Connect with us

crime

ಚೇಳೂರಿನಲ್ಲಿ ಸರ್ಕಾರಿ ರಸ್ತೆಗೆ ಜೆಸಿಬಿ ಹಾಕಿದ ‘ಧರ್ಮಗುರು’ ಪಟಾಲಂ; ಮಹಿಳೆ, ಮಕ್ಕಳ ಮೇಲೆ ಅಟ್ಟಹಾಸ! ಸಾರ್ವಜನಿಕ ರಸ್ತೆ ಧ್ವಂಸ, ನೊಂದ ಕುಟುಂಬದಿಂದ ಮಾನವ ಹಕ್ಕುಗಳ ಆಯೋಗಕ್ಕೆ ದೂರು.

Published

on

ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿನ ಧರ್ಮಗುರುಗಳು ತಮ್ಮ ಸಮುದಾಯದ ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತಾ ತಪ್ಪಿದಲ್ಲಿ ತಿದ್ದಿಕೊಳ್ಳಲು ಹಿತವಚನ ನೀಡಬೇಕು. ಅದರ ಬದಲಾಗಿ ಒಂದೇ ಸಮುದಾಯದ ಒಳಗೆ ಹುಟ್ಟಿಕೊಳ್ಳುವ ಅಭಿಪ್ರಾಯ ಬೇಧಗಳಿಗೆ ತುಪ್ಪ ಸುರಿದು ದುಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುವವನು ಧರ್ಮಗುರುವಾಗಲು ಸಾಧ್ಯವೇ.? ಸಾರ್ವಜನಿಕ ಆಸ್ತಿ ನಾಶಪಡಿಸಿದವರ ರಕ್ಷಣೆಗೆ ನಿಂತಿದೆಯೇ ವ್ಯವಸ್ಥೆ?

ಅಂಚೆ ಕಛೇರಿ, ಅಂಗನವಾಡಿ, ಅನುದಾನಿತ ಶಾಲೆ ಹಾಗೂ ಖಾಸಗಿ ವ್ಯಕ್ತಿಯೊಬ್ಬರ ಮನೆಗೆ ಹೋಗುವ ಸರಕಾರಿ ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡಿರುವ ಪಂಚಾಯತ್ ರಸ್ತೆಯನ್ನು ಚರ್ಚ್ ಧರ್ಮಗುರುವಿನ ಕುಮ್ಮಕ್ಕಿನಂತೆ ಪಾಲನಾ ಸಮಿತಿಯ ತಂಡವೊಂದು ಜೆಸಿಬಿ ಯಂತ್ರದ ಮೂಲಕ ಧ್ವಂಸಗೊಳಿಸುತ್ತಿದ್ದಾಗ ತಡೆಯಲು ಬಂದ ತಮ್ಮದೇ ಸಮುದಾಯದ ಮಹಿಳೆ ಮತ್ತು ಮಕ್ಕಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಲ್ಲದೇ ಸೊತ್ತುಗಳನ್ನು ನಾಶಗೈದು ಮನುಕುಲವನ್ನೇ ನಾಚಿಸುವಂತೆ ಅಟ್ಟಹಾಸಗೈದ ಪ್ರಕರಣವೊಂದು ಉಳ್ಳಾಲ ತಾಲೂಕಿನ ಚೇಳೂರು ಗ್ರಾಮದಲ್ಲಿ ನಡೆದಿದೆ.

ತಮ್ಮದೇ ಸಮುದಾಯದ ಮಹಿಳೆ ಮತ್ತು ಮಕ್ಕಳ ಮೇಲೆ ತುಘಲಕ್ ದರ್ಬಾರ್ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡುವಂತೆ ನೊಂದ ಕುಟುಂಬ ಪೊಲೀಸ್ ಠಾಣೆಗೆ, ಜಿಲ್ಲಾ ಎಸ್ಪಿಯವರಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ.

ಚೇಳೂರು ಗ್ರಾಮದ ಕೆದೂರು ಎಂಬಲ್ಲಿನ ಜೋನ್ ಸ್ಟೀಫನ್ ಡಿಸೋಜಾ ಕುಟುಂಬದ ಮೇಲೆ ಸಂತ ಥೋಮಸ್ ಚರ್ಚ್ ನ ಧರ್ಮ ಗುರುವಿನ ಕುಮ್ಮಕ್ಕಿನಂತೆ ಚರ್ಚ್ ಆಡಳಿತ ಸಮಿತಿಯ ಮುಖಂಡರು, ಪಾಲನಾ ಸಮಿತಿಯ ಕೆಲವೊಂದು ಸದಸ್ಯರು ದೌರ್ಜನ್ಯ ಎಸಗಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ವಿವರಿಸಿದ್ದಾರೆ.

