಟೋರ್ಗಳು, ಪಿಜಿ ಹಾಗೂ ಕ್ಯಾಂಟೀನ್ಗಳಲ್ಲಿ ಕಳಪೆ ಆಹಾರ ಅಥವಾ ಸೇವಾ ಲೋಪ ಕಂಡುಬಂದಲ್ಲಿ, ಗ್ರಾಹಕರು QR ಕೋಡ್ ಸ್ಕ್ಯಾನ್ ಮಾಡಿ ತಕ್ಷಣವೇ ಅಧಿಕೃತ ದೂರು ನೀಡಬಹುದು. ಕರ್ನಾಟಕದಲ್ಲಿ ಈ ರೀತಿಯ ತಂತ್ರಜ್ಞಾನ ಆಧಾರಿತ ದೂರು ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಆಹಾರ ಇಲಾಖೆಯು ಇತ್ತೀಚೆಗೆ ನಡೆಸಿದ ಸರಣಿ ತಪಾಸಣೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಈ ನಿರ್ಧಾರದ ಜೊತೆಗೆ, ಹೋಟೆಲ್ಗಳಲ್ಲಿ ಸಿಸಿಟಿವಿ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಮರುಪರಿಶೀಲಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಸರ್ಕಾರವನ್ನು ಆಗ್ರಹಿಸಿದೆ.
ತಪಾಸಣೆ ವಿಸ್ತರಣೆ:
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಖಾಸಗಿ ಹಾಸ್ಟೆಲ್ಗಳು, ಪಿಜಿಗಳು, ಬಸ್ ನಿಲ್ದಾಣಗಳು, ಮದುವೆ ಮನೆಗಳು, ರೈಲ್ವೆ ಕ್ಯಾಂಟೀನ್ಗಳು ಹಾಗೂ ವಿಮಾನಗಳಲ್ಲಿ ನೀಡಲಾಗುವ ಆಹಾರದ ಮೇಲೆಯೂ ನಿರಂತರ ನಿಗಾ ವಹಿಸಲಾಗುತ್ತದೆ. ಪಿಜಿಗಳಲ್ಲಿ ಕಳಪೆ ಆಹಾರ ನೀಡುವುದು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ಬೃಹತ್ ಕಾರ್ಯಾಚರಣೆ ಹಾಗೂ ಆಹಾರ ಜಪ್ತಿ:
ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದ 30 ತಂಡಗಳು ಬೆಂಗಳೂರಿನಲ್ಲಿ ನಡೆಸಿದ ದಿಢೀರ್ ತಪಾಸಣೆಯಲ್ಲಿ ಬೃಹತ್ ಪ್ರಮಾಣದ ಕಳಪೆ ಮತ್ತು ಅವಧಿ ಮೀರಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
| ವಶಪಡಿಸಿಕೊಂಡ ವಸ್ತುಗಳು | ಪ್ರಮಾಣ / ವಿವರ | ಪ್ರಮುಖ ಲೋಪಗಳು |
| ಮಟನ್ / ಚಿಕನ್ | 378 ಕೆಜಿ + 51 ಕೆಜಿ | ತಪ್ಪು ಲೇಬಲ್, ಎಕ್ಸ್ಪೈರಿ ದಿನಾಂಕ ಇಲ್ಲದಿರುವುದು & ಅವಧಿ ಮೀರಿದ್ದು |
| ಮೀನು | 203 ಕೆಜಿ | ಅತಿಯಾದ ಅವಧಿ ಮೀರಿದ ಮತ್ತು ಕಳಪೆ ಸ್ಥಿತಿ |
| ಸಸ್ಯಾಹಾರಿ ಆಹಾರ | 200 ಕೆಜಿ | ಮಾಂಸಾಹಾರದ ಜೊತೆಗೆ ಅಸಮರ್ಪಕ ಸಂಗ್ರಹಣೆ |
| ತರಕಾರಿ | 76 ಕೆಜಿ | ಕೊಳೆತ ಮತ್ತು ಫಂಗಸ್ಯುಕ್ತ ತರಕಾರಿಗಳು |
| ಹಾಲು / ಮೊಸರು | 45 ಲೀಟರ್ | ಅವಧಿ ಮೀರಿದ ಉತ್ಪನ್ನಗಳು |
| ಬಳಸಿದ ಅಡುಗೆ ಎಣ್ಣೆ | 49 ಲೀಟರ್ | ಪುನರಾವರ್ತಿತ ಮತ್ತು ನಿಯಮಬಾಹಿರ ಬಳಕೆ |
| ಇತರ ಉತ್ಪನ್ನಗಳು | ಬೇಕರಿ (12 ಕೆಜಿ), ಧಾನ್ಯಗಳು (67 ಕೆಜಿ) | ಲೇಬಲ್ ಲೋಪ ಮತ್ತು ಎಕ್ಸ್ಪೈರಿ ದಿನಾಂಕ ಮುಕ್ತಾಯ |
ಮಾದರಿಗಳ ಪ್ರಯೋಗಾಲಯ ಪರೀಕ್ಷೆ:
ಹಾಲು ಮತ್ತು ಉತ್ಪನ್ನಗಳು: 25 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಒಂದು ಮಾದರಿ ‘ಕಳಪೆ’ (Substandard) ಎಂದು ವರದಿಯಾಗಿದೆ.
ಶಾಲಾ-ಕಾಲೇಜು ಕ್ಯಾಂಟೀನ್: 124 ಶಾಲೆ-ಕಾಲೇಜುಗಳ ಆಹಾರ ಘಟಕಗಳನ್ನು ಪರಿಶೀಲಿಸಿ 53 ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಮೆಯೋನೈಸ್: 36 ಎಗ್ ಮೆಯೋನೈಸ್ (Egg Mayonnaise) ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಲಾಗಿದೆ.
ಆಹಾರ ನೈರ್ಮಲ್ಯ ಕಾಪಾಡದ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಉದ್ಯಮಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ಮುಂದುವರಿಸಲಿದೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
