Connect with us

INCIDENT

ವಿಟ್ಲ ಪೇಟೆ ರಸ್ತೆ ಅಗಲೀಕರಣಕ್ಕೆ ವರ್ತಕರ ತೀವ್ರ ವಿರೋಧ: ರಿಂಗ್ ರೋಡ್ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ದೈವದೇವರಿಗೆ ಮೊರೆ!

Published

on

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆಗಳ ಅಗಲೀಕರಣ ಪ್ರಸ್ತಾಪಕ್ಕೆ ಸ್ಥಳೀಯ ವರ್ತಕರು ಮತ್ತು ಕಟ್ಟಡ ಮಾಲಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪೇಟೆಯೊಳಗಿನ ಕಟ್ಟಡಗಳನ್ನು ಕೆಡವಿ ರಸ್ತೆ ಅಗಲೀಕರಣ ಮಾಡುವುದರಿಂದ ವ್ಯಾಪಾರ-ವಹಿವಾಟು ಸಂಪೂರ್ಣ ನಾಶವಾಗಲಿದ್ದು, ‘ವಿಟ್ಲ ಪೇಟೆ ಉಳಿಸಿ’ ಅಭಿಯಾನದ ಭಾಗವಾಗಿ ವರ್ತಕರು ಸರ್ವ ಧರ್ಮಗಳ ಶ್ರದ್ಧಾಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ದೈವದೇವರ ಮೊರೆ ಹೋಗಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಸರ್ವ ಧರ್ಮೀಯರಿಂದ ವಿಶೇಷ ಪ್ರಾರ್ಥನೆ

ರಸ್ತೆ ಅಗಲೀಕರಣ ಪ್ರಸ್ತಾವನೆಯನ್ನು ತಡೆದು, ಅಧಿಕಾರಿಗಳು ಹಾಗೂ ಶಾಸಕರಿಗೆ ಒಳ್ಳೆಯ ಬುದ್ಧಿ ನೀಡುವಂತೆ ಕೋರಿ ವರ್ತಕರು ಇತಿಹಾಸ ಪ್ರಸಿದ್ಧ ವಿಟ್ಲ ಸೀಮೆಯ ಶ್ರೀ ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಸಂಜೆ ಇತಿಹಾಸ ಪ್ರಸಿದ್ಧ ಕಡಂಬು ಕಲ್ಲುರ್ಟಿ ದೈವಸ್ಥಾನದಲ್ಲಿ ಕೋಲ ಹಾಗೂ ವಿಶೇಷ ಪ್ರಾರ್ಥನೆ ನಡೆದಿದೆ. ವಿಟ್ಲದ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ವರ್ತಕರು ಈಗಾಗಲೇ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾನುವಾರದಂದು ಕ್ರಿಶ್ಚಿಯನ್ ವರ್ತಕರಿಂದ ಇಗರ್ಜಿ (ಚರ್ಚ್) ಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಲಿದೆ.

