Educational
ದಾನಿಗಳ ನೆರವಿನಿಂದ ಭಾರತಿ ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ-ಪೆನ್ನು ವಿತರಣೆ – ಕನ್ನಡ ಶಾಲೆಗಳ ಉಳಿವಿಗೆ ಅರ್ಥಪೂರ್ಣ ಹೆಜ್ಜೆ
ದಾನಿಗಳ ಸಹಕಾರವೇ ಆಧಾರವಾಗಿರುವ ಮುಡಿಪು ಕುರ್ನಾಡಿನ ಭಾರತಿ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪೆನ್ನು ಹಾಗೂ ಬಳಪ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಜಾಗೃತಿ ಸಮಿತಿ ಸದಸ್ಯರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಸಾಮಾಜಿಕ ಟ್ರಸ್ಟ್ನ ನೆರವು ಹಾಗೂ ಖ್ಯಾತ ವ್ಲಾಗರ್ ಸಲಾಂ ಸಮ್ಮಿ ಅವರ ಸಹಯೋಗದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ದಾನಿಗಳ ಈ ಕೊಡುಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆ ಪಾತ್ರವಾಯಿತು.
ಅಲೆಮಾರಿ ಮಕ್ಕಳಿಗೆ ವಿಶೇಷ ನೆರವು
ಪ್ರಸ್ತುತ ಶಾಲೆಯಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಟೆಂಟ್ ಮನೆಗಳಲ್ಲಿ ವಾಸಿಸುವ ಅಲೆಮಾರಿ ಜನಾಂಗದ 25ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ.
ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡಿರುವ ಈ ಸಂಸ್ಥೆ ಹಲವು ದಶಕಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿದೆ. ಅನುದಾನಿತ ಶಾಲೆಯಾಗಿರುವುದರಿಂದ ಸರ್ಕಾರಿ ಶಾಲೆಗಳಂತೆ ಉಚಿತ ಪುಸ್ತಕ ವ್ಯವಸ್ಥೆ ಲಭ್ಯವಾಗದ ಕಾರಣ, ದಾನಿಗಳ ಸಹಕಾರದಿಂದ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಶ್ರೀ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಖ್ಯಾತ ವ್ಲಾಗರ್, ಶಿಕ್ಷಣ ಪ್ರೇಮಿ, ಉದ್ಯಮಿ ಸಲಾಂ ಸಮ್ಮಿ, ಮಾಜಿ ನರೇಗಾ ಒಂಬುಡ್ಸ್ಮನ್ ದ.ಕ ಅಧ್ಯಕ್ಷ ಶ್ರೀ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್, ಬಾಳೆಪುಣಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಆಯಿಷಾ ಬಾನು, ಸದಸ್ಯೆ ಸೆಮಿಮಾ, ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್, ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಶಕುಂತಲಾ ಶೆಟ್ಟಿ, ಮುಖ್ಯ ಶಿಕ್ಷಕಿ ಶ್ವೇತ ಬಳ್ಳಾಲ್, ಶ್ರೀ ಅಬೂಬಕ್ಕರ್ ಹೂಹಾಕುವ ಕಲ್ಲು, ಪತ್ರಕರ್ತ ವಿ.ಟಿ. ಪ್ರಸಾದ್ ಉಪಸ್ಥಿತರಿದ್ದರು. ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಅನಿತಾ ಟೀಚರ್ ಧನ್ಯವಾದ ತಿಳಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಶಿಕ್ಷಕ ಹರೀಶ್ ಕುಮಾರ್ ಮಾಡಿದರು.
ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯಿಂದ ನಡೆದ ಈ ಕಾರ್ಯಕ್ರಮ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಪ್ರೇರಣೆಯಾಗಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.



