Connect with us

Condolences

ಕುಂದಾಪುರ ಗ್ರಾಮಾಂತರ ಠಾಣಾ ಎಸೈ ನಾಸಿರ್ ಹುಸೇನ್ ನಿಧನ; “ಡ್ರಗ್ಸ್ ಫ್ರೀ ಕರ್ನಾಟಕ”ಮ್ಯಾರಥಾನ್ ಓಟದ ಸಂದರ್ಭ, ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ನಿಷ್ಠಾವಂತ ಎಸೈ.

Published

on

ನಾಗರಿಕ ಸಮಾಜದಲ್ಲಿ ಸ್ವಾಸ್ಥ್ಯ ಮತ್ತು ಸುರಕ್ಷತೆಯನ್ನು ಸ್ಥಾಪಿಸುವ ಹಿತದೃಷ್ಟಿಯಿಂದ ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” “ಡ್ರಗ್ಸ್ ಫ್ರೀ ಕರ್ನಾಟಕ” ಮ್ಯಾರಥಾನ್ ನಡಿಗೆ ಕಾರ್ಯಕ್ರಮ ಸುಖಾಂತ್ಯ ಕಾಣುವ ಬದಲಾಗಿ ವಿಧಿಯಾಟವೋ ಎಂಬಂತೆ ದುಖಾಂತ್ಯ ಕಂಡಿದೆ.

ಉಡುಪಿ ಜಿಲ್ಲಾ ಪೊಲೀಸರು ಹಮ್ಮಿಕೊಂಡಿದ್ದ “ನಮ್ಮ ಪೊಲೀಸ್ ನಮ್ಮ ಹೆಮ್ಮೆ” ಹಾಗೂ “ಡ್ರಗ್ಸ್ ಫ್ರೀ ಕರ್ನಾಟಕ” ಕಾರ್ಯಕ್ರಮದಲ್ಲಿ ಕುಂದಾಪುರದ ಗ್ರಾಮಾಂತರ ಠಾಣೆಯ ನಿಷ್ಟಾವಂತ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಠಾಣಾಧಿಕಾರಿ ನಾಸೀರ್ ಹುಸೇನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಓಟದಲ್ಲಿ ನಾಸೀರ್ ಹುಸೇನ್ ಬಹಳ ಉತ್ಸಾಹದಿಂದ ಭಾಗವಹಿಸಿದ್ದರು. ಆರೋಗ್ಯ ಮತ್ತು ಮಾದಕ ವ್ಯಸನ ಮುಕ್ತ ಸಮಾಜವನ್ನು ಕರ್ನಾಟಕದಲ್ಲಿ ನಿರ್ಮಿಸಬೇಕೆಂಬ ಕನಸು ಕಂಡು ಜನತೆಗೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಹಮ್ಮಿಕೊಂಡ ಮ್ಯಾರಥಾನ್ ಓಟದ ಸಂದರ್ಭದಲ್ಲಿ ನಾಸೀರ್ ಹುಸೇನ್ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಹುಸೇನ್ ಅವರು ಮೃತಪಟ್ಟಿದ್ದಾರೆ.

ನಿಷ್ಟಾವಂತ, ಜನಸ್ನೇಹಿ ಅಧಿಕಾರಿಯಾಗಿದ್ದ ನಾಸೀರ್ ಹುಸೇನ್ ಅವರು ಪೊಲೀಸ್ ಇಲಾಖೆಯ ಪ್ರತಿಯೊಂದು ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು ಎಂದು ಕುಂದಾಪುರದ ಜನತೆ ಕೊಂಡಾಡುತ್ತಿದೆ.

“ಜನರ ಸೇವೆಗಾಗಿ ಸದಾ ಸಿದ್ಧ” ಎಂಬ ಪೊಲೀಸ್ ಇಲಾಖೆಯ ಧ್ಯೇಯವಾಕ್ಯ ಎಸೈ ನಾಸಿರ್ ಹುಸೇನ್ ಅವರಿಗೆ ಹೇಳಿಮಾಡಿಸಿದಂತಿತ್ತು. ದಕ್ಷ ಎಸೈ ನಾಸಿರ್ ಹುಸೇನ್ ಅಕಾಲಿಕ ನಿಧನ ಕುಂದಾಪುರದ ಜನತೆಗೆ ತಡೆಯಲಾರದ ನೋವನ್ನುಂಟುಮಾಡಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Condolences

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”

