Connect with us

Entertainment

ಬಿಗ್ ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ: ಕರಾವಳಿಯ ರಕ್ಷಿತಾ ಗೆದ್ದಿದ್ದು ಟ್ರೋಫಿಯನ್ನಲ್ಲ, ಕೋಟ್ಯಾಂತರ ಕನ್ನಡಿಗರ ಮನಸ್ಸುಗಳನ್ನು…

Published

on

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇವತ್ತು ಅದ್ಧೂರಿಯಾಗಿ ತೆರೆ ಬಿದ್ದಿದೆ. 112 ದಿನಗಳ ಕಾಲ ನಡೆದ ಮನರಂಜನೆಯ ಈ ಮಹಾಮೇಳ, ಪ್ರತಿ ದಿನವೂ ವೀಕ್ಷಕರನ್ನು ಟಿವಿ ಮುಂದೆ ಕೂರಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಅನೇಕ ತಿರುವು-ಮುರುವು, ಭಾವುಕ ಕ್ಷಣಗಳು, ಜಗಳ, ಸ್ನೇಹ, ನಗು-ಅಳು ಎಲ್ಲವನ್ನೂ ಒಟ್ಟಿಗೆ ಹೊತ್ತುಕೊಂಡು ಸೀಸನ್ 12 ತನ್ನ ಅಂತಿಮ ಘಟ್ಟ ತಲುಪಿದೆ. ಕೊನೆಗೂ ಕರ್ನಾಟಕದ ಜನರು ತಮ್ಮ ತೀರ್ಪು ನೀಡಿದ್ದಾರೆ. ಗಿಲ್ಲಿ ಬಿಗ್ ಬಾಸ್ 12ರ ವಿನ್ನರ್ ಆಗಿ ಹೊರಹೊಮ್ಮಿದರೆ, ಮಾತಿನ ಮಲ್ಲಿ ಎಂದೇ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಸೀಸನ್ ಆರಂಭದಿAದಲೇ ರಕ್ಷಿತಾ ಶೆಟ್ಟಿ ವೀಕ್ಷಕರ ಗಮನ ಸೆಳೆದವರು. ಪಟ ಪಟ ಪಟಾಕಿ ಟಾಕಿಂಗ್ ಪೋರಿ ಅಂತಲೇ ಫೇಮಸ್ ಆಗಿರುವ ರಕ್ಷಿತಾ, ಸಾದಾ-ಸೀದಾ ಮನಸ್ಸಿನ ಹುಡುಗಿ. ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ, ಮುಚ್ಚುಮರೆ ಇಲ್ಲದೆ ಹೇಳುವ ಗುಣವೇ ರಕ್ಷಿತಾರ ದೊಡ್ಡ ಪ್ಲಸ್ ಪಾಯಿಂಟ್. ಬಿಗ್ ಬಾಸ್ ಮನೆಯೊಳಗೆ ಅನೇಕ ಬಾರಿ ತಮ್ಮ ನಿಲುವಿಗಾಗಿ ನಿಂತು, ಕೆಲವೊಮ್ಮೆ ಟೀಕೆಗೆ ಗುರಿಯಾದರೂ, ಅದೇ ರೀತಿ ಅಭಿಮಾನಿಗಳ ಅಪಾರ ಬೆಂಬಲವೂ ರಕ್ಷಿತಾಗೆ ಸಿಕ್ಕಿತ್ತು.

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು. ಮೂಲತಃ ಮಂಗಳೂರಿನವರು, ಪಡುಬಿದ್ರೆಯಲ್ಲಿ ಜನನ. ಬಾಲ್ಯ ಹಾಗೂ ಶಿಕ್ಷಣದ ಬಹುಪಾಲು ಮುಂಬೈನಲ್ಲಿ ಕಳೆದಿದೆ. ಮನೆಯೊಳಗೆ ತುಳು ಮಾತನಾಡುವ ರಕ್ಷಿತಾಗೆ ಆರಂಭದಲ್ಲಿ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಆದರೆ, ಭಾಷೆಯೇ ಅಡ್ಡಿ ಆಗಲಿಲ್ಲ ಎಂಬುದನ್ನು ಅವರು ತಮ್ಮ ಆಟದ ಮೂಲಕ ಸಾಬೀತುಪಡಿಸಿದರು.

