Connect with us

crime

ಲಕ್ಕಿ ಸ್ಕೀಮ್ ಹೆಸರಲ್ಲಿ ಕೋಟಿ ಕೋಟಿ ವಂಚನೆ: ಶೋಕಿ ಲೈಫ್ ನಡೆಸುತಿದ್ದ ‘ಅಸ್ತ್ರ’ ಲಂಚುಲಾಲ್ ಕಾಲ್ಬುಡಕ್ಕೆ ಬಿಸಿ, ದುಬೈಗೆ ಪರಾರಿ?

Published

on

ಮಂಗಳೂರು: ಅದೃಷ್ಟದ ಲಕ್ಕಿ ಸ್ಕೀಮ್, ಆಕರ್ಷಕ ಆಫರ್‌ಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಶೋಕಿ ಜೀವನ ನಡೆಸುತ್ತಿದ್ದ ‘ಅಸ್ತ್ರ ಗ್ರೂಪ್’ ಸಂಸ್ಥೆಯ ಮಾಲೀಕ ಲಂಚುಲಾಲ್ ಎಂಬಾತ ಇದೀಗ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ಚೊಂಬು ಹಸ್ತಾಂತರಿಸಿ ನಾಪತ್ತೆಯಾಗಿದ್ದಾನೆ.

ಕಳೆದ 3-4 ವರ್ಷಗಳಿಂದ ಮಂಗಳೂರು ಸೇರಿದಂತೆ ವಿವಿಧೆಡೆ ‘ಅಸ್ತ್ರ’ ಹೆಸರಿನಲ್ಲಿ ಮೂರು ಸೀಸನ್‌ಗಳ ಲಕ್ಕಿ ಸ್ಕೀಮ್ ನಡೆಸಿದ್ದ ಈತ, ಸುಮಾರು 50 ಸಾವಿರಕ್ಕೂ ಹೆಚ್ಚು ಗ್ರಾಹಕರಿಂದ ತಿಂಗಳ ಕಂತಿನ ರೂಪದಲ್ಲಿ ಕೋಟ್ಯಂತರ ರೂ. ಹಣ ವಸೂಲಿ ಮಾಡಿದ್ದ. ಸ್ಕೀಮ್ ಅವಧಿ ಮುಗಿದ ಮೇಲೆಯೂ ಏಜೆಂಟರ ಮೂಲಕ ಗ್ರಾಹಕರನ್ನು ಮುಂದಿನ ಸೀಸನ್‌ಗೆ ವರ್ಗಾಯಿಸಿ ಹಣ ಹಿಂತಿರುಗಿಸದೆ ವಂಚಿಸಲಾಗುತ್ತಿತ್ತು ಎನ್ನಲಾಗಿದೆ.

ನವಭಾರತ್ ಸರ್ಕಲ್‌ನಲ್ಲಿ ನೂರಾರು ಸಂತ್ರಸ್ತರ ಆಕ್ರೋಶ

ಮೂರು ದಿನಗಳಿಂದ ಲಂಚುಲಾಲ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದು, ಆತ ದುಬೈಗೆ ಕಾಲು ಕಿತ್ತಿದ್ದಾನೆ ಎಂಬ ವದಂತಿಗಳು ಹರಡಿವೆ. ಇದರಿಂದ ಆತಂಕಗೊಂಡ ನೂರಾರು ಹೂಡಿಕೆದಾರರು ಹಾಗೂ ಸಾರ್ವಜನಿಕರು ಇಂದು (ಜುಲೈ 24) ಬೆಳಗ್ಗಿನಿಂದಲೇ ಮಂಗಳೂರಿನ ನವಭಾರತ್ ಸರ್ಕಲ್‌ನಲ್ಲಿರುವ ‘ಅಸ್ತ್ರ ಗ್ರೂಪ್’ ಕಚೇರಿಗೆ ಮುತ್ತಿಗೆ ಹಾಕಿ ಏಜೆಂಟರನ್ನು ತಳೆದುಹಾಕಿ ತೀವ್ರ ಗಲಾಟೆ ನಡೆಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜುವೆಲ್ಲರಿ ಶೋರೂಂ ತೆರೆದಿರುವುದಾಗಿ ಈತ ಪ್ರಚಾರ ಗಿಟ್ಟಿಸಿಕೊಂಡಿದ್ದ ಜಾಗಕ್ಕೆ ಹೋಗಿ ನೋಡಿದ ಗ್ರಾಹಕರಿಗೆ ಬರೀ ಖಾಲಿ ಮಳಿಗೆ ಮಾತ್ರ ಕಂಡುಬಂದಿದೆ!