Published

on

ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶದ ನೀಟ್ (NEET) ಪರೀಕ್ಷಾರ್ಥಿಗಳು ಮತ್ತು ಯುವಜನತೆ ನಡೆಸಿದ ಪ್ರತಿಭಟನೆಯು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸುಗಳು ನುಚ್ಚುನೂರಾದ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಘಟನೆಯೂ ನಡೆದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ ಮತ್ತು ಅದಕ್ಕೆ ವಿರೋಧ ಪಕ್ಷಗಳು ಹಾಗೂ ಗಣ್ಯರ ಪ್ರತಿಕ್ರಿಯೆಗಳು ರಾಜಕೀಯ ಕಾವನ್ನು ಮತ್ತಷ್ಟು ಹೆಚ್ಚಿಸಿವೆ.

1. ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ವಿದ್ಯಾರ್ಥಿಗಳ ಆಕ್ರೋಶ

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದತಿ ಹಾಗೂ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ನಿರಾಶೆಯಿಂದಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರ ನಿರಂತರ ಆಕ್ರೋಶದ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತಮ್ಮ ಭವಿಷ್ಯವೇ ಕತ್ತಲೆಯಾಗಿದೆ ಎಂದು ಮನನೊಂದು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತು.

2. ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ

ಪ್ರತಿಭಟನೆಯ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನೀಯ ಮಾತುಗಳ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.

ಪ್ರಧಾನಿ ಹೇಳಿಕೆ: “ದಾರಿತಪ್ಪಿದ ಮಕ್ಕಳಿಗೆ ಸರಿಯಾದ ಹಾದಿ ತೋರಿಸಬೇಕು, ಕಾನೂನು ಕ್ರಮವೇ ಪ್ರತಿಯೊಂದಕ್ಕೂ ಪರಿಹಾರವಲ್ಲ. ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದ ಯುವಕರನ್ನು ನಾನು ಕ್ಷಮಿಸುತ್ತೇನೆ. ನಿಂದನೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ” ಎಂದು ಭಾವುಕರಾಗಿ ಸಮಾಜಕ್ಕೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರ ʼಕ್ಷಮೆಯʼ ಹೇಳಿಕೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗುತ್ತಿರುವ ಎಫ್ಐಆರ್ ಗಳ ನಡುವಿನ ವ್ಯತ್ಯಾಸವನ್ನು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ

3. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ರಾಹುಲ್ ಗಾಂಧಿ ಅವರು ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳನ್ನು ಹಾಗೂ ಮಹಾಬಲಿಪುರಂನಲ್ಲಿ ಸಂಕಷ್ಟಕ್ಕೊಳಗಾದ ಪೋಷಕರನ್ನು ನೇರವಾಗಿ ಭೇಟಿಯಾಗಿ ಸಾಂತ್ವನ ಹೇಳಿದರು. ಪ್ರಧಾನಿ ಮೋದಿ ವೀಡಿಯೋಗೆ ತಿರುಗೇಟು ನೀಡಿದ ಅವರು:

ಕ್ಷಮೆಯ ಅಗತ್ಯವಿಲ್ಲ, ಕ್ಷಮೆಯಾಚನೆ ಬೇಕು: “ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವು ಪದಗಳಿಗೆ ಸಿಗದಂತದ್ದು. ಕಳಪೆ ಶಿಕ್ಷಣ ವ್ಯವಸ್ಥೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಿದೆ. ಪ್ರಧಾನಿಯವರು ಇದುವರೆಗೆ ನೊಂದ ಯಾವುದೇ ಪೋಷಕರನ್ನಾಗಲಿ ಅಥವಾ ಭವಿಷ್ಯ ಹಾಳಾದ ವಿದ್ಯಾರ್ಥಿಗಳನ್ನಾಗಲಿ ಭೇಟಿಯಾಗಿಲ್ಲ.”

“ಭಾರತದ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ‘ಕ್ಷಮೆ’ ಬೇಕಿಲ್ಲ, ಬದಲಾಗಿ ಪ್ರಧಾನಿಯವರೇ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

4. ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಖಾರವಾದ ಟೀಕೆ

ಪ್ರಧಾನಿ ಅವರ ವೀಡಿಯೋವನ್ನು “ರೀಲ್” ಎಂದು ಕರೆದಿರುವ ಬಿ.ಕೆ. ಹರಿಪ್ರಸಾದ್, ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ:

“ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನಲು ಪ್ರಧಾನಿ ಮೋದಿ ಉದಾಹರಣೆ. ದಶಕಗಳಿಂದ ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ಮೌನಸಮ್ಮತಿ ನೀಡಿದವರು ಇಂದು ಮಾತೃಗೌರವದ ಪ್ರವಚನ ನೀಡುತ್ತಿರುವುದು ಬೆಂಕಿ ಹಚ್ಚಿದವನೇ ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ.”

ತಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜೀವ್ ಗಾಂಧಿಯವರ ಹತ್ಯೆಯಂತಹ ಅತ್ಯಂತ ಭೀಕರ ದುರಂತವನ್ನು ಅನುಭವಿಸಿದರೂ, ಪ್ರತಿಕ್ರಿಯೆಯಾಗಿ ದ್ವೇಷ ಸಾಧಿಸದೆ ಕ್ಷಮೆಯನ್ನು ಆರಿಸಿಕೊಂಡಿದ್ದರು. ಅದು ಕ್ಯಾಮೆರಾ ಮುಂದೆ ಮಾಡಿದ ಆಟವಲ್ಲ, ಅವರ ಸಂಸ್ಕಾರ ಎಂದು ನೆನಪಿಸಿದರು.

5. ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಶ್ನೆ

ಪ್ರಧಾನಿಯವರ ಕ್ಷಮಾದಾನದ ಹೇಳಿಕೆಯನ್ನು ನೇರವಾಗಿ ಪ್ರಶ್ನೆ ಮಾಡಿರುವ ಅಭಿಜಿತ್ ದೀಪ್ಕೆ:

“ಸರ್, ನೀವು ಕೇವಲ ರೀಲ್ಸ್‌ನಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕ್ಷಮಿಸುತ್ತೀರಾ ಅಥವಾ ಅವರ ಮೇಲೆ ದಾಖಲಾಗಿರುವ ಎಫ್‌ಐಆರ್ ಹಾಗೂ ಕೇಸ್‌ಗಳನ್ನು ಹಿಂಪಡೆಯುತ್ತೀರಾ?” ಎಂದು ಸವಾಲು ಹಾಕಿದ್ದಾರೆ.

ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದ ನೋಯ್ಡಾ ಮೂಲದ ಹದಿಹರೆಯದ ಯುವತಿಯ ಮೇಲಿನ ಎಫ್‌ಐಆರ್ ಪ್ರಸ್ತಾಪಿಸಿದ ಅವರು, ಬಿಜೆಪಿ ಐಟಿ ಸೆಲ್‌ನ ಸದಸ್ಯರು ಮಹಿಳೆಯರನ್ನು ನಿಂದಿಸಿದಾಗ ಅವರ ಮೇಲೂ ಇದೇ ರೀತಿ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.

6. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿಕೆ

ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣ ‘X’ ನಲ್ಲಿ ಧ್ವನಿ ಎತ್ತಿದ್ದಾರೆ:

ಪೋಷಕರ ದೃಷ್ಟಿಕೋನ: “ಮಕ್ಕಳು ಹಿರಿಯರಿಗೆ ಕೋಪದಲ್ಲಿ ಅಥವಾ ಆಕ್ರೋಶದಲ್ಲಿ ಅವಾಚ್ಯ ಪದ ಬಳಸಿದಾಗ ಹಿರಿಯರಾಗಿ ಅವರಿಗೆ ಎಚ್ಚರಿಕೆ ನೀಡಿ ತಿದ್ದಬೇಕೇ ಹೊರತು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಪೋಲಿಸ್ ದೂರು ನೀಡುವುದು ಅಥವಾ ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ನೀಟ್ ಪರೀಕ್ಷೆಯ ಅಕ್ರಮ, ಶಿಕ್ಷಣ ಸಚಿವರ ರಾಜೀನಾಮೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಪೋಷಕರ ಆಕ್ರಂದನದಿಂದ ತತ್ತರಿಸಿರುವ ಯುವಜನತೆಗೆ ಪ್ರಧಾನಿಯವರ ‘ಕ್ಷಮೆ’ಗಿಂತ ಹೆಚ್ಚಾಗಿ ನ್ಯಾಯ ಬೇಕಿದೆ ಎನ್ನುವುದು ವಿರೋಧ ಪಕ್ಷಗಳು ಮತ್ತು ಹೋರಾಟಗಾರರ ಸ್ಪಷ್ಟ ನಿಲುವಾಗಿದೆ.

