Bantawala
ವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
ಹೌದು..ತುಳುನಾಡಿನ ಪರಂಪರೆಯೇ ಹೀಗೆ..ಎಲ್ಲೂ ನ್ಯಾಯ ಸಿಗದಿದ್ದಾಗ ಕೊನೆಯದಾಗಿ ನೊಂದವರು ಹೋಗುವುದು ದೈವದ ಸನ್ನಿಧಿಗೆ..ಇದು ತುಳುನಾಡಿನಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ. ನಮ್ಮ ಸಮಾಜದಲ್ಲಿ ದೈವಭಕ್ತಿ ಮತ್ತು ನಂಬಿಕೆ ಅನಾದಿಕಾಲದಿಂದಲೂ ಮಹತ್ವ ಪಡೆದಿದೆ. ಇತ್ತೀಚೆಗೆ ಕರಾವಳಿ ಪ್ರದೇಶದ ವಿಟ್ಲದಲ್ಲಿ ನಡೆದ ಒಂದು ಘಟನೆ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ.
ಮನೆಯಲ್ಲಿದ್ದ ಎರಡು ಗೋವುಗಳನ್ನು ಕಳ್ಳ ಕದ್ದು ಖಸಾಯಿಖಾನೆಗೆ ಮಾರಾಟ ಮಾಡಿದಾಗ, ಗೋವುಗಳನ್ನು ಕಳೆದುಕೊಂಡ ಮಾಲಿಕರು ಪೊಲೀಸರಿಗೆ ದೂರು ನೀಡಿದರೂ, ಕಳ್ಳನ ಪತ್ತೆ ಸಾಧ್ಯವಾಗಲಿಲ್ಲ. ನಿರಾಶರಾದ ಮಾಲಿಕರು ತಮ್ಮ ಮನೆಯ ಆರಾಧ್ಯ ದೈವವಾದ ಕಲ್ಲುರ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಂದೆ ಏನಾಯಿತು ಎಂಬುವುದೇ ದೈವದ ಕಾರಣೀಕ ಶಕ್ತಿ….ಕಲ್ಲುರ್ಟಿ ದೈವದ ಮುಂದೆ ಬಂದು ದನ ಕಳ್ಳತನ ಮಾಡಿದ್ದನ್ನು ತಪ್ಪೊಪ್ಪಿಕೊಂಡ ಕುಖ್ಯಾತ ಗೋಕಳ್ಳ..
ದೈವದ ನ್ಯಾಯ – ಭಕ್ತಿಗೆ ಎಚ್ಚರಿಕೆ ನೀಡಿದ ನಿಜ ಘಟನೆ
ಕಳೆದ ವರ್ಷ ಗಣೇಶ ಚತುರ್ಥಿ ದಿನದಂದು ವಿಟ್ಲ ಹೊರವಲಯದ ಮಂಗಲಪದವು ಭಜನಾ ಮಂದಿರದ ಪರಿಸರದಲ್ಲಿ ರಾತ್ರಿ ಹೊತ್ತು ಮಲಗಿದ್ದ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಎರಡು ಗಿರ್ ಜಾತಿಯ ಎತ್ತುಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಎತ್ತುಗಳ ಮಾಲಿಕ ಶಿವಾನಂದ ವಿಟ್ಲ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಬ್ರೆಝಾ ಕಾರಿನಲ್ಲಿ ಬಂದ ಕುಖ್ಯಾತ ಅಂತರ್ ರಾಜ್ಯ ಗೋಕಳ್ಳರು ಎರಡು ಎತ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಖಚಿತ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಎಷ್ಟೇ ಹುಡುಕಾಡಿದ್ದರೂ ಚಾಲಾಕಿ ಗೋಕಳ್ಳರು ಮಾತ್ರ ಈವರೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೈವದ ಮೊರೆ ಹೋದ ಮಾಲಿಕ ಶಿವಾನಂದ..
ತಮ್ಮ ಮನೆಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಗೋವುಗಳನ್ನು ಸಲಹುತ್ತಿರುವ ನ್ಯಾಯವಾದಿ ಶಿವಾನಂದ ವಿಟ್ಲ ಎತ್ತುಗಳು ನಾಪತ್ತೆಯಾದ ಬಳಿಕ ತೀವ್ರವಾಗಿ ನೊಂದುಕೊಂಡಿದ್ದರು. ಇದಾದ ಕೆಲದಿನಗಳ ಬಳಿಕ ನಾಪತ್ತೆಯಾಗಿದ್ದ ರಾಮ-ಲಕ್ಷ್ಮಣ ಜೋಡಿ ಎತ್ತುಗಳು ಮರಳಿ ಬರುವ ಆಸೆಗಳೇ ಕಮರಿಹೋಗಿತ್ತು. ಅಂತಿಮವಾಗಿ ತಾವು ನಂಬುವ ಕೆಲಿಂಜ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ಮಡಿವಾಳ ಕೋಡಿ ಕೆಳಗಿನಕೆಲಿಂಜದ ಕಲ್ಲುರ್ಟಿ ದೈವದ ಮುಂದೆ ಕಣ್ಣೀರು ಸುರಿಸಿ ಗೋಕಳ್ಳರಿಗೆ ನೀನೇ ಸರಿಯಾದ ಶಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು.