Bantawala
ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅಮಾನತು: ಆದೇಶದ ಪ್ರತಿ ಲಭ್ಯ, KAT ಮೊರೆ ಹೋದ ಶಿಕ್ಷಕಿ ಅನ್ನಪೂರ್ಣ
ವಿಟ್ಲ / ಮಂಗಳೂರು (ಜುಲೈ 31): ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪ್ರತಿಷ್ಠಿತ ವಿಟ್ಲ ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಯ (ಆರ್ಎಂಎಸ್ಎ) ಸಹಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತು ಆದೇಶದ ಪ್ರತಿ ಇದೀಗ ಲಭ್ಯವಾಗಿದ್ದು, ಈ ಘಟನೆ ಸ್ಥಳೀಯವಾಗಿ ಹಾಗೂ ಶಾಲಾ ಪೋಷಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಮಾನತು ಆದೇಶದ ಪ್ರಮುಖ ಮುಖ್ಯಾಂಶಗಳು
ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್ ಅವರು ದಿನಾಂಕ 28-07-2026 ರಂದು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ದೂರಿನ ಹಿನ್ನೆಲೆ: ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. (06-11-2025) ಹಾಗೂ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷ ಸದಾಶಿವ ಭಟ್ (15-11-2025) ಅವರು ಶಿಕ್ಷಕಿ ವಿರುದ್ಧ ಕರ್ತವ್ಯ ಲೋಪದ ದೂರು ನೀಡಿದ್ದರು.
ವಿಚಾರಣಾ ವರದಿ: ದೂರಿನ ಅನ್ವಯ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ (ದಿನಾಂಕ: 05-01-2026 ಮತ್ತು 24-02-2026) ಶಿಕ್ಷಕಿ ವಿರುದ್ಧ ಸಲ್ಲಿಕೆಯಾಗಿದ್ದ 11 ಅಂಶಗಳ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ವಿಚಾರಣಾಧಿಕಾರಿಗಳು ವರದಿ ನೀಡಿದ್ದಾರೆ.
ನಿಯಮಾವಳಿ ಉಲ್ಲಂಘನೆ: ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021ರ ಉಪನಿಯಮ 3(i)(ii) ರಂತೆ ಶಿಕ್ಷಕಿ ಅನ್ನಪೂರ್ಣ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.
ಅಮಾನತು ಕ್ರಮ: ಕರ್ನಾಟಕ ನಾಗರಿಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 2021ರ ಉಪನಿಯಮ 10(1)ಡಿ ರಂತೆ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಷರತ್ತುಗಳು: ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ನಿಯಮಾನುಸಾರ ಜೀವನಾಂಶ ಭತ್ಯೆಗೆ ಅವರು ಅರ್ಹರಿರುತ್ತಾರೆ.
ನ್ಯಾಯಮಂಡಳಿ (KAT) ಮೊರೆ ಹೋದ ಶಿಕ್ಷಕಿ
ತಮ್ಮ ಮೇಲಿನ ಅಮಾನತು ಆದೇಶವನ್ನು ಪ್ರಶ್ನಿಸಿ ಪುತ್ತೂರು ನಿವಾಸಿಯಾಗಿರುವ ಶಿಕ್ಷಕಿ ಅನ್ನಪೂರ್ಣ ಅವರು ಬೆಂಗಳೂರಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದಾರೆ. ತಮ್ಮ ಮೇಲಿನ 11 ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಅಪವಾದದಿಂದ ಕೂಡಿವೆ ಎಂದು ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅಮಾನತಾದ ಶಿಕ್ಷಕಿಯು ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. ಮತ್ತು ಇತರರ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಒಳ ರಾಜಕೀಯದ ಆರೋಪ: ಪೋಷಕರಲ್ಲಿ ಅಸಮಾಧಾನ
ಒಂದು ಕಾಲದಲ್ಲಿ ‘ಸರ್ಕಾರಿ ಮಾದರಿ ಶಾಲೆ’ ಎನಿಸಿಕೊಂಡು ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಯಲ್ಲಿ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಕಾಏಕಿ ಶಿಕ್ಷಕಿಯ ಅಮಾನತಿನಿಂದ ಪೋಷಕರು ಮತ್ತು ಸಾರ್ವಜನಿಕರ ಕಡೆಯಿಂದ ಪರವಿರೋಧ ಚರ್ಚೆಗಳು ಆರಂಭವಾಗಿದೆ.