Continue Reading

Condolences

ನೀಟ್ ಸಂತ್ರಸ್ತ ವಿದ್ಯಾರ್ಥಿಗಳಿಗೆ ಕಪಿಲ್ ಸಿಬಲ್ ಅಭಯ: CJPಯಿಂದ ಬೃಹತ್ ‘ಕಾನೂನು ನೆರವು’ ಜಾಲ

Published

on

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಹಾಗೂ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಕಾನೂನು ಹೋರಾಟಕ್ಕಾಗಿ ತಮ್ಮ ವೈಯಕ್ತಿಕ ಕೊಡುಗೆಯಾಗಿ 1 ಕೋಟಿ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ಹಾಗೂ ದೇಶದ ವಿವಿಧೆಡೆ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ಮತ್ತು ಕಾನೂನು ಕ್ರಮಗಳಿಂದ ಅವರಿಗೆ ರಕ್ಷಣೆ ನೀಡಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸ್ಥಾಪಿಸಿರುವ ಉಚಿತ ಕಾನೂನು ನೆರವು ನಿಧಿಗೆ (Legal Aid Fund) ಅವರು ಈ ನೆರವು ನೀಡಿದ್ದಾರೆ.

ಪತ್ರಿಕಾಗೋಷ್ಠಿಯ ಪ್ರಮುಖ ಮುಖ್ಯಾಂಶಗಳು

ವೆಬ್‌ಸೈಟ್ ಪ್ರಾರಂಭ:

ಪ್ರತಿಭಟನಾಕಾರರ ಮೇಲೆ ದೇಶಾದ್ಯಂತ (ಬೀಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ ಇತ್ಯಾದಿ) ಎಲ್ಲಿ, ಏನು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದನ್ನು ದಾಖಲಿಸಲು ಮತ್ತು ಟ್ರ್ಯಾಕ್ ಮಾಡಲು ಸಿಜೆಪಿ ಪ್ರತ್ಯೇಕ ವೆಬ್‌ಸೈಟ್ ಪ್ರಾರಂಭಿಸಲಿದೆ.

ಉಚಿತವಾಗಿ (Pro Bono) ಕಾನೂನು ನೆರವು ನೀಡಲು ಬಯಸುವ ದೇಶದ ಇತರೆ ವಕೀಲರು ಈ ವೆಬ್‌ಸೈಟ್‌ನಲ್ಲಿ ತಮ್ಮ ಹೆಸರು, ಸ್ಥಳ ಮತ್ತು ಲಭ್ಯತೆಯ ವಿವರಗಳನ್ನು ನೋಂದಾಯಿಸಿಕೊಳ್ಳಬಹುದು.

ವಕೀಲರಿಗೆ ಮತ್ತು ಸಾರ್ವಜನಿಕರಿಗೆ ಕರೆ:

“ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಸತ್ತಾತ್ಮಕ ಹಕ್ಕು. ಕಾನೂನನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಪ್ರಕರಣಗಳನ್ನು ಹಾಕಲಾಗಿದ್ದರೆ, ನಾವು ವಿದ್ಯಾರ್ಥಿಗಳ ಪರವಾಗಿ ಗಟ್ಟಿಯಾಗಿ ನಿಲ್ಲುತ್ತೇವೆ” ಎಂದು ಕಪಿಲ್ ಸಿಬಲ್ ತಿಳಿಸಿದ್ದಾರೆ.

ದೇಶದಾದ್ಯಂತ ಇರುವ ವಕೀಲರು ಮತ್ತು ಸಾರ್ವಜನಿಕರು ಈ ಕಾನೂನು ನೆರವು ನಿಧಿಗೆ ಯಥಾಶಕ್ತಿ ದೇಣಿಗೆ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆ ಹಾಗೂ ವಿದ್ಯಾರ್ಥಿಗಳ ಆತಂಕ:

ಸಿಜೆಪಿ (CJP) ವಕ್ತಾರ ಸೌರವ್ ದಾಸ್ ಮಾತನಾಡಿ, ಕೇಂದ್ರ ಸರ್ಕಾರದ ಭರವಸೆಯ ಹೊರತಾಗಿಯೂ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮತ್ತು ಕಿರುಕುಳ ನೀಡುವ ಆತಂಕವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪೂರ್ವಾಗ್ರಹ ಪೀಡಿತ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಲಾಗಿದೆ.