ಗೋಕಳ್ಳರಿಗೆ ಮುನಿದ ದೈವ..
ಗೋಕಳ್ಳರು ಯಾರು, ಎಲ್ಲಿಯವರೆಂಬ ಬಗ್ಗೆ ಸಾರ್ವಜನಿಕವಾಗಿ ಸುದ್ದಿ ಹರಿದಾಡುತ್ತಿದ್ದರೂ ಪೊಲೀಸರ ಕೈಗೆ ಮಾತ್ರ ಖದೀಮರು ಸಿಗದೇ ಕಣ್ಣುಮುಚ್ಚಾಲೆ ಆಡುತ್ತಿದ್ದರು. ಮಾಲಿಕ ಶಿವಾನಂದರು ದೈವದ ಮೊರೆ ಹೋದ ಕೆಲ ದಿನಗಳಲ್ಲೇ ಕುಖ್ಯಾತ ಗೋಕಳ್ಳರ ಕಾರು ಗೋವುಗಳನ್ನು ಕದ್ದು ತರುತ್ತಿದ್ದಾಗ ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿ ಹೊಡೆದು ಅಲ್ಲಿನ ಪೊಲೀಸರ ವಶವಾಗಿತ್ತು. ಇದಾದ ಕೆಲದಿನಗಳ ಬಳಿಕ ಅದೇ ಗೋಕಳ್ಳರು ಕೇರಳದಲ್ಲಿ ಪೊಲೀಸರ ಬಲೆಗೆ ಸಿಲುಕಿ ಹೈರಾಣರಾದರು.
ಕೈಕೊಟ್ಟ ಅನಾರೋಗ್ಯ..
ಗೋಕಳ್ಳರಿಗೆ ಒಂದರ ಮೆಲೊಂದು ಬರಸಿಡಿಲಿನಂತೆ ಕಷ್ಟಗಳು ಬೆನ್ನುಬಿದ್ದವು. ಐವರ ತಂಡದ ಗೋಕಳ್ಳರ ಮುಖಂಡನಿಗೆ ಅನಾರೋಗ್ಯ ಕಾಡತೊಡಗಿತು. ರಕ್ತ ವಾಂತಿಯಿಂದ ಆರಂಭವಾದ ಅನಾರೋಗ್ಯ ಈತನ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿತು. ರಾತ್ರಿ ಹೊತ್ತು ಮಲಗಿದ್ದಲ್ಲಿಯೇ ಕಿರುಚಾಟ, ಚೀರಾಟ ಆರಂಭವಾಗಿ ಅಕ್ಷರಶಃ ಮಾನಸಿಕ ರೋಗಿಯಂತಾಗಿದ್ದಾನೆ.
ಹಲವಾರು ಕಡೆಗಳಲ್ಲಿನ ತಜ್ಞ ವೈದ್ಯರ ಬಳಿ ಕರೆದೊಯ್ದು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿದರೂ ಯಾವುದೇ ಫಲಿತಾಂಶವಿಲ್ಲ. ಕೊನೆಗೆ ತಮ್ಮದೇ ಧರ್ಮಗುರುವೊಬ್ಬರ ಬಳಿಗೆ ಅನಾರೋಗ್ಯ ಪೀಡಿತನ ಕರೆದೊಯ್ದು ವಿಚಾರ ತಿಳಿಸಿದ್ದಾರೆ. ಆ ಸಮಯ ಈತನ ಹಿನ್ನೆಲೆ ಕೆದಕಿದ ಪ್ರಸಿದ್ಧ ಧರ್ಮಗುರು ಕಲ್ಲುರ್ಟಿ ದೈವದ ಶಾಪ ವಿಮೋಚನೆ ಮಾಡಬೇಕೆಂದೂ ಇಲ್ಲವಾದರೆ ಕೆಲ ದಿನಗಳಲ್ಲೇ ರಕ್ತವಾಂತಿ ಮಾಡಿ ಸಾಯುವ ಬಗ್ಗೆ ಮುನ್ಸೂಚನೆ ನೀಡಿದ್ದರೆನ್ನದಾಗಿದೆ.
ದೈವದ ಮುಂದೆ ತಪ್ಪೊಪ್ಪಿಕೊಂಡ ಗೋಕಳ್ಳ..