ಶಾಲಾ ಅಭಿವೃದ್ಧಿ ಸಮಿತಿಯ ಒಳಗಿನ ಒಳ ರಾಜಕೀಯ ಹಾಗೂ ಸ್ವಯಂಘೋಷಿತ ನಾಯಕರ ಒಣ ಪ್ರತಿಷ್ಠೆಗೆ ನೇರ ನಡೆ-ನುಡಿಯ ಶಿಕ್ಷಕಿ ಬಲಿಯಾಗಿದ್ದಾರೆ ಎಂಬ ಚರ್ಚೆಯೂ ಸ್ಥಳೀಯವಾಗಿ ಕೇಳಿಬರುತ್ತಿದೆ. ಶಿಕ್ಷಕರ ನಡುವಿನ ವೈಮನಸ್ಸಿನಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಹೀಗಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೋಷಕರು ಕೂಡಾ ಆಗ್ರಹಿಸಿದ್ದಾರೆ.
ನ್ಯಾಯಮಂಡಳಿಯಲ್ಲಿ (KAT) ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದಿನ ತೀರ್ಪಿನ ಮೇಲೆ ಇಲಾಖೆಯ ಮುಂದಿನ ನಡೆ ನಿರ್ಧಾರವಾಗಲಿದೆ.
Bantawala
ಶಾಲಾ ವಾಹನಗಳ ದಾಖಲೆ ನವೀಕರಣಕ್ಕೆ ಆಡಳಿತ ಮಂಡಳಿಗಳ ನಿರ್ಲಕ್ಷ್ಯ: ಇಲಾಖೆಗಳ ದಿಢೀರ್ ದಾಳಿ, 4 ಬಸ್ಗಳು ವಶ!
ಬಂಟ್ವಾಳ: ಇತ್ತೀಚೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ ಶಾಲಾ ಬಸ್ ಮೇಲೆ ಮರ ಬಿದ್ದು ಕಂದಮ್ಮನೊಬ್ಬಳು ಜೀವ ಕಳೆದುಕೊಂಡ ದುರಂತದ ಬಳಿಕವೂ ಶಾಲಾ ಆಡಳಿತ ಮಂಡಳಿಗಳು ಎಚ್ಚೆತ್ತುಕೊಂಡಂತಿಲ್ಲ. ಅಂದು ಮರ ಬಿದ್ದು ಜಖಂಗೊಂಡ ಶಾಲಾ ಬಸ್ಸಿನ ಪ್ರಮುಖ ದಾಖಲೆಗಳೆಲ್ಲವೂ ನವೀಕರಣಗೊಳ್ಳದೆ ಕಾಲಾವಧಿ ಮುಗಿದಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿ, ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದಾಗ್ಯೂ, ಜಿಲ್ಲೆಯ ಹಲವು ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವ ತಮ್ಮ ಬೇಜವಾಬ್ದಾರಿತನವನ್ನು ಮುಂದುವರಿಸಿರುವುದು ಬೆಳಗಿನ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬಿ.ಸಿ. ರೋಡ್ನಲ್ಲಿ ದಿಢೀರ್ ತಪಾಸಣೆ: 4 ಶಾಲಾ ಬಸ್ಗಳು ಜಪ್ತಿ
ಸೋಮವಾರ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಬಿ. ಸಿ. ರೋಡ್ ವೃತ್ತದ ಬಳಿ ಬಂಟ್ವಾಳ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ತಪಾಸಣೆ ವೇಳೆ ಅಗತ್ಯ ದಾಖಲೆಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಮಂಗಳೂರಿನ ಬರಾಕಾ ವಿದ್ಯಾಸಂಸ್ಥೆಗೆ ಸೇರಿದ 3 ಶಾಲಾ ಬಸ್ಗಳು ಹಾಗೂ ಬಂಟ್ವಾಳ ಬಡಕಬೈಲು ಮಜ್ಲಿಸ್ ವಿದ್ಯಾಸಂಸ್ಥೆಯ 