Politics
ಜನಪ್ರತಿನಿಧಿಗಳೇ, ಚೇಲಾಗಳ ಆರಾಧನೆ ನಿಲ್ಲಿಸಿ ಜನರತ್ತ ಮುಖ ಮಾಡಿ; ಬಕೆಟ್ ಹಿಂಬಾಲಕರಿಗಿಂತ ಜನರ ಧ್ವನಿಗೆ ಸಿಗಲಿ ಆದ್ಯತೆ
ವಿಶೇಷ ವರದಿ: ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುವಂತಹ ಹೊಸದೊಂದು ಟ್ರೆಂಡ್ ರಾಜಕಾರಣದಲ್ಲಿ ಭರದಿಂದ ಸಾಗುತ್ತಿದೆ. ಜನರಿಂದ ಆರಿಸಿ ಬಂದ ಶಾಸಕರು, ಸಂಸದರು ಹಾಗೂ ಮಂತ್ರಿಗಳ ಸುತ್ತ ಸಾಮಾನ್ಯ ಜನರಿಗಿಂತ ಹೆಚ್ಚಾಗಿ ‘ಬಕೆಟ್’ ಹಿಂಬಾಲಕರು, ಚೇಲಾಗಳು ಮತ್ತು ಬ್ರೋಕರ್ಗಳ ದಂಡೇ ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಾಯಕರ ಸುತ್ತ ಹೆಣೆದುಕೊಂಡಿರುವ ಈ ಸ್ವಾರ್ಥಿ ವಲಯ, ಮತದಾರರು ಮತ್ತು ಜನಪ್ರತಿನಿಧಿಗಳ ನಡುವೆ ದೊಡ್ಡ ಗೋಡೆಯಾಗಿ ನಿರ್ಮಾಣವಾಗುತ್ತಿರುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ದುರಂತ.
ನಾಯಕರ ಫೋನ್ ಆಪ್ತರ ವಶ; ಜನಸಾಮಾನ್ಯರಿಗೆ ಸಿಗುವುದೇ ಬರೀ ಸುಳ್ಳು ನೆಪಗಳು!
ಇವತ್ತಿನ ದಿನಗಳಲ್ಲಿ ಬಡ ಮತದಾರನೊಬ್ಬ ತನ್ನ ಅತಿ ದೊಡ್ಡ ಸಂಕಷ್ಟದ ಸಮಯದಲ್ಲಿ ನೆರವಿಗಾಗಿ ಜನಪ್ರತಿನಿಧಿಗೆ ಫೋನ್ ಮಾಡಿದರೆ, ಆ ಕರೆಯನ್ನು ಸ್ವೀಕರಿಸುವುದು ಸ್ವತಃ ನಾಯಕರಲ್ಲ! ಬದಲಿಗೆ ಅವರ ಸುತ್ತಲಿರುವ ಪಿಎಗಳು ಅಥವಾ ಸ್ವಘೋಷಿತ ಆಪ್ತರು. ಇಲ್ಲಿ ನಡೆಯುವ ತಾರತಮ್ಯ ಅಷ್ಟಿಷ್ಟಲ್ಲ; ಫೋನ್ ಮಾಡಿದವನು ದುಡ್ಡು, ದರ್ಪ ಇರುವ ಪ್ರಭಾವಿ ವ್ಯಕ್ತಿಯಾಗಿದ್ದರೆ ತಕ್ಷಣ ನಾಯಕರ ಕೈಗೆ ಫೋನ್ ತಲುಪುತ್ತದೆ. ಅದೇ ಒಬ್ಬ ಹಳ್ಳಿಯ ಬಡವ, ಅಸಹಾಯಕ ಸಾರ್ವಜನಿಕ ಫೋನ್ ಮಾಡಿದರೆ ಮುಗಿಯಿತು!