ಸಂತ ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಅಂಚೆ ಕಛೇರಿ ಮತ್ತು ಅಂಗನವಾಡಿ ಹಾಗೂ ಕೆದೂರು ನಿವಾಸಿ ಜೋನ್ ಸ್ಟೀಫನ್ ಡಿಸೋಜಾ ಅವರ ಮನೆಗೆ ಹೋಗುವ ರಸ್ತೆಗೆ 2016-17ರಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 3.50ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲಾಗಿತ್ತು.
ಇದೇ ಸಾರ್ವಜನಿಕ ರಸ್ತೆಯು ಅಂಚೆ ಕಛೇರಿ, ಅಂಗನವಾಡಿ ಮತ್ತು ಅನುದಾನಿತ ಶಾಲೆಯನ್ನು ಸಂಪರ್ಕಿಸುತ್ತಿದೆ. ಆ ಬಳಿಕ ಕೆದೂರು ಜಾನ್ ಸ್ಟೀಫನ್ ಡಿಸೋಜಾ ಅವರ ಜಮೀನಿನಲ್ಲಿ ಖಾಸಗಿ ರಸ್ತೆಯಿರುತ್ತದೆ.
ಸದ್ರಿ ರಸ್ತೆಯು ಜಾನ್ ಸ್ಟೀಫನ್ ಡಿಸೋಜಾ ಅವರ ಸರ್ವೆ ನಂ.3/1A2ರಲ್ಲಿನ ನಿರ್ಮಾಣ ಹಂತದಲ್ಲಿರುವ ಮನೆಯ ಸಂಪರ್ಕ ರಸ್ತೆಯಾಗಿದೆ.

ಚರ್ಚ್ ಧರ್ಮಗುರುವಿನ ಕುಮ್ಮಕ್ಕು..
ಸಂತ ಥೋಮಸ್ ಚರ್ಚ್ ನ ಧರ್ಮಗುರು ಮೈಕೆಲ್ ಡಿಸಿಲ್ವಾನ ಕುಮ್ಮಕ್ಕಿನಿಂದ ಆಡಳಿತ ಸಮಿತಿಯವರು ಮತ್ತು ಪಾಲನಾ ಸಮಿತಿಯ ಕೆಲ ವ್ಯಕ್ತಿಗಳು ಸರ್ಕಾರಿ ಅನುದಾನದ ಸಾರ್ವಜನಿಕ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಧ್ವಂಸಗೊಳಿಸಿ ಅಂಚೆ ಕಛೇರಿ, ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಹೋಗದಂತೆ ತಡೆಯೊಡ್ಡಿದ್ದಾರೆಂದು ದೂರುದಾರರು ನೇರವಾಗಿ ಆರೋಪಿಸಿದ್ದಾರೆ.
ಆರು ದಿನಗಳ ಹಿಂದೆ ಇದೇ ಧರ್ಮಗುರುವಿನ ಪಟಾಲಂ ಜಾನ್ ಸ್ಟೀಫನ್ ಡಿಸೋಜಾ ಅವರ ಜಮೀನಿನಲ್ಲಿರುವ ಖಾಸಗಿ ರಸ್ತೆಯ ಗೇಟನ್ನು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದು ತಡೆಯಲು ಬಂದ ಮಹಿಳೆ ಮತ್ತು ಮಕ್ಕಳ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಲ್ಲದೇ ಜೀವಬೆದರಿಕೆ ಒಡ್ಡಿದ್ದಾರೆಂದು ದೂರುದಾರರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಬಂಟ್ವಾಳ ನ್ಯಾಯಾಲಯವು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಎಸ್ಪಿ, ಜಿಲ್ಲಾಧಿಕಾರಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ದೂರು.
ಧರ್ಮಗುರು ಮತ್ತು ಆತನ ಪಟಾಲಂನಿಂದ ದೌರ್ಜನ್ಯಕ್ಕೊಳಗಾದ ಜಾನ್ ಸ್ಟೀಫನ್ ಡಿಸೋಜಾ ಕುಟುಂಬ ಜಿಲ್ಲಾ ಎಸ್ಪಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವಿವರವಾದ ದೂರು ನೀಡಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆರೋಪಿಗಳ ಕಡೆಯಿಂದ ಯಾವುದೇ ಕ್ಷಣ ಜೀವಕ್ಕೆ ಅಪಾಯ ಬರುವ ಸೂಚನೆಗಳಿದ್ದು ಸೂಕ್ತ, ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.ಬಂಟ್ವಾಳ ನ್ಯಾಯಾಲಯವು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಗ್ರಾಮ ಪಂಚಾಯತ್, ತಹಶೀಲ್ದಾರ್ ಮೌನವೇಕೆ.?
ಆರೋಪಿಗಳ ದುಷ್ಕೃತ್ಯದ ವಿರುದ್ಧ ಗ್ರಾಮ ಪಂಚಾಯತ್ ಪಿಡಿಒ ಗೆ, ತಾಲೂಕು ಪಂಚಾಯತ್ ಮತ್ತು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದರೂ ಸರ್ಕಾರಿ ಅನುದಾನದಲ್ಲಿ ಅಭಿವೃದ್ಧಿಯಾದ ಸಾರ್ವಜನಿಕ ರಸ್ತೆಯನ್ನು ಧ್ವಂಸಗೈದು ಅಂಚೆ ಕಛೇರಿ, ಅಂಗನವಾಡಿ ಮತ್ತು ಅನುದಾನಿತ ಶಾಲೆಯ ಸಂಪರ್ಕಕ್ಕೆ ತಡೆಯೊಡ್ಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಿ ಸಂಬಳ ತಿನ್ನುವ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಪುತ್ತೂರು: ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಅಜಿತ್ ರೈ ಹೊಸಮನೆ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲು

Published

on

ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ.17ರಂದು ರಾತ್ರಿ ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆ ವೇಳೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ:

  • ಷರತ್ತುಬದ್ಧ ಅನುಮತಿ: ಶೋಭಾಯಾತ್ರೆಗೆ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಷರತ್ತುಬದ್ಧ ಅನುಮತಿ ನೀಡಲಾಗಿತ್ತು.
  • ಸಮಯ ಮೀರಿದ ಬಳಿಕವೂ ಬಳಕೆ: ರಾತ್ರಿ ಸುಮಾರು 10.35ರ ವೇಳೆಗೆ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ‘ಪಂಚಮುಖಿ ಫ್ರೆಂಡ್ಸ್’ ಹೆಸರಿನ ಸ್ತಬ್ಧಚಿತ್ರದಲ್ಲಿ ಧ್ವನಿವರ್ಧಕ ಬಳಕೆ ಮುಂದುವರಿದಿರುವುದನ್ನು ಗಮನಿಸಿದ ಪೊಲೀಸರು, ಅದನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು.
  • ಆರೋಪವೇನು?: ಪೊಲೀಸರು ಸೂಚನೆ ನೀಡಿದರೂ, ಸ್ಥಳಕ್ಕೆ ಆಗಮಿಸಿದ ಅಜಿತ್ ರೈ ಹೊಸಮನೆ ಹಾಗೂ ಇತರರು ಧ್ವನಿವರ್ಧಕ ಬಂದ್ ಮಾಡದಂತೆ ತಡೆದು, ಪುನಃ ಧ್ವನಿವರ್ಧಕ ಬಳಸುವಂತೆ ಆಯೋಜಕರಿಗೆ ಸೂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ:

ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರೂ, ಅದನ್ನು ಲೆಕ್ಕಿಸದೆ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪೊಲೀಸ್ ಉಪನಿರೀಕ್ಷಕರು ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಕಾನೂನು ಸುವ್ಯವಸ್ಥೆ ಕರ್ತವ್ಯದಲ್ಲಿದ್ದ ಅಧಿಕಾರಿಯು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್ ಸ್ತಬ್ಧಚಿತ್ರದ ಆಯೋಜಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ

Continue Reading

crime

ಪುತ್ತೂರು ಮಹಿಳಾ ಠಾಣೆಯಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ

Published

on

ಪುತ್ತೂರು: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ತಮ್ಮ ಹೋರಾಟಕ್ಕೆ ಜಯ ಸಿಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು

ಮೂಲಗಳ ಪ್ರಕಾರ, ಬೆಳಿಗ್ಗೆ 11.30ರ ಸುಮಾರಿಗೆ ಅವರು ತಮ್ಮ ಹಳೆಯ ಕೇಸ್ ಒಂದರ ಸಂಬಂಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮಹಿಳಾ ಠಾಣಾ ಇನ್‌ಸ್ಪೆಕ್ಟರ್‌ ಸುನಿಲ್ ಕುಮಾರ್ ಅವರು ಬೇರೆ ಕಾರ್ಯ ನಿಮಿತ್ತ ಠಾಣೆಯಲ್ಲಿ ಇರಲಿಲ್ಲ. ಹೀಗಾಗಿ, ಲಿಖಿತವಾಗಿ ಹಾಜರಾದ ಬಗ್ಗೆ ಅವರಿಗೆ ನೋಟಿಸ್ ನೀಡಲಾಯಿತು. ಮುಂದಿನ ಸೂಚಿತ ದಿನಾಂಕದಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಮತ್ತೆ ಠಾಣೆಗೆ ಹಾಜರಾಗಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ದಿನೇಶ್ ಜೈನ್ ಸೇರಿದಂತೆ ಹಲವರು ಅಭಿಮಾನಿಗಳು ಅವರ ಜೊತೆಗಿದ್ದರು.

