government
ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲಿಯೂ ಅರ್ಜಿ ಸಲ್ಲಿಸಬಹುದು; ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ; ಪುತ್ತೂರು ಶಾಸಕ ಅಶೋಕ್ ರೈ ನಿವೇಶನ ಹಂಚಿಕೆ ಕಾರ್ಯಕ್ಕೆ ಸರಕಾರದಿಂದ ಪೂರ್ಣ ಬೆಂಬಲ
ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನು ಮುಂದಕ್ಕೆ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ನಿವೇಶನಕ್ಕೆ ಆಯಾ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿ ನಿವೇಶನದ ಕೊರತೆಯಿದ್ದಲ್ಲಿ ಪಕ್ಕದ ಗ್ರಾಮ ಅಥವಾ ನಿವೇಶನ ಪಡೆದುಕೊಳ್ಳಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಎಂದು ಕರ್ನಾಟಕ ಸರಕಾರ ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದ್ದು ಇದರಿಂದ ಪುತ್ತೂರು ಶಾಸಕ ಅಶೋಕ್ ರೈ ಅವರ ಬಡವರಿ ನಿವೇಶನ ಹಂಚಿಕೆ ಕನಸಿಗೆ ಸರಕಾರದಿಂದ ಪೂರ್ಣ ಬೆಂಬಲ ಸಿಕ್ಕಂತಾಗಿದೆ.

ಅಶೋಕ್ ರೈ ಶಾಸಕರಾದ ಬಳಿಕ ನಿವೇಶನ ರಹಿತ ಅರ್ಹ ಬಡ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಮಾಡಲು ಈಗಾಗಲೇ 18 ಗ್ರಾಮಗಳಲ್ಲಿ380 ಕ್ಕೂ ಮಿಕ್ಕಿ ಎಕ್ರೆ ಜಾಗವನ್ನು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿವೇಶನಕ್ಕೆ ಸರಕಾರಿ ಜಾಗ ದೊರೆತಿಲ್ಲ. ನಿವೇಶನ ರಹಿತ ಗ್ರಾಮದ ಫಲಾನುಭವಿಗಳಿಗೆ ಬೇರೆ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಆಯಾ ಗ್ರಾಮದವರು ಆಯಾ ಗ್ರಾಮದಲ್ಲಿ ಮಾತ್ರ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ತಕರಾರು ಇತ್ತು. ಈ ಬಗ್ಗೆ ಮಂಗಳವಾರದಂದು ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ ಅಧಿಕಾರಿಯನ್ನು ಭೇಟಿಯದ ಶಾಸಕರು ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಶಾಸಕರ ಕೋರಿಕೆ ಯನ್ನು ಮನ್ನಿಸಿದ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದ್ದು ಯಾವುದೇ ಫಲಾನುಭವಿಗಳು ನಿವೇಶನ ಹೊಂದಿರುವ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸುತ್ತೋಲೆಯನ್ನು ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವಂತೆ ಆದೇಶವನ್ನು ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ:
ಪುತ್ತೂರು ತಾಲ್ಲೂಕಿನ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆಗೆ ಕೆಲವು ಗ್ರಾಮ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಮೀನಿನ ಲಭ್ಯತೆ ಇಲ್ಲದ ಕಾರಣ ಜಮೀನು ಲಭ್ಯವಿರುವ ಬೇರೆ ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸುವ ಕುರಿತು ನಿರ್ದೇಶನ ನೀಡಲು ಕೋರಿ ಉಲ್ಲೇಖ(1&2)ರಲ್ಲಿ ಕೋರಲಾಗಿದೆ.