“ಸಾಹೇಬ್ರು ಮೀಟಿಂಗ್ನಲ್ಲಿದ್ದಾರೆ”, “ಬ್ಯುಸಿ ಇದ್ದಾರೆ”, “ಮತ್ತೆ ಮಾಡಿ”, “ಊರಲ್ಲಿಲ್ಲ”, “ಕಚೇರಿಗೆ ಬಂದು ಭೇಟಿಯಾಗಿ” ಎಂಬ ಸಿದ್ಧ ಸೂತ್ರದ ನೆಪಗಳು ಎದುರಾಗುತ್ತವೆ. ಈ ಆಪ್ತರ ಪಡೆ ತಮಗೆ ಬೇಕಾದವರ ಕರೆಗಳನ್ನು ಮಾತ್ರ ಕನೆಕ್ಟ್ ಮಾಡಿಕೊಡುತ್ತಾ, ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರ ನಡುವಿನ ಜೀವಂತ ಸಂಬಂಧವನ್ನೇ ಕತ್ತರಿಸಿ ಹಾಕುತ್ತಿದ್ದಾರೆ.
ಬಲಿಷ್ಠರಿಗಷ್ಟೇ ಸಿಗುತ್ತಾ ಕಾಮಗಾರಿ? ಬಡವ, ದೀನದಲಿತರ ಸಮಸ್ಯೆ ಕೇಳುವವರೇ ಇಲ್ಲ!
ಇನ್ನೊಂದು ಭೀಕರ ವಾಸ್ತವವೆಂದರೆ, ಇವತ್ತು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು, ಸರ್ಕಾರಿ ಯೋಜನೆಗಳು ಮಂಜೂರಾಗುವುದು ಜನರ ಅಗತ್ಯಕ್ಕೆ ತಕ್ಕಂತಲ್ಲ, ಬದಲಿಗೆ ಊರಿನಲ್ಲಿ ಯಾರು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ‘ಬಲಿಷ್ಠ’ನಾಗಿದ್ದಾನೋ ಅವನ ಇಚ್ಛೆಗೆ ತಕ್ಕಂತೆ! ಪ್ರಭಾವಿಗಳ ಮತ್ತು ಗಣ್ಯರ ಮನೆ ಬಾಗಿಲಿಗೆ ತಕ್ಷಣ ತಲುಪುವ ರಸ್ತೆ, ನೀರು, ಅನುದಾನಗಳು, ಬಡವರು ವಾಸಿಸುವ ಕಾಲೋನಿಗಳಿಗೆ, ದೀನದಲಿತರ ಕೇರಿಗಳಿಗೆ ತಲುಪುವುದೇ ಇಲ್ಲ.
ಊರಿನ ಈ ‘ಸ್ವಾರ್ಥಿ ಗಣ್ಯರು’ ಮತ್ತು ಚೇಲಾಗಳು ತಮ್ಮದೇ ಆದ ಒಂದು ಕೋಟೆ ನಿರ್ಮಿಸಿಕೊಂಡಿದ್ದು, ಬಡವರ ನೈಜ ಸಮಸ್ಯೆಗಳು ನಾಯಕರ ಕಿವಿ ನಿಮಿರಿಸದಂತೆ ಜಾಗ್ರತೆ ವಹಿಸುತ್ತಾರೆ. ಬಡವರ ಕಷ್ಟಗಳನ್ನು ಜನಪ್ರತಿನಿಧಿಗಳ ಹತ್ತಿರ ಸುಳಿಯಲೂ ಬಿಡದಂತೆ ತಡೆಯುವ ಇಂತಹ ದಲ್ಲಾಳಿ ಸಂಸ್ಕೃತಿ ದಿನೇದಿನೇ ಹೆಚ್ಚಾಗುತ್ತಿದೆ.
ಗ್ರಾಮೀಣ ಭಾಗದ ಕಣ್ಣೀರು ಮತ್ತು ಹೈಟೆಕ್ ಕಚೇರಿಗಳ ಅಬ್ಬರ
ವಿಶೇಷವಾಗಿ ನಮ್ಮ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು ಅಥವಾ ಬಡವರ ಪಡಿತರ ಚೀಟಿಯ ಸಮಸ್ಯೆಗಳು ಬೆಟ್ಟದಷ್ಟಿವೆ. ಹಳ್ಳಿಯ ಸಾಮಾನ್ಯ ಮತದಾರ ತನಗಿರುವ ಸಮಸ್ಯೆಯನ್ನು ಹೊತ್ತು ಶಾಸಕರ ಅಥವಾ ಮಂತ್ರಿಗಳ ಜನಸಂಪರ್ಕ ಕಚೇರಿಗೆ ಹೋದರೆ, ಅಲ್ಲಿ ಅವನಿಗೆ ಸ್ವಾಗತ ಸಿಗುವುದು ನಾಯಕರನ್ನಲ್ಲ, ಬದಲಿಗೆ ನಾಯಕರ ಹೆಸರಿನಲ್ಲಿ ಹವಾ ಸೃಷ್ಟಿಸುವ ‘ಬಕೆಟ್’ ಹಿಂಬಾಲಕರನ್ನು!