ವರ್ತಕರ ಪ್ರಮುಖ ಬೇಡಿಕೆ ಮತ್ತು ಆಕ್ಷೇಪಣೆ

2016ರಲ್ಲಿಯೇ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್, ಜಿಲ್ಲಾ ಪಂಚಾಯತ್‌ ನ ಅಂದಿನ ಉಪಾಧ್ಯಕ್ಷರಾದ ಜಗನ್ನಾಥ ಸಾಲಿಯಾನ್‌ ಮತ್ತು ವಿಟ್ಲ ಕಸಬಾ ಗ್ರಾಮ ಪಂಚಾಯತಿನ ಅಂದಿನ ಅಧ್ಯಕ್ಷರಾದ ರಮಾನಾಥ್‌ ವಿಟ್ಲ ನೇತೃತ್ವದಲ್ಲಿ ವರ್ತಕರ ಮನವೊಲಿಸಿ ಸಾಕಷ್ಟು ಜಾಗವನ್ನು( ತಲಾ 8 ಅಡಿ) ಬಿಟ್ಟು ಕೊಟ್ಟು ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಅಗಲೀಕರಣಕ್ಕೆ ಉತ್ತಮ ಸಹಕಾರ ನೀಡಲಾಗಿತ್ತು. ಮುಂದೆ ಯಾವುದೇ ಅಗಲೀಕರಣ ಮಾಡುವುದಿಲ್ಲ ಬದಲಾಗಿ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲಾಗುವುದು ಎಂಬ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಈಗ ಜನಪ್ರತಿನಿಧಿಗಳು ಬೈಪಾಸ್‌ ರಸ್ತೆ ನಿರ್ಮಾಣದ ಕೂಗನ್ನು ಕೇಳಿಸಿ ಕೊಳ್ಳದೆಯೇ ಮತ್ತೆ ರಸ್ತೆ ಅಗಲೀಕರಣಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ ಬಹುತೇಕ ವಿಟ್ಲ ಪೇಟೆಯ ಕಟ್ಟಡಗಳು ಧರಾಶಾಯಿಯಾಗುವ ಎಲ್ಲಾ ಸಾಧ್ಯತೆಗಳಿದ್ದು, ವ್ಯಾಪಾರ, ಜೀವನೋಪಾಯ ಎಲ್ಲವೂ ಮಣ್ಣಿನಡಿಗೆ ಬೀಳುವುದರೊಂದಿಗೆ ಅನ್ಯ ಮಾರ್ಗವಿಲ್ಲದೆ ಇದನ್ನೇ ನಂಬಿಕೊಂಡು ಬಂದ ಸಂಸಾರ ಜೀವವನ್ನೇ ಕಳೆದುಕೊಳ್ಳಬೇಕಾದ ಸಂದಿಗ್ಧತೆ ಎದುರಾಗಲಿದೆ ಎಂಬ ಆತಂಕದಲ್ಲಿ ವರ್ತಕರು ಐತಿಹಾಸಿಕ ವಿಟ್ಲ ಸೀಮೆಯ ಸರ್ವಧರ್ಮಿಯರು ಧಾರ್ಮಿಕ ಕೇಂದ್ರಗಳಲ್ಲಿ ತಮ್ಮ ಸಂಕಷ್ಟವನ್ನು ನಿವೇದಿಸಿಕೊಂಡಿದ್ದಾರೆ.

ವಿಟ್ಲ ಪೇಟೆಯ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ತಡೆಯಲು ಬೈಪಾಸ್ / ರಿಂಗ್ ರೋಡ್‌ ನಿರ್ಮಿಸುವುದೊಂದೇ ಶಾಶ್ವತ ಪರಿಹಾರ.

ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರವಿದ್ದ ಕಾಲದಿಂದಲೂ (ಪ್ರಸ್ತುತ ಪುತ್ತೂರು ಕ್ಷೇತ್ರ) ಶಾಸಕರ ಗಮನಕ್ಕೆ ಬೈಪಾಸ್ ರಸ್ತೆಯ ಅಗತ್ಯತೆಯನ್ನು ತಂದಿದ್ದರೂ ಈಡೇರಿಲ್ಲ. ಬೈಪಾಸ್ ರಸ್ತೆ ನಿರ್ಮಿಸಿದ ಬಳಿಕವಷ್ಟೇ ಅಗಲೀಕರಣದ ಮಾತು ಎಂದು ವರ್ತಕರ ಸಂಘ ಖಡಕ್ ಆಗಿ ತಿಳಿಸಿದ್ದು, ಈ ಬಗ್ಗೆ ಸಮಾಲೋಚನೆ ನಡೆಸಿ ಬದಲಿ ವ್ಯವಸ್ಥೆಯಾದ ಬೈಪಾಸ್‌ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುವ ಮೂಲಕ ವರ್ತಕರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ರಸ್ತೆ ಅಗಲೀಕರಣ ನಡೆದರೆ ವಿಟ್ಲ ಪೇಟೆಯ ವ್ಯಾಪಾರ ವಹಿವಾಟು ಸಂಪೂರ್ಣ ತಾಳ ತಪ್ಪಲಿದೆ. ಪೇಟೆಯ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಆದ್ದರಿಂದ ಕೂಡಲೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆದೇಶಿಸಬೇಕು ಎಂದು ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘ ಸರಕಾರವನ್ನು ಒತ್ತಾಯಿಸಿದೆ.

ಶಾಸಕ ಅಶೋಕ್ ಕುಮಾರ್ ರೈ ಸಭೆ: ಭರವಸೆ ಏನು?