1 ಬಸ್ ಸೇರಿದಂತೆ ಒಟ್ಟು 4 ಶಾಲಾ ವಾಹನಗಳನ್ನು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ವಿಟ್ಲದಲ್ಲಿ ಬಂಟ್ವಾಳ ಸಾರಿಗೆ ಇಲಾಖೆ ಅಧಿಕಾರಿ ಚರಣ್ ನೇತೃತ್ವದ ತಂಡ ಇದೇ ರೀತಿ ಕಾರ್ಯಾಚರಣೆ ನಡೆಸಿ, ದಾಖಲೆಗಳಿಲ್ಲದ 4 ಮಿನಿ ಬಸ್ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿತ್ತು. ಆದರೂ ಆಡಳಿತ ಮಂಡಳಿಗಳು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ.

ಆಡಳಿತ ಮಂಡಳಿಗಳ ಸುಲಿಗೆ ಕೋರತನ: ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?
ವಿದ್ಯಾರ್ಜನೆಯ ಸೋಗಿನಲ್ಲಿ ಎಲ್ಲೆಂದರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲಾ ಬಸ್ ಸೌಲಭ್ಯ ನೀಡುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಆಡಳಿತ ಮಂಡಳಿಗಳ ನೈಜ ಬಣ್ಣ ಈಗ ಬಯಲಾಗಿದೆ. ವಿದ್ಯಾರ್ಥಿಗಳಿಂದ ಪ್ರತೀ ತಿಂಗಳು ಸಾರಿಗೆ ವೆಚ್ಚದ ಹೆಸರಿನಲ್ಲಿ ನಿರ್ದಿಷ್ಟ ಮೊತ್ತವನ್ನು ವಸೂಲಿ ಮಾಡುವ ಆಡಳಿತ ಮಂಡಳಿಗಳಿಗೆ, ವಾಹನಗಳ ರಸ್ತೆ ತೆರಿಗೆ, ಪರವಾನಗಿ (Permit), ವಿಮಾ ಪತ್ರ (Insurance), ಎಫ್ಸಿ (Fitness Certificate) ಹಾಗೂ ಚಾಲಕರ ಚಾಲನಾ ಪರವಾನಗಿಯನ್ನು ಸರಿಯಾಗಿಡುವುದು ಜವಾಬ್ದಾರಿಯಲ್ಲವೇ? ಹಣ ಸುಲಿಗೆ ಮಾಡುವುದರಲ್ಲಷ್ಟೇ ಗಮನ ಹರಿಸುವ ಸಂಸ್ಥೆಗಳು ಮಕ್ಕಳ ಭವಿಷ್ಯ ಹಾಗೂ ಜೀವದ ಜೊತೆ ಆಟವಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷ ಮನವಿ: ಜಿಲ್ಲೆಯಾದ್ಯಂತ ಪ್ರತಿಯೊಂದು ಶಾಲಾ ವಾಹನ ತಪಾಸಣೆಗೆ ಆದೇಶಿಸಿ
ಸಾರಿಗೆ ಸಚಿವರು, ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಮೇಲಾಧಿಕಾರಿಗಳಲ್ಲಿ ಮನವಿ: ಕೇವಲ ದುರಂತಗಳು ಸಂಭವಿಸಿದಾಗ ಅಥವಾ ಬಿಡಿಬಿಡಿ ಕಾರ್ಯಾಚರಣೆ ನಡೆಸಿದರೆ ಸಾಲದು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಾಚರಿಸುವ ಪ್ರತಿಯೊಂದು ಶಾಲಾ-ಕಾಲೇಜು ವಾಹನಗಳ ದಾಖಲೆಗಳು, ತಾಂತ್ರಿಕ ಸ್ಥಿತಿಗತಿ ಹಾಗೂ ಚಾಲಕರ ಅರ್ಹತೆಯನ್ನು ಸಮಗ್ರವಾಗಿ ತಪಾಸಣೆ ಮಾಡಲು ಸಂಬಂಧಪಟ್ಟ ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ.