ಕ್ಷೇತ್ರದ ಕಟ್ಟಕಡೆಯ ಮನುಷ್ಯನ ಅಹವಾಲನ್ನು ಕೇಳಿಸಿಕೊಳ್ಳುವ ವ್ಯವಧಾನ ನಮ್ಮ ನಾಯಕರಿಗೆ ಇಲ್ಲವಾಗಿದೆಯೇ? ಅಥವಾ ಈ ಮಧ್ಯವರ್ತಿಗಳೇ ನಾಯಕರನ್ನು ಜನರ ಹತ್ತಿರ ಸೇರದಂತೆ ತಡೆಯುತ್ತಿದ್ದಾರೆಯೇ? ಎಂಬ ಸಂಶಯ ಮತದಾರರಲ್ಲಿ ಮೂಡುತ್ತಿದೆ. ಹಳ್ಳಿಗಳ ಕೆಸರು ಹಾದಿಯಲ್ಲಿ ನಡೆಯಲಾಗದೆ ಸಂಕಷ್ಟ ಪಡುವ ಮತದಾರನಿಗಿಂತ, ನಾಯಕರ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುವ ಚೇಲಾಗಳೇ ಇಂದು ಪ್ರಭಾವಿಗಳಾಗುತ್ತಿದ್ದಾರೆ.
ಡಿಜಿಟಲ್ ಪ್ರಚಾರದ ಭ್ರಮೆಯಲ್ಲಿ ಕಳೆದುಹೋದ ವಾಸ್ತವ
ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ವಿಡಿಯೋ ರೀಲ್ಸ್ಗಳು, ಫೋಟೋ ಶೂಟ್ಗಳು, ಹೋದಲ್ಲೆಲ್ಲಾ ಹೂಗುಚ್ಛ ನೀಡುವ ವಿಡಿಯೋಗಳು ಮತ್ತು ರಸ್ತೆ ರಸ್ತೆಯಲ್ಲೂ ರಾರಾಜಿಸುವ ಬೃಹತ್ ಫ್ಲೆಕ್ಸ್-ಬ್ಯಾನರ್ಗಳ ಮೂಲಕವೇ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ನಾಯಕರ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಕೆಲವೇ ಕೆಲವು ಹಿಂಬಾಲಕರು ಸೃಷ್ಟಿಸುವ ಈ ‘ಕೃತಕ ಜನಪ್ರಿಯತೆ’ಯ ಭ್ರಮೆಯಲ್ಲೇ ಅನೇಕ ಜನಪ್ರತಿನಿಧಿಗಳು ತೇಲುತ್ತಿದ್ದಾರೆ. ಆದರೆ, ಈ ಅಬ್ಬರದ ನಡುವೆ ಸಾಮಾನ್ಯ ಜನರ ನಿಜವಾದ ನೋವು ನಾಯಕರ ಕಿವಿಗೆ ತಲುಪುತ್ತಲೇ ಇಲ್ಲ.
ಸ್ವಾರ್ಥಿ ಹಿಂಬಾಲಕರಿಂದ ಆಡಳಿತದ ಹಳಿ ತಪ್ಪುವ ಭೀತಿ
ಜನಪ್ರತಿನಿಧಿಗಳ ಸುತ್ತ ರಕ್ಷಣಾ ಕೋಟೆಯಂತೆ ನಿಲ್ಲುವ ಈ ಚೇಲಾಗಳು, ತಮ್ಮ ವೈಯಕ್ತಿಕ ಲಾಭ ಹಾಗೂ ಸ್ವಾರ್ಥಕ್ಕಾಗಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಕರಾವಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ವರ್ಗಾವಣೆ ದಂಧೆ, ಸರ್ಕಾರಿ ಕಚೇರಿಗಳಲ್ಲಿ ಕಮಿಷನ್ ಏಜೆಂಟ್ಗಳಾಗಿ ಈ ‘ಬಕೆಟ್’ ಪಡೆಗಳು ಕೆಲಸ ಮಾಡುತ್ತಿರುವುದು ಬಹಿರಂಗ ಸತ್ಯ. ಇದರಿಂದಾಗಿ ನಾಯಕರು ಸಾರ್ವಜನಿಕರಿಂದ ದೂರವಾಗಿ, ಕೇವಲ ಒಂದು ನಿರ್ದಿಷ್ಟ ‘ಸೇವಾ ಬಳಗ’ದ ಕೈಗೊಂಬೆಯಾಗುವ ಅಪಾಯ ಎದುರಾಗಿದೆ.