    ಹಿನ್ನೆಲೆ

    ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ‘ಕಾಕ್ರೋಚ್ ಜನತಾ ಪಕ್ಷ’ (CJP) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸತತ 37 ದಿನಗಳ ಕಾಲ ಸುದೀರ್ಘ ಪ್ರತಿಭಟನೆ ನಡೆಸಲಾಗಿತ್ತು. ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ಸರ್ಕಾರದಿಂದ ಕೆಲವು ಭರವಸೆಗಳು ಸಿಕ್ಕ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತಾದರೂ, ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಸುಳ್ಳು ಕೇಸುಗಳನ್ನು ಜಡಿಯುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಬೃಹತ್ ಕಾನೂನು ನೆರವು ಜಾಲವನ್ನು ರೂಪಿಸಲಾಗಿದೆ.

    ಕಪಿಲ್ ಸಿಬಲ್ ಅವರ ಪೂರ್ಣ ಹೇಳಿಕೆಯ ಪ್ರಮುಖ ಭಾಗಗಳು

    • ವಿದ್ಯಾರ್ಥಿಗಳ ರಕ್ಷಣೆಗೆ ವೈಯಕ್ತಿಕ ದೇಣಿಗೆ:“ಶಾಂತಿಯುತವಾಗಿ ತಮ್ಮ ಹಕ್ಕಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯ. ಕಾನೂನು ಸಮರವನ್ನು ನಡೆಸಲು ಹಣದ ಕೊರತೆಯಾಗಬಾರದು ಎಂಬ ಕಾರಣಕ್ಕೆ ನಾನು ನನ್ನ ವೈಯಕ್ತಿಕ ಹಣದಿಂದ 1 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ. ದೇಶಾದ್ಯಂತ ಇರುವ ಇತರ ವಕೀಲರು ಹಾಗೂ ಸಾರ್ವಜನಿಕರೂ ಸಹ ಈ ಕಾನೂನು ನೆರವು ನಿಧಿಗೆ (Legal Aid Fund) ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡುತ್ತೇನೆ.”
    • ಪ್ರಜಾಪ್ರಭುತ್ವದ ಹಕ್ಕಿನ ಸಮರ್ಥನೆ:“ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧ ದನಿ ಎತ್ತುವುದು ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕು. ಆದರೆ, ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯು ವಿದ್ಯಾರ್ಥಿಗಳ ಮೇಲೆ ಸುಳ್ಳು ಎಫ್‌ಐಆರ್ (FIR) ಜಡಿದು, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಹೊರಟಿದೆ. ಇದನ್ನು ನಾವು ಸಹಿಸುವುದಿಲ್ಲ.”
    • ಉಚಿತ ಕಾನೂನು ನೆರವು ಜಾಲ (Legal Network):“ದೇಶದ ಯಾವುದೇ ಭಾಗದಲ್ಲಿ (ಬೀಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ದೆಹಲಿ ಸೇರಿದಂತೆ) ವಿದ್ಯಾರ್ಥಿಗಳ ಮೇಲೆ ಅಥವಾ ಪ್ರತಿಭಟನಾಕಾರರ ಮೇಲೆ ಸುಳ್ಳು ಕೇಸುಗಳನ್ನು ಹಾಕಿದ್ದರೆ, ನಮ್ಮ ವಕೀಲರ ತಂಡ ಉಚಿತವಾಗಿ ಅವರ ಪರವಾಗಿ ಕೋರ್ಟ್‌ನಲ್ಲಿ ವಾದಿಸಲಿದೆ. ಇದಕ್ಕಾಗಿ ವಿಶೇಷ ವೆಬ್‌ಸೈಟ್‌ ಒಂದನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದೇವೆ. ಅಲ್ಲಿ ಯಾವ ಪ್ರತಿಭಟನಾಕಾರರ ಮೇಲೆ ಎಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ದಾಖಲಾಗುತ್ತದೆ ಮತ್ತು ವಕೀಲರು ಉಚಿತ ಸೇವೆಯನ್ನು ಒದಗಿಸಲು ನೋಂದಾಯಿಸಿಕೊಳ್ಳಬಹುದು.”