ಬ್ಯಾಂಕ್ ಖಾತೆ ಫ್ರೀಜ್ ನಾಟಕ!

ಇತ್ತೀಚೆಗಷ್ಟೇ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲೂ ಜಾಲ ವಿಸ್ತರಿಸಿ ಮೂರನೇ ಸೀಸನ್ ಆರಂಭಿಸಿದ್ದ ಈತ, ಹಣ ಕೇಳಲು ಬಂದ ಮಂಗಳೂರಿನ ಏಜೆಂಟರಿಗೆ “ನನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ, ಸ್ವಲ್ಪ ದಿನ ಕಾಯಿರಿ” ಎಂದು ಕಥೆ ಕಟ್ಟುತ್ತಿದ್ದ. ಹಣ ಕೇಳಿ ಗಲಾಟೆ ಮಾಡಿದ ಕೆಲವರಿಗೆ ಮಾತ್ರ ಒಂದಿಷ್ಟು ಹಣ ಕೊಟ್ಟು ಕಳುಹಿಸುತ್ತಿದ್ದ ಎನ್ನಲಾಗಿದೆ. ಆದರೆ ಐಟಿ, ಇಡಿ ಅಥವಾ ಪೊಲೀಸ್ ಎಫ್‌ಐಆರ್ ಆದಾಗ ಮಾತ್ರ ಖಾತೆ ಫ್ರೀಜ್ ಆಗುತ್ತದೆ ಎಂಬ ಸತ್ಯ ಗೊತ್ತಿದ್ದರೂ, ಹಣ ಕಳೆದುಕೊಳ್ಳುವ ಭೀತಿಯಿಂದ ಜನರು ಈತನ ಸುಳ್ಳನ್ನು ನಂಬುತ್ತಾ ಬಂದಿದ್ದರು.

ಹತ್ತಕ್ಕೆ 15 ಲಕ್ಷದ ‘ಕುರಿ ಫಂಡ್’ ಜಾಲ & ಸಿನಿಮಾ ಶೋಕಿ!

ಕೇವಲ ತಿಂಗಳ ಲಕ್ಕಿ ಸ್ಕೀಮ್ ಮಾತ್ರವಲ್ಲದೆ, ‘ಕುರಿ ಫಂಡ್’ ಮಾದರಿಯಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 15 ತಿಂಗಳಲ್ಲಿ 15 ಲಕ್ಷ ರೂ. ಹಿಂತಿರುಗಿಸುವುದಾಗಿ ನಂಬಿಸಿ ಮಂಗಳೂರು ಆಸುಪಾಸಿನ ದೊಡ್ಡ ದೊಡ್ಡ ಕುರಿಗಳಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ.

ಈ ಹಣದಲ್ಲೇ ಈತ ತುಳು ಸಿನಿಮಾಗಳಿಗೆ ಹಣ ಹೂಡಿ, ಬಂಗಾರದ ಬಣ್ಣದ ಬಳೆಗಳನ್ನು ಹಾಕಿಕೊಂಡು ಶೋಕಿ ಜೀವನ ನಡೆಸುತ್ತಿದ್ದ. ಕೇರಳ ಗಡಿಯ ತಲಪಾಡಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿಕೊಡುವುದಾಗಿಯೂ ನಂಬಿಸಿದ್ದ. ಇತ್ತೀಚೆಗೆ ಸಾವಿರ ರೂಪಾಯಿ ಕಟ್ಟುಪಾವತಿದಾರರ ಸಂಖ್ಯೆ ಮಿತಿಮೀರಿ ವಹಿವಾಟು ಕಷ್ಟವಾದಾಗ ಸಂಪೂರ್ಣ ಜಾಲ ಬಂದ್ ಮಾಡಿ ಪರಾರಿಯಾಗಿದ್ದಾನೆ.