ಚೇಲಾಗಳ ಮಾತಿಗಿಂತ ಜನರ ಆಶಯ ಮುಖ್ಯ
ಶಾಸಕರು, ಸಂಸದರು ಮತ್ತು ಮಂತ್ರಿಗಳು ತಮ್ಮ ಸುತ್ತಲಿನ ಹಿಂಬಾಲಕರ ಹೊಗಳಿಕೆ ಹಾಗೂ ಓಲೈಕೆಯ ಮಾತುಗಳನ್ನು ನಂಬಿ ಕೂರಬಾರದು. ಅದಕ್ಕಿಂತ ಹೆಚ್ಚಾಗಿ ನೇರವಾಗಿ ಜನರ ಅಭಿಪ್ರಾಯಗಳು, ದಿನನಿತ್ಯದ ಸಮಸ್ಯೆಗಳು ಮತ್ತು ಪ್ರಜ್ಞಾವಂತ ಸಾರ್ವಜನಿಕರ ಸಲಹೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ.
ಜನಪ್ರತಿನಿಧಿಗಳ ಗಮನಕ್ಕೆ:ಜನಸಂಪರ್ಕ ಎಂದರೆ ಪೋಟೋ ಶೂಟ್ ಅಲ್ಲ: ಕಚೇರಿಯ ಎಸಿ ರೂಮಿನಲ್ಲಿ ಹಿಂಬಾಲಕರ ಜೊತೆ ನಡೆಸುವ ಸಭೆ ಜನಸಂಪರ್ಕವಲ್ಲ. ಜನರ ಮನೆಯ ಬಾಗಿಲಿಗೆ ಹೋಗಿ ಅವರ ಕಣ್ಣೀರು ಒರೆಸುವುದೇ ನಿಜವಾದ ಜನಸೇವೆ.
ಬಕೆಟ್ ಸಂಸ್ಕೃತಿಗೆ ಬ್ರೇಕ್ ಹಾಕಿ: ನಿಮ್ಮ ಸುತ್ತಲಿರುವವರು ಹೊಗಳುಭಟರೋ ಅಥವಾ ನಿಜವಾದ ಕಾರ್ಯಕರ್ತರೋ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.
ಗ್ರಾಮ ವಾಸ್ತವ್ಯಕ್ಕೆ ಮರಳಿ: ಹಳ್ಳಿಗಳ ಮೂಲಭೂತ ಸೌಕರ್ಯಗಳ ಕೊರತೆಯನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ, ಅಲ್ಲಿನ ಜನರೊಂದಿಗೆ ನೇರ ಸಂವಾದ ನಡೆಸಿ.
ನೆನಪಿರಲಿ… ನಿಜವಾದ ಶಕ್ತಿ ಮತದಾರ ಪ್ರಭು!
ಜನಪ್ರತಿನಿಧಿಗಳಿಗೆ ಅಧಿಕಾರ ನೀಡಿರುವುದು ಈ ಬಕೆಟ್ ಹಿಂಬಾಲಕರಲ್ಲ, ಬದಲಿಗೆ ಬಿಸಿಲು-ಮಳೆಯನ್ನದೆ ಸಾಲಿನಲ್ಲಿ ನಿಂತು ವೋಟ್ ಹಾಕಿದ ಸಾಮಾನ್ಯ ಮತದಾರರು. ನಾಯಕರ ನಿಜವಾದ ಶಕ್ತಿ ಇರುವುದು ಚೇಲಾಗಳ ಜೈಕಾರದಲ್ಲಲ್ಲ, ಜನರ ನಿಷ್ಕಲ್ಮಷ ವಿಶ್ವಾಸದಲ್ಲಿ. ಇಂದು ನೀವು ಜನರ ಧ್ವನಿಯನ್ನು ಕಡೆಗಣಿಸಿದರೆ, ಅದೇ ಮತದಾರರು ನಾಳೆ ನಿಮಗೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ.