ಸೋಶಿಯಲ್ ಮೀಡಿಯಾ ಯೂಟ್ಯೂಬರ್ ಆಗಿ ಈಗಾಗಲೇ ಹೆಸರು ಮಾಡಿದ್ದ ರಕ್ಷಿತಾ, ಕನ್ನಡ, ತುಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ವ್ಲಾಗ್ಸ್ ಹಾಗೂ ರೀಲ್ಸ್ ಮೂಲಕ ಅಭಿಮಾನಿಗಳ ಬಳಗ ಕಟ್ಟಿಕೊಂಡಿದ್ದರು. ಆನ್‌ಲೈನ್ ಜಗತ್ತಿನಲ್ಲಿ ಹವಾ ಎಬ್ಬಿಸಿದ್ದ ಈ ಪಟಾಕಿ ಪೋರಿ, ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ಬಳಿಕ ಕರ್ನಾಟಕದ ಮೂಲೆ ಮೂಲೆಗೂ ಪರಿಚಿತರಾದರು. ಪ್ರತಿದಿನದ ಎಪಿಸೋಡ್‌ಗಳಲ್ಲಿ ಅವರ ಮಾತು, ಪ್ರತಿಕ್ರಿಯೆ, ನಗುವಿನ ಸ್ಟೈಲ್, ಕೆಲವೊಮ್ಮೆ ಕಣ್ಣೀರಿನ ಕ್ಷಣಗಳು ಎಲ್ಲವೂ ಪ್ರೇಕ್ಷಕರಿಗೆ ತಮ್ಮದೇ ಮನೆಯ ಸದಸ್ಯೆಯಂತೆ ಅನಿಸಿತು.

ಟ್ರೋಫಿ ಗೆಲ್ಲಬೇಕು ಅನ್ನೋದು ಅದೆಷ್ಟೋ ಅಭಿಮಾನಿಗಳ ಕನಸಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ‘ರಕ್ಷಿತಾ ವಿನ್ನರ್’ ಅನ್ನೋ ಟ್ರೆಂಡ್ ಕೂಡ ಹಲವು ಬಾರಿ ಓಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಬಿಗ್ ಬಾಸ್ ಟೈಟಲ್ ಕೈ ತಪ್ಪಿದೆ. ಆದರೂ, ಈ ಸೋಲು ರಕ್ಷಿತಾಗೆ ಸೋಲಾಗಲೇ ಇಲ್ಲ. ಕಾರಣ, ಅವರು ಗೆದ್ದಿದ್ದು ಟ್ರೋಫಿಯನ್ನಲ್ಲ, ಕೋಟ್ಯಾಂತರ ಕನ್ನಡಿಗರ ಮನಸ್ಸುಗಳನ್ನು. ಆದರೆ ಬಿಗ್ ಬಾಸ್ ವೇದಿಕೆ ರಕ್ಷಿತಾ ಶೆಟ್ಟಿಗೆ ಹೊಸ ಬದುಕಿನ ದಾರಿಯನ್ನು ತೆರೆದಿದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ

Published

on

ಪೆರುವಾಯಿ: ಯುವ ಚೇತನ ಕ್ಲಬ್ (ರಿ) ಪೆರುವಾಯಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ವತಿಯಿಂದ 37ನೇ ವರ್ಷದ “ಶ್ರೀ ಗಣೇಶೋತ್ಸವ”ವು ಸೆಪ್ಟೆಂಬರ್ 14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಧಾರ್ಮಿಕ ಸಭೆ ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿ

ಉತ್ಸವದ ಎರಡನೇ ದಿನವಾದ ಮಂಗಳವಾರದಂದು (ಸೆ. 15) ಧಾರ್ಮಿಕ ಸಭೆಯು ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡಿದರು.

ಸಭಾ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು (K P S) ಕನ್ಯಾನದ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ

ಕಾರ್ಯಕ್ರಮದಲ್ಲಿ ಊರಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು:

ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆಗೈದ ಊರಿನ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಎಂ.ಎ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ ಚಿನ್ನದ ಪದಕ ಪಡೆದ ಕು. ದೀಕ್ಷಾ. T ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.