ಪೊಲೀಸ್ ಇಲಾಖೆಯ ಧೋರಣೆಗೆ ಜನರ ಆಕ್ರೋಶ! ಒಂದು ವರ್ಷದ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸುಧೀರ್ ರೆಡ್ಡಿ ಇದ್ದಾಗ ಇಂತಹ ಲಕ್ಕಿ ಸ್ಕೀಮ್‌ಗಳ ವಿರುದ್ಧ ಸಮರ ಸಾರಿದ್ದರು. ಆಗ ಲಂಚುಲಾಲ್ ಠಾಣೆಗೆ 5 ಕೋಟಿ ರೂಪಾಯಿ ಬಾಂಡ್ ನೀಡಿದ್ದ ಎನ್ನಲಾಗಿದೆ. ಪೊಲೀಸರು ಸ್ಕೀಂ ಬಗ್ಗೆ ಸೂಕ್ತ ತನಿಖೆ ನಡೆಸದೆ ಲಂಚುಲಾಲ್ ಇಷ್ಟೊಂದು ದೊಡ್ಡ ಮಟ್ಟದ ವಂಚನೆ ಎಸಗಿ ಪರಾರಿಯಾಗಲು ಕಾರಣವಾಯಿತು ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ದ. ಕ. ಜಿಲ್ಲೆಯನ್ನು ಕೇಂದ್ರೀಕರಿಸಿ ಲಕ್ಕಿ ಸ್ಕೀಮ್ ಗಳದ್ದೇ ಕಾರುಬಾರು

‘ಬಣ್ಣದ ಬಲೆಗೆ ಬೀಳದಿರಿ’: ಆಸೆಯ ಆಮಿಷ, ವಂಚಕರ ಸಂಚು ಮತ್ತು ಸುಲಭ ಹಣದ ದುರಂತ!

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಮಂಗಳೂರು, ಮಡಿಕೇರಿ, ಹಾಸನ, ಪುತ್ತೂರು, ಮೂಡಬಿದ್ರೆ ಹಾಗೂ ವಿಟ್ಲ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಕ್ರಮ ‘ಲಕ್ಕಿ ಸ್ಕೀಮ್’ಗಳು ಅಣಬೆಗಳಂತೆ ತಲೆಎತ್ತಿವೆ. ಬಣ್ಣ ಬಣ್ಣದ ಜಾಹೀರಾತುಗಳು, ಕಾರು-ಬಂಗಾರದ ಆಸೆ ಹಾಗೂ ಐಷಾರಾಮಿ ಬದುಕಿನ ಆಮಿಷವೊಡ್ಡಿ ಮುಗ್ಧ ಸಾರ್ವಜನಿಕರನ್ನು ಕತ್ತಲಲ್ಲಿಟ್ಟು ಮುಂಡಾಮೋಚುವ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.

ವಿಐಪಿಗಳ ‘ಸಾಕ್ಷಿ’ಯಾಗಿಸಿ ಜನರ ಕಣ್ಣಿಗೆ ಮಣ್ಣು!

ಈ ವ್ಯವಸ್ಥಿತ ವಂಚನಾ ಜಾಲ ಎಷ್ಟರಮಟ್ಟಿಗೆ ಬಲವಾಗಿದೆ ಎಂದರೆ, ತಮ್ಮ ಯೋಜನೆಯ ಉದ್ಘಾಟನಾ ಸಮಾರಂಭಗಳಿಗೆ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಸ್ವಾಮೀಜಿಗಳನ್ನು ಅತಿಥಿಗಳಾಗಿ ಕರೆಸಿ ಶೋಕಿ ಪ್ರದರ್ಶನ ಮಾಡುತ್ತವೆ. ಸಮಾಜದ ಹಿರಿಯರೇ ವೇದಿಕೆಯಲ್ಲಿದ್ದಾರೆ ಎಂದಮೇಲೆ ಈ ಸ್ಕೀಮ್ ನಿಜವಿರಬಹುದು ಎಂದು ನಂಬುವ ಸಾರ್ವಜನಿಕರು, ಕಣ್ಣು ಮುಚ್ಚಿಕೊಂಡು ತಮ್ಮ ಕಷ್ಟದ ಹಣವನ್ನು ಹೂಡಿಕೆ ಮಾಡಿ ಈಗ ಬೀದಿಗೆ ಬೀಳುತ್ತಿದ್ದಾರೆ.