ಕೆಲವು ದಿನಗಳ ಹಿಂದೆ ವಿಠಲ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ವರ್ತಕರು ಮತ್ತು ಕಟ್ಟಡ ಮಾಲೀಕರ ಸಭೆ ನಡೆದಿತ್ತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಾಸಕರು, PWD ರಸ್ತೆ ಪಕ್ಕದ ಕಂಜೆಸ್ಟೆಡ್ ಜಾಗಗಳನ್ನು ಸರ್ವೆ ಮಾಡಿ ವರದಿ ನೀಡಲು ಸರ್ಕಾರ ಆದೇಶಿಸಿದೆ. ಮೂಲ ಯೋಜನೆಯಲ್ಲಿ 22 ಮೀಟರ್ ಅಗಲೀಕರಣ ಪ್ರಸ್ತಾವ ಇತ್ತಾದರೂ, ವರ್ತಕರ ಹಿತದೃಷ್ಟಿಯಿಂದ ಅದನ್ನು 15 ಮೀಟರ್‌ಗೆ ಇಳಿಸಿ ಫುಟ್‌ಪಾತ್ ಸಹಿತ ಅಭಿವೃದ್ಧಿಪಡಿಸಲು ಚರ್ಚಿಸಲಾಗಿದೆ. ರಸ್ತೆಗೆ ಜಾಗ ಬಿಟ್ಟುಕೊಡುವ ಭೂಮಾಲೀಕರಿಗೆ ಸಬ್ ರಜಿಸ್ಟ್ರಾರ್ ಕಚೇರಿ ದರದ 3 ಪಟ್ಟು ಪರಿಹಾರ ನೀಡಲಾಗುವುದು. ಆದರೆ, ಸರ್ಕಾರಿ ಜಾಗ ಒತ್ತುವರಿ ಮಾಡಿ ಕಟ್ಟಿದ ಕಟ್ಟಡಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನಲ್ಲ. ನಿಮ್ಮೆಲ್ಲರ ವಿಶ್ವಾಸ ಪಡೆದೇ ಮುಂದುವರಿಯುತ್ತೇನೆ. ನಿಮ್ಮ ತೀವ್ರ ವಿರೋಧದ ನಡುವೆ ಕೆಲಸ ಮಾಡುವ ಹಠ ನನಗಿಲ್ಲ” ಎಂದು ಶಾಸಕರು ತಿಳಿಸಿದ್ದರು.

ಆದಾಗ್ಯೂ, ಕಟ್ಟಡಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ವರ್ತಕರು ಮತ್ತು ಕಟ್ಟಡ ಮಾಲಕರು ಬೈಪಾಸ್ ರಸ್ತೆ ನಿರ್ಮಾಣ ಒಂದೇ ಅಂತಿಮ ಪರಿಹಾರವೆಂದು ಪಟ್ಟು ಹಿಡಿದಿದ್ದು ತಮ್ಮ ತಮ್ಮ ಶ್ರದ್ಧಾ ಕೇಂದ್ರಗಳಲ್ಲಿ ದೇವರನ್ನು ಪ್ರಾರ್ಥಿಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಕಾರಿನ ಮೇಲೆ ಕಾಡಾನೆ ದಾಳಿ: ಚಾಲಕನ ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!

Published

on

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ದೋಲನಮನೆ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ ಎದುರಾದ ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿದೆ. ಆದರೆ, ಚಾಲಕನ ಅತ್ಯಂತ ಸಮಯಪ್ರಜ್ಞೆಯಿಂದಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಘಟನೆಯ ವಿವರ:

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಹಮ್ಮದ್ ಜಾಹಿದ್ ಎಂಬವರು ತಮ್ಮ ತಾಯಿ, ಅಕ್ಕ ಹಾಗೂ ಅವರ ಮಕ್ಕಳೊಂದಿಗೆ ಸೋಮವಾರ ಮಧ್ಯರಾತ್ರಿ ವೇಳೆ ಕಾರಿನಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ದೋಲನಮನೆ ಗ್ರಾಮದ ಬಳಿ ದಿಢೀರನೆ ಪ್ರತ್ಯಕ್ಷಗೊಂಡ ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿದೆ.

ದಾಳಿಯ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಇದರಿಂದ ಭಯಭೀತರಾದ ಕಾರಿನಲ್ಲಿದ್ದ ತಾಯಿ, ಅಕ್ಕ ಹಾಗೂ ಮಕ್ಕಳು ಗಟ್ಟಿಯಾಗಿ ಕಿರುಚಾಡತೊಡಗಿದ್ದಾರೆ. ಜನರು ಕಿರುಚಾಡಿದರೂ ಜಾಗದಿಂದ ಕದಲದ ಕಾಡಾನೆ, ಕಾರಿನ ಬಳಿಯೇ ಕೆಲಕಾಲ ನಿಂತು ಆತಂಕ ಸೃಷ್ಟಿಸಿತ್ತು.