ಪವರ್ ಮೆನ್ ಗಳ ಸೇವಾ ಸನ್ಮಾನ: ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಪವರ್ ಮೆನ್ ಗಳಾದ ಶ್ರೀ ಲಕ್ಷಣ್ H N ಮತ್ತು ಶ್ರೀ ಯಲಗುರೇಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ವಿಶೇಷ ಸಾಧನೆ – ನಿವೃತ್ತ ಯೋಧರಿಗೆ ಗೌರವ: ಕಾರ್ಯಕ್ರಮದ ವಿಶೇಷ ಮೇರುವಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರೂ ಆಗಿರುವ, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಈ ಗಣೇಶೋತ್ಸವವು ಊರಿನ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.

Continue Reading

Entertainment

ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?

Published

on

ಇದು ನೇಮೋತ್ಸವವೂ ಅಲ್ಲ.. ಯಕ್ಷಗಾನವೂ ಅಲ್ಲ… ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧ ಆಚರಣೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮತ್ತು ವೈರಲ್ ಆಗಲು ಸಂಪ್ರದಾಯದ ಗಡಿಯನ್ನು ಮೀರಿ ವಿಚಿತ್ರ ಹಾಗೂ ಭಯಾನಕ ರೀತಿಯಲ್ಲಿ ಪ್ರವೇಶ (Groom Entry) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇತ್ತೀಚೆಗೆ ಕೇರಳದ ಮತ್ತಿಪರಂಬಿಲ್ ಮೂಲದವರ ಮದುವೆ ಸಮಾರಂಭವೊಂದರಲ್ಲಿ ನವವರ ಹಾಗೂ ಆತನ ಗೆಳೆಯರ ಬಳಗ ರಾಕ್ಷಸಿ, ಅಸ್ಥಿಪಂಜರ ಹಾಗೂ ಬೆಂಕಿಯ ದೀವಟಿಗೆ ಹಿಡಿದು ಭಯಾನಕ ವೇಷಧರಿಸಿ ಆಗಮಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್‌ ಆಗಿದೆ.

ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿಯೂ ಮದುವೆ ಮೆರವಣಿಗೆಯೊಂದರಲ್ಲಿ ಸ್ಥಳೀಯ ಕೊರಗಜ್ಜ ದೈವದ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು, ಅದರ ವಿರುದ್ಧ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ನೆನಪಿನಲ್ಲಿದೆ. ಅಂತಹ ಘಟನೆಗಳಿಂದ ಪಾಠ ಕಲಿಯದೆ, ಈಗ ಮತ್ತೊಮ್ಮೆ ಇಂತಹ ಅತಿರೇಕದ ಸಂಪ್ರದಾಯ/ಪ್ರವೇಶಗಳು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗೆ ಕಾರಣವಾಗುತ್ತಿವೆ.

ಇಂತಹ ಆಚರಣೆಗಳು ಸಮಾಜದ ಶಾಂತಿ, ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಥಳೀಯರು ಹಾಗೂ ಹಿರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

Continue Reading

Entertainment

200 ವರ್ಷಗಳ ಬಳಿಕ ದಹಿಫಲೆ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ: ರಥದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅಜ್ಜ-ಅಜ್ಜಿ!

Published

on

ಬೀಡ್ (ಮಹಾರಾಷ್ಟ್ರ): ಸಮಾಜದ ಕೆಲವೆಡೆ ಇಂದಿಗೂ ಹೆಣ್ಣು ಮಗು ಹುಟ್ಟಿದರೆ ನಿರಾಸೆ ವ್ಯಕ್ತಪಡಿಸುವ ಜನರ ನಡುವೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅದ್ಧೂರಿ ಸಂಭ್ರಮವೊಂದು ನಡೆದಿದೆ. ಬರೋಬ್ಬರಿ ನಾಲ್ಕು ತಲೆಮಾರುಗಳ (ಸುಮಾರು 200 ವರ್ಷಗಳ) ದೀರ್ಘ ಕಾಯುವಿಕೆಯ ನಂತರ ಕುಟುಂಬದಲ್ಲಿ ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ್ದು, ದಹಿಫಲೆ ಕುಟುಂಬಸ್ಥರು ಮಗುವನ್ನು ರಥದಲ್ಲಿ ಕುಳ್ಳಿರಿಸಿ, ಡೊಳ್ಳು-ಕುಣಿತ ಮತ್ತು ವಾದ್ಯವೃಂದದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡಿದ್ದಾರೆ.