ವಂಚಕರಿಗೆ ರಾತ್ರೋರಾತ್ರಿ ಕೋಟಿ, ಗ್ರಾಹಕರಿಗೆ ಚೊಂಬು!

ಈ ಇಡೀ ಜಾಲ ನಡೆಯುತ್ತಿರುವುದೇ ಎರಡು ಅಪಾಯಕಾರಿ ಮನಸ್ಥಿತಿಗಳ ಮೇಲೆ:

ವಂಚಕರ ಸಂಚು: ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಾಧೀಶ್ವರರಾಗಿ, ಜನರ ಹಣದೊಂದಿಗೆ ವಿದೇಶಕ್ಕೋ ಅಥವಾ ಬೇರೆಡೆಗೋ ಕಾಲು ಕೀಳುವುದು.

ಸಾರ್ವಜನಿಕರ ಆತುರ: ಕಷ್ಟಪಡದೆ ಸುಲಭವಾಗಿ, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸಿ ಐಷಾರಾಮಿ ಜೀವನ ನಡೆಸಬೇಕೆಂಬ ಹಂಬಲ.

    ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳು ಎಷ್ಟೇ ಜಾಗೃತಿ ಮೂಡಿಸಿದರೂ, “ನನಗೆ ಅದೃಷ್ಟ ಒಲಿಯುತ್ತದೆ” ಎಂಬ ಭ್ರಮೆಯಲ್ಲಿ ಜನರು ಮತ್ತೆ ಮತ್ತೆ ಅದೇ ಗುಂಡಿಗೆ ಬೀಳುತ್ತಿದ್ದಾರೆ. ಹಣ ಕಟ್ಟಿಸಿಕೊಂಡವರು ದಿಢೀರ್ ನಾಪತ್ತೆಯಾದಾಗ, ತಲೆಮೇಲೆ ಕೈಹೊತ್ತು ಸಿಸ್ಟಮ್‌ಗೆ ಹಾಗೂ ವಂಚಕರಿಗೆ ಹಿಡಿಶಾಪ ಹಾಕುವುದು ಮಾತ್ರ ಸಂತ್ರಸ್ತರ ಪಾಲಾಗುತ್ತಿದೆ.

    ಸಾರ್ವಜನಿಕರ ಗಮನಕ್ಕೆ: ಇನ್ನಾದರೂ ಎಚ್ಚೆತ್ತುಕೊಳ್ಳಿ!

    ಉಚಿತವಾಗಿ ಅಥವಾ ಸುಲಭವಾಗಿ ಏನೂ ಸಿಗುವುದಿಲ್ಲ: ಕಷ್ಟಪಟ್ಟು ದುಡಿದ ಹಣಕ್ಕೆ ಮಾತ್ರ ನಿಜವಾದ ಮೌಲ್ಯವಿದೆ. ತಿಂಗಳಿಗೆ ಸಾವಿರ ಕಟ್ಟಿ ಲಕ್ಷ ಪಡೆಯುವ ಕಲ್ಪನೆ ಕೇವಲ ಹಗಲುಗನಸು.

    ಸರಕಾರದ ಮಾನ್ಯತೆ ಪರಿಶೀಲಿಸಿ: ಯಾವುದೇ ಕಂಪನಿ ಅಥವಾ ಸ್ಕೀಮ್‌ಗೆ ಆರ್‌ಬಿಐ (RBI), SEBI ಅಥವಾ ಸರಕಾರದ ಮಾನ್ಯತೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

    ವೇದಿಕೆಯ ರಂಗು ನೋಡಿ ಮರುಳಾಗಬೇಡಿ: ಉದ್ಘಾಟನೆಗೆ ಯಾರು ಬಂದಿದ್ದಾರೆ ಎಂಬುದಕ್ಕಿಂತ, ಆ ಸ್ಕೀಮ್‌ನ ಕಾಯ್ದೆ-ಕಾನೂನು ಚೌಕಟ್ಟು ಏನು ಎಂಬುದ ಮುಖ್ಯ.