ಚಾಲಕನ ಸಮಯಪ್ರಜ್ಞೆ – ಪಾರಾದ ಕುಟುಂಬ:

ಈ ಆತಂಕದ ಕ್ಷಣದಲ್ಲೂ ಧೈರ್ಯ ಗೆಡದ ಚಾಲಕ ಮಹಮ್ಮದ್ ಜಾಹಿದ್, ತಕ್ಷಣವೇ ಕಾರಿನ ಪಾರ್ಕಿಂಗ್ (ಹ್ಯಾಜಾರ್ಡ್) ಲೈಟ್‌ಗಳನ್ನು ಆನ್ ಮಾಡಿದ್ದಾರೆ. ಪಾರ್ಕಿಂಗ್ ಲೈಟ್‌ನ ಬೆಳಕನ್ನು ಕಂಡ ಕಾಡಾನೆ ಹೆದರಿ ಕಾರಿನಿಂದ ಸ್ವಲ್ಪ ದೂರ ಹೋಗಿ ನಿಂತಿದೆ.

ತಕ್ಷಣವೇ ಎಚ್ಚೆತ್ತ ಜಾಹಿದ್, ಆನೆ ಕಾರ್ಯಪಡೆಗೆ (ಇಟಿಎಫ್ – Elephant Task Force) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕಾಗಮಿಸಿದ ಇಟಿಎಫ್ ಸಿಬ್ಬಂದಿ, ಪಟಾಕಿ ಸಿಡಿಸಿ ಕಾಡಾನೆಯನ್ನು ಯಶಸ್ವಿಯಾಗಿ ಅರಣ್ಯಕ್ಕೆ ಅಟ್ಟಿದ್ದಾರೆ.

ಕಾಡಾನೆ ಹಾವಳಿ ಪ್ರದೇಶಗಳಲ್ಲಿ ಪ್ರಯಾಣಿಸುವಿರಾ? ಈ ಸುರಕ್ಷತಾ ಕ್ರಮಗಳು ತಿಳಿದಿರಲಿ!

ಕರ್ನಾಟಕ ಅರಣ್ಯ ಇಲಾಖೆ ಹಾಗೂ ತುರ್ತು ಸೇವೆಗಳು ಸಾರ್ವಜನಿಕರ ರಕ್ಷಣೆಗಾಗಿ ಒದಗಿಸಿರುವ ಪ್ರಮುಖ ಸಹಾಯವಾಣಿ ಸಂಖ್ಯೆಗಳು ಮತ್ತು ಪಾಲಿಸಬೇಕಾದ ಸುರಕ್ಷತಾ ನಿಯಮಗಳು ಇಲ್ಲಿವೆ:

1. ತುರ್ತು ಸಹಾಯವಾಣಿ ಸಂಖ್ಯೆಗಳು (Emergency Helplines)

ಕಾಡಾನೆ ದಾಳಿ ಅಥವಾ ವನ್ಯಜೀವಿಗಳ ತುರ್ತು ಸಂದರ್ಭ ಎದುರಾದಾಗ ತಕ್ಷಣ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:

  • ರಾಷ್ಟ್ರೀಯ ತುರ್ತು ಸಹಾಯವಾಣಿ: 112 (ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಏಕೀಕೃತ ಸಂಖ್ಯೆ)
  • ಅರಣ್ಯ ಇಲಾಖೆಯ 24×7 ಸಹಾಯವಾಣಿ: 1926 (ಅರಣ್ಯ ಸಂಬಂಧಿ ದೂರುಗಳಿಗೆ ರಾಷ್ಟ್ರವ್ಯಾಪಿ ಸಂಖ್ಯೆ)
  • ಹಾಸನ ಜಿಲ್ಲಾ ಅರಣ್ಯ ಕಚೇರಿ (Hassan Circle): 08172-240163
  • ಪೊಲೀಸ್ ಇಲಾಖೆ: 100
  • ಆಂಬ್ಯುಲೆನ್ಸ್ ಸೇವೆ: 108

2. ವಾಹನ ಚಾಲನೆ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು

ವೇಗದ ಮಿತಿ ಇರಲಿ: ಆನೆಗಳು ಸಂಚರಿಸುವ ವಲಯಗಳಲ್ಲಿ (Elephant Corridors) ವಾಹನದ ವೇಗ ಯಾವಾಗಲೂ ಕಡಿಮೆ ಇರಲಿ. ಇದರಿಂದ ಹಠಾತ್ ಆನೆ ಎದುರಾದರೆ ವಾಹನ ನಿಲ್ಲಿಸಲು ಸಾಧ್ಯವಾಗುತ್ತದೆ.