ಉಲ್ಲೇಖ(3)ರ ಪತ್ರದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಇವರು ಸರ್ಕಾರದ ಸುತ್ತೋಲೆ ಪ್ರಕಾರ ಫಲಾನುಭವಿ ಸಂಬಂಧಪಟ್ಟ ಗ್ರಾಮದರಾಗಿರಬೇಕು ಎಂಬುದಾಗಿದ್ದು, ಕೆಲವು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಬೇರೆ ಗ್ರಾಮದವರಿಗೆ ನಿವೇಶನ ನೀಡುವ ಕುರಿತು ಅಕ್ಷೇಪ ವ್ಯಕ್ತಪಡಿಸಿದ್ದು, ಬೇರೆ ಗ್ರಾಮದ ನಿವೇಶನ ರಹಿತ ಫಲಾನುಭವಿಗಳನ್ನು ಲಾಗಿನ್ ನಲ್ಲಿ ನಮೂದಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಸರ್ಕಾರದ ಮನೆ ಮಾರ್ಗಸೂಚಿಗಳನ್ವಯ ನಿವೇಶನರಹಿತರು ಸಂಬಂಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಆದರೆ ಸದರಿ ಪ್ರಕರಣದಲ್ಲಿ ನಿವೇಶನರಹಿತರು ವಾಸವಿರುವ ಗ್ರಾಮ ಪಂಚಾಯತಿ/ಗ್ರಾಮ/ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯನ್ನು ಹೊರುತಪಡಿಸಿ, ಬೇರೆ ಸ್ಥಳಗಳಲ್ಲಿ ನಿವೇಶನ ಹಂಚಿಕೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದು, ಈ ಕೆಳಕಂಡಂತೆ ಕ್ರಮವಹಿಸಲು ಕೋರಿದೆ.

1. ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರಿಗೆ ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆಗೆ ಕ್ರಮವಹಿಸುವ ಮೊದಲು ನಿವೇಶನರಹಿತರು ವಾಸವಿದ್ದ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂಚಿಕೆಗೆ ಜಮೀನು/ನಿವೇಶನ ಲಭ್ಯವಿಲ್ಲದಿರುವ ಖಚಿತಪಡಿಸಿಕೊಳ್ಳುವುದು.

2.ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರು ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಪಡೆಯಲು ಹಾಗೂ ಆ ಸ್ಥಳದಲ್ಲಿ ವಾಸಿಸಲು ಫಲಾನುಭವಿಗಳು ಒಪ್ಪಿಗೆ ನೀಡಿರುವ ಲಿಖಿತ ದಾಖಲೆಗಳೊಂದಿಗೆ

ಗ್ರಾಮಸಭೆ/ನಗರ ಆಶ್ರಯ ಸಮಿತಿಯಲ್ಲಿ ಚರ್ಚಿಸಿ, ಜಮೀನು/ನಿವೇಶನ ಲಭ್ಯವಿರುವ ಸ್ಥಳದಲ್ಲಿ ನಿವೇಶನ ಹಂಚಿಕೆಗೆ ತೀರ್ಮಾನಿಸಿ ಠರಾವು ಹೊರಡಿಸುವುದು.
3.ಜಮೀನು ಲಭ್ಯವಿರುವ ಯಾವುದೇ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹೆಚ್ಚುವರಿಯಾಗಿ ಉಳಿದಿರುವ ನಿವೇಶನಗಳಲ್ಲಿಮಾತ್ರ ಸದರಿ ನಿವೇಶನರಹಿತರನ್ನು ಪರಿಗಣಿಸಬಹುದಾಗಿದೆ.
CONGRESS
ಸಚಿವ ಸ್ಥಾನ ಸಿಗದ್ದಕ್ಕೆ ಕಾಂಗ್ರೆಸ್ನಲ್ಲಿ ತೀವ್ರ ಬಂಡಾಯ: ಶಾಸಕ ಸ್ಥಾನಕ್ಕೆ ಬೇಳೂರು ಗೋಪಾಲಕೃಷ್ಣ, ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!
ಬೆಂಗಳೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಬೆಂಕಿ ಭುಗಿಲೆದ್ದಿದೆ. ಬಯಸಿದ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಇಬ್ಬರು ಹಿರಿಯ ಶಾಸಕರಾದ ಸಾಗರ ಕ್ಷೇತ್ರದ ಬೇಳೂರು ಗೋಪಾಲಕೃಷ್ಣ ಹಾಗೂ ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ನನಗೆ ಅನ್ಯಾಯವಾಗಿದೆ, ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ: ಬೇಳೂರು ಗೋಪಾಲಕೃಷ್ಣ ಆಕ್ರೋಶ
ಸಚಿವ ಸ್ಥಾನ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, “ಸಂಪುಟ ವಿಸ್ತರಣೆ ಹೆಸರಿನಲ್ಲಿ ನನಗೆ ತೀವ್ರ ಅನ್ಯಾಯವಾಗಿದೆ. ಕೊನೆಯ ಕ್ಷಣದವರೆಗೂ ಪಟ್ಟಿಯಲ್ಲಿದ್ದ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ” ಎಂದು ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗಾಡ್ಫಾದರ್ ಹಾಗೂ ಪ್ರಭಾವ ಇರುವವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ನಿಷ್ಠಾವಂತ ಶಾಸಕರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಸಹಿಸಿಕೊಂಡು ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ತಳೆದಿದ್ದೇನೆ” ಎಂದು ತಿಳಿಸಿರುವ ಅವರು, ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಮೂರು ಬಾರಿ ಶಾಸಕರಾಗಿದ್ದರೂ ಕೈತಪ್ಪಿದ ಸಚಿವ ಸ್ಥಾನ: ಯಶವಂತರಾಯಗೌಡ ಪಾಟೀಲ್ ರಾಜೀನಾಮೆ
ಇತ್ತ ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಮೂರು ಬಾರಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಅವರೂ ಸಹ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕಾಗಿ ಸತತವಾಗಿ ಶ್ರಮಿಸಿದರೂ ಹಾಗೂ ಹಿರಿಯ ಶಾಸಕರಾಗಿದ್ದರೂ ತಮಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದಿರುವುದು ಅವರ ಬೆಂಬಲಿಗರು ಮತ್ತು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರಕ್ಕೆ ಹೆಚ್ಚಿದ ರಾಜಕೀಯ ಬಿಸಿ
ಸಂಪುಟ ವಿಸ್ತರಣೆಯ ಬೆನ್ನಲ್ಲೇ ಒಂದೇ ಬಾರಿಗೆ ಇಬ್ಬರು ಪ್ರಮುಖ ಶಾಸಕರು ರಾಜೀನಾಮೆ ನಿರ್ಧಾರ ಕೈಗೊಂಡಿರುವುದು ಕಾಂಗ್ರೆಸ್ ಸರ್ಕಾರ ಹಾಗೂ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಲವು ಅಸಮಾಧಾನಿತ ಶಾಸಕರು ಒಗ್ಗೂಡುತ್ತಿರುವ ಸುಳಿವು ಸಿಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಮುಂದಿನ ನಡೆ ಕುತೂಹಲ ಮೂಡಿಸಿದೆ.

Condolences
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”
ದೆಹಲಿಯ ಜಂತರ್ ಮಂತರ್ನಲ್ಲಿ ದೇಶದ ನೀಟ್ (NEET) ಪರೀಕ್ಷಾರ್ಥಿಗಳು ಮತ್ತು ಯುವಜನತೆ ನಡೆಸಿದ ಪ್ರತಿಭಟನೆಯು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸುಗಳು ನುಚ್ಚುನೂರಾದ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಘಟನೆಯೂ ನಡೆದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ ಮತ್ತು ಅದಕ್ಕೆ ವಿರೋಧ ಪಕ್ಷಗಳು ಹಾಗೂ ಗಣ್ಯರ ಪ್ರತಿಕ್ರಿಯೆಗಳು ರಾಜಕೀಯ ಕಾವನ್ನು ಮತ್ತಷ್ಟು ಹೆಚ್ಚಿಸಿವೆ.
1. ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ವಿದ್ಯಾರ್ಥಿಗಳ ಆಕ್ರೋಶ
ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದತಿ ಹಾಗೂ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ನಿರಾಶೆಯಿಂದಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರ ನಿರಂತರ ಆಕ್ರೋಶದ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತಮ್ಮ ಭವಿಷ್ಯವೇ ಕತ್ತಲೆಯಾಗಿದೆ ಎಂದು ಮನನೊಂದು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತು.
2. ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ
ಪ್ರತಿಭಟನೆಯ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನೀಯ ಮಾತುಗಳ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಪ್ರಧಾನಿ ಹೇಳಿಕೆ: “ದಾರಿತಪ್ಪಿದ ಮಕ್ಕಳಿಗೆ ಸರಿಯಾದ ಹಾದಿ ತೋರಿಸಬೇಕು, ಕಾನೂನು ಕ್ರಮವೇ ಪ್ರತಿಯೊಂದಕ್ಕೂ ಪರಿಹಾರವಲ್ಲ. ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದ ಯುವಕರನ್ನು ನಾನು ಕ್ಷಮಿಸುತ್ತೇನೆ. ನಿಂದನೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ” ಎಂದು ಭಾವುಕರಾಗಿ ಸಮಾಜಕ್ಕೆ ಮನವಿ ಮಾಡಿದರು.
ಪ್ರಧಾನಿ ಮೋದಿ ಅವರ ʼಕ್ಷಮೆಯʼ ಹೇಳಿಕೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗುತ್ತಿರುವ ಎಫ್ಐಆರ್ ಗಳ ನಡುವಿನ ವ್ಯತ್ಯಾಸವನ್ನು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ

3. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ರಾಹುಲ್ ಗಾಂಧಿ ಅವರು ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳನ್ನು ಹಾಗೂ ಮಹಾಬಲಿಪುರಂನಲ್ಲಿ ಸಂಕಷ್ಟಕ್ಕೊಳಗಾದ ಪೋಷಕರನ್ನು ನೇರವಾಗಿ ಭೇಟಿಯಾಗಿ ಸಾಂತ್ವನ ಹೇಳಿದರು. ಪ್ರಧಾನಿ ಮೋದಿ ವೀಡಿಯೋಗೆ ತಿರುಗೇಟು ನೀಡಿದ ಅವರು:
ಕ್ಷಮೆಯ ಅಗತ್ಯವಿಲ್ಲ, ಕ್ಷಮೆಯಾಚನೆ ಬೇಕು: “ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವು ಪದಗಳಿಗೆ ಸಿಗದಂತದ್ದು. ಕಳಪೆ ಶಿಕ್ಷಣ ವ್ಯವಸ್ಥೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಿದೆ. ಪ್ರಧಾನಿಯವರು ಇದುವರೆಗೆ ನೊಂದ ಯಾವುದೇ ಪೋಷಕರನ್ನಾಗಲಿ ಅಥವಾ ಭವಿಷ್ಯ ಹಾಳಾದ ವಿದ್ಯಾರ್ಥಿಗಳನ್ನಾಗಲಿ ಭೇಟಿಯಾಗಿಲ್ಲ.”
“ಭಾರತದ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ‘ಕ್ಷಮೆ’ ಬೇಕಿಲ್ಲ, ಬದಲಾಗಿ ಪ್ರಧಾನಿಯವರೇ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
4. ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಖಾರವಾದ ಟೀಕೆ
ಪ್ರಧಾನಿ ಅವರ ವೀಡಿಯೋವನ್ನು “ರೀಲ್” ಎಂದು ಕರೆದಿರುವ ಬಿ.ಕೆ. ಹರಿಪ್ರಸಾದ್, ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ:
“ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನಲು ಪ್ರಧಾನಿ ಮೋದಿ ಉದಾಹರಣೆ. ದಶಕಗಳಿಂದ ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ಮೌನಸಮ್ಮತಿ ನೀಡಿದವರು ಇಂದು ಮಾತೃಗೌರವದ ಪ್ರವಚನ ನೀಡುತ್ತಿರುವುದು ಬೆಂಕಿ ಹಚ್ಚಿದವನೇ ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ.”
ತಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜೀವ್ ಗಾಂಧಿಯವರ ಹತ್ಯೆಯಂತಹ ಅತ್ಯಂತ ಭೀಕರ ದುರಂತವನ್ನು ಅನುಭವಿಸಿದರೂ, ಪ್ರತಿಕ್ರಿಯೆಯಾಗಿ ದ್ವೇಷ ಸಾಧಿಸದೆ ಕ್ಷಮೆಯನ್ನು ಆರಿಸಿಕೊಂಡಿದ್ದರು. ಅದು ಕ್ಯಾಮೆರಾ ಮುಂದೆ ಮಾಡಿದ ಆಟವಲ್ಲ, ಅವರ ಸಂಸ್ಕಾರ ಎಂದು ನೆನಪಿಸಿದರು.
5. ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಶ್ನೆ
ಪ್ರಧಾನಿಯವರ ಕ್ಷಮಾದಾನದ ಹೇಳಿಕೆಯನ್ನು ನೇರವಾಗಿ ಪ್ರಶ್ನೆ ಮಾಡಿರುವ ಅಭಿಜಿತ್ ದೀಪ್ಕೆ:
“ಸರ್, ನೀವು ಕೇವಲ ರೀಲ್ಸ್ನಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕ್ಷಮಿಸುತ್ತೀರಾ ಅಥವಾ ಅವರ ಮೇಲೆ ದಾಖಲಾಗಿರುವ ಎಫ್ಐಆರ್ ಹಾಗೂ ಕೇಸ್ಗಳನ್ನು ಹಿಂಪಡೆಯುತ್ತೀರಾ?” ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದ ನೋಯ್ಡಾ ಮೂಲದ ಹದಿಹರೆಯದ ಯುವತಿಯ ಮೇಲಿನ ಎಫ್ಐಆರ್ ಪ್ರಸ್ತಾಪಿಸಿದ ಅವರು, ಬಿಜೆಪಿ ಐಟಿ ಸೆಲ್ನ ಸದಸ್ಯರು ಮಹಿಳೆಯರನ್ನು ನಿಂದಿಸಿದಾಗ ಅವರ ಮೇಲೂ ಇದೇ ರೀತಿ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.
6. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿಕೆ
ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣ ‘X’ ನಲ್ಲಿ ಧ್ವನಿ ಎತ್ತಿದ್ದಾರೆ:
ಪೋಷಕರ ದೃಷ್ಟಿಕೋನ: “ಮಕ್ಕಳು ಹಿರಿಯರಿಗೆ ಕೋಪದಲ್ಲಿ ಅಥವಾ ಆಕ್ರೋಶದಲ್ಲಿ ಅವಾಚ್ಯ ಪದ ಬಳಸಿದಾಗ ಹಿರಿಯರಾಗಿ ಅವರಿಗೆ ಎಚ್ಚರಿಕೆ ನೀಡಿ ತಿದ್ದಬೇಕೇ ಹೊರತು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಪೋಲಿಸ್ ದೂರು ನೀಡುವುದು ಅಥವಾ ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮ, ಶಿಕ್ಷಣ ಸಚಿವರ ರಾಜೀನಾಮೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಪೋಷಕರ ಆಕ್ರಂದನದಿಂದ ತತ್ತರಿಸಿರುವ ಯುವಜನತೆಗೆ ಪ್ರಧಾನಿಯವರ ‘ಕ್ಷಮೆ’ಗಿಂತ ಹೆಚ್ಚಾಗಿ ನ್ಯಾಯ ಬೇಕಿದೆ ಎನ್ನುವುದು ವಿರೋಧ ಪಕ್ಷಗಳು ಮತ್ತು ಹೋರಾಟಗಾರರ ಸ್ಪಷ್ಟ ನಿಲುವಾಗಿದೆ.

F.I.R.