    CJP ವಕ್ತಾರ ಸೌರವ್ ದಾಸ್ ಅವರ ಹೇಳಿಕೆ

    • ಎಫ್‌ಐಆರ್ ಹಿಂಪಡೆಯಲು ಒತ್ತಾಯ:“ಜಂತರ್ ಮಂತರ್‌ನಲ್ಲಿ ಸತತ 37 ದಿನಗಳ ಕಾಲ ನಡೆದ ಸುದೀರ್ಘ ಪ್ರತಿಭಟನೆಯ ನಂತರ ಕೇಂದ್ರ ಸರ್ಕಾರ ನಮಗೆ ಕೆಲವು ಭರವಸೆಗಳನ್ನು ನೀಡಿತ್ತು. ಆದರೆ ಇನ್ನೊಂದೆಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಪತ್ತೆಹಚ್ಚಿ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸರ್ಕಾರ ತಕ್ಷಣವೇ ಶಾಂತಿಯುತ ಪ್ರತಿಭಟನಾಕಾರರ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಹಿಂಪಡೆಯಬೇಕು.”
    • ಕಿರುಕುಳ ವಿರುದ್ಧ ಬಲವಾದ ಚೌಕಟ್ಟು:“ಅನೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಕರೆಗಳು ಬರುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಕಿರುಕುಳವನ್ನು ತಡೆಯಲು ಸಿಜೆಪಿ (CJP) ಬಲವಾದ ಕಾನೂನು ಚೌಕಟ್ಟನ್ನು ರೂಪಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಐನ್‌ಬದ್ಧ ಸಹಾಯ ಬೇಕಿದ್ದರೂ ನಮ್ಮ ವೆಬ್‌ಸೈಟ್ ಮೂಲಕ ನೇರವಾಗಿ ವಕೀಲರನ್ನು ಸಂಪರ್ಕಿಸಬಹುದು.”

    ಈ ನಡೆಯ ಪ್ರಮುಖ ಪರಿಣಾಮಗಳು

    1. ವಿದ್ಯಾರ್ಥಿಗಳಿಗೆ ಧೈರ್ಯ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೇ ನೇರವಾಗಿ ಬೆಂಬಲಕ್ಕೆ ನಿಂತಿರುವುದರಿಂದ ದೇಶಾದ್ಯಂತ ಪ್ರತಿಭಟನೆಯಲ್ಲಿ ಭಾಗವಹಿಸಿ ಆತಂಕದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ದೊಡ್ಡ ಕಾನೂನು ರಕ್ಷಣೆ ಸಿಕ್ಕಂತಾಗಿದೆ.
    2. ಸಂಘಟಿತ ಕಾನೂನು ಹೋರಾಟ: ವೆಬ್‌ಸೈಟ್ ಮೂಲಕ ದೇಶದ ನಾನಾ ಭಾಗಗಳ ವಕೀಲರು ಒಂದೇ ವೇದಿಕೆಗೆ ಬರುವುದರಿಂದ, ವಿದ್ಯಾರ್ಥಿಗಳ ವಿರುದ್ಧದ ಸುಳ್ಳು ಪ್ರಕರಣಗಳನ್ನು ಶೀಘ್ರವಾಗಿ ರದ್ದುಗೊಳಿಸಲು (Quash) ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಹಾದಿ ಸುಗಮವಾಗಿದೆ.
    Continue Reading

    Bantawala

    ಬಿ.ಸಿ. ರೋಡ್ ಲಾವಣ್ಯ ಕೊಲೆ ಪ್ರಕರಣ: ಎಫ್‌ಐಆರ್‌ನಲ್ಲಿದೆ ಘಟನೆಯ ಭೀಕರ ವಿವರ! ಆಸ್ಪತ್ರೆಯಲ್ಲಿ ಕಣ್ಣೀರಿನ ಅಂತಿಮ ನಮನ

    Published

    on

    ಬಂಟ್ವಾಳದ ಬಿ.ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿ ಲಾವಣ್ಯ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026 ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 78 (ದೌರ್ಜನ್ಯ/ಸತಾಯಿಸುವಿಕೆ), ಸೆಕ್ಷನ್ 126 (ಅಕ್ರಮ ತಡೆಹಿಡಿಯುವಿಕೆ) ಮತ್ತು ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರುದಾರರಾದ ಗೌತಮ್ ಅವರು ಪೊಲೀಸರಿಗೆ ನೀಡಿದ ಎಫ್‌ಐಆರ್‌ನಲ್ಲಿರುವ ಸಂಪೂರ್ಣ ವಿವರ ಹಾಗೂ ಮೃತದೇಹದ ಕೊನೆಯ ಪಯಣದ ಮಾಹಿತಿ ಇಲ್ಲಿದೆ:

    ಎಫ್‌ಐಆರ್ (FIR) ನಲ್ಲಿರುವ ಭೀಕರ ಸತ್ಯಾಂಶಗಳು

    ಹಿನ್ನೆಲೆ: ಉಳಿ ಗ್ರಾಮದ ಕಕ್ಯಪದವು ನಿವಾಸಿಯಾಗಿರುವ ಗೌತಮ್ ಅವರ ಪತ್ನಿ (ಚೈತ್ರಾ) ಹಾಗೂ ಪತ್ನಿಯ ತಂಗಿ ಲಾವಣ್ಯ ಇಬ್ಬರೂ ಕಲ್ಲಡ್ಕ ಪುಷ್ಪರಾಜ್ ನರ್ಸಿಂಗ್ ಹೋಮ್‌ನಲ್ಲಿ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದರು.

    ಘಟನೆಯ ದಿನ: ಗುರುವಾರ (ಜುಲೈ 16) ಲಾವಣ್ಯ ಅವರಿಗೆ ಹಗಲು ಪಾಳಿ ಕೆಲಸವಿದ್ದರೆ, ಆಕೆಯ ಅಕ್ಕ ಚೈತ್ರಾಗೆ ರಾತ್ರಿ ಪಾಳಿ ಕರ್ತವ್ಯವಿತ್ತು. ಗುರುವಾರ ಸಂಜೆ ಸುಮಾರು 5:45 ಗಂಟೆಗೆ ಚೈತ್ರಾ ಅವರು ಪತಿಯ (ಗೌತಮ್) ಮೊಬೈಲ್‌ಗೆ ಕರೆ ಮಾಡಿ, “ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಲಾವಣ್ಯ ಕಕ್ಯಪದವಿಗೆ ಬರಲು ಕುಳಿತುಕೊಂಡಿದ್ದು, ಆಕೆಗೆ ಚೇತನ್ ಎಂಬಾತನು ಕಿರುಕುಳ ನೀಡುತ್ತಿದ್ದಾನೆ. ನೀವು ತಕ್ಷಣ ಲಾವಣ್ಯಳ ಮೊಬೈಲ್‌ಗೆ ಕರೆ ಮಾಡಿ” ಎಂದು ತಿಳಿಸಿದ್ದಾರೆ.

    ಕೊನೆಯ ಕರೆ ಮತ್ತು ಕಿರುಚಾಟ: ಪತ್ನಿ ಹೇಳಿದ ತಕ್ಷಣ ಗೌತಮ್ ಅವರು ಲಾವಣ್ಯಳಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಲಾವಣ್ಯ, “ಚೇತನ್ ಎಂಬಾತನು ಕಿರುಕುಳ ನೀಡುತ್ತಿರುವುದು ಸತ್ಯ” ಎಂದು ಹೇಳುವಷ್ಟರಲ್ಲೇ ಆಕೆ ಜೋರಾಗಿ ಕಿರುಚುವುದು ಫೋನ್‌ನಲ್ಲಿ ಕೇಳಿಬಂದಿದೆ.

    ಸ್ನೇಹಿತನಿಗೆ ಮಾಹಿತಿ: ಆತಂಕಗೊಂಡ ಗೌತಮ್ ಅವರು ಕೂಡಲೇ ಬಿ.ಸಿ. ರೋಡ್‌ನಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಸ್ನೇಹಿತ ಅಜಯ್ ಎಂಬವರಿಗೆ ಕರೆ ಮಾಡಿ, “ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಚೇತನ್ ಎಂಬಾತ ನನ್ನ ಪತ್ನಿಯ ತಂಗಿ ಲಾವಣ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ, ನೀನು ಕೂಡಲೇ ಅಲ್ಲಿಗೆ ಹೋಗು” ಎಂದು ಹೇಳಿದ್ದಾರೆ. ಅಜಯ್ ಅಲ್ಲಿಗೆ ಹೋಗುತ್ತೇನೆಂದು ಹೇಳಿ ಫೋನ್ ಕಟ್ ಮಾಡಿದ್ದಾರೆ.