  • ಹಾರ್ನ್ ಮಾಡಬೇಡಿ: ಕಾಡಾನೆಗಳು ಎದುರಾದಾಗ ಯಾವುದೇ ಕಾರಣಕ್ಕೂ ಜೋರಾಗಿ ಹಾರ್ನ್ ಮಾಡಬೇಡಿ. ಹಾರ್ನ್ ಸದ್ದು ಆನೆಗಳನ್ನು ಕೆರಳಿಸಿ, ವಾಹನದ ಮೇಲೆ ದಾಳಿ ಮಾಡಲು ಪ್ರೇರೇಪಿಸುತ್ತದೆ.
  • ಲೈಟ್‌ಗಳ ಬಳಕೆಯ ವಿವೇಕ: ರಾತ್ರಿ ವೇಳೆ ಆನೆಗಳು ಕಂಡರೆ ಹೈ-ಬೀಮ್ (High Beam) ಹೆಡ್‌ಲೈಟ್‌ಗಳನ್ನು ನೇರವಾಗಿ ಆನೆಯ ಕಣ್ಣಿಗೆ ಬೀಳುವಂತೆ ಹಾಕಬೇಡಿ. ಹಠಾತ್ ಬೆಳಕಿನಿಂದ ಅವು ಹೆದರಿ ದಾಳಿ ಮಾಡಬಹುದು. ಡಿಮ್ಮರ್ ಅಥವಾ ಈ ಘಟನೆಯಲ್ಲಿ ಚಾಲಕ ಮಾಡಿದಂತೆ ಪಾರ್ಕಿಂಗ್/ಹ್ಯಾಜಾರ್ಡ್ ಲೈಟ್‌ಗಳನ್ನು ಬಳಸಿ.
  • ವಾಹನದಿಂದ ಇಳಿಯಬೇಡಿ: ಆನೆಗಳನ್ನು ಹತ್ತಿರದಿಂದ ನೋಡಲು ಅಥವಾ ಮೊಬೈಲ್‌ನಲ್ಲಿ ಫೋಟೋ/ಸೆಲ್ಫಿ ತೆಗೆಯಲು ವಾಹನದಿಂದ ಕೆಳಗಿಳಿಯುವ ಸಾಹಸ ಮಾಡಲೇಬೇಡಿ.
  • ಸುರಕ್ಷಿತ ಅಂತರ ಕಾಯ್ದುಕೊಳ್ಳಿ: ಆನೆಗಳು ರಸ್ತೆ ದಾಟುತ್ತಿದ್ದರೆ ಅಥವಾ ರಸ್ತೆ ಬದಿಯಲ್ಲಿದ್ದರೆ ಕನಿಷ್ಠ 50-100 ಮೀಟರ್ ದೂರದಲ್ಲೇ ವಾಹನ ನಿಲ್ಲಿಸಿ. ಇಂಜಿನ್ ಆಫ್ ಮಾಡಿ ಶಾಂತವಾಗಿ ಅವುಗಳಿಗೆ ರಸ್ತೆ ದಾಟಲು ದಾರಿ ಮಾಡಿಕೊಡಿ.
Continue Reading

Dakshina Kannada

ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ

Published

on

ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ | ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿ ಜೊತೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ಕಡಬ ತಾಲೂಕಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಅಡಿಕೆ ಮರ ಮುರಿದು ಬಿದ್ದು ಕೃಷಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮನೆಗೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ರಸ್ತೆಗೆ ಮರ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಧರೆಗುರುಳಿದ ಅಡಿಕೆ ಮರ!