    ಕೊನೆ ಮಾತು: ಆಸೆಯೇ ದುಃಖಕ್ಕೆ ಮೂಲ. ವಂಚಕರು ನಿಮ್ಮ ದುರಾಸೆಯನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಕಷ್ಟಪಟ್ಟು ದುಡಿದ ನಿಮ್ಮ ಹಣವನ್ನು ಇಂತಹ ಅಕ್ರಮ ಲಕ್ಕಿ ಸ್ಕೀಮ್‌ಗಳಿಗೆ ಸುರಿದು ಕುಟುಂಬವನ್ನು ಬೀದಿಗೆ ತಳ್ಳಬೇಡಿ. ಬಣ್ಣದ ಮಾತುಗಳಿಗೆ ಮರುಳಾಗದೆ, ಇನ್ನಾದರೂ ಎಚ್ಚೆತ್ತುಕೊಳ್ಳಿ!

    ads (2)
    ads (3)
    ads (4)
    ads (5)
    ads (6)
    ads (1)
    ads (8)
    ads (7)
    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    Bantawala

    ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

    Published

    on

    ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರ:

    ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

    ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

    ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

    ಬಂಟ್ವಾಳ ಠಾಣೆಯಲ್ಲಿ ದೂರು:

    ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    Continue Reading

    arrest

    7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ: ಮಂಗಳೂರು ಪೊಲೀಸರ ಕಾರ್ಯಾಚರಣೆ

    Published

    on

    ಮಂಗಳೂರು: ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 30ಕ್ಕೂ ಹೆಚ್ಚು ವಾರಂಟ್ ಹಾಗೂ 13ಕ್ಕೂ ಅಧಿಕ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ಪಡೆ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಉಳ್ಳಾಲ ತಾಲೂಕಿನ ಮಾರ್ಗತಲೆ ಮೂಲದ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಡಪ್ಪು ನಿವಾಸಿ ಉಮ್ಮರ್ ನವಾಫ್ (33) ಬಂಧಿತ ಆರೋಪಿ.

    30ಕ್ಕೂ ಹೆಚ್ಚು ವಾರಂಟ್, ಪ್ರೋಕ್ಲಮೇಷನ್ ಜಾರಿ

    ಬಂಧಿತ ಉಮ್ಮರ್ ನವಾಫ್ ವಿರುದ್ಧ ಕೊಲೆ ಯತ್ನ, ಅಪಹರಣ, ದರೋಡೆ, ಹಫ್ತಾ ವಸೂಲಿ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಉಳ್ಳಾಲ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

    ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಘನ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್‌ಗಳನ್ನು ಹೊರಡಿಸಿತ್ತು. ಅಲ್ಲದೆ, ಉಳ್ಳಾಲ ಠಾಣೆಯ ಮೂರು ಪ್ರಕರಣಗಳಲ್ಲಿ ಈತನ ವಿರುದ್ಧ ನ್ಯಾಯಾಲಯದ ಆದೇಶದಂತೆ ‘ಪ್ರೋಕ್ಲಮೇಷನ್’ ಜಾರಿಗೊಳಿಸಲಾಗಿತ್ತು ಹಾಗೂ ಒಂದು ಪ್ರಕರಣದಲ್ಲಿ ಎಲ್.ಪಿ.ಸಿ (LPC) ಮಾಡಲಾಗಿತ್ತು.

    ಆರೋಪಿ ಉಮ್ಮರ್ ನವಾಫ್ ಮೇಲಿರುವ ಪ್ರಕರಣಗಳ ವಿವರಗಳು:

    1. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 222/17):
      • ಕಲಂಗಳು: 143, 147, 148 (ಕಾನೂನುಬಾಹಿರ ಗುಂಪುಗಾರಿಕೆ, ಗಲಭೆ), 341 (ಅಕ್ರಮ ತಡೆ), 504, 506 (ಶಾಂತಿ ಭಂಗ, ಜೀವ ಬೆದರಿಕೆ), 324 (ಹಾಕಾಹಾಕಿ/ಹೊಡೆದಾಟ) ಮತ್ತು 307 (ಕೊಲೆ ಯತ್ನ).
    2. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 23/17):
      • ಕಲಂಗಳು: 427 IPC (ಆಸ್ತಿಗೆ ಹಾನಿ) ಮತ್ತು KPDLP ಕಾಯ್ದೆಯ 2(a), 2(b) (ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ).
    3. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 247/14):
      • ಕಲಂಗಳು: 448 (ಅಕ್ರಮ ಪ್ರವೇಶ) ಮತ್ತು 395 (ದರೋಡೆ).
    4. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 289/17):
      • ಕಲಂಗಳು: 504, 506, 364(a) (ಅಪಹರಣ ಮತ್ತು ಕಪ್ಪಕ್ಕೆ ಬೇಡಿಕೆ), 387 (ಹಫ್ತಾ ವಸೂಲಿಗೆ ಬೆದರಿಕೆ), 395 (ದರೋಡೆ), 149 IPC.
    5. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 276/15) – (ನ್ಯಾಯಾಲಯದಿಂದ LPC ಮಾಡಲಾದ ಪ್ರಕರಣ):
      • ಕಲಂಗಳು: 143, 144, 148, 448, 451, 452 (ಅಕ್ರಮ ಮನೆ ಪ್ರವೇಶ), 326, 307 (ಕೊಲೆ ಯತ್ನ), 397 (ಮಾರಕ ಆಯುಧದೊಂದಿಗೆ ದರೋಡೆ/ಕಳವು), 506, 149 IPC.
    6. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 206/2012) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
      • ಕಲಂಗಳು: 143, 147, 148, 323, 427, 504, 506, 149 IPC.
    7. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 27/2017) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
      • ಕಲಂಗಳು: 387 IPC (ಭಯ ಹುಟ್ಟಿಸಿ ಹಣ/ಆಸ್ತಿ ವಸೂಲಿ ಮಾಡುವುದು).
    8. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 103/2021):
      • ಕಲಂಗಳು: 364 IPC (ಕೊಲೆ ಮಾಡುವ ಉದ್ದೇಶದಿಂದ ಅಪಹರಣ).
    9. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 71/23):
      • ಕಲಂಗಳು: 504, 506, 307 (ಕೊಲೆ ಯತ್ನ), 324, 427 IPC.
    10. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 183/17) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
      • ಕಲಂಗಳು: 143, 147, 148, 448, 504, 324, 323, 506, 427 R/w 149 IPC.
    11. ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 159/23):
      • ಕಲಂಗಳು: 341, 394 (ಕಳವು ಮಾಡುವಾಗ ಗಾಯಗೊಳಿಸುವುದು), 307 (ಕೊಲೆ ಯತ್ನ) R/w 34 IPC.
    12. ಪಣಂಬೂರು ಪೊಲೀಸ್ ಠಾಣೆ (PNB ಮೊ.ನಂ 158/2012):
      • ಕಲಂಗಳು: 379 IPC (ಕಳವು).
    13. ಬರ್ಕೆ ಪೊಲೀಸ್ ಠಾಣೆ (ಮೊ.ನಂ 04/15):
      • ಕಲಂಗಳು: 353 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ), 427 R/w 34 IPC.

    ಪೊಲೀಸರ ಸಕಾಲಿಕ ಕಾರ್ಯಾಚರಣೆ

    ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ಮಾರ್ಗದರ್ಶನದಲ್ಲಿ, ದಕ್ಷಿಣ ಉಪವಿಭಾಗ ಕಚೇರಿಯ ವಿಶೇಷ ಕರ್ತವ್ಯ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಾಂಕ 02-08-2026 ರಂದು ಸುಳಿವು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

    Continue Reading

    crime

    ಮಣಿಪಾಲ: ಬಾರ್, ಪಬ್‌ಗಳ ಮೇಲೆ ಪೊಲೀಸರ ಮಿಂಚಿನ ದಾಳಿ; ಮದ್ಯ ಸೇವಿಸುತ್ತಿದ್ದ 64 ಯುವಕರು, 23 ಯುವತಿಯರು

    Published

    on

    ಮಣಿಪಾಲ: 21 ವರ್ಷದೊಳಗಿನವರಿಗೆ ಅಕ್ರಮವಾಗಿ ಮದ್ಯ ಹಾಗೂ ಹುಕ್ಕಾ ಪೂರೈಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಮುಖ ಬಾರ್ ಮತ್ತು ಪಬ್‌ಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ ಮದ್ಯ ಸೇವನೆಯಲ್ಲಿ ತೊಡಗಿದ್ದ 64 ಯುವಕರು, 23 ಯುವತಿಯರು ಹಾಗೂ ಒಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಒಟ್ಟು 87 ಮಂದಿ ಸಿಕ್ಕಿಬಿದ್ದಿದ್ದಾರೆ.

    ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರ ನಿರ್ದೇಶನದಂತೆ, ಮಣಿಪಾಲ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಈ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಯಿತು. ಕಾರ್ಯಾಚರಣೆಗಾಗಿ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನೊಳಗೊಂಡ 6 ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.

    ದಾಳಿಗೊಳಗಾದ ಬಾರ್ ಮತ್ತು ಪಬ್‌ಗಳು:

    ಪೊಲೀಸರು ಮಣಿಪಾಲ ವ್ಯಾಪ್ತಿಯ ಒಟ್ಟು ಆರು ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು:

    1. ಎಕ್ಸ್ಟಸಿ 7ನೇ ಹೆವೆನ್ ಪಬ್, ಮಣಿಪಾಲ್
    2. ಸಾಯಿ ಸಾಗರ್ ಬಾರ್ ಮತ್ತು ರೆಸ್ಟೋರೆಂಟ್, ಈಶ್ವರ್ ನಗರ
    3. ಡೌನ್ ದಿ ರೋಡ್ ಬಾರ್ ಮತ್ತು ರೆಸ್ಟೋರೆಂಟ್, ಮಣಿಪಾಲ್
    4. ಡೆಕ್ಸ್ಟರ್ ಬಾರ್ ಮತ್ತು ರೆಸ್ಟೋರೆಂಟ್
    5. ಡೀ ಟೀ ಬಾರ್ ಮತ್ತು ರೆಸ್ಟೋರೆಂಟ್, ಈಶ್ವರ್ ನಗರ
    6. ಜನನಿ ಬಾರ್ ಮತ್ತು ರೆಸ್ಟೋರೆಂಟ್ (ಎಡ್ಜ್ ಬಾರ್ ಮತ್ತು ರೆಸ್ಟೋರೆಂಟ್), ಈಶ್ವರ್ ನಗರ

    ಕಾನೂನು ಉಲ್ಲಂಘನೆ ಮತ್ತು ಪ್ರಕರಣ ದಾಖಲು:

    ಕರ್ನಾಟಕ ಅಬಕಾರಿ ಪರವಾನಗಿ ನಿಯಮಗಳ 10(1)(ಇ), ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 36(1)(ಬಿ) ಹಾಗೂ ತಂಬಾಕು ಉತ್ಪನ್ನಗಳ ನಿಯಂತ್ರಣ (COTPA) ಕಾಯ್ದೆಯನ್ನು ಉಲ್ಲಂಘಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ-ಯುವತಿಯರಿಗೆ ಮದ್ಯ ಹಾಗೂ ಹುಕ್ಕಾ ಮಾರಾಟ ಮಾಡುತ್ತಿದ್ದದ್ದು ತಪಾಸಣೆ ವೇಳೆ ದೃಢಪಟ್ಟಿದೆ.

    ಈ ಹಿನ್ನೆಲೆಯಲ್ಲಿ, ನಿಯಮ ಉಲ್ಲಂಘಿಸಿದ ಆಯಾ ಪಬ್ ಮತ್ತು ಬಾರ್‌ಗಳ ಮಾಲೀಕರು ಹಾಗೂ ವ್ಯವಸ್ಥಾಪಕರ (ಮ್ಯಾನೇಜರ್) ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ 6 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.

    ಪೊಲೀಸರ ಎಚ್ಚರಿಕೆ:

    “21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ, ಮದ್ಯ/ಹುಕ್ಕಾ ಪೂರೈಸುವ ಅಥವಾ ಅಬಕಾರಿ ಕಾಯ್ದೆ ಹಾಗೂ COTPA ಕಾಯ್ದೆಗಳನ್ನು ಉಲ್ಲಂಘಿಸುವ ಬಾರ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಮುಂಬರುವ ದಿನಗಳಲ್ಲೂ ಇಂತಹುದೇ ಕಠಿಣ ಕಾನೂನು ಕ್ರಮಗಳು ಮುಂದುವರಿಯಲಿವೆ.” ಎಂದು ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

    Continue Reading

    Trending

    Copyright © 2025 Deevatige

    error: Content is protected !!