ಮರಳು ಮಾಫಿಯಾಗೆ ‘ಗೂಂಡಾ ಕಾಯ್ದೆ’ ಶಾಕ್: ಸುಮ್ಮನೆ ಕೂರುವ ಖಾಕಿ ಪಡೆಗೂ ಬಿತ್ತು ಕಠಿಣ ಬಿಸಿ!
ರಾಜ್ಯದಲ್ಲಿ ಅಕ್ರಮ ಮರಳು ದಂಧೆಗೆ ಇನ್ಮುಂದೆ ಸಂಪೂರ್ಣ ಬ್ರೇಕ್! ನಿಯಮ ಮೀರಿದರೆ ಜೈಲು ಗ್ಯಾರಂಟಿ, ಕಣ್ಣು ಮುಚ್ಚಿ ಕುಳಿತರೆ ಅಧಿಕಾರಿಗಳಿಗೂ ತೂಗುಕತ್ತಿ!
ಬೆಂಗಳೂರು: ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಾ, ಕಾನೂನು ಸುವ್ಯವಸ್ಥೆಗೆ ಸವಾಲೊಡ್ಡುತ್ತಿದ್ದ ಮರಳು ಮಾಫಿಯಾದ ಬಹುತೇಕ ಕೊನೆಗಾಲ ಹತ್ತಿರವಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಹಾಗೂ ಅಕ್ರಮ ಸಾಗಾಟದ ವಿರುದ್ಧ ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಕಾಯ್ದೆಯ ಅಸ್ತ್ರವನ್ನು ಪ್ರಯೋಗಿಸಲು ಮುಹೂರ್ತವಿಟ್ಟಿದೆ. ಇನ್ಮುಂದೆ ಧಂದೆಯಲ್ಲಿ ತೊಡಗುವ ಕಿಂಗ್ಪಿನ್ಗಳಿಗೆ ನೇರವಾಗಿ ‘ಗೂಂಡಾ ಕಾಯ್ದೆ’ ಅಡಿಯಲ್ಲೇ ಖೆಡ್ಡಾ ತೋಡಲು ನಿರ್ಧರಿಸಲಾಗಿದೆ!
ಗೃಹ ಸಚಿವರಿಂದ ಕಟ್ಟುನಿಟ್ಟಿನ ಸೂಚನೆ, ಡಿಜಿ-ಐಜಿಪಿ ಎಂ.ಎ. ಸಲೀಂ ಕಡೆಯಿಂದ ಸುತ್ತೋಲೆ!
ಗೃಹ ಸಚಿವರ ನಿರ್ದೇಶನದ ಮೇರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು, ಎಸ್ಪಿಗಳು ಹಾಗೂ ಕಮಿಷನರ್ಗಳಿಗೆ ಅತ್ಯಂತ ಗಂಭೀರ ಸ್ವರೂಪದ ವಿಶೇಷ ಸುತ್ತೋಲೆ ಹೊರಡಿಸಿದ್ದಾರೆ.

“ಅಕ್ರಮ ಮರಳು ಗಣಿಗಾರಿಕೆ ಕೇವಲ ರಾಜ್ಯದ ಸಂಪತ್ತಿನ ಲೂಟಿಯಷ್ಟೇ ಅಲ್ಲ, ಅದು ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆಗೆ ಬಿದ್ದ ದೊಡ್ಡ ಪೆಟ್ಟು. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.” – ಪ್ರಿಯಾಂಕ್ ಖರ್ಗೆ, ಗೃಹ ಸಚಿವರು
ಮಾಫಿಯಾಗೆ ಮಾತ್ರವಲ್ಲ, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ!
ಇಲ್ಲಿಯವರೆಗೆ ಅಕ್ರಮ ಮರಳು ಸಾಗಾಟ ಕಂಡು ಕಂಡರೂ ಕಾಣದಂತೆ, ಮಾಫಿಯಾ ಜೊತೆ ಶಾಮೀಲಾಗಿ ಕಣ್ಮುಚ್ಚಿ ಕುಳಿತುಕೊಳ್ಳುತ್ತಿದ್ದ ಪೊಲೀಸ್ ಅಧಿಕಾರಿಗಳಿಗೂ ಈಗ ನಡುಕ ಶುರುವಾಗಿದೆ!