ಮಹೇಶ್ ಶೆಟ್ಟಿ ತಿಮರೋಡಿ ಅವರು ಪುತ್ತೂರಿಗೆ ಭೇಟಿ ನೀಡಿದಾಗ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದೇ ಹೋಗುತ್ತಿದ್ದು, ಅದರಂತೆ ಇಂದು ಠಾಣೆಗೆ ತೆರಳಿ ಹಿಂತಿರುಗುವಾಗ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.

Continue Reading

crime

ಸಕಲೇಶಪುರ ಲಾಡ್ಜ್‌ನಲ್ಲಿ ಕರಾಳ ರಾತ್ರಿ: ಬಾತ್‌ರೂಮ್‌ನಲ್ಲಿ 23 ವರ್ಷದ ಯುವತಿ ನಿಗೂಢ ಸಾವು, ಜೊತೆಗಿದ್ದ ಯುವಕರು ಎಸ್ಕೇಪ್!

Published

on

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರುವ ಲಾಡ್ಜ್‌ ಒಂದರಲ್ಲಿ 23 ವರ್ಷದ ವರ್ಷ ಎಂಬ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಈ ಘಟನೆಯು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರಣೆ:

ಪ್ರವಾಸಕ್ಕೆ ತೆರಳಿದ್ದ ಮೂವರು: ಬೆಂಗಳೂರು ಮೂಲದ (ನಾಗಸಂದ್ರ/ಚಿಕ್ಕಬಾಣಾವರ) 23 ವರ್ಷದ ವರ್ಷ ಎಂಬ ಯುವತಿ, ತನ್ನ ಪ್ರಿಯಕರ ರಘು ಹಾಗೂ ಸ್ನೇಹಿತ ದರ್ಶನ್ ಎಂಬುವವರೊಂದಿಗೆ ಶುಕ್ರವಾರ ಪ್ರವಾಸಕ್ಕೆಂದು ಸಕಲೇಶಪುರಕ್ಕೆ ಬಂದಿದ್ದಳು.

ಪ್ರವಾಸಿ ತಾಣಗಳ ವೀಕ್ಷಣೆ: ಶನಿವಾರ, ಭಾನುವಾರ ಹಾಗೂ ಸೋಮವಾರದಂದು ಈ ಮೂವರು ಬೆಟ್ಟದ ಭೈರವೇಶ್ವರ, ಮಜಗಹಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸುತ್ತಾಡಿದ್ದರು.

ಲಾಡ್ಜ್‌ನಲ್ಲಿ ತಂಗಿದ್ದ ದಳ: ವಳಲಹಳ್ಳಿ ಕೂಡಿಗೆಯಲ್ಲಿರುವ ಶ್ರೀದೇವು ಲಾಡ್ಜ್‌ನಲ್ಲಿ ಮೂವರು ಒಂದೇ ರೂಮ್‌ನಲ್ಲಿ ತಂಗಿದ್ದರು.

ಅನುಮಾನಾಸ್ಪದ ಸಾವು: ಮಂಗಳವಾರ ಲಾಡ್ಜ್‌ನ ಬಾತ್‌ರೂಮ್‌ನಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ವರ್ಷ ಅಸುನೀಗಿದ್ದಾರೆ. ಯುವತಿ ಮೃತಪಟ್ಟ ಬಳಿಕ ಜೊತೆಗಿದ್ದ ಯುವಕರು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದಾರೆ (ಕೆಲವು ಮೂಲಗಳ ಪ್ರಕಾರ ಆಸ್ಪತ್ರೆಗೆ ಕರೆತಂದು ಬಳಿಕ ತೆರಳಿದ್ದಾರೆ).

ಆಸ್ಪತ್ರೆ ಹಾಗೂ ಪೊಲೀಸ್ ತನಿಖೆ: ಕೂಡಲೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾತ್‌ರೂಮ್‌ನಲ್ಲಿ ಯುವತಿ ಮೃತಪಟ್ಟಿರುವುದು ಮತ್ತು ಜೊತೆಗಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾವಿಗೆ ನಿಖರವಾದ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಿದೆ.

Continue Reading

Trending

Copyright © 2025 Deevatige

error: Content is protected !!