ಧರ್ಮ ಗುರುವಿನ ಅಣತಿಯಂತೆ ಗೋಕಳ್ಳತನ ನಡೆಸಿದ ವಿಟ್ಲ ಠಾಣಾ ವ್ಯಾಪ್ತಿಯ ಪರಿಚಯಸ್ಥರೊಬ್ಬರ ಮೂಲಕ ಮಂಗಲಪದವು ಎತ್ತುಗಳ ಮಾಲಿಕರ ಸಂಪರ್ಕಿಸಿ ವಿಚಾರ ನಡೆಸಿದರು. ಆ ಸಮಯ ಪ್ರೀತಿಯ ಎತ್ತುಗಳು ನಾಪತ್ತೆಯಾದ ಬಗ್ಗೆ ಮನನೊಂದು ಕಲ್ಲುರ್ಟಿ ದೈವದ ಮೊರೆ ಹೋಗಿದ್ದೇನೆ ಎಂದು ನ್ಯಾಯವಾದಿ ಶಿವಾನಂದ ವಿಟ್ಲ ಮನಸು ಬಿಚ್ಚಿ ಹೇಳಿದ್ದಾರೆ. ಈ ಬಗ್ಗೆ ಪರಿಹಾರಕ್ಕಾಗಿ ನಾವು ದೈವದ ಮುಂದೆ ಬರುತ್ತೇವೆಂದು ಅನಾರೋಗ್ಯ ಪೀಡಿತ ಗೋಕಳ್ಳ ವಿನಂತಿಸಿದ್ದಾನೆ. ಅದರಂತೆ ಮಂಗಳವಾರ ರಾತ್ರಿ ಕೆಳಗಿನಕೆಲಿಂಜದಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆ ನಡೆಯುತ್ತಿರುವ ಸಂದರ್ಭ ದೈವದ ಮುಂದೆ ಹಾಜರಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ದೈವಗಳ ತವರೂರು ತುಳುನಾಡಿನ ಧಾರ್ಮಿಕ ನಂಬಿಕೆ ಮತ್ತು ಶಕ್ತಿಗೆ ಪುಷ್ಟಿ ನೀಡಿದೆ.
ಮುಂದೆ ನಿಂತಿರುವ ಆರೋಪಿ ವ್ಯಕ್ತಿ ತನ್ನೆಲ್ಲಾ ತಪ್ಪುಗಳ ದೈವದೆದುರು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ದರ್ಶನದ ದೈವ ಪಾತ್ರಿ ನೀನು ಮಾಡಿದ ತಪ್ಪು ಕೆಲಸಕ್ಕಾಗಿ ನನ್ನ ಮಂಚದಲ್ಲಿ ಶಾಶ್ವತವಾಗಿ ಬೆಳ್ಳಿಯ ಗೋವು ನೆಲೆಯಾಗಬೇಕು. ಅದು ನಿನಗೆ ಸಾಧ್ಯವೇ ಎಂದು ಪ್ರಶ್ನಿಸಿದೆ. ನೂರಾರು ಭಕ್ತರ ಸಮ್ಮುಖದಲ್ಲೇ ದೈವದ ಮಾತಿಗೆ ಅನಾರೋಗ್ಯ ಪೀಡಿತ ಆರೋಪಿ ಸ್ಥಾನದಲ್ಲಿರುವ ಯುವಕ ಒಪ್ಪಿಗೆ ಸೂಚಿಸಿದ್ದು ಬರುವ ತಿಂಗಳು ವಾರ್ಷಿಕ ಕೋಲದ ಮೊದಲು ಹರಕೆ ರೂಪವಾಗಿ ಬೆಳ್ಳಿಯ ಗೋವು ತಂದೊಪ್ಪಿಸುತ್ತೇನೆ. ಇನ್ಮುಂದೆ ಯಾವುದೂ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಕೈಮುಗಿದು ಪ್ರಾರ್ಥಿಸಿದ ಬಳಿಕ ದೈವವು ಪ್ರಸಾದ ನೀಡಿದೆ.
ಅಂತೂ ತುಳುನಾಡಿನ ದೈವ ಕಲ್ಲುರ್ಟಿ ಗೋಕಳ್ಳನಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿರುವುದು ಭಕ್ತರ ಪಾಲಿಗೆ ದೈವದ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

Bantawala
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ
ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.
ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು
ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.
ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.
ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.
ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.
ಪ್ರಶಸ್ತಿ ಹಾಗೂ ಪುರಸ್ಕಾರ
ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Bantawala
ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ
ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.
ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
Bantawala
ಬಸ್ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್ ದಾಖಲು!
ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.
ಮಹಿಳೆಯ ಧೈರ್ಯ, ವೈರಲ್ ವೀಡಿಯೋ:
ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.
ಬಂಟ್ವಾಳ ಠಾಣೆಯಲ್ಲಿ ದೂರು:
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
-
Bantawala7 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