ನಿಯಮ ಉಲ್ಲಂಘಿಸುವ ಮತ್ತು ಸೂಕ್ತ ದಾಖಲೆಗಳಿಲ್ಲದೆ ಮಕ್ಕಳನ್ನು ಕರೆದೊಯ್ಯುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಕ್ಕ ಶಾಸ್ತಿ ಮಾಡುವ ಮೂಲಕ ಬಿಸಿ ಮುಟ್ಟಿಸಬೇಕಿದೆ. ಇನ್ನು ಮುಂದೆ ಯಾವುದೇ ಮಗುವಿನ ಜೀವ ಈ ರೀತಿಯ ನಿರ್ಲಕ್ಷ್ಯಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಇಲಾಖೆ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ
Educational
ನೀಟ್ ಅಕ್ರಮ ವಿರುದ್ಧ ಯುವಶಕ್ತಿಗೆ ಅಭೂತಪೂರ್ವ ಜಯ: ಶಿಕ್ಷಣ ಸಚಿವ ರಾಜೀನಾಮೆ, 39 ದಿನಗಳ CJP ಪ್ರತಿಭಟನೆ ಅಂತ್ಯ!
ಹೊಸದಿಲ್ಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶೈಕ್ಷಣಿಕ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಯುವಜನತೆ ನಡೆಸುತ್ತಿದ್ದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ದಿಢೀರ್ ರಾಜೀನಾಮೆ ಹಾಗೂ ಸರ್ಕಾರದೊಂದಿಗೆ ನಡೆದ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ನವದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ 39 ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಶನಿವಾರ ಅಧಿಕೃತವಾಗಿ ಹಿಂಪಡೆಯಲಾಗಿದೆ.
ಹೋರಾಟ ಹಿಂಪಡೆಯಲು ಗುಪ್ತಚರ ವರದಿ ಹಿನ್ನೆಲೆ
CJP ನಡೆಸುತ್ತಿದ್ದ ಸುದೀರ್ಘ ಹೋರಾಟವನ್ನು ಸಮಾಜಘಾತುಕ ಶಕ್ತಿಗಳು ಹೈಜಾಕ್ ಮಾಡಿ, ದೇಶಾದ್ಯಂತ ಹಿಂಸಾಚಾರಕ್ಕೆ ಸಂಚು ರೂಪಿಸಿವೆ ಎಂಬ ಗುಪ್ತಚರ ವರದಿಯ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಸಚಿವರು ರಾಜೀನಾಮೆ ನೀಡದಿದ್ದರೆ ಸಂಸತ್ ಚಲೋ ತೀವ್ರಗೊಂಡು, ಪಟ್ಟಭದ್ರಾ ಹಿತಾಸಕ್ತಿಗಳು ಹಿಂಸೆಗೆ ಪ್ರಚೋದನೆ ನೀಡುವ ಅಪಾಯವಿತ್ತು. ಹೀಗಾಗಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ, ಪ್ರತಿಭಟನಾಕಾರರ ಬೇಡಿಕೆಗಳನ್ನು ಒಪ್ಪಿಕೊಂಡು ಹೋರಾಟವನ್ನು ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.