‘ಮನೆಗೆ ಬಂದ ಮಹಾಲಕ್ಷ್ಮಿ, ಗಾರ್ಗಿ!’ ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುತ್ತಿದ್ದಂತೆ, ಕುಟುಂಬಸ್ಥರು ರಥವನ್ನು ತಂದು ಹೂವುಗಳಿಂದ ಶೃಂಗರಿಸಿ ಆಸ್ಪತ್ರೆಯಿಂದಲೇ ಮೆರವಣಿಗೆ ಆರಂಭಿಸಿದರು. ನಾಲ್ಕು ತಲೆಮಾರುಗಳ ಬಳಿಕ ಜನಿಸಿದ ಈ ಮುದ್ದಾದ ಹೆಣ್ಣು ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದೆ.

“ನಮ್ಮ ಮನೆಗೆ ಸ್ವತಃ ಮಹಾಲಕ್ಷ್ಮಿಯೇ ಬಂದಿದ್ದಾಳೆ. 200 ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇರಲಿಲ್ಲ. ಆದ್ದರಿಂದಲೇ ಈ ಕ್ಷಣವನ್ನು ಸಂಭ್ರಮಿಸಲು ಆಕೆಯನ್ನು ಆಸ್ಪತ್ರೆಯಿಂದಲೇ ವಿಜೃಂಭಣೆಯಿಂದ ಕರೆತರಲು ನಿರ್ಧರಿಸಿದೆವು” ಎಂದು ಮಗುವಿನ ಅಜ್ಜಿ ಸುರೇಖಾ ದಹಿಫಲೆ ಆನಂದಬಾಷ್ಪ ಹರಿಸಿದರು.

ಭಾವುಕ ರಾದ ಅಜ್ಜ ಲಿಂಬಾಜಿ ದಹಿಫಲೆ: ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವುದು ನಮಗೆ ಸಿಕ್ಕ ದೊಡ್ಡ ಭಾಗ್ಯ. ಇಷ್ಟು ವರ್ಷಗಳಿಂದ ನಮಗಿದ್ದ ದೊಡ್ಡ ಕೊರತೆ ಇಂದು ನೀಗಿದೆ. ನನ್ನ ಇಬ್ಬರು ಸೊಸೆಯಂದಿರನ್ನು ನಾನು ಹೆತ್ತ ಮಗಳಂತೆಯೇ ಸಾಕಿ ಬೆಳೆಸಿದ್ದೇನೆ, ಈಗ ಮೊಮ್ಮಗಳನ್ನು ರಥ ಹಾಗೂ ವಾದ್ಯವೃಂದದೊಂದಿಗೆ ಕರೆತರಲು ನಮಗೆ ಅತಿಯಾದ ಸಂತೋಷವಾಗುತ್ತಿದೆ” ಎಂದು ಭಾವುಕರಾಗಿ ತಮ್ಮ ಸಂತಸ ಹಂಚಿಕೊಂಡರು.

‘ಹೂವಿನಂತೆ ಸಾಕಿ ಬೆಳೆಸುತ್ತೇವೆ’: ತಂದೆಯ ಹರ್ಷ “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದವೇ ಬೇರೆ. ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ನಾವು ನಮ್ಮ ಮಗಳನ್ನು ಹೂವಿನಂತೆ ಸಾಕಿ ಬೆಳೆಸುತ್ತೇವೆ” ಎಂದು ಮಗುವಿನ ತಂದೆ ಹೆಮ್ಮೆಯಿಂದ ಹೇಳಿದರು.

ಸಮಾಜಕ್ಕೆ ಮಾದರಿಯಾದ ದಹಿಫಲೆ ಕುಟುಂಬ: ದಹಿಫಲೆ ಕುಟುಂಬದ ಈ ವಿಶೇಷ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅನಂತ್ ಇಂಗಳೆ, “ಇಂದಿಗೂ ಸಮಾಜದ ಕೆಲವೆಡೆ ಹೆಣ್ಣು ಮಗುವಿನ ಜನನದ ಬಗ್ಗೆ ಕಿರಿದಾದ ಮನಸ್ಥಿತಿ ಇದೆ. ಆದರೆ ದಹಿಫಲೆ ಕುಟುಂಬವು ಹೆಣ್ಣು ಮಗುವನ್ನು ರಥದಲ್ಲಿ ಕರೆತರುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಪ್ರೇರಣಾದಾಯಿ ಸಂದೇಶ ನೀಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!