ಪೊಲೀಸರ ಮೇಲೇ ಬೀಳಲಿದೆ ಗದಾಪ್ರಹಾರ: ಅಕ್ರಮ ಮರಳು ದಂಧೆ ನಡೆಯುವ ವ್ಯಾಪ್ತಿಯ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ಇದಕ್ಕೆ ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಕರ್ತವ್ಯ ಲೋಪ ಎಸಗುವ ಅಥವಾ ಮಾಫಿಯಾಗೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧವೂ ಕಠಿಣ ಇಲಾಖಾ ತನಿಖೆ ಮತ್ತು ಶಿಸ್ತುಕ್ರಮ ಕೈಗೊಳ್ಳಲಾಗುವುದು.
ಕಟ್ಟುನಿಟ್ಟಿನ ಗಡಿ ಕಾವಲು & ಜಂಟಿ ಕಾರ್ಯಾಚರಣೆ:
ಟಾಸ್ಕ್ ಫೋರ್ಸ್ ಅಲರ್ಟ್: ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಕಾರ್ಯಪಡೆಗಳು (Task Force) ಇನ್ಮುಂದೆ ದಿನದ 24 ಗಂಟೆಯೂ ಸಕ್ರಿಯವಾಗಿರಲಿವೆ. ಅಕ್ರಮ ಗಣಿಗಾರಿಕೆ ನಡೆಯುವ ‘ಹಾಟ್ಸ್ಪಾಟ್’ಗಳನ್ನು ಗುರುತಿಸಿ ನಿರಂತರ ನಿಗಾ ವಹಿಸಲಾಗುತ್ತದೆ.
ಇಲಾಖೆಗಳ ಸಮನ್ವಯ: ಗಣಿ ಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿವೆ.
ರಾಜ್ಯಾಂತರ ಗಡಿಯಲ್ಲಿ ಸಿಂಹಸ್ವಪ್ನ: ಅಂತರರಾಜ್ಯ ಗಡಿಭಾಗಗಳಲ್ಲಿ ಹಗಲು-ರಾತ್ರಿ ಕಟ್ಟುನಿಟ್ಟಿನ ಚೆಕ್ಪೋಸ್ಟ್ ತಪಾಸಣೆ ನಡೆಸಲಿದ್ದು, ನೆರೆ ರಾಜ್ಯಗಳಿಗೆ ಅಕ್ರಮವಾಗಿ ಮರಳು ಸಾಗಿಸುವ ಲಾರಿ, ಟಿಪ್ಪರ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಖಡಕ್ ಎಚ್ಚರಿಕೆ:
ಇಷ್ಟು ದಿನ ಕಾನೂನಿನ ಕಣ್ಣಿಗೆ ಮಣ್ಣೆರಚಿ ನದಿ ತೀರಗಳನ್ನು ಕೊಳ್ಳೆ ಹೊಡೆಯುತ್ತಿದ್ದ ಮರಳು ದಂಧೆಕೋರರಿಗೆ ಈಗ ಕಾನೂನಿನ ನೈಜ ಶಕ್ತಿ ಏನೆಂಬುದು ತಿಳಿಯಲಿದೆ. ಅಕ್ರಮವಾಗಿ ಮರಳು ಎತ್ತಿದರೆ, ಸಂಗ್ರಹಿಸಿದರೆ ಅಥವಾ ಸಾಗಿಸಿದರೆ ಜೈಲು ಶಿಕ್ಷೆ ಹಾಗೂ ಆಸ್ತಿ ಜಪ್ತಿಯಂತಹ ಭಾರಿ ಬೆಲೆ ತೆರಬೇಕಾಗುತ್ತದೆ!
ಮಾಫಿಯಾದ ಆಟ ಇನ್ಮುಂದೆ ನಡೆಯಲ್ಲ… ಕಾನೂನಿನ ಬಲೆಗೆ ಬೀಳುವುದು ಖಚಿತ!
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