    ಕೊಲೆಯಾದ ಸುದ್ಧಿ: ಸುಮಾರು 10 ನಿಮಿಷಗಳ ನಂತರ ಗೌತಮ್ ಅವರಿಗೆ ಕರೆ ಮಾಡಿದ ಅಜಯ್, “ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಕೊಲೆಯಾಗಿದೆ, ನೀನು ಕೂಡಲೇ ಬಾ” ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗೌತಮ್ ಅವರು ಬೆಳ್ತಂಗಡಿ ಸರಳಿಕಟ್ಟೆಯಿಂದ ಊರವರಾದ ಸುರೇಶ್ ಮತ್ತು ವಸಂತ ಎಂಬವರೊಂದಿಗೆ ಘಟನಾ ಸ್ಥಳಕ್ಕೆ ಬರುತ್ತಿರುವಾಗ, ಲಾವಣ್ಯರ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ತಕ್ಷಣ ಅವರು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಬಂದು ಲಾವಣ್ಯರ ಮೃತದೇಹವನ್ನು ನೋಡಿದ್ದಾರೆ.

    ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಯಲ್ಲಿ ಭಾವುಕ ಅಂತಿಮ ನಮನ

    ಬಿ.ಸಿ. ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಭಗ್ನ ಪ್ರೇಮಿ ಚೇತನ್‌ನಿಂದ ಕೊಲೆಗೀಡಾದ ಲಾವಣ್ಯಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ, ಆಕೆ ಉದ್ಯೋಗದಲ್ಲಿದ್ದ ಕಲ್ಲಡ್ಕದ ಪುಷ್ಪರಾಜ್ ಆಸ್ಪತ್ರೆಗೆ ತರಲಾಯಿತು. ಆಸ್ಪತ್ರೆಯ ಆವರಣದಲ್ಲಿ ನಡೆದ ಕೊನೆಯ ಪಯಣದ ಭಾವುಕ ದೃಶ್ಯಗಳು ವೀಡಿಯೊದಲ್ಲಿವೆ.

    ಸಹೋದ್ಯೋಗಿಗಳ ಕಣ್ಣೀರು: ಲಾವಣ್ಯ ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆಯ ಮುಂಭಾಗಕ್ಕೆ ಮೃತದೇಹ ತರುತ್ತಿದ್ದಂತೆ, ಆಕೆಯ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಕಣ್ಣೀರು ಹಾಕುತ್ತಾ ಅಂತಿಮ ನಮನ ಸಲ್ಲಿಸಿದರು.

    ಶೋಕ ಸಾಗರದಲ್ಲಿ ಸಾರ್ವಜನಿಕರು: ಹೆದ್ದಾರಿಯ ಮೇಲ್ಸೇತುವೆಯ ಕೆಳಗಿರುವ ಆಸ್ಪತ್ರೆಯ ಮುಂಭಾಗದಲ್ಲಿ ನೂರಾರು ಸಾರ್ವಜನಿಕರು ಹಾಗೂ ಊರವರು ಶೋಕತಪ್ತರಾಗಿ ನೆರೆದಿದ್ದರು. ಹೂವಿನ ಹಾರಗಳಿಂದ ಅಲಂಕರಿಸಲಾಗಿದ್ದ ಲಾವಣ್ಯಳ ಪಾರ್ಥಿವ ಶರೀರವನ್ನು ಕಂಡು ನೆರೆದಿದ್ದವರು ಮರುಗಿದರು.

    ಹುಟ್ಟೂರಿಗೆ ರವಾನೆ: ಆಸ್ಪತ್ರೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಅಂತಿಮ ದರ್ಶನ ಪಡೆದ ಬಳಿಕ, ಮೃತದೇಹವನ್ನು ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ ಆಂಬ್ಯುಲೆನ್ಸ್ ಒಳಗೆ ಸಾಗಿಸಲಾಯಿತು. ಅಲ್ಲಿಂದ ಆಕೆಯ ಹುಟ್ಟೂರಾದ ಉಳಿ ಗ್ರಾಮದ ಕಕ್ಯಪದವಿಗೆ ಅಂತ್ಯಕ್ರಿಯೆಗಾಗಿ ತಗೆದುಕೊಂಡು ಹೋಗಲಾಯಿತು.

    ಒಂದು ಕಡೆ ಏಕಪಕ್ಷೀಯ ಪ್ರೀತಿಯ ಹುಚ್ಚು ಸಾಲದೆ ಯುವತಿಯನ್ನು ಸಾರ್ವಜನಿಕವಾಗಿ ತಡೆದು ಕೊಲೆ ಮಾಡಿದ ಆರೋಪಿ ಚೇತನ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

    Continue Reading

    Trending

    Copyright © 2025 Deevatige

    error: Content is protected !!