ಕಡಬ ತಾಲೂಕಿನ ಕುಂತೂರು ಗ್ರಾಮದ ‘ಗುತ್ತುಪಾಲು’ ಎಂಬಲ್ಲಿ ಶುಕ್ರವಾರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ದಿಢೀರ್ ಬೀಸಿದ ಭಾರಿ ಬಿರುಗಾಳಿಗೆ ಅಡಿಕೆ ಮರವೊಂದು ಮುರಿದುಬಿದ್ದಿದೆ. ತೋಟದಲ್ಲಿದ್ದ ಕೃಷಿ ಕಾರ್ಮಿಕ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (೬೬) ಅವರ ಮೈಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಮೂವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮನೆ ಮೇಲೆ ಬಿದ್ದ ಬೃಹತ್ ಮರ: ಸೀತಮ್ಮ ಗಂಭೀರ

ಇನ್ನೊಂದೆಡೆ ಬಳ್ಪ ಗ್ರಾಮದ ನೇರ್ಪು ಎಂಬಲ್ಲಿ ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಶುಕ್ರವಾರ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಅವರ ಪತ್ನಿ ಸೀತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೈಕ್ ಸವಾರನಿಗೆ ಗಾಯ: ಜೀವಭಯದಲ್ಲೇ ಸಾರ್ವಜನಿಕರ ಸಂಚಾರ!

ಶುಕ್ರವಾರ ಸಂಜೆ ವೇಳೆ ಪೆರಾಬೆ ಗ್ರಾಮದ ಸುರುಳಿ ಕಲ್ಲಡ್ಕ (ಮಾಪಲ) ಬಳಿ ರಸ್ತೆಗೆ ಬೃಹತ್ ಮರ ಬಿದ್ದು, ಆ ಹಾದಿಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಚ್ಚೂರು ನಿವಾಸಿ ಗೀತೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾರ್ವಜನಿಕರ ಆಕ್ರೋಶ:

ಸುರುಳಿ ಮಾಪಲ ಮೂಲಕ ನೆಲ್ಯಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

‘ಎಕ್ಸ್’ನಲ್ಲಿ ಸಾಂತ್ವನ: ಶೀಘ್ರ ಪರಿಹಾರಕ್ಕೆ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ ತಾಲೂಕಿನಲ್ಲಿ ಸಂಭವಿಸಿದ ಈ ಸಾಲು ಸಾಲು ಅವಘಡಗಳ ಕುರಿತು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆತಂಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.

ಶೀಘ್ರ ಪರಿಹಾರಕ್ಕೆ ಆದೇಶ: ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಸಚಿವರು, ನೊಂದ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ತಕ್ಷಣವೇ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಆದಷ್ಟು ಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮರಗಳ ತೆರವುಗೊಳಿಸಿ – ಸಚಿವರ ಕರೆ: ಮಳೆ-ಬಿರುಗಾಳಿ ತೀವ್ರವಾಗಿರುವ ಈ ಸಮಯದಲ್ಲಿ ಮನೆಯ ಸುತ್ತಮುತ್ತ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವಾಗ ಮರದ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಡಬ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.

Continue Reading

Bantawala

3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ತೋಟದ ಚರಂಡಿಯಲ್ಲಿ ಪತ್ತೆ: ಆಸ್ಪತ್ರೆಗೆ ದಾಖಲು

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ವೃದ್ಧ ಕಾಣೆಯಾಗಿದ್ದರಿಂದ ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್‌ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಆಪದ್ಬಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್‌ ಮೂಲಕ ಅವರನ್ನು ವಿಟ್ಲಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ಮೂಡಿದ ಹಲವು ಅನುಮಾನಗಳು: ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ತೋಟಕ್ಕೆ ಯಾಕೆ ಹೋದರು? ಅವರನ್ನು ಯಾರಾದರೂ ಅಲ್ಲಿಗೆ ಕರೆದುಕೊಂಡು ಹೋದರೇ? ಅಥವಾ ದಾರಿ ತಪ್ಪಿ ಬಿದ್ದರಾ? ಎಂಬ ಹಲವಾರು ಪ್ರಶ್ನೆಗಳು ಸ್ಥಳೀಯವಾಗಿ ಕಾಡುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರು ಚೇತರಿಸಿಕೊಂಡ ನಂತರವಷ್ಟೇ ಈ ಎಲ್ಲಾ ಅನುಮಾನಗಳಿಗೆ ಹಾಗೂ ಘಟನೆಯ ನೈಜತೆಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

Continue Reading

Trending

Copyright © 2025 Deevatige

error: Content is protected !!