ಸರ್ಕಾರದ ಜತೆ ಯಶಸ್ವಿ ಮಾತುಕತೆ: ಬೇಡಿಕೆಗಳಿಗೆ ಸಮ್ಮತಿ
ಶನಿವಾರ ಮಧ್ಯಾಹ್ನ ಶಿಕ್ಷಣ ಸಚಿವರ ರಾಜೀನಾಮೆ ಪ್ರಕಟವಾದ ಬೆನ್ನಲ್ಲೇ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು CJP ನಿಯೋಗದೊಂದಿಗೆ ಮೂರನೇ ಸುತ್ತಿನ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಿಗೆ ಅಸ್ತು ಎಂದಿದೆ:
ಆತ್ಮಹತ್ಯೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ: ನೀಟ್ ಗೊಂದಲಗಳಿಂದ ಮನನೊಂದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಮ್ಮತಿಸಿದೆ.
ಪ್ರಕರಣಗಳ ವಾಪಸ್: ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹಾಗೂ ಹೋರಾಟಗಾರರ ವಿರುದ್ಧ ಪೊಲೀಸರು ದಾಖಲಿಸಿದ್ದ ಎಲ್ಲಾ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.
ಶೈಕ್ಷಣಿಕ ಸುಧಾರಣೆ: CJP ಮಂಡಿಸಿದ 5 ಅಂಶಗಳ ಶೈಕ್ಷಣಿಕ ಸುಧಾರಣಾ ಪ್ರಸ್ತಾವನೆಗಳನ್ನು ಪರಿಗಣಿಸುವುದಾಗಿ ಕೇಂದ್ರ ಭರವಸೆ ನೀಡಿದೆ. ಮುಂದಿನ ಒಂದು ತಿಂಗಳಲ್ಲಿ ಶೈಕ್ಷಣಿಕ ಬದಲಾವಣೆಗಳ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
“ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಪಿಕ್ಚರ್ ಬಾಕಿ ಇದೆ”: CJP ನಾಯಕರ ಎಚ್ಚರಿಕೆ
ಪ್ರತಿಭಟನೆ ಅಂತ್ಯಗೊಳಿಸಿದ ಬಳಿಕ ಮಾತನಾಡಿದ CJP ವಕ್ತಾರ ಸೌರವ್ ದಾಸ್:
“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆಯನ್ನು ತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಅಷ್ಟೇ. ಇದು ಕೇವಲ ಟ್ರೈಲರ್, ಅಸಲಿ ಪಿಕ್ಚರ್ ಇನ್ನು ಬಾಕಿ ಇದೆ. ದೇಶದ ಯುವಜನರು ಜಾಗೃತರಾಗಿದ್ದಾರೆ. ನಾವು ದೇಶಾದ್ಯಂತ ಪ್ರವಾಸ ಮಾಡಿ, ಯುವಕರ ಧ್ವನಾಲೇಖನ ಗ್ರಹಿಸಿ, ಅವರಿಗಾಗಿ ಉತ್ತಮ ನೀತಿಗಳನ್ನು ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ವ್ಯವಸ್ಥೆಯಲ್ಲಿ ಸುಧಾರಣೆ ಕಾಣದಿದ್ದರೆ ಯುವಜನರು ಮತ್ತೆ ಬೀದಿಗಿಳಿಯಲಿದ್ದಾರೆ.”
ಇದೇ ವೇಳೆ, ದೇಶದಲ್ಲಿ ಧಾರ್ಮಿಕ ಧ್ರುವೀಕರಣದ ಆಡಳಿತವನ್ನು ತಡೆಯುವಂತೆ ಆಗ್ರಹಿಸಿದ ಅವರು, “ಮುಸ್ಲಿಂ ಮತ್ತು ಕ್ರೈಸ್ತ ವಿರೋಧಿ ರಾಜಕೀಯವನ್ನು ನಿಲ್ಲಿಸಿ. ಪ್ರತಿಯೊಂದು ಸಮುದಾಯದ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದಾಗ ಮಾತ್ರ ನಿಮಗೆ ಜನರ ವಿಶ್ವಾಸ ಸಿಗುತ್ತದೆ” ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
CJP ಮತ್ತೊಬ್ಬ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ಯುವಕರು ತಮ್ಮ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿದ್ದಾರೆ. ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಹೋರಾಟದ ಹಾದಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ನೋವು ನಮ್ಮೊಂದಿಗಿದೆ. CJP ದೇಶಾದ್ಯಂತ ಯುವಜನರ ಧ್ವನಿಯಾಗಿ ಕೆಲಸ ಮುಂದುವರಿಸಲಿದೆ” ಎಂದರು.