ಇನ್ನಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಲಿ, ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಲಿ.



award
ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಐತಿಹಾಸಿಕ ಮಾನ್ಯತೆ: ಕರಾವಳಿಯಲ್ಲಿ ಹಬ್ಬದ ವಾತಾವರಣ
ಮಂಗಳೂರು: ತುಳು ಭಾಷಿಕರ ಹಲವು ದಶಕಗಳ ಹೋರಾಟ ಹಾಗೂ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ಶ್ರೀಮಂತ ಪರಂಪರೆಯ ತುಳು ಭಾಷೆಗೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡುವುದಾಗಿ ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಗೆ ಬಲ: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು, ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಿಕ ಸಮೃದ್ಧತೆಯನ್ನು ಹೊಂದಿರುವ ಅಪೂರ್ವ ಭಾಷೆಯಾಗಿದೆ. ರಾಜ್ಯ ಸರ್ಕಾರದಿಂದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ಲಭಿಸಿರುವುದು, ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ಹೋರಾಟಕ್ಕೆ ಮತ್ತಷ್ಟು ಪ್ರಬಲ ವೇದಿಕೆಯಾಗಲಿದೆ.
ನಿರಂತರ ಹೋರಾಟಕ್ಕೆ ಸಿಕ್ಕ ಫಲ: ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮಾತನಾಡುವ ತುಳುವಿಗೆ ಹೆಚ್ಚುವರಿ ಅಧಿಕೃತ ಭಾಷಾ ಮಾನ್ಯತೆ ನೀಡಬೇಕೆಂದು ದಶಕಗಳಿಂದ ತುಳು ಸಾಹಿತ್ಯ ಅಕಾಡೆಮಿ, ತುಳು ಪರ ಸಂಘಟನೆಗಳು, ಸಾಹಿತಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತ ಬಂದಿದ್ದರು.
ತಜ್ಞರ ಸಮಿತಿಯ ವರದಿ ಆಧಾರ: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಹಿರಿಯ ಶಿಕ್ಷಣ ತಜ್ಞ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಹೊರ ರಾಜ್ಯಗಳಲ್ಲಿನ ಭಾಷಾ ನೀತಿ ಮಾದರಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈಗ ತುಳುವರ ಬಹುಕಾಲದ ಕನಸು ನನಸಾಗಿದ್ದು, ಕರಾವಳಿ ಭಾಗದಲ್ಲಿ ಹರ್ಷೋದ್ಗಾರ ವ್ಯಕ್ತವಾಗಿದೆ.
CONGRESS
ಮಂಗಳೂರು ಸಚಿವ ಸಂಪುಟ ಸಭೆ: ವಿವಿಧ ಸಂಘಟನೆಗಳ ಪ್ರತಿಭಟನೆ ಮತ್ತು ಬಿಗಿ ಭದ್ರತೆ
ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಶುಕ್ರವಾರ (ಸೆಪ್ಟೆಂಬರ್ 18) ಆಯೋಜಿಸಲಾದ ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಸಚಿವರು ಆಗಮಿಸಿದ ವೇಳೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದವು. ಅಬ್ದುಲ್ ರಹೀಮಾನ್ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿ ಎಸ್.ಡಿ.ಪಿ.ಐ. ಕಾರ್ಯಕರ್ತರು ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಕಪ್ಪುಪತಾಕೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಅದೇ ರೀತಿ, ಜೈಲ್ ಜಾಮರ್ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವಕೀಲರನ್ನು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಸಿ.ಪಿ.ಐ.ಎಂ. ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದರು. ಇದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ತುಳು ಸಂಘಟನೆಯವರು ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವಂತೆ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಡೀಲ್ನಲ್ಲಿರುವ ಪ್ರಜ್ಞಾಸೌಧದ ಎರಡನೇ ಮಹಡಿಯ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 33 ಮಂದಿ ಸಚಿವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಯಾ ಸಭಾಂಗಣದಲ್ಲೇ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ನಿಗದಿತ ಸಮಯಕ್ಕಿಂತ ಸಭೆ ಸ್ವಲ್ಪ ವಿಳಂಬವಾಗಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
CONGRESS
ಮಂಗಳೂರಿನಲ್ಲಿ ಐತಿಹಾಸಿಕ ರಾಜ್ಯ ವಿಶೇಷ ಸಚಿವ ಸಂಪುಟ ಸಭೆ: ಸಿಎಂ ಹಾಗೂ ಸಚಿವರ ಭೇಟಿ ಮತ್ತು ಕಾರ್ಯಕ್ರಮಗಳ ವರದಿ
ಮಂಗಳೂರು: ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ರಾಜ್ಯ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಚಿವರು ಆಗಮಿಸಿದ್ದು, ನಗರದಲ್ಲಿ ಬಿರುಸಿನ ರಾಜಕೀಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಆರಂಭವಾಗಿವೆ.
ಕದ್ರಿ ದೇವಸ್ಥಾನ ಭೇಟಿ ಮತ್ತು ಗಾಂಧೀಜಿ ಸ್ಮರಣೆ
ಪ್ರವಾಸದ ಮೊದಲ ದಿನವಾದ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳು ಐತಿಹಾಸಿಕ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, 1934ರಲ್ಲಿ ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಐತಿಹಾಸಿಕ ಮನೆಯ ಸಮೀಪವಿರುವ ಗಾಂಧಿ ಸ್ಕ್ವೇರ್ ಕೆಫೆಗೆ ತೆರಳಿದರು.
ಯುವ ಕಂಟೆಂಟ್ ಕ್ರಿಯೇಟರ್ಸ್ ಜೊತೆ ಉಪಾಹಾರ ಹಾಗೂ ಸಂವಾದ
ಮಂಗಳೂರಿನ ಯುವ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಗಳೊಂದಿಗೆ ಕೆಫೆಯಲ್ಲಿ ಸಾಂಪ್ರದಾಯಿಕ ಉಪಾಹಾರ ಸವಿಯುತ್ತಾ ಸಿಎಂ ಸಂವಾದ ನಡೆಸಿದರು. ಮಂಗಳೂರು ಬನ್ಸ್, ದೋಸೆ ಸೇರಿದಂತೆ ಕರಾವಳಿಯ ವಿಶಿಷ್ಟ ಉಪಾಹಾರಗಳನ್ನು ಸವಿದ ಅವರು, “ಇಲ್ಲಿಗೆ ಬಂದಿರುವುದು ಬಹಳ ಸಂತೋಷ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಜನರ ಬದುಕು ಮುಖ್ಯ – ಸಿಎಂ ಸ್ಪಷ್ಟನೆ
ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, “ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತಾರೋ ಅಲ್ಲಿಗೆ ಹೋಗುತ್ತೇನೆ. ಯಾರೂ ಗಾಬರಿಯಾಗಬೇಕಿಲ್ಲ; ನಮಗೆ ಜನರ ಬದುಕು ಮುಖ್ಯವೇ ಹೊರತು ಭಾವನೆಗಳ ಮೇಲೆ ರಾಜಕೀಯ ಮಾಡುವವರಲ್ಲ. ಎಲ್ಲರ ಚಿಂತನೆಯನ್ನೊಳಗೊಂಡು ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದು ಸ್ಪಷ್ಟಪಡಿಸಿದರು.
ಸಂಪುಟ ಸಭೆಗೆ ಭರ್ಜರಿ ಸ್ವಾಗತ ಮತ್ತು ಸಿದ್ಧತೆ
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪಂಪ್ವೆಲ್ನಿಂದ ಪಡೀಲ್ ವರೆಗೆ ಚೆಂಡೆ ಬ್ಯಾಂಡ್ಗಳು ಹಾಗೂ ವಿವಿಧ ವೇಷಧಾರಿಗಳ ಸಾಂಸ್ಕೃತಿಕ ತಂಡಗಳು ರಸ್ತೆಯುದ್ದಕ್ಕೂ ಗಮನ ಸೆಳೆದವು. ಡಿಸಿ ಕಚೇರಿ ಮುಂದೆ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದು, ಮುಖ್ಯಮಂತ್ರಿಗಳನ್ನು ಕಣ್ತುಂಬಿಕೊಳ್ಳಲು ರಸ್ತೆ ಬದಿ ಕಾದು ನಿಂತಿದ್ದಾರೆ.
-
accident2 months agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