ರಾಜಕೀಯ ರಣತಂತ್ರ ಬದಲಾವಣೆ & ‘ಪೇಪರ್ ಲೀಕ್ ತಡೆ ವಿಧೇಯಕ’ಕ್ಕೆ ಹಾದಿ ಸುಗಮ
CJP ಹೋರಾಟದ ಯಶಸ್ಸು ಸಂಸತ್ತಿನ ಬಿಕ್ಕಟ್ಟು ಶಮನಕ್ಕೂ ದಾರಿ ಮಾಡಿಕೊಟ್ಟಿದೆ. ಸೋಮವಾರ ಪುನಾರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ಕಠಿಣ ನಿಬಂಧನೆಗಳನ್ನೊಳಗೊಂಡ ‘ಪ್ರಶ್ನೆಪತ್ರಿಕೆ ಸೋರಿಕೆ ತಡೆ ವಿಧೇಯಕ’ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಈ ವಿಧೇಯಕದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಕೋಟಿ ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆಯಿದ್ದು, ಈವರೆಗೆ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ವಿಪಕ್ಷಗಳಿಗೂ (INDIA ಮೈತ್ರಿಕೂಟ) ಈಗ ವಿಧೇಯಕವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ.
“ಸತ್ಯಕ್ಕೆ ಸಿಕ್ಕ ಜಯ, ಮೋದಿಯ ಹಠಮಾರಿತನಕ್ಕೆ ಸೋಲು”
“ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ದೇಶಾದ್ಯಂತ ಬೀದಿಗಿಳಿದು ಧ್ವನಿ ಎತ್ತಿದ ಲಕ್ಷಾಂತರ ಯುವಕರ ಜಯವಿದು. ಸತ್ಯಕ್ಕೆ ಕೊನೆಗೂ ಗೆಲುವಾಗಿದೆ, ಸರ್ಕಾರದ ಹಠಮಾರಿತನಕ್ಕೆ ಹಿನ್ನಡೆಯಾಗಿದೆ.” — ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಸಾಂಪ್ರದಾಯಿಕ ವಿದ್ಯಾರ್ಥಿ ಸಂಘಟನೆಗಳಿಗೆ ಎಚ್ಚರಿಕೆಯ ಕರೆ
ಯಾವುದೇ ಪ್ರಭಾವಿ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ‘Gen-Z’ (ಹೊಸ ತಲೆಮಾರಿನ) ಯುವಸಮುದಾಯವೇ ಸಂಘಟಿತವಾಗಿ ಹೋರಾಡಿ ಸರ್ಕಾರವನ್ನು ಮಣಿಸಿದ್ದು, ಸಾಂಪ್ರದಾಯಿಕ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಿಗೆ ಹೊಸ ಸವಾಲು ಮತ್ತು ಆತಂಕವನ್ನು ಸೃಷ್ಟಿಸಿದೆ. ಯುವಶಕ್ತಿ ಒಂದಾದರೆ ಎಂತಹ ವ್ಯವಸ್ಥೆಯನ್ನಾದರೂ ಸರಿದಾರಿಗೆ ತರಬಹುದು ಎಂಬುದಕ್ಕೆ CJP ನಡೆಸಿದ ಈ ಹೋರಾಟ ಪ್ರತ್ಯಕ್ಷ ಸಾಕ್ಷಿಯಾಗಿದೆ
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
